ಶಿವಮೊಗ್ಗ ಲೋಕಸಭೆ : ಪ್ರತಿಷ್ಠೆಯ ಸಮರ: ಶುರುವಾಗಿದೆ ಲೆಕ್ಕಾಚಾರ
Team Udayavani, Nov 6, 2018, 9:47 AM IST
ಕುಂದಾಪುರ: ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರ ಹಾಗೂ ಬಿಜೆಪಿ ಪಕ್ಷದ ನಡುವಿನ ಪ್ರತಿಷ್ಠೆಯ ಉಪ ಸಮರವೆಂದು ಬಿಂಬಿಸಲ್ಪಟ್ಟ ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯ ಮತದಾನ ಮುಗಿದಿದ್ದು, ಈಗ ಸೋಲು- ಗೆಲುವಿನ ಲೆಕ್ಕಾಚಾರ ಆರಂಭಗೊಂಡಿದೆ.
ಬಿ.ಎಸ್. ಯಡಿಯೂರಪ್ಪ ಅವರಿಂದ ತೆರವಾದ ಸ್ಥಾನಕ್ಕೆ ನಡೆಯುತ್ತಿರುವ ಈ ಉಪ ಚುನಾವಣೆಯ ಅವಧಿ ಕೇವಲ 5-6 ತಿಂಗಳಷ್ಟೇ ಇರುವುದರಿಂದ ಒಟ್ಟಾರೆ ಮತದಾನ ಪ್ರಕ್ರಿಯೆಯಲ್ಲಿ ಮತದಾರರಲ್ಲಿ ನಿರುತ್ಸಾಹ ಕಂಡು ಬಂತು. ಕಣದಲ್ಲಿರುವ ನಾಲ್ವರು ಅಭ್ಯರ್ಥಿಗಳ ಭವಿಷ್ಯ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಭದ್ರತಾ ಕೊಠಡಿಯಲ್ಲಿಟ್ಟಿರುವ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ. ನ. 6 ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಅದಕೂ ಮುನ್ನವೇ ಪಕ್ಷಗಳೊಳಗೆ ಕ್ಷೇತ್ರವಾರು ಲೆಕ್ಕಾಚಾರ ಶುರುವಾಗಿದೆ.
ಕಣದಲ್ಲಿರುವ ನಾಲ್ವರಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಎನ್ನುವುದು ಈ ಉಪ ಸಮರದ ವಿಶೇಷ. ಬಿಜೆಪಿಯಿಂದ ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ, ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ದಿ| ಎಸ್. ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಹಾಗೂ ಜೆಡಿಯುನಿಂದ ಜೆ.ಎಚ್. ಪಟೇಲರ ಪುತ್ರ ಮಹಿಮಾ ಪಟೇಲ್ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಯಡಿಯೂರಪ್ಪ ವರ್ಸಸ್ ಬಂಗಾರಪ್ಪ
ಹೆಸರಿಗೆ ನಾಲ್ವರು ಅಭ್ಯರ್ಥಿಗಳ ನಡುವಿನ ಸಮರವಾಗಿದ್ದರೂ, ಕೂಡ ಅಸಲಿ ಸ್ಪರ್ಧೆ ನಡೆಯುತ್ತಿರುವುದು ಮಾತ್ರ ಬಿಜೆಪಿಯ ರಾಘವೇಂದ್ರ ಹಾಗೂ ಕಾಂಗ್ರೆಸ್-ಜೆಡಿಎಸ್ನ ಮಧು ಬಂಗಾರಪ್ಪ ಮಧ್ಯೆ ಎನ್ನುವುದು ಸತ್ಯ. ಅಷ್ಟು ಮಾತ್ರವಲ್ಲದೆ ಇದು ಶಿವಮೊಗ್ಗ ಜಿಲ್ಲೆಯ ಒಂದು ಕಾಲದ ಬದ್ಧ ಎದುರಾಳಿಗಳಾದ ಬಿ.ಎಸ್. ಯಡಿಯೂರಪ್ಪ ಹಾಗೂ ದಿ| ಎಸ್. ಬಂಗಾರಪ್ಪ ಅವರ ಕುಟುಂಬದ ನಡುವೆ ನಡೆಯುತ್ತಿರುವ ಚುನಾವಣೆ ಆಗಿರುವುದರಿಂದ ಮತ್ತಷ್ಟು ಕೌತುಕವನ್ನು ಹೆಚ್ಚಿಸಿದೆ.
ಲೆಕ್ಕಾಚಾರ ಹೇಗಿದೆ?
ಶಿವಮೊಗ್ಗದ 8 ಕ್ಷೇತ್ರಗಳ ಪೈಕಿ 7 ಕಡೆಗಳಲ್ಲಿ ಬಿಜೆಪಿ ಶಾಸಕರಿರುವುದು ಬಿಜೆಪಿಗೆ ವರದಾನವಾಗಿದ್ದರೆ, ಜೆಡಿಎಸ್ನಿಂದ ಸ್ಪರ್ಧಿಸಿರುವ ಮಧು ಬಂಗಾರಪ್ಪ ಅವರಿಗೆ ಕಾಂಗ್ರೆಸ್ ಬೆಂಬಲವೂ ಇರುವುದರಿಂದ ಲಾಭವಾಗಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಕ್ಷೇತ್ರದಲ್ಲಿ ಸಂಸದರಾಗಿ ಗೆದ್ದವರು, ಬೈಂದೂರಲ್ಲಿ ಪ್ರತಿ ಬಾರಿ ಕೂಡ ಕನಿಷ್ಠ 40 ಸಾವಿರಕ್ಕಿಂತ ಹೆಚ್ಚಿನ ಮತಗಳ ಮುನ್ನಡೆ ಪಡೆಯುತ್ತಿದ್ದರು. ಒಟ್ಟು 2,22,972 ಮತದಾರರಲ್ಲಿ 1,30,574 ಮಂದಿ ಮಾತ್ರವೇ ಮತ ಚಲಾವಣೆಯಾಗಿದೆ. ಕಡಿಮೆ ಪ್ರಮಾಣದ ಮತದಾನವಾಗಿರುವುದಿಂದ ಇಬ್ಬರು (ರಾಘವೇಂದ್ರ ಹಾಗೂ ಮಧು ಬಂಗಾರಪ್ಪ) ಪ್ರಮುಖ ಅಭ್ಯರ್ಥಿಗಳಿಗೆ ಹಿನ್ನಡೆಯಾಗಿದೆ. ಮತ್ತೂಂದು ಲೆಕ್ಕಾಚಾರದ ಪ್ರಕಾರ ಬೈಂದೂರಲ್ಲಿ ಕಳೆದ ವಿಧಾನಸಭಾ ಚುನಾವಣೆಗಿಂತ ಶೇ.20 ರಷ್ಟು ಕಡಿಮೆ ಮತದಾನವಾಗಿರುವುದು ಬಿಜೆಪಿಗಿಂತ ಜೆಡಿಎಸ್-ಕಾಂಗ್ರೆಸ್ಗೆ ಲಾಭವಾಗಬಹುದು ಎನ್ನಲಾಗುತ್ತಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಮತದಾನ
ಶಿವಮೊಗ್ಗ ಲೋಕಸಭಾ ಉಪ ಸಮರದಲ್ಲಿ ಒಟ್ಟಾರೆ ಶೇ.65.82 ರಷ್ಟು ಮತದಾನವಾಗಿದೆ. ಇದು ಕಳೆದ 2013 ರ ಲೋಕಸಭೆ ಚುನಾವಣೆಗಿಂತ (ಆಗ ಶೇ.72.02 ಮತದಾನವಾಗಿತ್ತು) ಶೇ.7 ರಷ್ಟು ಕಡಿಮೆ ಮತದಾನವಾಗಿದೆ. ಶಿವಮೊಗ್ಗ ಗ್ರಾಮಾಂತರ- ಶೇ.69.91, ಶಿವಮೊಗ್ಗ ಸಿಟಿ- ಶೇ.51.45, ಭದ್ರಾವತಿ – ಶೇ.56.97, ಶಿಕಾರಿಪುರ – ಶೇ.74.19, ಸೊರಬ – ಶೇ.78.05, ತೀರ್ಥಹಳ್ಳಿ- ಶೇ. 66.08, ಸಾಗರ -ಶೇ. 58.88 ಹಾಗೂ ಬೈಂದೂರಲ್ಲಿ 59.05 ಮತದಾನವಾಗಿದೆ.
ಅಂತರ ಕಡಿಮೆಯಾಗಬಹುದು
ಈ ಬಾರಿ ಶಿವಮೊಗ್ಗ ಕ್ಷೇತ್ರದಾದ್ಯಂತ ಕಡಿಮೆ ಪ್ರಮಾಣದ ಮತದಾನ ಆಗಿರುವುದರಿಂದ ಒಟ್ಟಾರೆ ಮುನ್ನಡೆಯ ಅಂತರ ಕಡಿಮೆಯಾಗಬಹುದು. ಆದರೆ ಇದರಿಂದ ನಮ್ಮ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರ ಗೆಲುವಿಗೆ ಏನೂ ಅಡ್ಡಿಯಾಗುವುದಿಲ್ಲ. ಬೈಂದೂರಲ್ಲಿ ಸುಮಾರು 25 ರಿಂದ 30 ಸಾವಿರ ಮತಗಳ ಅಂತರದಿಂದ ಮುನ್ನಡೆ ಸಿಗಬಹುದು.
ಸದಾನಂದ ಉಪ್ಪಿನಕುದ್ರು,ಬಿಜೆಪಿ ಬೈಂದೂರು ಕ್ಷೇತ್ರಾಧ್ಯಕ್ಷರು
ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ