ಭಾವಗಳ ಕೊಂಡಿ ಬಿಗಿಯಾಗಿಸುವ ಪ್ರಾಣಿ ಸ್ನೇಹ


Team Udayavani, Sep 14, 2017, 7:38 AM IST

14-ANAAA-1.jpg

“”ಪೋಯಿ” ಅಂದರೆ ಸಾಕು, ಬೊಳ್ಳು ಬಕೆಟನ್ನು ಬಾಯಲ್ಲಿ ಕಚ್ಚಿ ನೇರವಾಗಿ ತೋಟದ ಹಾದಿ ಹಿಡಿಯುತ್ತಿದ್ದ. ನಾಯ್ಕರು ಅನುಸರಿಸುತ್ತಿದ್ದರು. ಅಡಿಕೆ ಮರದ ಬುಡದಲ್ಲಿ ಬಿದ್ದ ಹಣ್ಣಡಿಕೆಯನ್ನು ಬೊಳ್ಳು ಬಾಯಲ್ಲಿ ಕಚ್ಚಿ ಬಕೆಟಿಗೆ ಹಾಕುತ್ತಿದ್ದ. ಏನಿಲ್ಲವೆಂದರೂ ದಿನಕ್ಕೆ 250ರಿಂದ 300 ಅಡಿಕೆ ಹೆಕ್ಕುತ್ತಿದ್ದ.

ಆಗಸ್ಟ್‌ 28ರ ಮೇಘನ್ಪೋಟಕ್ಕೆ ಮಾಯಾನಗರಿಯು ನಿಜಾರ್ಥದ ಸ್ತಬ್ಧತೆಗೆ ಜಾರಿತ್ತು. ಗಣೇಶೋತ್ಸವದ ಉತ್ಸಾಹ, ಸಂಭ್ರಮದ ಕಾವು ಆರಿತ್ತು. ನೆರೆಯ ನೀರು ಮಾರ್ಗಗಳನ್ನು ನುಂಗಿತ್ತು. ವಾಹನಗಳೆಲ್ಲ ರಸ್ತೆಯಲ್ಲಿ ಏದುಸಿರು ಬಿಡುತ್ತಿದ್ದುವು. ಕಾಲ್ನಡಿಗೆ ಒಂದೇ ಆಯ್ಕೆ. ಎದೆಮಟ್ಟದ ನೆರೆಯು ಸೊಂಟಮಟ್ಟಕ್ಕೆ ಇಳಿವಾಗ ಸೂರ್ಯಾಸ್ತವಾಗಿತ್ತು. ನಾಗರಿಕರಿಗೆ ಮನೆ ಸೇರುವ ತವಕದ ಒತ್ತಡ. ಅವರನ್ನು ಹಿಂಬಾಲಿಸುತ್ತಾ ನೀರನಡಿಗೆ ಮಾಡುತ್ತಿದ್ದೆ. ಕುಟುಂಬವೊಂದು ತನ್ನೆಲ್ಲ ಸರಂಜಾಮನ್ನು ಹೊತ್ತು ಅನುಸರಿಸುತ್ತಿತ್ತು. ಒಬ್ಬೊಬ್ಬರ ಕೈಯಲ್ಲಿ ನಾಯಿ, ಬೆಕ್ಕು, ಮೊಲಗಳಿದ್ದುವು. ಒಬ್ಬನ ಹೆಗಲೇರಿ ಕುಳಿತ ಪ್ರತಿಷ್ಠೆಯ ಶ್ವಾನವೊಂದು ನೆರೆಯನ್ನು ಸಂಭ್ರಮಿಸುತ್ತಿತ್ತು! ಈಜುತ್ತಾ ಬರುವ ಅದರ ಸಹಪಾಠಿಗಳೊಂದಿಗೆ ಸಂವಹನದಲ್ಲಿ ಮುಳುಗಿದ್ದುವು. 

ಬದುಕಿನೊಂದಿಗೆ ಮಿಳಿತವಾದ ಪ್ರಾಣಿಪ್ರೀತಿಯ ಗಾಢತೆ ಯನ್ನಳೆಯಲು ಮಾಪಕವಿಲ್ಲ. ಅವುಗಳನ್ನು ಬಿಟ್ಟಿರಲಾಗದಷ್ಟು ಭಾವದ ಕೊಂಡಿ ಬಿಗಿಯಾಗಿದೆ. ಮಾತು ಬರುವುದಿಲ್ಲ ಎಂದಿದ್ದರೂ ಅವುಗಳೊಂದಿಗೆ ನಿತ್ಯ ಮಾತನಾಡುತ್ತಲೇ ಇರು ತ್ತೇವೆ. ಮಾತಿಗವು ಸ್ಪಂದಿಸುತ್ತಲೇ ಇರುತ್ತವೆ. ನಮಗೆ ನಮ್ಮ ಬದುಕು ಅರ್ಥವಾಗುವುದಿಲ್ಲ, ಅರ್ಥ ಮಾಡಿಕೊಳ್ಳುವುದಿಲ್ಲ. ಆದರೆ ಪ್ರಾಣಿಗಳು ಅವುಗಳ ಬದುಕನ್ನು ಅರ್ಥಮಾಡಿಕೊಳ್ಳುತ್ತವೆ. ಬದುಕು ಅರ್ಥವಾದರೆ ಸ್ನೇಹ, ಪ್ರೀತಿ, ವಿಶ್ವಾಸದ ನರಗಳು ಸಡಿಲವಾಗುವುದಿಲ್ಲ. ಹಾಗಾಗಿಯೇ ಇರಬೇಕು – ಸಾಕುನಾಯಿ, ಬೆಕ್ಕುಗಳ, ಪಶುಗಳು ಮನೆಯ ಸದಸ್ಯರೊಂದಿಗೆ ಮಾತನಾಡದ ಸದಸ್ಯರಂತೆ ಬಾಳುತ್ತವೆ. ಬದುಕಿನ ಸುಭಗತೆಗೆ ಸಾಥ್‌ ಕೊಡುತ್ತವೆ. ಮುಂಬಯಿಯ ನೀರನಡಿಗೆಯಲ್ಲಿ ಆ ಶ್ವಾನಗಳನ್ನು ಕಂಡಾಗ ಶಿರಸಿ ಕಳವೆಯ ಗೌರಿ ಜಿಂಕೆಗಳ ಕುಟುಂಬ ನೆನಪಾಯಿತು. ಶಿವಾನಂದ ಕಳವೆಯವರು ಗೌರಿಯ ಸಾಹಚರ್ಯದೊಂದಿಗೆ ಅವುಗಳ ಮೌನಕ್ಕೆ ಮಾತುಕೊಟ್ಟ ಪತ್ರಕರ್ತ. 

ಒಮ್ಮೆ ಗಣೇಶ ಹಬ್ಬದ ಸಂದರ್ಭ. ನಾಯಿಯೊಂದು ಜಿಂಕೆಯ ಮಂದೆಯನ್ನು ಅಟ್ಟಿಸಿಕೊಂಡು ಬಂದಿತ್ತು. ಬಳಗದವರೆಲ್ಲ ಚದುರಿ ಹೋದರೂ ಒಂದು ಜಿಂಕೆ ತಪ್ಪಿಸಿಕೊಳ್ಳಲಾಗದೆ ಜೀವಭಯದಿಂದ ನಡುಗುತ್ತಿದ್ದಾಗ ಕಳವೆ ಮನೆಯ ಅಭಯ ಮತ್ತು ಆಶ್ರಯ ಸಿಕ್ಕಿತು. ಗೌರಿ ಎನ್ನುವ ನಾಮಕರಣ. ಗೌರಿಯು ಮನೆಯ ಸದಸ್ಯೆಯಾಗಿ ಆಗಾಗ್ಗೆ ಅವಳ ಕುಟುಂಬದೊಂದಿಗೆ ಬೆರೆಯುತ್ತಾ, ಹನಿಮೂನ್‌ ಆಚರಿಸುತ್ತಾ, ಪ್ರವಾಸ ಮಾಡುತ್ತಾ ಇರುವುದು ಮಾಮೂಲಿ. ಮನೆಯಲ್ಲಿ ಹುಲ್ಲು, ಹಾಲು, ದೋಸೆ, ತಿಂಡಿಗಳ ಆಪೋಶನ. ದನಕರುಗಳ ಜತೆ ಒಡನಾಟ. ಹೀಗೆ ಸುಮಾರು ಹದಿನೇಳು ವರುಷಗಳ ಒಡನಾಟದ ಗೌರಿ ಮರಣಿಸಿದಾಗ ಕಳವೆ ಮನೆಯವರ ಕಣ್ಣಂಚಲ್ಲಿ ಕಣ್ಣೀರು. 

ಮನೆಯ ಸದಸ್ಯರೊಬ್ಬರು ಮರಣಿಸಿದ ವಿಷಾದ ಭಾವ. ತನ್ನ ದುಃಖವನ್ನು ಅಕ್ಷರಗಳಿಗೆ ಇಳಿಸಿದರು. ಗೌರಿ ಜೀವಂತವಾಗಿದ್ದಾಗ ಅದರ ಬದುಕನ್ನು ವೀಡಿಯೋ ಮಾಡಿದ್ದರು. “ಕಾನ್‌ ಗೌರಿ, ಗೌರಿ ಜಿಂಕೆಯ ಆತ್ಮಕಥೆ’ಯನ್ನು ಅಚ್ಚು ಹಾಕಿಸಿದ್ದರು. ಹೀಗೆ ಒಂದು ಜಿಂಕೆಯ ಮೂಲಕ ಪರಿಸರದ ಪಾಠವನ್ನು ಕಳವೆ ಮಾಡಿದ್ದರು. ಪರಿಸರ ಜಾಗೃತಿಯ ದಾರಿಯಲ್ಲಿ ಇಂತಹ ಪುಸ್ತಕ ಹೊಸತು. ಜಿಂಕೆಗಳ ಆಹಾರ, ಬದುಕು, ಹಾವಭಾವಗಳ ಸೂಕ್ಷ್ಮಗಳನ್ನು ಚಿತ್ರದಾಖಲೆಗಳ ಮೂಲಕ ಬರೆದಿದ್ದಾರೆ. ಗೌರಿಗೆ ಮಾನವ ಪ್ರೀತಿ ಸಿಗದಿರುತ್ತಿದ್ದರೆ ಅದು ನಾಡನ್ನು ಪ್ರೀತಿಸುತ್ತಿರಲಿಲ್ಲ. ತನಗೆ ಮಾತನಾಡಲು ಬಾರದಿದ್ದರೂ ವಿವಿಧ ಸಂಜ್ಞೆಗಳ ಮೂಲಕ ತನ್ನ ಅಸ್ತಿತ್ವವನ್ನು ಹೇಳುತ್ತಿತ್ತು. ಮನುಷ್ಯ-ಪ್ರಾಣಿ ಮಧ್ಯದ ಇಂತಹ ಸಂವಾದಗಳಿಗೆ ತೆರೆದ ಮನಸ್ಸು, ಹಸುರಿನ ಪ್ರೀತಿ ಮತ್ತು ಪ್ರಾಣಿದಯೆ ಬೇಕು. 

ಚಿಕ್ಕಮಗಳೂರು ಸುಳಿಮನೆಯ ಎಸ್‌.ಎಂ.ಪೆಜತ್ತಾಯರು ಕೃಷಿಕರು, ಸಾಹಿತ್ಯಾಭಿಮಾನಿ. ಮಗು ಮನಸ್ಸಿನವರು. ಈಗ ಅವರಿಲ್ಲ. ರಕ್ಷಾ ಅವರು ಮುದ್ದಿನ ಸಾಕುನಾಯಿ. “”ಮನುಷ್ಯ ಭಾಷೆ, ಬದುಕನ್ನು ಅರ್ಥ ಮಾಡಿಕೊಂಡ ಅದರ ಮುಂದೆ ನಾನು ಎಷ್ಟೋ ಬಾರಿ ಚಿಕ್ಕವನಾಗಿದ್ದೆ” ಎಂದೊಮ್ಮೆ ಹೇಳಿದ್ದರು. “”ನಮ್ಮ ಮನೆಯ ರಕ್ಷಕ. ಗಂಡು ಮಕ್ಕಳಿಲ್ಲದ ನಮಗೆ ಆತ ಮಗನೇ ಆಗಿದ್ದ” ಎಂದಿದ್ದರು. ಶ್ವಾನಪ್ರದರ್ಶನಗಳಲ್ಲಿ ಬಾಚಿಕೊಂಡು ಬಂದ ಪ್ರಶಸ್ತಿಗಳು ರಕ್ಷಾನ ತಾಕತ್ತು. ರಕ್ಷಾ ಮರಣಿಸಿದಾಗ ಪೆಜತ್ತಾಯ ಕುಟುಂಬದ ಸದಸ್ಯರೆಲ್ಲರೂ ಅತ್ತಿದ್ದಾರೆ. ಮನೆ ಮಗುವಿಗೆ ಮಾಡುವಂತಹ ಉಪಚಾರ. ಮನುಷ್ಯರಂತಹುದೇ ಶವಸಂಸ್ಕಾರ. ರಕ್ಷಾ ಮನೆಯಲ್ಲಿದ್ದಾಗ ಪೆಜತ್ತಾಯರಿಗೆ ಹತ್ತು ಜನ ಕಾವಲು ಇದ್ದಂತೆ! ರಕ್ಷಾ ಒಡನಾಟದ ಘಳಿಗೆಗಳನ್ನು “ನಮ್ಮ ರಕ್ಷಕ ರಕ್ಷಾ’ ಎನ್ನುವ ಪುಸ್ತಕದಲ್ಲಿ ಅಕ್ಷರಕ್ಕಿಳಿಸಿದ್ದರು. 

ಒಮ್ಮೆ ಸುಳ್ಯ ತಾಲೂಕಿನ ಬೆಳ್ಳಾರೆಯ ಕುರಿಯಾಜೆ ತಿರುಮಲೇಶ್ವರ ಭಟ್ಟರಲ್ಲಿಗೆ ಭೇಟಿ ನೀಡಿದ್ದೆ. ಅವರು ಉತ್ತಮ ಕೃಷಿಕರು. ಹೊಸತನ್ನು ಅನ್ವೇಷಿಸುವ ಮನಃಸ್ಥಿತಿ. ವರ್ತಮಾನಕ್ಕೆ ನಿತ್ಯ ಅಪ್‌ಡೇಟ್‌ ಆಗುತ್ತಾ, ತನ್ನ ಕೃಷಿ ಬದುಕನ್ನು ಅಪ್‌ಡೇಟ್‌ ಮಾಡಿಕೊಳ್ಳುತ್ತಿರುವ ಕೃಷಿಕ. ಅವರ ಬೋನ್ಸಾಯ್‌, ಅಂಗಳದ ನಂದನವನ, ಕೃಷಿ ಕ್ರಮಗಳಲ್ಲಿ ನಾವಿನ್ಯತೆ. ಭೇಟಿ ನೀಡಿದಾಗ ಜಾತಿ ನಾಯಿಯೊಂದು (ನಾಯಿ ಜಾತಿ ಅಲ್ಲ!) ಐದು ಮರಿಗಳ ತಾಯಿಯಾಗಿತ್ತು. “”ನೋಡಿ, ಇದು ಎಟಿಎಂ. ಮೂರು ತಿಂಗಳು ಕಷ್ಟಪಟ್ಟು ಆರೈಕೆ ಮಾಡಿದರಾಯಿತು. ಒತ್ತಡ ಹೇರಿ ಒಯ್ಯುವ ಶ್ವಾನಪ್ರಿಯರಿದ್ದಾರೆ. ಈ ಐದು ಮರಿಗಳೂ ಬುಕ್‌ ಆಗಿವೆ” ಎನ್ನುತ್ತಾ ಮರಿಗಳಿಗೆ ಹಾಲುಣಿಸಲು ಸಿದ್ಧವಾದರು. ಕೇವಲ ಮರಿಗಳನ್ನು ಮಾರುವುದಕ್ಕಾಗಿ ಉಂಟಾದ ಗಂಟಲ ಮೇಲಿನ ಪ್ರೀತಿ ಅವರದ್ದಲ್ಲ. ಮಾರಾಟ ಎನ್ನುವುದು ಖರ್ಚುಗಳನ್ನು ಸರಿದೂಗಿಸಲು ಇರುವ ಮೌಲ್ಯವಷ್ಟೇ ವಿನಾ ಹಿಂಡುವ ಜಾಯಮಾನದವರಲ್ಲ.

ಜಾತಿನಾಯಿಯ ವಿಶೇಷವನ್ನು ಹೇಳುತ್ತಿದ್ದಾಗ ಇಲ್ನೋಡಿ, ನಾಯಿಜಾತಿಯ ಕರಾಮತ್ತು! ಇದರ ಹೆಸರು ಬೊಳ್ಳು. ಬಹುಶಃ ಮರಣಿಸಿ ಐದಾರು ವರುಷ ಮೀರಿತು. ವಿಟ್ಲ (ದ.ಕ.) ಸನಿಹದ ಕೃಷಿಕ ಮಹಾಲಿಂಗ ನಾಯ್ಕರ ಸೇವಕ. ಬೊಳ್ಳು ಇವರಿಗೆ ಕೃಷಿ ಸಹಾಯಕನಾಗಿದ್ದ. ಬೊಳ್ಳುವಿನ ವಿಶೇಷವೇನು? ಇದರ ಮುಂದೆ ಬಕೆಟನ್ನು ಇಟ್ಟು, ಕೊರಳಿನ ಸಂಕಲೆಯನ್ನು ಕೈಯಲ್ಲಿ ಹಿಡಿದು “”ಪೋಯಿ” (ಅಂದರೆ ಹೋಗುವಾ ಎಂದರ್ಥ) ಅಂದರೆ ಸಾಕು, ಬೊಳ್ಳು ಬಕೆಟನ್ನು ಬಾಯಲ್ಲಿ ಕಚ್ಚಿ ನೇರವಾಗಿ ತೋಟದ ಹಾದಿ ಹಿಡಿಯುತ್ತಿದ್ದ. ನಾಯ್ಕರು ಅನುಸರಿಸುತ್ತಿದ್ದರು. ಅಡಿಕೆ ಮರದ ಬುಡದಲ್ಲಿ ಬಿದ್ದ ಹಣ್ಣಡಿಕೆಯನ್ನು ಬೊಳ್ಳು ಬಾಯಲ್ಲಿ ಕಚ್ಚಿ ಬಕೆಟಿಗೆ ಹಾಕುತ್ತಿದ್ದ. ಏನಿಲ್ಲವೆಂದರೂ ದಿನಕ್ಕೆ 250ರಿಂದ 300 ಅಡಿಕೆ ಹೆಕ್ಕುತ್ತಿದ್ದ.

ಅಂತೆಯೇ ತೆಂಗಿನಕಾಯನ್ನು ಬಾಯಲ್ಲಿ ಕಚ್ಚಿ ಮನೆಯಂಗ ಳಕ್ಕೆ ತರುತ್ತಿದ್ದ. ಗೇರುಬೀಜವನ್ನು ಅಡಿಕೆಯಂತೆ ಹೆಕ್ಕಿ ಬಕೆಟ್‌ ತುಂಬಿಸುತ್ತಿದ್ದ. ಇಷ್ಟೆಲ್ಲ ಆಗುತ್ತಿದ್ದರೂ ಸಂಕಲೆ ನಾಯ್ಕರ ಕೈಯಲ್ಲಿರುತ್ತಿತ್ತು. ಸಂಕಲೆ ಬಿಟ್ಟರೆ ಅಂಟಿಬಿಡುತ್ತದೆ, ನಾಯಿ ಬುದ್ಧಿ! ನಾಯ್ಕರ ಆದೇಶವನ್ನು ಮಾತ್ರ ಪಾಲಿಸುವ ಬೊಳ್ಳು- ಸೇವಕ. ಆದರೆ ಮನೆಮಂದಿಯ ಆದೇಶಕ್ಕೆ ಅಸಡ್ಡೆ ಮಾಡುತ್ತಿದ್ದ. ತೋಟದ ಕೆಲಸ ಮುಗಿಸಿ ಮನೆಗೆ ಬಂದರೆ ಸಾಕು, ತಿಂಡಿಗಾಗಿ ಬೇಡಿಕೆ, ಗಲಾಟೆ, ಗುಲ್ಲು. ಸಹನೆಯ ಕಟ್ಟೆ ಒಡೆದಾಗ ಮನೆಯೊಳಗೆ ನುಗ್ಗುತ್ತಿದ್ದ! ಹೊಟ್ಟೆ ತುಂಬಿದ ಬಳಿಕವೇ ಗುಲ್ಲಿಗೆ ನಿಯಂತ್ರಣ. ಒಡೆಯನ ಆಜ್ಞೆಯನ್ನು ಶಿರಸಾ ಪಾಲಿಸುತ್ತಿದ್ದ ಬೊಳ್ಳು ನಿಜಾರ್ಥದಲ್ಲಿ ನಾಯ್ಕರ ಮನೆ ಕಾಯುತ್ತಿತ್ತು. ಮನವನ್ನು ತುಂಬಿತ್ತು. 

“”ತೀವ್ರ ಅನಾರೋಗ್ಯದಲ್ಲಿದ್ದೂ ತನಗಿನ್ನು ಗುಣವಾಗುವುದಿಲ್ಲ ವೆಂಬ ಖಾತ್ರಿಯಿದ್ದೂ ಮಾಲಕನನ್ನು ಖುಷಿಪಡಿಸಲು ಗುಣವಾಗುತ್ತಿದ್ದೇನೆ ಎಂಬಂತೆ ನಟಿಸಿ, ಅವರ ತೊಡೆಯ ಮೇಲೋ ಕೈಯ ಮೇಲೋ ಮಲಗಿ ಪ್ರಾಣ ಬಿಡುವ ಹಸು, ನಾಯಿಗಳ ಕತೆಗಳು ನಮ್ಮ ಬದುಕಿನ ಸೂಕ್ಷ್ಮ ಅವಲೋಕನಕ್ಕೊಂದು ಅವಕಾಶ” ಎಂದು ಮಂಗಳೂರಿನ ಪಶುವೈದ್ಯ ಡಾ| ಮನೋಹರ ಉಪಾಧ್ಯರು ಸ್ವಾನುಭವದ ಬುತ್ತಿಯನ್ನು ಬಿಚ್ಚುತ್ತಾ ಪ್ರಾಣಿ ಸಾಕಣೆಯ ಮನಸ್ಸುಗಳ ಹಿಂದಿರುವ ಮೂರು ಹಂತವನ್ನು ವಿವರಿಸುತ್ತಾರೆ, “”ಆಹಾರಕ್ಕಾಗಿ ಸಾಕುವಾಗ ಭಾವ ರಹಿತ ಮನಸ್ಸು, ಅಧೀನದಲ್ಲಿದ್ದವರಂತೆ ಸಾಕುವಾಗ ಅಧಿಕಾರಯುತ ಮನಸ್ಸು, ಪ್ರೀತಿಗಾಗಿ ಸಾಕುವಾಗ ಸ್ನೇಹಮಯ ಮನಸ್ಸು -ಇವು ಮನುಷ್ಯರು ಪ್ರಾಣಿಗಳ ಒಡನಾಟಕ್ಕೆ ಮಾಡಿಕೊಂಡ ವ್ಯವಸ್ಥೆ.” 

ಒಡೆಯ ಕಲಿಸಿದ ಪಾಠವನ್ನು ಕಲಿತು ಚಾಚೂ ತಪ್ಪದೆ ಆದೇಶವನ್ನು ಪಾಲಿಸುತ್ತಿರುವ ನಾಯಿಗಳ ನಿಷ್ಠೆ ಮನುಷ್ಯನಿ ಗಿಂತ ಮೇಲು, ಏನಂತೀರಿ? ಪೇಪರ್‌ ತರುವ, ಮನೆಯೊಂದಿಗೆ ಆಟವಾಡುವ, ಮನೆಯಲ್ಲಿ ಅಸೌಖ್ಯವಾದರೆ ಅವುಗಳೂ ಕಣ್ಣೀರಿಡುವ, ಮನೆಯಲ್ಲಿ ಮರಣವಾದರೆ ಮರುಗುವ ದೃಷ್ಟಾಂತಗಳು ಎಷ್ಟು ಬೇಕು? ಇಂತಹ ವಾಸ್ತವಗಳನ್ನು ಕಣ್ಣೆದುರಿಗೆ ಬಿಂಬಿಸಿದರೆ ಎಡ, ಬಲ, ಮೇಲೆ, ಕೆಳಗೆ ಎಂದು ಹಣೆಪಟ್ಟಿ ಹಚ್ಚುವ ಮನಸ್ಸುಗಳಿಗೆ ಪ್ರಾಣಿಗಳ ಮನಸ್ಸು ಅರ್ಥವಾದರೆಷ್ಟು, ಬಿಟ್ಟರೆಷ್ಟು?

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

e-10.jpg

ಆರಾಧನೆಗೆ ಥಳಕು ಹಾಕಿದ ಹಲಸು

z-20.jpg

ಮೇಳಗಳ ಮಾಲೆಗೆ ಈಗ ಕಾಡು ಹಣ್ಣು

b-11.jpg

ಜಾಲತಾಣ ಗುಂಪುಗಳ ಅಗೋಚರ ಕ್ಷಮತೆ

ankana-1.jpg

ತಳಿ ತಿಜೋರಿ ತುಂಬಲು ಇ-ಸ್ನೇಹಿತರ ಸಾಥ್‌

1.jpg

ಊಟದ ಬಟ್ಟಲಿಗೆ ತಟ್ಟಲಿರುವ ಅನ್ನದ ಬರದ ಬಿಸಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.