ಕೊಲ್ಲೂರು: ಗಾಳಿ ಮಳೆಗೆ ಕೃಷಿಭೂಮಿ ಜಲಾವೃತ
Team Udayavani, Aug 12, 2018, 6:00 AM IST
ಕೊಲ್ಲೂರು: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಪಶ್ಚಿಮ ಘಟ್ಟದ ತಪ್ಪಲಿನ ಕೊಲ್ಲೂರು, ಜಡ್ಕಲ್, ಮುದೂರು, ಕೆರಾಡಿ, ಬೆಳ್ಳಾಲ, ಹಳ್ಳಿಹೊಳೆ, ಅಮವಾಸ್ಯೆಬೈಲು ಭಾಗಗಳಲ್ಲಿ ಕೃಷಿಭೂಮಿಗಳು ಜಲಾವೃತಗೊಂಡಿದ್ದು ಬಿತ್ತನೆ ಬೀಜ ಅಲ್ಲಲ್ಲಿ ನಾಶವಾಗಿರುವುದು ಕೃಷಿಕರ ಆತಂಕಕ್ಕೆ ಕಾರಣವಾಗಿದೆ. ಇದೇ ರೀತಿ ಮಳೆ ಮುಂದುವರಿದರೆ ಕೃಷಿ ಸಂಪೂರ್ಣ ನಾಶವಾಗಿ ಲಕ್ಷಾಂತರ ರೂ. ನಷ್ಟವಾಗಬಹುದೆಂಬ ಭಿತಿಯಲ್ಲಿ ಕೃಷಿಕರಿದ್ದಾರೆ.
ಈಗಾಗಲೇ ಅಡಿಕೆಗೆ ಕೊಳೆರೋಗ ಬಾಧಿಸಿದ್ದು, ರಬ್ಬರ್ ಗಿಡಗಳ ಎಲೆಗಳು ಸಹ ಮಳೆಗೆ ಉದುರಲಾರಂಭಿಸಿವೆ. ತೀವ್ರ ಮಳೆಯಿಂದಾಗಿ 3 ತಿಂಗಳುಗಳಿಂದ ಕೃಷಿಕರಿಗೆ ರಬ್ಬರ್ ಟ್ಯಾಪಿಂಗ್ ಕಾರ್ಯ ಕೂಡ ಮಾಡಲಾಗುತ್ತಿಲ್ಲ.
ಕೃಷಿ ಕಾರ್ಮಿಕರಿಗೆ ಉದ್ಯೋಗವಿಲ್ಲ
ಹಳ್ಳಿ ಪ್ರದೇಶಗಳಲ್ಲಿ ವಾಸವಾಗಿರುವ ಬಡ ಕಾರ್ಮಿಕರು ಕೃಷಿಯನ್ನು ಅವಲಂಭಿಸಿ ಬದುಕುತ್ತಿದ್ದು ಇದೀಗ ಮಳೆಯಿಂದಾಗಿ ಕೆಲಸ ಕಾರ್ಯವಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜೀವನೋಪಾಯಕ್ಕೆ ಈ ಭಾಗದ ತೋಟದ ಮಾಲಕರನ್ನು ಅವಲಂಬಿಸಿರುವ ಹುಬ್ಬಳ್ಳಿ, ಧಾರವಾಡ, ಬಿಜಾಪುರದ ಮಂದಿಯನ್ನು ವರುಣನ ಆರ್ಭಟ ಸಂಕಷ್ಟಕ್ಕೆ ನೂಕಿದೆ.
ಸರಕಾರಕ್ಕೆ ಮೊರೆ
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಅಪಾರ ಕೃಷಿ ನಷ್ಟವಾಗಿದ್ದು ಸರಕಾರ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ರೈತರ ನೆರವಿಗೆ ಬರಬೇಕು. ವಿಶೇಷ ಪ್ಯಾಕೇಜ್ನಡಿ ಪರಿಹಾರಧನ ಒದಗಿಸಬೇಕೆಂದು ಸಮಾಜಸೇವಕ ಹಾಗೂ ಕೃಷಿಕರಾಗಿರುವ ಪಿ. ಎಲ್. ಜೋಸ್ ಇಂಗಿತ ವ್ಯಕ್ತಪಡಿಸಿದ್ದಾರೆ.