ತಳಿ ತಿಜೋರಿ ತುಂಬಲು ಇ-ಸ್ನೇಹಿತರ ಸಾಥ್‌


Team Udayavani, May 17, 2018, 6:00 AM IST

ankana-1.jpg

ಹೊಸ ತಳಿಗಳ ಹಸಿವಿನಿಂದ ಅನಿಲ್‌ ಜಾಲತಾಣಗಳಲ್ಲಿ ಅಲೆಯುತ್ತಾರೆ. ಪತ್ರಿಕೆಗಳನ್ನು ತಿರುವಿ ಹಾಕುತ್ತಾರೆ. ಹೊಸ ತಳಿಯು ಪತ್ತೆಯಾದರೆ ವಿವರಗಳನ್ನು ಗುಂಪುಗಳಲ್ಲಿ ಪ್ರಕಟಿಸುತ್ತಾರೆ. ಈ ವಿಚಾರಗಳು ಚರ್ಚಿತವಾಗುತ್ತವೆ. ತಳಿಯ ಗುಣಾವಗುಣ ತೃಪ್ತಿಯಾದರೆ ಮಾತ್ರ ಅಸಕ್ತರಾಗುತ್ತಾರೆ. ಸಂಬಂಧಪಟ್ಟ ಸ್ನೇಹಿತರ ಮೂಲಕ ತರಿಸಿಕೊಳ್ಳುತ್ತಾರೆ.

ಕಾಲವು ಅಪ್‌ಡೇಟ್‌ ಆಗುತ್ತಿದೆ! ಅಂದರೆ ಕಾಲವನ್ನೇ ಅಪ್‌ಡೇಟ್‌ನತ್ತ ತಿರುಗಿಸುವ ತಂತ್ರಜ್ಞಾನಗಳ ಅವೃತ್ತಿಗಳು ರೆಪ್ಪೆ ಮುಚ್ಚಿ ತೆರೆಯುವುದರೊಳಗೆ ಲೋಕಾರ್ಪಣೆಗೊಳ್ಳುತ್ತಿವೆ. ಅಂಗೈಯೊಳಗೆ ವಿಶ್ವವನ್ನೇ ಕಾಣುವ ಯೋಗ. ಆದರೆ ಬಳಕೆಯ ವಿಧಾನದಲ್ಲಿ ಯೋಗವು ದುರ್ಯೋಗವಾಗುತ್ತಿದೆ. ಭಾಷಣ, ಮಾತುಕತೆಗಳಲ್ಲಿ ಗೊಣಗಾಟಗಳು ರಾಚುತ್ತಲೇ ಇರುತ್ತವೆ. 

ನವಮಾಧ್ಯಮಗಳ ವಾಟ್ಸಾಪ್‌, ಫೇಸ್‌ಬುಕ್‌, ಟ್ವಿಟ್ಟರ್‌ ಬಳಕೆಗಳನ್ನು ಸಮಯ ಕೊಲ್ಲುವ, ಹೊತ್ತು ಕಳೆಯುವ ಉಪಾಧಿಯಾಗಿ ಬಳಸಿಕೊಂಡಿದ್ದೇವೆ. ಬದಲಿಗೆ ವೃತ್ತಿ/ಹವ್ಯಾಸ ಬದುಕಿಗೆ ಪೂರಕವಾಗುವ ಒಳಸುರಿಗಳಿಗೆ ಬಳಸಿದರೆ? “ಸಂವಹನವನ್ನು ಹತ್ತಿರಗೊಳಿಸಿ, ಆಪ್ತವಾಗಿಸುವ ಗುಂಪುಗಳು ನೂರಾರಿವೆ. ನಮ್ಮ ಆಸಕ್ತಿ ಯಾವುದು ಎನ್ನುವುದರ ಮೇಲೆ ಜಾಲತಾಣಗಳ ಯಶಸ್ಸು. ಅವುಗಳಿಂದ ಕೃಷಿಗೆ ಪೂರಕವಾದ ಹೊಸ ವಿಚಾರಗಳನ್ನು ನಮ್ಮದಾಗಿಸಬಹುದು. ನಮಗರಿವಿಲ್ಲದೆ ಅಪ್‌ಡೇಟ್‌ ಆಗುತ್ತಿರುತ್ತೇವೆ’ ಎನ್ನುತ್ತಾರೆ ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗರ್ಡಾಡಿಯ ಕೃಷಿಕ ಅನಿಲ್‌ ಬಳೆಂಜ.

“ಆರುನೂರೈವತ್ತಕ್ಕೂ ಮಿಕ್ಕಿ ಹಣ್ಣಿನ ತಳಿಗಳು ನನ್ನ ತೋಟದಲ್ಲಿ ಬೆಳೆಯುತ್ತಿರುವುದರ ಹಿಂದೆ ವಾಟ್ಸಾಪ್‌, ಫೇಸ್‌ಬುಕ್ಕಿನಂತಹ ಜಾಲತಾಣಗಳ ಕೊಡುಗೆ ದೊಡ್ಡದು. ದೇಶ ವಿದೇಶಗಳಲ್ಲಿ ಹಲ ವಾರು ಫ‌ಲಪ್ರಿಯ, ಸಸ್ಯಪ್ರಿಯ, ಕೃಷಿ ಪ್ರಿಯ ಇ-ಸ್ನೇಹಿತರನ್ನು ಗಳಿಸಿಕೊಟ್ಟಿದೆ. ತಳಿಗಳನ್ನು ಹುಡುಕಿ ಮಲೇಶ್ಯಾಗೆ ಹೋದಾಗ ಅಲ್ಲಿನ ಸ್ನೇಹಿತರು ಸಹಕರಿಸಿದರು. ಮನೆಯವನಂತೆ ನೋಡಿಕೊಂಡರು’ ಎನ್ನುತ್ತಾರೆ. ಸಮಾನ ಮನಸ್ಥಿತಿಯ ಮನಸ್ಸುಗಳನ್ನು ಹತ್ತಿರ ನೋಡುವ, ಅವರೊಂದಿಗೆ ಬೆರೆಯುವ, ಸ್ನೇಹದ ಗಾಢತೆಯನ್ನು ಬೆಸೆಯುವಲ್ಲಿ ನವಮಾಧ್ಯಮಗಳು ಕೊಂಡಿಯಾಗಿವೆ. ಮಲೇಶ್ಯಾಗೆ ಅನಿಲ್‌ ಕಾಲಿಟ್ಟಾಗ ತಾನು ಕರಾವಳಿಯವನೆಂದು ಅನ್ನಿಸಲೇ ಇಲ್ಲವಂತೆ. ಜಾಲತಾಣಗಳು ರೂಪಿಸಿದ ಅಜ್ಞಾತ ಇ-ಸ್ನೇಹಿತರು ಮುಖಾಮುಖೀಯಾದಾಗ ಆಗುವ ಪುಳಕ ಅವರ್ಣನೀಯ. 

ಗುಂಪುಗಳಲ್ಲಿ ನಿರಂತರ ಸಂಪರ್ಕವಿರಿಸಿಕೊಂಡು, ಮನಸ್ಸನ್ನು ಹಂಚಿಕೊಂಡು, ತಮ್ಮಲ್ಲಿದ್ದ ಸಸ್ಯ, ಬೀಜ, ಹಣ್ಣುಗಳ ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದ ಸ್ನೇಹಿತರಲ್ಲಿ ಅನ್ಯ ವಿಚಾರಗಳಿಗೆ ಜಾಗವಿಲ್ಲ. “ನನ್ನಲ್ಲಿಗೆ ತೊಂಭತ್ತರಷ್ಟು ತಳಿಗಳು ಇ-ಸಂಪರ್ಕಗಳಿಂದ ಬಂದಿವೆ’ ಎನ್ನುತ್ತಾರೆ. 

ಹೊಸ ತಳಿಗಳ ಹಸಿವಿನಿಂದ ಅನಿಲ್‌ ಜಾಲತಾಣಗಳಲ್ಲಿ ಅಲೆ ಯುತ್ತಾರೆ. ಪತ್ರಿಕೆಗಳನ್ನು ತಿರುವಿ ಹಾಕುತ್ತಾರೆ. ಹೊಸ ತಳಿಯು ಪತ್ತೆಯಾದರೆ ವಿವರಗಳನ್ನು ಗುಂಪುಗಳಲ್ಲಿ ಪ್ರಕಟಿಸುತ್ತಾರೆ. ಈ ವಿಚಾರಗಳು ಚರ್ಚಿತವಾಗುತ್ತವೆ. ತಳಿಯ ಗುಣಾವಗುಣ ತೃಪ್ತಿಯಾದರೆ ಮಾತ್ರ ಅಸಕ್ತರಾಗುತ್ತಾರೆ. ಸಂಬಂಧಪಟ್ಟ ಸ್ನೇಹಿತರ ಮೂಲಕ ತರಿಸಿಕೊಳ್ಳುತ್ತಾರೆ. ಹೀಗೆ ತರಿಸಿಕೊಳ್ಳುವಲ್ಲಿ ರಿಸ್ಕ್ ಇಲ್ಲದಿಲ್ಲ. ಅಂತೆಯೇ ದೂರದ ಸ್ನೇಹಿತರಿಗೂ ಬೇಡಿಕೆಯಂತೆ ವಿನಿಮಯ ಮಾಡಿಕೊಳ್ಳುತ್ತಾರೆ. 

ಇಪ್ಪತ್ತೆಂಟು ಕೃಷಿಗುಂಪಿನಲ್ಲಿ ಅನಿಲ್‌ ಸಕ್ರಿಯ. ಒಂದೊಂದರ ಆಶಯ ಒಂದೊಂದು. ಗುಂಪಿನ ಆಶಯದಂತೆ ವಿಚಾರ ವಿನಿ ಮಯ. ವಿಭಿನ್ನ ಮನಸ್ಥಿತಿಯ, ಆಸಕ್ತಿಯ ಇ-ಸ್ನೇಹಿತರಲ್ಲಿ ಹೇಗೆ ಸಂಭಾಷಿಸಬೇಕೆನ್ನುವ ಜಾಣ್ಮೆ ಅನಿಲರಲ್ಲಿದೆ. ಇಂಡೋನೇಶ್ಯಾ, ಮಲೇಶ್ಯಾ, ಕೀನ್ಯಾ, ಬ್ರೆಜಿಲ್‌, ಥಾಯ್‌ಲ್ಯಾಂಡ್‌… ಹೀಗೆ ಅನ್ಯಾನ್ಯ ದೇಶಗಳಲ್ಲಿ ಹಸಿರು ಗೆಳೆಯರಿದ್ದಾರೆ. ಭಾಷೆಯ ತೊಡಕಾದಾಗ ಗೂಗಲ್‌, ವಿಕ್ಕಿಪೀಡಿಯಾಗಳ ನೆರವು. ಗಿಡಗಳ ಹುಡುಕಾಟಕ್ಕೆ ಸಸ್ಯಶಾಸ್ತ್ರೀಯ ಹೆಸರು, ಅವುಗಳ ಕುಟುಂಬಗಳ ಅಧ್ಯಯನ. 

ಹೊರ ದೇಶದ ಹಣ್ಣುಗಳು ಕರುನಾಡಿಗೆ ಅದರಲ್ಲೂ ಕರಾವಳಿಗೆ ಹೇಗೆ ಹೊಂದುತ್ತದೆ ಎನ್ನುವ ಖಾತ್ರಿ ಹೇಗೆ? “ಗುಂಪು
ಗಳಲ್ಲಿ ಚರ್ಚೆ ಮಾಡುವಾಗ ತಳಿಯು ಯಾವ ದೇಶದ್ದು ಎನ್ನುವ ವಿಚಾರಕ್ಕೆ ಮೊದಲಾದ್ಯತೆ. ಆ ದೇಶದ ಸ್ನೇಹಿತರನ್ನು ಹುಡುಕಿ ಗುಂಪಿನಲ್ಲಿ ಮಾತುಕತೆ. ನಂತರವಷ್ಟೇ ನಿರ್ಧಾರ. ಹೀಗೆ ಆಗಮಿಸಿದ ತಳಿಗಳು ನನ್ನ ತೀವ್ರನಿಗಾ ವಿಭಾಗದಲ್ಲಿ ಶುಶ್ರೂಷೆಗೆ ಒಳಪಟ್ಟು, ಐದಾರು ತಿಂಗಳ ಬಳಿಕವಷ್ಟೇ ಮಣ್ಣಿನ ಸಂಪರ್ಕ ಪಡೆಯುತ್ತದೆ. ಎಷ್ಟು ನಿಗಾ ವಹಿಸಿದರೂ ತಳಿಯ ಶುದ್ಧತೆಯ ಖಚಿತ ಪರೀಕ್ಷೆ ಬೇಕಲ್ವಾ. ಇಲ್ಲದಿದ್ದರೆ ಹೊರ ಊರಿನ ಕಳೆ ಯೊಂದನ್ನು ಸಾಕಿದಂತಾಗುತ್ತದೆ.’

ಅನಿಲರ ಇ-ಸ್ನೇಹಿತರ ಮಾತುಕತೆ ಇಲ್ಲಿಗೆ ಮುಗಿಯುವುದಿಲ್ಲ. ತಳಿಗಳ ಯೋಗಕ್ಷೇಮಗಳನ್ನು ಗುಂಪಿನ ಮೂಲಕ ರವಾನಿಸು ತ್ತಾರೆ. ಕೃತಜ್ಞತೆ ಸಲ್ಲಿಸುತ್ತಾರೆ. ಸೋಲು ಗೆಲುವುಗಳನ್ನು ಹಂಚಿ ಕೊಳ್ಳುತ್ತಾರೆ. ಹೀಗೆ ಮಾಡಿದಾಗ ಸ್ನೇಹದ ಗಾಢತೆ ಗಟ್ಟಿಯಾ ಗುವುದಲ್ಲದೆ, ಇತರ ಫ‌ಲಪ್ರಿಯರಿಗೂ ತಳಿಯೊಂದರ ಪೂರ್ಣ ವಿವರ ತಿಳಿದಂತಾಗುತ್ತದೆ. 

ಮಲೇಶ್ಯಾದಲ್ಲಿ ಒಂದು ವಾರ ಪ್ರವಾಸ ಮಾಡಿದ್ದಾರೆ. ಗೆಳೆಯ ಪೀಟರ್‌ ಲೀ ಮಾರ್ಗದರ್ಶನ. ಮೊದಲೇ ಭಾಷೆ, ಸಂವಹನ ಮೊದಲಾದ ಎದುರಾಗಬಹುದಾದ ತೊಂದರೆಗಳ ನಿವಾರಣೆ. “ಪೀಟರ್‌ ಅವರಿಗೂ ಆಸಕ್ತಿಯಿತ್ತು. 

ನರ್ಸರಿಗಳು, ಗಾರ್ಡನ್‌ಗಳು, ಹೊಸ ತಳಿಗಳನ್ನು ಪರಿಚಯ ಮಾಡಿಕೊಟ್ಟರು. ಮಲೇಶ್ಯಾ ದಿಂದ ನಲವತ್ತು ಬಗೆಯ ಹಣ್ಣುಗಳನ್ನು ಪತ್ತೆ ಮಾಡಿದ್ದೇನೆ. ಕೆಲವು ತೀವ್ರನಿಗಾ ವಿಭಾಗದಲ್ಲಿ ಆರೈಕೆ ಪಡೆಯುತ್ತಿವೆ!’ ಖುಷಿಯಿಂದ ಮಲೇಶ್ಯಾ ಪ್ರವಾಸದ ಅನುಭವಗಳನ್ನು ಹಂಚಿಕೊಳ್ಳುವ ಅನಿಲ್‌ ಅಲ್ಲಿನ ಸಮಸ್ಯೆಯತ್ತಲೂ ಗಮನ ಸೆಳೆಯುತ್ತಾರೆ.
ಮಲೇಶ್ಯಾ ಹಣ್ಣುಗಳ ದೇಶ. ಮೂಡುಬಿದಿರೆಯ ಡಾ. ಸೋನ್ಸ್‌ ಅವರು ಕಾಲು ಶತಮಾನಗಳ ಹಿಂದೆ ಮಲೇಶ್ಯಾದಿಂದ ತಂದು ಅಭಿವೃದ್ಧಿ ಪಡಿಸಿದ ರಂಬುಟಾನ್‌ ಗಿಡಗಳು ಕರುನಾಡಿನ ಕೃಷಿಕರ ತೋಟದಲ್ಲಿ ಫ‌ಲ ನೀಡಲು ಆರಂಭಿಸಿವೆ. ಕಾರ್ಮಿಕ ಸಮಸ್ಯೆಯಿಂದ ಮಲೇಶ್ಯಾವೂ ಹೊರತಲ್ಲ. ಒಂದು ಕಾಲಘಟ್ಟದಲ್ಲಿ ವಾಣಿಜ್ಯ ಬೆಳೆಯಾದ ರಬ್ಬರಿನತ್ತ ವಾಲಿದ್ದರು. ಈಗ ಹಣ್ಣಿನ ಕೃಷಿಗೆ ಒಲವು ಹೆಚ್ಚುತ್ತಿದೆ. ಅದರಲ್ಲೂ ರಂಬುಟಾನ್‌, ಡ್ನೂರಿಯನ್‌, ಹಲಸು, ಚೆಂಪೆಡೆಕ್‌ ಹಣ್ಣುಗಳನ್ನು ಮಾರುಕಟ್ಟೆ ದೃಷ್ಟಿಯಿಂದ ಬೆಳೆಯುವ ಉತ್ಸಾಹ ವೇಗ ಪಡೆದಿದೆ.

ತನ್ನ ತೋಟದ ತಳಿಗಳ ವಿವರಗಳು ಅನಿಲ ನಾಲಗೆ ತುದಿ ಯಲ್ಲಿದೆ. ಶುಶ್ರುಷೆಯಲ್ಲಿದ್ದಾಗಲೇ ಸಂಗಾತಿಗಳಾಗಿ ಬಿಡುತ್ತವೆ. ಯಾವ ಯಾವ ವಾತಾವರಣದಲ್ಲಿ ಯಾವ್ಯಾವುವು ಹೇಗೆ ಬೆಳೆಯುತ್ತವೆ ಎನ್ನುವ ಮಾಹಿತಿಯಂತೆ ತನ್ನ ತೋಟದ ವಿನ್ಯಾಸಕ್ಕೆ ಅನುಕೂಲವಾಗಿ ಬೆಳೆಸುತ್ತಿದ್ದಾರೆ. ಎಲ್ಲವೂ ಸ್ವ-ಸಂತೋಷಕ್ಕಾಗಿ. ಹೀಗೆ ಬೆಳೆದವುಗಳಲ್ಲಿ ಶೇ.40ರಷ್ಟು ಫ‌ಲ ನೀಡುತ್ತಿವೆ. ಆಮದಾದ ಗಿಡಗಳು ಫ‌ಲ ನೀಡಲು ಏನಿಲ್ಲವೆಂದರೂ ಐದಾರು ವರುಷ ಬೇಕು. ಕೆಲವೊಮ್ಮೆ ನಾಟಿ ಮಾಡಿದವು ಅಸ್ವಸ್ಥವಾದಾಗ ಆ ಜಾಗಕ್ಕೆ ಮರುನಾಟಿ ಮಾಡಲು ತಿಜೋರಿಯಲ್ಲಿ ಆಪತ್ಕಾಲದಲ್ಲಿ ಬಳಸಲು ಗಿಡಗಳನ್ನು ತಯಾರಿಸಿಟ್ಟುಕೊಳ್ಳುತ್ತಾರೆ. 

ಈ ಬಾರಿ ಗಾಕ್‌ ಹಣ್ಣು ಹೆಚ್ಚೇ ಫ‌ಲ ನೀಡಿತ್ತು. ನೋಟ ಆಕರ್ಷಕ. ಸುಲಿದ ತೆಂಗಿನ ಕಾಯಿಯ ಗಾತ್ರ. ಮೂಡು
ಬಿದಿರೆಯ ಹಣ್ಣಿನ ಅಂಗಡಿಯೊಂದಕ್ಕೆ ನೀಡಿದಾಗ ಮೊದಲು ನಿರಾಕರಿಸಿದರು. ಹಣ್ಣಿನ ಚಿಕ್ಕ ಬರಹವೊಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಬರಹದ ಪ್ರತಿಯನ್ನು ಅಂಗಡಿಯವರಿಗೆ ನೀಡಿದರು. ಅದರಲ್ಲಿ ಗಾಕ್‌ ಹಣ್ಣು ಕ್ಯಾನ್ಸರ್‌ ರೋಗ ನಿವಾರಣೆಗೂ ಫ‌ಲಕಾರಿ, ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ತಗ್ಗಿಸುತ್ತದೆ. ಶರೀರದ ಕೊಬ್ಬನ್ನು ಕರಗಿಸುವ ಸಾಮರ್ಥ್ಯವಿದೆ ಎನ್ನುವ ಉಲ್ಲೇಖವಿತ್ತು. ಇದನ್ನು ಓದಿದ ಗ್ರಾಹಕರು ಹಣ್ಣಿಗೆ ಮುಗಿಬಿದ್ದರಂತೆ. ನೂರು ರೂಪಾಯಿಯಂತೆ ಇನ್ನೂರೈವತ್ತು ಹಣ್ಣುಗಳನ್ನು ಮಾರಾಟ ಮಾಡಿದ್ದಾರೆ. ಇದು ಅನಿಲರ ಮೊದಲ ಮಾರುಕಟ್ಟೆ!
“ಒಂದು ಬಳ್ಳಿಯಲ್ಲಿ ಬೆಳೆದ ಹಣ್ಣುಗಳು ಇಪ್ಪತ್ತೆçದು ಸಾವಿರ ರೂಪಾಯಿ ಗಳಿಸಿಕೊಟ್ಟಿತು’ ಎಂದು ಕಣ್ಣುಮಿಟುಕಿಸುತ್ತಾರೆ. ಗಾಕ್‌ ಹಣ್ಣಿನಂತೆ ಅಬಿಯು, ಕೈಮಿತೋ, ಮಲೇಶಿಯನ್‌ ಚೆಂಪಡೆಕ್‌ ಮೊದಲಾದ ಹಣ್ಣುಗಳು ಮಾರುಕಟ್ಟೆ ಭಾಗ್ಯಕ್ಕೆ ಒಳಪಡುವವುಗಳು. 

ಅನಿಲರಿಗೆ ಹಣ್ಣುಗಳ ಮಾರುಕಟ್ಟೆಗಿಂತ ಸಸ್ಯಾಭಿವೃದ್ಧಿಯತ್ತ ಒಲವು. ಕೆಲವನ್ನು ಕಸಿ ಮೂಲಕ ಅಭಿವೃದ್ಧಿ ಪಡಿಸಿ ನರ್ಸರಿಗಳಿಗೆ ನೀಡಿದ್ದಾರೆ. ಆಸಕ್ತರು ಅಪೇಕ್ಷೆಪಟ್ಟರೆ ನರ್ಸರಿಯ ಹಾದಿ ತೋರಿಸುತ್ತಾರೆ! “ನಾನೇ ತೋಟದಲ್ಲಿ ಮಾರಾಟಕ್ಕೆ ಕುಳಿತರೆ ಒಬ್ಬೊಬ್ಬರಿಗೆ ಮೂರ್ನಾಲ್ಕು ಗಂಟೆ ವ್ಯಯಿಸಬೇಕಾಗುತ್ತದೆ. ನನ್ನ ಕೃಷಿಯ ಸಮಯ ಹಾಳಾಗುತ್ತದೆ. ತುಂಬು ಆಸಕ್ತರಿದ್ದರೆ ಸಮಯ ಕೊಡಲು ತೊಂದರೆಯಿಲ್ಲ. ಭೇಟಿ ನೀಡುವವರು ವಿವಿಧ ಮನಸ್ಥಿತಿಯವರು ಅಲ್ವಾ. ಎಲ್ಲರೂ ಒಂದೇ ರೀತಿ ಇರುವು ದಿಲ್ಲವಲ್ಲ’ ಎಂದಾಗ ಅವರ ಮನದ ಆತಂಕ ಅರ್ಥವಾಯಿತು. 

ಸರಕಾರಿ ಸಂಸ್ಥೆಯೊಂದು ಬಯೋಡೈವರ್ಸಿಟಿ ಪಾರ್ಕ್‌ ಮಾಡಲು ಉದ್ಯುಕ್ತವಾಗಿದೆ. ಅನಿಲರಲ್ಲಿ ಗಿಡಗಳಿಗೆ ಬೇಡಿಕೆ ಮುಂದಿಟ್ಟಾಗ ಏನು ಹೇಳಿರಬಹುದು? “ಸರಕಾರ ಮಾಡುವ ಕೆಲಸವನ್ನು ಫ‌ಲಪ್ರಿಯರು ಮಾಡುತ್ತಿದ್ದಾರೆ. ತಳಿಗಳ ಸಂಗ್ರಹವು ಸರಕಾರದಲ್ಲಿರಬೇಕಾಗಿತ್ತು. ನಮ್ಮಲ್ಲಿಂದ ನೀವು ಒಯ್ಯುವುದಕ್ಕಿಂತ ನಿಮ್ಮಲ್ಲಿಂದ ನಾವು ಒಯ್ಯುವಂತಾಗಬೇಕಿತ್ತು’ ಎನ್ನುತ್ತಾ ಕೆಲವು ತಳಿಗಳನ್ನು ನೀಡಲು ಒಪ್ಪಿದ್ದಾರಂತೆ. ಇಂತಹ ಮಾತುಗಳು ಓರ್ವ ಫ‌ಲಪ್ರಿಯರಿಂದ ಬರಬೇಕಾದರೆ ಸಂಗ್ರಹದ ಹಿಂದಿರುವ ಕಾಯಕ ಕಷ್ಟವನ್ನು ಅರಿಯಬೇಕು. 

ಅನಿಲರು ಹೊಸಫ‌ಲ ಎನ್ನುವ ವಾಟ್ಸಾಪ್‌ ಗುಂಪು ರಚಿಸಿದ್ದಾರೆ. ಆಸಕ್ತರಿಗೆ ಮಾತ್ರ ಸದಸ್ಯತ್ವ. ಕೃಷಿ ಮಾಸಿಕ ಅಡಿಕೆ ಪತ್ರಿಕೆಯಲ್ಲೂ ಹೊಸ ಫ‌ಲ ಅಂಕಣವನ್ನು ಬರೆಯುತ್ತಿದ್ದಾರೆ. ಕರುನಾಡಿಗೆ ಸೂಕ್ತವಾಗುವ, ಫ‌ಲ ಬರುವ ಮತ್ತು ಕರಾವಳಿ- ಉಷ್ಣವಲಯಕ್ಕೆ ಹೊಂದುವ ತಳಿಗಳಷ್ಟನ್ನೇ ಪರಿಚಯಿಸುತ್ತಾರೆ. 

ಮನೆಯವರ ಬೆಂಬಲ, ಸ್ವ-ಆಸಕ್ತಿ, ಇ-ಸ್ನೇಹಿತರ ಸರಕಾರ, ಜಾಲತಾಣ ಗುಂಪುಗಳೊಂದಿಗೆ ಸಂಪರ್ಕ, ಗೆಳೆಯರ ಮಾರ್ಗದರ್ಶನ… ಇವೆಲ್ಲಾ ಅನಿಲರ ಆಸಕ್ತಿಯ ಯಶದ ಅಜ್ಞಾತ ಶಕ್ತಿಗಳು. ಮೂವತ್ತಾರರ ವಯಸ್ಸಲ್ಲೇ ನಿಬ್ಬೆರಗಾಗಿಸುವ ನಿಜಾರ್ಥದ ಸಾಧನೆ.

ಟಾಪ್ ನ್ಯೂಸ್

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

e-10.jpg

ಆರಾಧನೆಗೆ ಥಳಕು ಹಾಕಿದ ಹಲಸು

z-20.jpg

ಮೇಳಗಳ ಮಾಲೆಗೆ ಈಗ ಕಾಡು ಹಣ್ಣು

b-11.jpg

ಜಾಲತಾಣ ಗುಂಪುಗಳ ಅಗೋಚರ ಕ್ಷಮತೆ

1.jpg

ಊಟದ ಬಟ್ಟಲಿಗೆ ತಟ್ಟಲಿರುವ ಅನ್ನದ ಬರದ ಬಿಸಿ!

14.jpg

ಹಳ್ಳಿಯಲ್ಲಿ ಬೀಸಿದ ತಂಪು ಬೇರಿನ ತಂಗಾಳಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.