“ಮಕ್ಕಳಿಗೆ ಪ್ರೀತಿಯ ಜತೆ ಕಾಳಜಿಯೂ ಮುಖ್ಯ’
Team Udayavani, Feb 22, 2019, 1:25 AM IST
ಕೋಟ: ಮಕ್ಕಳ ಬಗ್ಗೆ ಹೆತ್ತವರಿಗೆ ಕೇವಲ ಪ್ರೀತಿ ಇದ್ದರೆ ಸಾಲದು, ಅವರ ಬಗ್ಗೆ ಕಾಳಜಿ ಬೇಕು ಹಾಗೂ ಅವರ ಬದುಕನ್ನು ರೂಪಿಸುವ ನಿಟ್ಟಿನಲ್ಲಿ ಎಸೆಸೆಲ್ಸಿ ಪರೀಕ್ಷೆ ಪ್ರಮುಖ ಮಾನದಂಡವಾಗಲಿದ್ದು, ಈ ಸಂದರ್ಭದಲ್ಲಿ ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡುವಂತೆ ನೋಡಿಕೊಳ್ಳಬೇಕು ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಹೇಳಿದರು.
ಅವರು ಗೀತಾನಂದ ಫೌಂಡೇಶನ್ ಮಣೂರು-ಪಡುಕರೆ. ಮನಸ್ಮಿತಾ ಫೌಂಡೇಶನ್ ಮತ್ತು ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಕೋಟ ಘಟಕ, ಮಹಿಳಾ ಸಂಘಟನೆ ಸಂಯುಕ್ತ ಆಶ್ರಯದಲ್ಲಿ ಮಣೂರು ಪಡುಕರೆ ಸಂಯುಕ್ತ ಪ್ರೌಢಶಾಲೆಯಲ್ಲಿ ಫೆ. 20ರಂದು ಎಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ ಜರಗಿದ ಪ್ರೇರಣಾ ಶಿಬಿರದಲ್ಲಿ ಮಾತನಾಡಿದರು.
ಮಕ್ಕಳ ಮಾನಸಿಕತೆಯನ್ನು ಅರಿತು ನಡೆಯಿರಿ
ಶ್ರೀಮಾತಾ ಆಸ್ಪತ್ರೆಯ ಮುಖ್ಯಸ್ಥ, ಮನೋತಜ್ಞ ಡಾ| ಪ್ರಕಾಶ್ ತೋಳಾರ್ ಮಾತನಾಡಿ, ಮಕ್ಕಳಿಗೆ ಓದಲು ಕೇವಲ ಒತ್ತಡ ಹೇರಿದರೆ ಸಾಲದು. ಓದುವ ಸಂದರ್ಭ ಅವರ ಮಾನಸಿಕತೆ ಹೇಗಿದೆ. ಅಭ್ಯಾಸದಲ್ಲಿ ಹಿಂದುಳಿದಿದ್ದರೆ ಯಾಕೆ ಹಿಂದೆ ಬೀಳುತ್ತಿದ್ದಾರೆ ಎನ್ನುವುದನ್ನು ಅರಿತು ಹೆತ್ತವರು ವ್ಯವಹರಿಸಬೇಕು. ಸಮಸ್ಯೆಗಳಿದ್ದರೆ ಸೂಕ್ತ ವ್ಯಕ್ತಿಗಳ ಮೂಲಕ ಅದನ್ನು ಸರಿಪಡಿಸಿಕೊಳ್ಳಬೇಕು ಎಂದರು ಹಾಗೂ ವಿದ್ಯಾರ್ಥಿಗಳು ಹಾಗೂ ಹೆತ್ತವರಿಗೆ ಪ್ರತ್ಯೇಕ ಮಾಹಿತಿ ಕಾರ್ಯಗಾರ ನಡೆಸಿದರು.
ಮೊಗವೀರ ಯುವ ಸಂಘಟನೆಯ ನಿಯೋಜಿತ ಅಧ್ಯಕ್ಷ ಜಯಂತ್ ಅಮೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪಡುಕರೆ ಪದವಿ ಕಾಲೇಜು ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ್, ಮಹಿಳಾ ಸಂಘಟನೆಯ ಅಧ್ಯಕ್ಷೆ ಗುಲಾಬಿ ದೇವದಾಸ ಬಂಗೇರ, ಸಂಘಟನೆಯ ಉಪಾಧ್ಯಕ್ಷ ಶಿವರಾಮ್ ಕೆ.ಎಂ. ಮಧುವನ, ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್. ಸಂಜೀವ ಉಪಸ್ಥಿತರಿದ್ದರು.
ಶಾಲೆ ಮುಖ್ಯ ಶಿಕ್ಷಕ ಸತೀಶ್ ಐತಾಳ ಸ್ವಾಗತಿಸಿ, ಗೀತಾನಂದ ಫೌಂಡೇಶನ್ನ ರವಿಕಿರಣ್ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕ ಶ್ರೀಧರ ಶಾಸ್ತ್ರಿ ವಂದಿಸಿದರು.