ವರಾಟ್ಟಾರ್‌ ನದಿಗೆ ಮರುಜೀವ, ಜನಸಹಭಾಗಿತ್ವದ ಫ‌ಲ


Team Udayavani, Nov 30, 2017, 8:18 AM IST

30-3.jpg

ದಕ್ಷಿಣ ಕೇರಳದ ವರಟ್ಟಾರ್‌ ನದಿಯು ಬತ್ತಿ ದಶಕ ಮೀರಿತು! ಪತ್ತನಾಂತಿಟ್ಟ ಮತ್ತು ಅಲೆಪ್ಪಿ ಜಿಲ್ಲೆಗಳಲ್ಲಿ ಹರಿದು ಬರುವ ಇದು ಪಂಪಾನದಿಯ ಉಪನದಿ. ಮೂರು ಪಂಚಾಯತ್‌ಗಳನ್ನು ಹಾದು ಬರುತ್ತದೆ. ವರಟ್ಟಾರ್‌ ಹಳ್ಳಿಯ ಮೂಲಕ ಹರಿಯುವ ನದಿಯು ಅಲ್ಲಿಯವರಿಗೆ ವರಟ್ಟಾರ್‌ ನದಿ.

ನಾಲ್ಕು ದಶಕದ ಹಿಂದೆ ಕಣ್ಣು ಹಾಯಿಸಿದರೆ ವರಟ್ಟಾರ್‌ ನದಿಯ ಇಕ್ಕೆಲಗಳು ಕಬ್ಬಿನ ಕೃಷಿಗೆ ಖ್ಯಾತ. ನದಿಯ ದಡಗಳಲ್ಲಿ ಸಮೃದ್ಧವಾಗಿ ಬೆಳೆಯುವ ಕಬ್ಬು ಬದುಕನ್ನು ಎತ್ತರಿಸಿತ್ತು. ನದಿಯಲ್ಲಿ ದೋಣಿ ಮೂಲಕ ಕಬ್ಬನ್ನು ಸಾಗಿಸಿ ಸನಿಹದ ತಿರುವಲ್ಲಾದ ಸಕ್ಕರೆ ಕಾರ್ಖಾನೆಗೆ ಒದಗಿಸುತ್ತಿದ್ದರು. ಸಾಗಾಟ ಖರ್ಚು ಕಡಿಮೆಯಾಗಿ, ಉತ್ತೇಜಿತ ದರವೂ ಪ್ರಾಪ್ತವಾಗುತ್ತಿತ್ತು. ಕಬ್ಬನ್ನೇ ನಂಬಿದ ನೂರಾರು ಕೃಷಿಕರಿದ್ದರು. 

ಇಪ್ಪತ್ತೈದು ವರುಷದಿಂದ ಹಂತ ಹಂತವಾಗಿ ವರಾಟ್ಟಾರ್‌ ನದಿಯ ಜಲಸಂಪತ್ತಿಗೆ ಇಳಿಲೆಕ್ಕ. ನದಿಯ ಇಕ್ಕೆಡೆಯ ದಡಗಳು ವ್ಯವಸ್ಥಿತವಾಗಿ ಒತ್ತುವರಿಯಾದುವು. ಹೊಲವು ಅಡ್ಡಕ್ಕೆ ನದಿ ಪಾತ್ರಕ್ಕೆ ವಿಸ್ತರಿ ಸಿತು. ನದಿ ಹರಿವಿನ ಪಾತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಜೊಂಡು ಹುಲ್ಲು ಬೆಳೆಯಿತು. ನೀರಿನೊಂದಿಗೆ ಮಣ್ಣು ಕೂಡ ಕೊಚ್ಚಿ ಬಂದು ಅಲ್ಲಲ್ಲಿ ತಂಗಿ ನದಿ ಪಾತ್ರದ ಆಳಗಲಗಳು ಕುಗ್ಗಿದುವು. ನದಿಗೆ ಅಡ್ಡವಾಗಿ ಕಟ್ಟಿದ ಮೋರಿಗಳೂ ಜಲಮಾರ್ಗದ ಕಬ್ಬು ಸಾಗಾಟಕ್ಕೆ ಅಡ್ಡಿಯಾದವು. 

ಪರಿಣಾಮ, ಜಲಮೂಲಗಳು ಬತ್ತಿದವು. ಕುಡಿಯುವ ನೀರಿಗೂ ಬರ. ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಾ ಬಂತು. ಕಬ್ಬು ಬೆಳೆಯಲು ನೀರಿಗೂ ತೊಂದರೆಯಾಯಿತು. ಬದುಕು ಅತಂತ್ರವಾ ಯಿತು. ಎರಡೂ ಬದಿಗಳ ನೂರಾರು ಬಾವಿಗಳು ಕಳೆದ ಬೇಸಿಗೆಯಲ್ಲಿ ಬತ್ತಿ ಆಘಾತ ಕೊಟ್ಟವು. ಇಂತಹ ಸ್ಥಿತಿಯಲ್ಲಿ ಬೇರೆಡೆ ವಲಸೆ ಹೋಗುವುದು ಬಿಟ್ಟರೆ ಅನ್ಯ ಮಾರ್ಗವಿರಲಿಲ್ಲ. 

ವರಾಟ್ಟಾರಿನಲ್ಲಿ ಸ್ಥಳೀಯ ಪತ್ರಕರ್ತರ ನಿವಾಸಗಳಿದ್ದುವು. ಎರಡು ವರುಷಗಳಿಂದ ಬೇಸಿಗೆಯಲ್ಲಿ ನೀರಿಗಾಗಿ ಒದ್ದಾಡುವ ಹಳ್ಳಿಯ ಸಂಕಷ್ಟದ ನುಡಿಚಿತ್ರಗಳು ಮಾಧ್ಯಮಗಳಲ್ಲಿ ಸತತವಾಗಿ ಬೆಳಕು ಕಂಡವು. ಸುದ್ದಿಯು ಜನನಾಯಕರ ಮನೆಯ ಕದ ತಟ್ಟಿತು. ರಾಜ್ಯ ರಾಜಧಾನಿಯಲ್ಲೂ ಸುದ್ದಿಯಾಯಿತು. ನದಿಯ ಪುನರುಜ್ಜೀವನದ ಕೂಗು ನಾಡಿನ ದೊರೆಗಳೂ ಕಿವಿಗೂ ತಲುಪಿತು. 

ಬದುಕಿನ ಅತಂತ್ರತೆಯಿಂದ ವರಾಟ್ಟಾರಿನ ಮಂದಿಗೆ ಮಾಡು, ಮಡಿ-ಎರಡೇ ಆಯ್ಕೆಗಳಿದ್ದುವು. ಹುಟ್ಟಿನ ಊರನ್ನು ತ್ಯಜಿಸುವಂತಿಲ್ಲ. ಜನರು ಎಚ್ಚೆತ್ತುಕೊಂಡರು. ಬದುಕುವುದಕ್ಕಾಗಿ ಬತ್ತಿದ ನದಿಯನ್ನು ಪುನಃ ಹರಿಯುವಂತೆ ಮಾಡುವ ಸಂಕಲ್ಪ. ಅದು ಹೇಳಿದಷ್ಟು ಸುಲಭದ್ದಾಗಿರಲಿಲ್ಲ. ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ಬೇರೆ ಬೇರೆ ಹಂತಗಳಲ್ಲಿ ದನಿಯೆಬ್ಬಿಸಿದುವು. ಜನಸ್ಪಂದನ ದೊಡ್ಡ ರೀತಿಯಲ್ಲಿ ಫ‌ಲಿತವಾಯಿತು. ಕಾಲಕಾಲದ ಘಟನೆಗಳು ಮಾಧ್ಯಮಗಳಲ್ಲಿ ಬಂದು ಅದೊಂದು ಆಂದೋಳನದ ಸ್ವರೂಪ ತಲುಪಿತು. ಈ ಭಾಗದ ನದಿಗಳ ಪುನರುಜ್ಜೀವನಕ್ಕಾಗಿ ಹಲವು ಸಮಯದ ಹಿಂದೆಯೇ ರೂಪುಗೊಂಡ “ಪಂಪಾ ಸಂರಕ್ಷಣಾ ಸಮಿತಿ’ಯು ಸಕ್ರಿಯವಾಯಿತು. ಇದರ ಕಾರ್ಯದರ್ಶಿ ಎನ್‌.ಕೆ. ಸುಕುಮಾರನ್‌ ವರಟ್ಟಾರ್‌ ನದಿಯ ನೀರಿನ ಗುಣಮಟ್ಟವನ್ನು ವಿಶ್ಲೇಷಿಸುತ್ತಾರೆ, “”ನಾವು ವರಾಟ್ಟಾರ್‌ ನದಿಯ ನೀರನ್ನು ಹಿಂದೆ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿದ್ದೆವು. ನೀರಿನಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಿತ್ತು. ಕೋಳಿಫಾರ್ಮ್ ಬ್ಯಾಕ್ಟೀರಿಯಾ ಮತ್ತು ಕಬ್ಬಿಣದ ಅಂಶ ಹೆಚ್ಚಿದ್ದುವು. ಕುಡಿಯಲು ಯೋಗ್ಯವಾಗಿರಲಿಲ್ಲ.”

ಜನಶಕ್ತಿ ಒಂದಾದಾಗ ನರೇಗಾ ಕಾರ್ಯಪಡೆ ಚುರುಕಾಯಿತು. ಸ್ವಯಂಸೇವಕರು ಟೊಂಕ ಕಟ್ಟಿದರು. ಪಂಚಾಯತ್‌ ವರಿಷ್ಠರು, ಊರಿನ-ಪರವೂರಿನ ಸಮ್ಮನಸ್ಸಿನವರು, ತಾರೆಯರು… ಹೀಗೆ ಈ ಕೆಲಸಕ್ಕೆ ಸಹಕಾರಗಳ ಹನಿಹನಿ ಸೇರಿತು. ಸರಕಾರವೂ ಜತೆಗೂಡಿತು. ವಿತ್ತ ಸಚಿವ ಥಾಮಸ್‌ ಐಸಾಕ್‌, ಜಲಸಂಪನ್ಮೂಲ ಸಚಿವ ಮ್ಯಾಥ್ಯೂ ಟಿ. ಥಾಮಸ್‌ ಅಲ್ಲದೆ ಅಧಿಕಾರಿಗಳು ಹಳ್ಳಿಗೆ ಬಂದರು. 

ಮೂರು ಹಂತಗಳಲ್ಲಿ ಪುನರುಜ್ಜೀವನದ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ನೀಲನಕ್ಷೆ ಸಿದ್ಧವಾಯಿತು. ಮೊದಲಿಗೆ ಅತಿಕ್ರಮಣದ ತೆರವು. ಅದಕ್ಕೆ ಯಂತ್ರಗಳ ಬಳಕೆ ಅನಿವಾರ್ಯ. ಬೆಳೆದ ಜೊಂಡನ್ನು ಕಿತ್ತು ಶುಚಿಗೊಳಿಸುವುದೂ ಹೆಚ್ಚು ಶ್ರಮದ ಕೆಲಸ. ಎರಡನೆಯದು- ನದಿಯ ಪಾತ್ರ ಎಷ್ಟಿದೆ ಎನ್ನುವ ಅಧ್ಯಯನ. ಮೂರನೆಯದು ಜಲಾನಯನ ಅಭಿವೃದ್ಧಿ. ಇದರಿಂದ ಬತ್ತಿದ ಜಲಮೂಲಗಳ ಪುನಶ್ಚೇತನ.

ಅತಿಕ್ರಮಣ ಎಂದಾಗ ಸಹಜವಾಗಿ ಪ್ರತಿಭಟನೆಯ ಅಸ್ತ್ರ ಎಲ್ಲೆಡೆ ಕಾಣುತ್ತೇವೆ. ವರಾಟ್ಟಾರಿನಲ್ಲಿ ಸರಕಾರವು ಈ ಕೆಲಸಕ್ಕೆ ಕೈ ಹಾಕಿತ್ತು. ಮಂತ್ರಿ ಗಡಣ ಬಂದಾಗ ಆಕ್ರಮಣ ಮಾಡಿಕೊಂಡವರಿಂದ ಪ್ರತಿಭಟನೆ ಬರಬಹುದೆನ್ನುವ ನಿರೀಕ್ಷೆ ಹುಸಿಯಾಯಿತು. ಕಾರಣ, ಇವರ ಬದುಕನ್ನು ಆಗಲೇ ನೀರಿನ ಬರ ಹೈರಾಣ ಮಾಡಿತ್ತು! ಹಾಗಾಗಿ ಸರಕಾರದ ನಿರ್ಧಾರಕ್ಕೆ ಒಮ್ಮತದ ಮುದ್ರೆಯೊತ್ತಿದ್ದರು.  

ನದಿಹರಿವಿನ ಹಾದಿಯನ್ನು ಶುಚಿಗೊಳಿಸುವ ಕಾರ್ಯ ನಡೆಯುತ್ತಿದೆ. ಅಡ್ಡವಾಗಿದ್ದ ಮೋರಿಗಳನ್ನು ತೆರೆವುಗೊಳಿಸುವ ಕಾರ್ಯ ನಡೆದಿದೆ. ಹೊಳೆ ಪಾತ್ರದ ಮರ, ಗಿಡ, ಕಳೆಗಳನ್ನು ಸವರುವ ಸ್ವಯಂಸೇವಕರ ಗಣ ದೊಡ್ಡದಿದೆ. ಏನಿಲ್ಲವೆಂದರೂ ದಿನಕ್ಕೆ ನೂರಕ್ಕೂ ಹೆಚ್ಚು ಮಂದಿಯ ಶ್ರಮ. ರಜಾ ದಿನಗಳಲ್ಲಿ ಇನ್ನೂ ಹೆಚ್ಚು. ಊರವರ ಜತೆ ನದಿತೀರದ ಅಧ್ಯಯನದಲ್ಲಿ ಸ್ವತಃ ವಿತ್ತ ಸಚಿವರೇ ಬಂದುದು ಊರವರಿಗೆ ಇನ್ನಷ್ಟು ಸ್ಫೂರ್ತಿ ನೀಡಿದೆ.  ನದಿ ಪಾತ್ರದ ಅಳತೆಯ ಬಳಿಕ ಮಾಡಬಹುದಾದ ಯೋಜನೆ ಸಿದ್ಧವಾಗಿದೆ. ಸುಮಾರು ಹತ್ತು ಕಿಲೋಮಿಟರ್‌ ದೂರದವರೆಗೆ ನದಿಯ ಇಕ್ಕೆಡೆಗಳಲ್ಲಿ ವಿವಿಧ ಮರಜಾತಿಯ ಸಸ್ಯಗಳನ್ನು, ಹಣ್ಣಿನ ಗಿಡಗಳನ್ನು ನೆಟ್ಟು ಬೆಳೆಸುವುದು. ಆಯಾಯ ಸಸ್ಯ-ಮರಗಳಿಗೆ ಫ‌ಲಕಗಳ ಸ್ಥಾಪನೆ. ರಸ್ತೆಗಳ ನಿರ್ಮಾಣ. ಸಸ್ಯವೈವಿಧ್ಯ ತಾಣವನ್ನಾಗಿ ರೂಪಿಸುವ ದೂರದೃಷ್ಟಿ. ಈ ಪ್ರದೇಶವನ್ನು ವಾಯುವಿಹಾರಕ್ಕಾಗಿ ಮಾತ್ರ ಬಳಸುವಂತೆ ಎಚ್ಚರ ವಹಿಸಲು ನಿರ್ಧಾರ. ಜಲಾನಯನ ಅಭಿವೃದ್ಧಿಯು ಕೊನೆಯ ಹಂತ. ಗುಡ್ಡಗಳಿಂದ ಅಂತರ್ಗತವಾಗಿ ಹರಿದು ಬರುವ ನೀರಿನ ಮೂಲಗಳ ಅಭಿವೃದ್ಧಿ.  “”ಸರಕಾರವು ಬತ್ತಿದ ನದಿಯೊಂದರ ಪುನರುಜ್ಜೀವಕ್ಕಾಗಿ ಕೈಹಾಕಿರುವುದು ಬಹುಶಃ ಇದು ಪ್ರಥಮ. ಬತ್ತುವ ಹಾದಿಯಲ್ಲಿರುವ ಭರತಹೊಳೆಯ ಪುನರುಜ್ಜೀವನಕ್ಕೂ ಸರಕಾರ ಮುಂದಾಗಿದೆ. ಕೇರಳ ಆಡಳಿತದ ಈ ಕಾರ್ಯವು ಇತರ ರಾಜ್ಯಗಳಿಗೂ ಸಂದೇಶ ನೀಡಿದೆ,” ಎನ್ನುತ್ತಾರೆ ಜಲತಜ್ಞ ಶ್ರೀ ಪಡ್ರೆ. “”ನದಿಯ ಆಳದಿಂದ ತೊಡಗಿ ಎಲ್ಲ ವಿಚಾರಗಳನ್ನು ವೈಜ್ಞಾನಿಕವಾಗಿ ಅನುಷ್ಠಾನಿಸುತ್ತೇವೆ. ನದಿಯು ವರ್ಷವಿಡೀ ಹರಿಯುವಂತಾಗಲು ಇಕ್ಕೆಡೆಯಲ್ಲಿ ಜಲಾನಯನ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿ ಕೊಳ್ಳು ತ್ತೇವೆ” ಕೇರಳ ವಿತ್ತ ಸಚಿವರ ಆತ್ಮವಿಶ್ವಾಸ ಮಾತು.  ವರಾಟ್ಟಾರ್‌ ಕಣ್ಣೀರಿನ ಕತೆಯನ್ನು ಹೇಳುವಾಗ ಪಾಲಕ್ಕಾಡು ಜಿಲ್ಲೆಯ ಗುಡ್ಡಗಾಡು ಪ್ರದೇಶ ಅಟ್ಟಪ್ಪಾಡಿಯ ಯಶೋಗಾಥೆ ಯನ್ನು ಶ್ರೀ ಪಡ್ರೆಯವರು ನೆನಪು ಮಾಡಿಕೊಂಡರು. ಅಟ್ಟಪ್ಪಾಡಿಯು ಕಡಿಮೆ ಮಳೆ ಬೀಳುವ ಪ್ರದೇಶ. ಆದಿವಾಸಿಗಳ ಬದುಕಿನ ಉದ್ಧಾರಕ್ಕಾಗಿರುವ “ಅಟ್ಟಪ್ಪಾಡಿ ಹಿಲ್‌ ಏರಿಯಾ ಡೆವಲಪ್‌ಮೆಂಟ್‌ ಸೊಸೈಟಿ’ಯು ಜನಸಹಭಾಗಿತ್ವದಲ್ಲಿ ಮಾಡಿದ ಅಂತರ್ಜಲ ಸುಧಾರಣೆಯ ಕೆಲಸಗಳು ಸಣ್ಣದಲ್ಲ. ಇದರ ಫ‌ಲವಾಗಿ ಇಪ್ಪತ್ತೆಂಟು ಕಿಲೋಮೀಟರ್‌ ಉದ್ದಕ್ಕೆ ಕೊಡುಂಗರಪಳ್ಳ ನದಿಯೊಂದು ಪುನರುಜ್ಜೀವನಗೊಂಡು ಹತ್ತು ವರುಷವಾಯಿತು. ಈ ಹಿನ್ನೆಲೆಯಲ್ಲಿ ವರಾಟ್ಟಾರ್‌ ಎರಡನೆಯದು.

ಚುರುಕಾದ ಮಾಧ್ಯಮಗಳಿರುವ ಕೇರಳದಲ್ಲಿ ಕೊಡುಂಗರ ಪಳ್ಳ ನದಿಯ ಪುನರುಜ್ಜೀವ ಅಷ್ಟೊಂದು ಜನಜನಿತವಾಗಲಿಲ್ಲ. ಆದರೆ ವರಾಟ್ಟಾರಿನಲ್ಲಿ ಪತ್ರಕರ್ತರೂ ಸಂತ್ರಸ್ತರಾದ್ದ‌ರಿಂದ ಕಣ್ಣೀರ ಕತೆಯು ದೊಡ್ಡ ಸುದ್ದಿಯಾಯಿತು. ವರಾಟ್ಟಾರ್‌ ನದಿಯ ಈಗಿನ ನೀಲನಕ್ಷೆ, ಜನಸ್ಪಂದನ ಮತ್ತು ಸರಕಾರದ ಛಲಗಳನ್ನು ನೋಡಿದರೆ ಈಗಾಗಲೇ ಹರಿವ‌ ಹೆಜ್ಜೆಯನ್ನು ಊರಿದ ವರಾಟ್ಟಾರ್‌ ಒಂದೆರಡು ವರುಷದಲ್ಲಿ ವರುಷಪೂರ್ತಿ ಹರಿಯುವುದರಲ್ಲಿ ಸಂಶಯವಿಲ್ಲ.  ವರಾಟ್ಟಾರಿನ ಪುನರುಜ್ಜೀವನದ ಕತೆಯು ದೂರದ ಪಂಜಾಬಿನಲ್ಲೂ ಸುದ್ದಿ ಮಾಡಿದೆ! ಅಲ್ಲಿನ ಕಾಳಿಬೈನ್‌ ನದಿಯನ್ನು ಪುನರುಜ್ಜೀವಗೊಳಿಸಿದ ಸಂತ್‌ ಬಲ್‌ಬಿàಲ್‌ ಸಿಂಗ್‌ ಒಂದಿಬ್ಬರನ್ನು ವರಾಟ್ಟಾರಿಗೆ ಅಧ್ಯಯನಕ್ಕೆ ಕಳುಹಿಸಿದ್ದಾರಂತೆ.

ಕನ್ನಾಡಿನಲ್ಲಿ ವರಾಟ್ಟಾರ್‌ ನದಿಯಂತೆ ಹರಿವನ್ನು ನಿಲ್ಲಿಸಿದ, ಅರೆಜೀವದಿಂದಿರುವ ಚಿಕ್ಕಪುಟ್ಟ ತೋಡು, ಹಳ್ಳಗಳು ಎಷ್ಟಿಲ್ಲ? ಸ್ಥಳೀಯ ಮನಸ್ಸುಗಳು ಪ್ರಯತ್ನಿಸಿದರೆ ಮೂರ್ನಾಲ್ಕು ವರುಷದಲ್ಲಿ ಹಳ್ಳದಲ್ಲಿ ನೀರಿನ ಹರಿವನ್ನು ಮತ್ತೆ ಕಾಣಬಹುದು. ಒಗ್ಗೂಡಿ ಕೆಲಸ ಮಾಡುವುದು ಅನಿವಾರ್ಯ. ಜತೆಗೆ ದಕ್ಷ ನಾಯಕತ್ವ ಮತ್ತು ದೂರದೃಷ್ಟಿ ಬೇಕು. ಇದಕ್ಕಾಗಿ ಸರಕಾರದತ್ತ ಕತ್ತು ತಿರುಗಿಸಿದರೆ ಪ್ರಯೋಜನವಿಲ್ಲ. ಶಿವಮೊಗ್ಗ ಜಿಲ್ಲೆಯ ಸಾಗರ ಸನಿಹದ ದ್ಯಾವಾಸ ನದಿಯು ಊರವರ ಶ್ರಮದ ಫ‌ಲವಾಗಿ ಮತ್ತೆ ಹರಿಯತೊಡಗಿದ ಗಾಥೆಯೂ ಕಣ್ಣಮುಂದಿದೆ.

ನಾ. ಕಾರಂತ ಪೆರಾಜೆ

ಟಾಪ್ ನ್ಯೂಸ್

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

e-10.jpg

ಆರಾಧನೆಗೆ ಥಳಕು ಹಾಕಿದ ಹಲಸು

z-20.jpg

ಮೇಳಗಳ ಮಾಲೆಗೆ ಈಗ ಕಾಡು ಹಣ್ಣು

b-11.jpg

ಜಾಲತಾಣ ಗುಂಪುಗಳ ಅಗೋಚರ ಕ್ಷಮತೆ

ankana-1.jpg

ತಳಿ ತಿಜೋರಿ ತುಂಬಲು ಇ-ಸ್ನೇಹಿತರ ಸಾಥ್‌

1.jpg

ಊಟದ ಬಟ್ಟಲಿಗೆ ತಟ್ಟಲಿರುವ ಅನ್ನದ ಬರದ ಬಿಸಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.