ಕುಂದಾಪುರ: ರಿಕ್ಷಾ ನಿಲ್ದಾಣಕ್ಕೆ ಮತ್ತೆ ಮಣ್ಣು !
Team Udayavani, Nov 17, 2018, 3:55 AM IST
ಕುಂದಾಪುರ: ವಿನಾಯಕ ಥಿಯೇಟರ್ ಬಳಿ ರಿಕ್ಷಾ ನಿಲ್ದಾಣ ಇಲ್ಲದೇ ರಿಕ್ಷಾಗಳು ರಸ್ತೆಯಲ್ಲಿ ನಿಲ್ಲಿಸಿರುವಂತೆಯೇ ಗುರುವಾರ ತಡರಾತ್ರಿ ರಿಕ್ಷಾಗಳನ್ನು ನಿಲ್ಲಿಸುವ ಜಾಗಕ್ಕೆ ಮಣ್ಣು ತಂದು ಸುರಿಯಲಾಗಿದೆ. ಕೋಡಿ ಪ್ರದೇಶಕ್ಕೆ ತೆರಳುವ ರಿಕ್ಷಾಗಳು ನಿಲ್ಲಿಸಲು ವ್ಯವಸ್ಥಿತ ತಂಗುದಾಣ ಇಲ್ಲ. ಸರ್ವಿಸ್ ರಸ್ತೆ ಬದಿ ರಿಕ್ಷಾಗಳು ನಿಲ್ಲುತ್ತಿದ್ದವು. ಆದರೆ ಈಗ ಸರ್ವಿಸ್ ರಸ್ತೆಯೇ ಮುಖ್ಯರಸ್ತೆಯಾಗಿದ್ದು ಮುಖ್ಯ ರಸ್ತೆಯಲ್ಲಿ ಬಸ್ರೂರು ಮೂರುಕೈ ಅಂಡರ್ಪಾಸ್ ಕಾಮಗಾರಿ ನಡೆಯುವ ಕಾರಣ ನಿರ್ಬಂಧ ಒಡ್ಡಲಾಗಿದೆ. ಆದ್ದರಿಂದ ರಿಕ್ಷಾಗಳನ್ನು ಸಂಚಾರವಿಲ್ಲದ ಮುಖ್ಯ ರಸ್ತೆಯಲ್ಲಿ ನಿಲ್ಲಿಸಲಾಗುತ್ತಿದೆ.
ಆದರೆ ಗುತ್ತಿಗೆದಾರ ಕಂಪನಿಯು ರಿಕ್ಷಾಗಳು ನಿಲ್ಲಿಸುವಲ್ಲಿ ಲೋಡುಗಟ್ಟಲೆ ಮಣ್ಣು ತಂದು ಸುರಿಯುತ್ತಿದೆ. ಇದನ್ನು ರಿಕ್ಷಾ ಚಾಲಕರು ಆಕ್ಷೇಪಿಸಿದ್ದರು. ಜಿ.ಪಂ. ಸದಸ್ಯೆ ಲಕ್ಷ್ಮೀ ಮಂಜು ಬಿಲ್ಲವ ಮೊದಲಾದವರು ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದ್ದರು. ಪುರಸಭೆ ವತಿಯಿಂದ ಕೂಡಾ ರಿಕ್ಷಾಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಿಲ್ಲ. ಪುರಸಭೆಯ ಜಾಗ ಇಲ್ಲ ಎನ್ನುವ ಸಬೂಬು ಒಂದೆಡೆ ಇದ್ದರೆ ಇದ್ದ ಜಾಗದ ಒತ್ತುವರಿಯಾಗಿದೆ ಎಂಬ ಆರೋಪವೂ ಇದೆ. ಇದೆಲ್ಲ ಸಮಸ್ಯೆಗಳ ನಡುವೆಯೇ ಗುತ್ತಿಗೆದಾರ ಸಂಸ್ಥೆ ರಿಕ್ಷಾ ಚಾಲಕರ ತಾಳ್ಮೆ ಪರೀಕ್ಷಿಸುತ್ತಿದ್ದು ಗುರುವಾರ ತಡರಾತ್ರಿ ಟಿಪ್ಪರ್ನಲ್ಲಿ ಲೋಡುಗಟ್ಟಲೆ ಮಣ್ಣನ್ನು ರಿಕ್ಷಾ ನಿಲ್ಲುವಲ್ಲಿ ತಂದು ಹಾಕಲಾಗಿದೆ. ರಾತೋರಾತ್ರಿ ಚಾಲಕರಿಗೆ ವಿಷಯ ತಿಳಿದು ಪ್ರತಿಭಟಿಸಿದ್ದಾರೆ. ತತ್ಕ್ಷಣ ತೆರವು ಮಾಡದೇ ಇದ್ದಲ್ಲಿ ಶನಿವಾರ ಸರ್ವಿಸ್ ರಸ್ತೆಗೆ ರಿಕ್ಷಾ ಅಡ್ಡ ಇಟ್ಟು ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ. ಮುಖ್ಯ ರಸ್ತೆಯ ಬದಲು ಸರ್ವಿಸ್ ರಸ್ತೆಯಲ್ಲೇ ವಾಹನಗಳ ಓಡಾಟ ಇರುವ ಕಾರಣ ಸರ್ವಿಸ್ ರಸ್ತೆ ಬಂದ್ ಮಾಡಿದರೆ ಸಂಚಾರ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಇಲ್ಲಿ ರಿಕ್ಷಾ ತಂಗುದಾಣಕ್ಕೆ ಸೂಕ್ತ ಜಾಗ ಒದಗಿಸಿಲ್ಲ ಎಂದು ಉದಯವಾಣಿ ವರದಿ ಮಾಡಿತ್ತು.