ಗುರಿ ಇಟ್ಟುಕೊಂಡಾಗ ಸಾಧನೆ ಹಾದಿ ಸುಗಮ
Team Udayavani, Aug 23, 2018, 7:00 AM IST
ಕುಂದಾಪುರ: ಯಾವುದೇ ಆದರೂ ಗುರಿ ಇಟ್ಟುಕೊಳ್ಳಿ. ಅದನ್ನು ಸಾಧಿಸುವ ಛಲ ಇಟ್ಟುಕೊಳ್ಳಿ. ಸಣ್ಣದಾದರೂ ಪರವಾಗಿಲ್ಲ. ಪ್ರಯತ್ನಿಸಿದಾಗಲಷ್ಟೇ ಬದುಕಿನಲ್ಲಿ ಯಶಸ್ಸು ಪಡೆಯುತ್ತೀರಿ ಎಂದು ಕಾರ್ಗಿಲ್ ಯುದ್ಧದ ಜಮ್ಮು ಬೆಟಾಲಿಯನ್ ನಾಯಕ ಕ್ಯಾ| ನವೀನ್ ನಾಗಪ್ಪ ಹೇಳಿದರು.
ಬುಧವಾರ ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋಟರಿ ಕುಂದಾಪುರ ಮತ್ತು ಜೆಸಿಐ ಕುಂದಾಪುರ ಆಶ್ರಯದಲ್ಲಿ ಮೌಲ್ಯಾಧಾರಿತ ಉಪನ್ಯಾಸ ಅವರು ನೀಡಿದರು.
ತಮ್ಮ ಮೇಲೆ ವಿಶ್ವಾಸವಿದ್ದರೆ ಇತಿಹಾಸ ಸೃಷ್ಟಿ
ಮಗನ ದೇಹದ ಮೇಲೆ ಭಾರತದ ಧ್ವಜ ಹೊದೆಸಿ ಕೊಂಡು ಬರುವಂತಾಗುವುದೇ ಮಗನೊಬ್ಬ ತಾಯಿ ಮತ್ತು ತಾಯಿನಾಡಿಗೆ ಕೊಡಬಹುದಾದ ದೊಡ್ಡ ಉಡುಗೊರೆ ಎಂದು ನನ್ನ ಸಹಯೋಧನನ್ನು ಕಳೆದು ಕೊಂಡಾಗ ಆತನ ತಾಯಿ ಹೇಳಿದ ಮಾತು ನನಗೆ ಹೃದಯ ನೀರಾಗುವಂತೆ ಮಾಡಿತು. ಯಾರಿಗೆ ತಮ್ಮ ಬಗ್ಗೆ ವಿಶ್ವಾಸವಿದೆಯೋ ಅವರಿಗೆ ಇತಿಹಾಸ ಸೃಷ್ಟಿ ಮಾಡಲು ಸಾಧ್ಯವಾಗುತ್ತದೆ. ಅಂತಹ ವಿಶ್ವಾಸವನ್ನು ನಮಗೆ ದೇಶ, ಸೇನೆ ತುಂಬುತ್ತದೆ. ಯುದ್ಧ ಅಥವಾ ಕಾರ್ಯಾಚರಣೆ ಸಂದರ್ಭ ದೇಶ ಮಾತ್ರ ಗುರಿಯಾಗಿರುತ್ತದೆ. ಹೆತ್ತವಳು, ಕುಟುಂಬ ಎರಡನೆ ಆದ್ಯತೆಯಾಗಿರುತ್ತದೆ. ನಮ್ಮ ದೇಶದ ರಕ್ಷಣೆಯ ಹೊಣೆ ಹೊತ್ತು ಕೆಲಸ ಮಾಡುವಾಗ ಶತ್ರು ದೇಶದ ಉಪಟಳವೇ ನಮ್ಮ ಕಿಚ್ಚು ಹೆಚ್ಚಿಸುತ್ತದೆ. ನಮ್ಮ ಸೈನಿಕರ ಮೇಲೆ ಅವರು ಮಾಡುವ ದಾಳಿಯೇ ನಮ್ಮಲ್ಲಿ ರೋಷ ಉಕ್ಕಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಎಜುಕೇಶನ್ ಸೊಸೈಟಿ ಅಧ್ಯಕ್ಷ, ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಮಕ್ಕಳಲ್ಲಿ ಇಚ್ಛಾಶಕ್ತಿ ಹೆಚ್ಚಬೇಕು. ಸ್ವ ಸಾಮರ್ಥ್ಯದಿಂದ ಏನು ಬೇಕಾದರೂ ಮಾಡಬಹುದು. ಅಂತಹ ಸಾಮರ್ಥ್ಯ ವೃದ್ಧಿ ಮಾಡಿಕೊಳ್ಳಬೇಕು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಗೋಪಾಲ ಶೆಟ್ಟಿ ಶೇಡಿಮನೆ, ಹಿರಿಯ ನ್ಯಾಯವಾದಿ ಎಸ್. ಗೋಪಾಲಕೃಷ್ಣ ಶೆಟ್ಟಿ, ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷ ಪಿ. ಜಯಚಂದ್ರ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಉಪಸ್ಥಿತರಿದ್ದರು.
ಕಾಲೇಜು ಹಾಗೂ ಜೆಸಿಐ ವತಿಯಿಂದ ಕ್ಯಾ| ನವೀನ್ ಅವರನ್ನು ಸಮ್ಮಾನಿಸಲಾಯಿತು.
ಪ್ರಭಾರ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ನಿರ್ದೇಶಕ ಪ್ರೊ| ದೋಮ ಚಂದ್ರಶೇಖರ್ ಪ್ರಸ್ತಾವಿಸಿದರು. ವಾಣಿಜ್ಯ ಉಪನ್ಯಾಸಕಿ ಪೃಥ್ವಿಶ್ರೀ ಜಿ. ಶೆಟ್ಟಿ , ಕ್ಯಾ| ನವೀನ್ ಅವರ ಪರಿಚಯ ಮಾಡಿದರು. ರಾಜ್ಯಶಾಸ್ತ್ರ ವಿಬಾಗ ಮುಖ್ಯಸ್ಥ ಪ್ರವೀಣ್ ಮೊಗವೀರ ವಂದಿಸಿದರು. ವಾಣಿಜ್ಯ ಉಪನ್ಯಾಸಕ ಶಿವರಾಜ್ ಸಿ. ನಿರ್ವಹಿಸಿದರು.