ಕುವೆಂಪು ಶತಮಾನೋತ್ಸವ ಪ್ರಾಥಮಿಕ ಶಾಲೆಗೆ ಪಾರಂಪರಿಕ ಪಟ್ಟದ ಗರಿ
Team Udayavani, Feb 22, 2019, 12:30 AM IST
ತೆಕ್ಕಟ್ಟೆ: 1892ರಲ್ಲಿ ಸ್ಥಾಪಿತಗೊಂಡ ಇಲ್ಲಿನ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಶಾಲೆಗೆ ಈಗ ಪಾರಂಪರಿಕ ಪಟ್ಟದ ಗರಿ. ಗುಣಾತ್ಮಕ ಶಿಕ್ಷಣಕ್ಕೆ ಎ ಗ್ರೇಡ್, ಉತ್ತಮ ಶಾಲಾ ರಾಜ್ಯ ಪ್ರಶಸ್ತಿ ಪಡೆದ ಈ ಶಾಲೆ, ಈ ಸಾಲಿನಲ್ಲಿ ಒಂದೇ ದಿನ 101 ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡಿರುವುದು, ಶಾಲೆಯ ಹೆಗ್ಗಳಿಕೆಗೆ ಕಾರಣವಾಗಿದೆ.
ವಿಶೇಷತೆಗಳು ಏನು
2017-18ನೇ ಶೈಕ್ಷಣಿಕ ವರ್ಷದಿಂದ 1ನೇ ತರಗತಿಗೆ ಇಂಗ್ಲಿಷ್ ಮಾಧ್ಯಮ ಶುರುವಾಗಿತ್ತು. ಕುಂದಾಪುರ ತಾ.ನಲ್ಲಿ ಅತ್ಯಧಿಕ ವಿದ್ಯಾರ್ಥಿಗಳನ್ನು ಹೊಂದಿದೆ.ಚಿಣ್ಣರ ಚಟುವಟಿಕೆಗಾಗಿ ಚಿಲ್ಡನ್ ಪಾರ್ಕ್, ಕಂಪ್ಯೂಟರ್ ಹಾಗೂ ಚಿತ್ರಕಲಾ ತರಬೇತಿ ಶಿಕ್ಷಣ ವ್ಯವಸ್ಥೆ, ವಿಜ್ಞಾನ ಕಲಿಕೆಗೆ ಸುಸಜ್ಜಿತ ಪ್ರತ್ಯೇಕ ಪ್ರಯೋಗಾಲಯ, ಪ್ರತಿ ತರಗತಿಗೂ ರೇಡಿಯೋ ಬ್ರಾಡ್ ಕಾಸ್ಟಿಂಗ್ ವ್ಯವಸ್ಥೆ, ಎಲ್ಸಿಡಿ ಪ್ರಾಜೆಕ್ಟರ್, ಎಜ್ಯುಸ್ಯಾಟ್ ವ್ಯವಸ್ಥೆ, ಮಾಸಿಕ ಹಸ್ತ ಪತ್ರಿಕೆಯನ್ನು ಹೊಂದಿದೆ.
ತೆಕ್ಕಟ್ಟೆ ಎಜ್ಯುಕೇಶನ್ ಟ್ರಸ್ಟ್ ರಚನೆ
ಶತಮಾನೋತ್ತರ ಬೆಳ್ಳಿ ಹಬ್ಬ ಪೂರೈಸಿದ ಈ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ,ಗೌರವ ಶಿಕ್ಷಕರ ಭತ್ಯೆ ಹಾಗೂ ಶಾಲಾ ಅಭಿವೃದ್ಧಿಯ ದೃಷ್ಟಿಯಿಂದ ತೆಕ್ಕಟ್ಟೆ ಎಜ್ಯುಕೇಶನ್ ಟ್ರಸ್ಟ್, ಶಾಲಾಭಿವೃದ್ಧಿ ಸಮಿತಿಯನ್ನು ರಚಿಸಲಾಗಿದೆ.
ಟ್ರಸ್ಟ್ನ ಅಧ್ಯಕ್ಷರಾಗಿ ಮಲ್ಯಾಡಿ ಶಿವರಾಮ ಶೆಟ್ಟಿ ಹಾಗೂ ಕಾರ್ಯದರ್ಶಿ ವಿಶ್ವನಾಥ ಆಚಾರ್ , ಶಾಲಾಭಿವೃದ್ಧಿ ಸಮಿತಿ ಸರ್ವ ಸದಸ್ಯರು ಮತ್ತು ಗ್ರಾಮಸ್ಥರು ಶಾಲೆಯ ಉನ್ನತೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ.
ಗುಣಾತ್ಮಕ ಶಿಕ್ಷಣ
ಕನ್ನಡ ಶಾಲೆಗಳು ಗುಣಾತ್ಮಕ ಶಿಕ್ಷಣ ನೀಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆೆ. ಈ ವಿದ್ಯಾಸಂಸ್ಥೆಯ ಯಶಸ್ಸಿನ ಹಿಂದೆ ಉತ್ತಮ ಬೋಧಕ ವರ್ಗ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರವಿದೆ. ಇದು ನಮ್ಮ ಊರಿನ ಹೆಮ್ಮೆ.
– ಸಂತೋಷ ಪೂಜಾರಿ,ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ
ಹೆಮ್ಮೆಯ ವಿಷಯ
125ನೇ ವರ್ಷಕ್ಕೆ ನಮ್ಮ ಶಾಲೆಗೆ ಪಾರಂಪರಿಕ ಪಟ್ಟ ಬಂದಿರುವುದು ಹೆಮ್ಮೆಯ ವಿಷಯ. ಶಾಲೆ, ಗುಣಮಟ್ಟದ ಶಿಕ್ಷಣವನ್ನು ನೀಡಲು ಪ್ರತಿಭಾವಂತ ಶಿಕ್ಷಕರನ್ನು ಒಳಗೊಂಡಿದೆ.
– ಲಲಿತಾ ಸಖರಾಮ್, ಪದವೀಧರೇತರ ಮುಖ್ಯ ಶಿಕ್ಷಕರು