ಉಳ್ತೂರು: ಗಗನ ಕುಸುಮವಾದ ಸರಕಾರಿ ಬಸ್ ಸೌಲಭ್ಯ
Team Udayavani, Jul 24, 2018, 6:00 AM IST
ವಿಶೇಷ ವರದಿ- ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಗ್ರಾಮೀಣ ಭಾಗಗಳಾದ ಉಳ್ತೂರು, ಕೆದೂರು, ಚಾರುಕೊಟ್ಟಿಗೆ, ಬೇಳೂರು, ಶಾನಾಡಿ, ಹೆಸ್ಕಾತ್ತೂರು ಭಾಗಗಳಿಗೆ ಸಮರ್ಪಕವಾದ ಬಸ್ ಸಂಪರ್ಕಗಳಿಲ್ಲದೆ ಗ್ರಾಮೀಣ ಭಾಗದ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ನಿತ್ಯ ಪರದಾಡಬೇಕಾದ ಪರಿಸ್ಥಿತಿ ಇದೆ.
ಪ್ರಯಾಸದ ಪ್ರಯಾಣ
ಗ್ರಾಮೀಣ ಭಾಗಕ್ಕೆ ಖಾಸಗಿ ಬಸ್ ಒಂದು ಸಂಪರ್ಕ ಕಲ್ಪಿಸಿದರೂ ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವವರಿಗೆ ಕಷ್ಟಸಾಧ್ಯವಾಗಿದೆ. ನಿತ್ಯ ಬಸ್ನ ಫುಟ್ಬೋರ್ಡ್ನಲ್ಲಿ ನಿಂತೇ ಪ್ರಯಾಣಿಸಬೇಕಾದ ಅನಿವಾರ್ಯವಿದೆ.
ಸಮಯಕ್ಕೆ ಸರಿಯಾಗಿಲ್ಲ
ತೆಕ್ಕಟ್ಟೆ -ದಬ್ಬೆಕಟ್ಟೆ 10 ಕಿ.ಮೀ. ಪ್ರಮುಖ ಸಂಪರ್ಕ ರಸ್ತೆ 180 ಲಕ್ಷ ವೆಚ್ಚದಲ್ಲಿ ಕಾಮಗಾರಿ ಭರದಿಂದ ಸಾಗುತ್ತಿದ್ದು ಉತ್ತಮ ರಸ್ತೆ ನಿರ್ಮಾಣವಾದರೂ ಹಲವು ಗ್ರಾಮಗಳನ್ನು ಸಂದಿಸುವ ಈ ಮಾರ್ಗದಲ್ಲಿ ಸಮಯಕ್ಕೆ ಸರಿಯಾದ ಬಸ್ ಸಂಚಾರವೇ ಇಲ್ಲ. ಈ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗೂಡ್ಸ್ ವಾಹನ ಏರುವ ವಿದ್ಯಾರ್ಥಿಗಳು
ಕುಂದಾಪುರ, ಕೋಟೇಶ್ವರ, ಕೋಟ, ತೆಕ್ಕಟ್ಟೆ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಉಳೂ¤ರಿಗೆ ಬಸ್ ಬರುವ ಮೊದಲೇ ಪ್ರಯಾಣಿಕರಿಂದ ತುಂಬಿರುತ್ತದೆ. ಇದರಿಂದ ವಿದ್ಯಾರ್ಥಿಗಳು ಅನ್ಯ ಮಾರ್ಗವಿಲ್ಲದೇ ಗೂಡ್ಸ್ ವಾಹನಗಳು, ಖಾಸಗಿ ವಾಹನಗಳು, ದ್ವಿಚಕ್ರ ವಾಹನ ಹಿಡಿದು ತೆರಳಬೇಕಾಗುತ್ತದೆ. ಇದರಿಂದ ವಿದ್ಯಾರ್ಥಿನಿಯರು ಮತ್ತು ಮತ್ತು ಮಹಿಳೆಯರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ ಎಂದು ಸ್ಥಳೀಯರಾದ ಪ್ರತಾಪ್ ಶೆಟ್ಟಿ ಹೇಳುತ್ತಾರೆ.
ಸಮರ್ಪಕ ಬಸ್ ಕೊರತೆ
ಉಳ್ತೂರು, ಕೆದೂರು, ಚಾರುಕೊಟ್ಟಿಗೆ, ಬೇಳೂರು, ಶಾನಾಡಿ, ಹೆಸ್ಕಾತ್ತೂರು, ಹುಣ್ಸೆಮಕ್ಕಿ, ಶಿರಿಯಾರ ಸಂಪರ್ಕ ಕಲ್ಪಿಸಲು ಒಟ್ಟು ಐದು ಖಾಸಗಿ ಬಸ್ಗಳು ಸಂಚರಿಸುತಿವೆ. ಆದರೆ ಗ್ರಾಮೀಣ ಭಾಗದಲ್ಲಿ ತೆಕ್ಕಟ್ಟೆಯಿಂದ ದಬ್ಬೆಕಟ್ಟೆ ಪ್ರಮುಖ ಮಾರ್ಗದಲ್ಲಿ ಬೆಳಗ್ಗೆ ( ಗಂಟೆ 8.30 ) ಹಾಗೂ ಮಧ್ಯಾಹ್ನದ (ಗಂಟೆ.3.30)ಅವಧಿಯಲ್ಲಿ ಸಮರ್ಪಕವಾದ ಬಸ್ ಸಂಚಾರ ವ್ಯವಸ್ಥೆ ಇಲ್ಲದೆ ಇರುವ ಪರಿಣಾಮ ನೂರಾರು ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ.
ಕೆಲಸಕ್ಕೆ ವಿಳಂಬ
ನಿತ್ಯ ಸಂಚರಿಸುವ ಬಸ್ನಲ್ಲಿ ಜನಜಂಗುಳಿ ಹೆಚ್ಚಾಗಿ ತೊಂದರೆಯಾಗುತ್ತದೆ. ಇದರಿಂದ ನೌಕರರಿಗೆ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗುವುದು ಕಷ್ಟವಾಗುತ್ತಿದೆ.
– ಶೇಖರ ದೇವಾಡಿಗ, ಉಳೂ¤ರು
ಶಾಲಾ ಅವಧಿಗೆ ಬಸ್ ಸೌಕರ್ಯ ಕಲ್ಪಿಸಿ
ಗ್ರಾಮೀಣ ಭಾಗದಲ್ಲಿ ಪದವಿ ಶಿಕ್ಷಣ ಸಂಸ್ಥೆಗಳಿಲ್ಲದೆ ಇರುವುದರಿಂದ ಕುಂದಾಪುರ ಹಾಗೂ ಕೋಟೇಶ್ವರ ಭಾಗಗಳಿಗೆ ಹೋಗಬೇಕಾಗಿದೆ. ಮುಂಜಾನೆ ಶಾಲಾ ಅವಧಿಗೆ ಬರುವ ಒಂದು ಬಸ್ನಲ್ಲಿ ನಿತ್ಯ ನೂಕು ನುಗ್ಗಲುವಿನಿಂದಾಗಿ ವಿದ್ಯಾರ್ಥಿನಿಯರು ತೀವ್ರ ತೆರೆನಾದ ತೊಂದರೆ ಅನುಭವಿಸಬೇಕಾಗುತ್ತದೆ. ಶಾಲಾ ಅವಧಿಗೆ ಪೂರಕವಾಗಿ ಬಸ್ ಸೌಕರ್ಯವನ್ನು ಕಲ್ಪಿಸಬೇಕಾಗಿದೆ.
– ಅಕ್ಷಿತಾ ರಾವ್, ವಿದ್ಯಾರ್ಥಿನಿ
ಸರಕಾರಿ ಬಸ್ ಅಗತ್ಯ
ಸುಮಾರು 5 ಗ್ರಾಮಗಳಿಂದ ಕುಂದಾಪುರ,ಕೋಟೇಶ್ವರ, ಕೋಟ ಪಡುಕೆರೆ, ಉಡುಪಿ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗೆ ತೆರಳುವ ನೂರಾರು ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಸಮಸ್ಯೆ ಅನುಭವಿಸುವಂತಾಗಿದೆ. ಸರಕಾರಿ ಬಸ್ ವ್ಯವಸ್ಥೆಗೆ ಕೂಡಲೇ ಜನಪ್ರತಿನಿಧಿಗಳು ಮುಂದಾಗಬೇಕು.
– ಯು.ಎನ್. ಚಂದ್ರಶೇಖರ ಕೊಠಾರಿ, ಉಳ್ತೂರು