ಬಿಜೆಪಿ ನಡೆಸಲಿದೆ ಸಾವಿರ ರ್ಯಾಲಿ
Team Udayavani, Mar 14, 2019, 12:30 AM IST
ಹೊಸದಿಲ್ಲಿ: ಲೋಕಸಭೆಗೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣ ರ್ಯಾಲಿಗಳು ಇನ್ನೇನು ಬಿರುಸಾಗಿಯೇ ನಡೆಯಲಿವೆ. ಬಿಜೆಪಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ದೇಶದ ವಿವಿಧ ಭಾಗಗಳಲ್ಲಿ 200 ರ್ಯಾಲಿಗಳನ್ನು ನಡೆಸಲಿದ್ದಾರೆ. ಅವರ ಜತೆಗೆ ಬಿಜೆಪಿಯ ಇತರ ನಾಯಕರೂ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಒಟ್ಟಾರೆಯಾಗಿ ಬಿಜೆಪಿ ನಾಯಕರು ಕನಿಷ್ಠ 1 ಸಾವಿರ ರ್ಯಾಲಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಸ್ಮತಿ ಇರಾನಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹಿತ ಪ್ರಮುಖರು ಅದನ್ನು ನಡೆಸಿಕೊಡಲಿದ್ದಾರೆ. “50 ವರ್ಷಗಳ ನಡುವಿನ ಅಧಿಕಾರ ಮತ್ತು 50 ತಿಂಗಳ ನಡುವಿನ ಸೇವೆ’ ಎನ್ನುವುದೇ ಈ ಕಾರ್ಯ ಕ್ರಮಗಳ ತಿರುಳಾಗಲಿದೆ.
ಅದಕ್ಕಾಗಿ 20 ಅಂಶಗಳ ಕಾರ್ಯಸೂಚಿಯನ್ನೂ ಸಿದ್ಧ ಪಡಿಸಲಾಗುತ್ತಿದೆ. ಪಕ್ಷದ ಪ್ರಮುಖ ನಾಯಕರಾದ ನರೇಂದ್ರ ಮೋದಿ, ಅಮಿತ್ ಶಾ ಎನ್ಡಿಎ ಮೈತ್ರಿಕೂಟದ ಪಕ್ಷಗಳ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿರುವ ಕ್ಷೇತ್ರ ಸಹಿತ ದೇಶದ ಹೆಚ್ಚಿನ ಲೋಕಸಭಾ ಕ್ಷೇತ್ರಗಳಿಗೆ ತೆರಳಿ ಪ್ರಚಾರ ನಡೆಸಲಿದ್ದಾರೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ನಾಯಕರೊಬ್ಬರು “ದ ಹಿಂದುಸ್ತಾನ್ ಟೈಮ್ಸ್’ ಪತ್ರಿಕೆಗೆ ತಿಳಿಸಿದ್ದಾರೆ.
ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಲದ ಎಲ್ಲ ಹಂತಗಳ ಮತದಾನದ ಮುನ್ನ ಅಲ್ಲಿ ರ್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ.
ಮತಹಾಕಲು ಪ್ರಧಾನಿ ಮನವಿ: ಮತ ಚಲಾಯಿಸುವುದು ದೇಶದ ನಾಗರಿಕನ ಪ್ರಧಾನ ಹಕ್ಕುಗಳಲ್ಲಿ ಒಂದಾಗಿದೆ. ಇಂಥ ಕರ್ತವ್ಯದಲ್ಲಿ ಭಾಗವಹಿಸುವುದರಿಂದ ದೇಶದ ಆಶೋತ್ತರಗಳಲ್ಲಿ ಭಾಗಿಯಾದಂತಾಗುತ್ತದೆ ಎಂದು ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ. ಇದರ ಜತೆಗೆ ಬ್ಲಾಗ್ನಲ್ಲಿಯೂ ಈ ಬಗ್ಗೆ ಬರೆದು ಕೊಂಡಿ ದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತದಾನ ಮಾಡಲು ಪ್ರೇರೇಪಿಸುವಂತೆ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಎಸ್ಪಿ ನಾಯಕ ಅಖೀಲೇಶ್ ಯಾದವ್, ಬಿಎಸ್ಪಿ ನಾಯಕಿ ಮಾಯಾವತಿ, ಉದ್ಯಮಿ ರತನ್ ಟಾಟಾ, ಕ್ರೀಡಾಪಟು ಪಿ.ವಿ. ಸಿಂಧೂ ಅವರಿಗೂ ತಮ್ಮ ಟ್ವೀಟ್ ಅನ್ನು ಟ್ಯಾಗ್ ಮಾಡಿದ್ದಾರೆ.
31 ಸರಣಿ ಟ್ವೀಟ್ಗಳಲ್ಲಿ ಮತದಾನದ ಮಹತ್ವ ವಿವರಿಸಿದ್ದಾರೆ ಪ್ರಧಾನಿ ಮೋದಿ. ಚಿತ್ರನಟರಾದ ಮೋಹನ್ಲಾಲ್, ನಾಗಾರ್ಜುನ ಅಕ್ಕಿನೇನಿ ಅವರಿಗೆ ಟ್ವೀಟ್ ಮೂಲಕ ಮನವಿ ಮಾಡಿರುವ ಪ್ರಧಾನಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತದಾನ ಮಾಡಲು ಜನರಿಗೆ ಕರೆ ನೀಡಿ ಎಂದೂ ಮನವಿ ಮಾಡಿದ್ದಾರೆ. “ಈ ಬಾರಿ ಚುನಾವಣೆಯಲ್ಲಿ ಹಕ್ಕು ಚಲಾವಣೆ ಮಾಡಲು ಅರ್ಹತೆ ಪಡೆದಿರುವವರು ಮತ ದಾ ರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಳ್ಳದೆ ಇದ್ದರೆ, ಅದನ್ನು ಮಾಡಿ’ ಎಂದು ಬರೆದುಕೊಂಡಿದ್ದಾರೆ. ಜತೆಗೆ ಅದಕ್ಕೆ ಸಂಬಂಧಿಸಿದ ಲಿಂಕ್ ಅನ್ನೂ ನೀಡಿದ್ದಾರೆ. ಮಾಧ್ಯಮ ಸಂಸ್ಥೆಗಳೂ ಈ ಬಗ್ಗೆ ಅರಿವು ಮೂಡಿಸಲು ಮುಂದಾಗಬೇಕು ಎಂದು ಹೇಳಿದ್ದಾರೆ ಪ್ರಧಾನಿ.
ಈಶಾನ್ಯದಲ್ಲಿ 22ರ ಗುರಿ
ಅಸ್ಸಾಂ ಸಹಿತ ಈಶಾನ್ಯ ರಾಜ್ಯಗಳಲ್ಲಿನ ಪ್ರಾದೇಶಿಕ ಪಕ್ಷಗಳ ಜತೆಗೆ ಬಿಜೆಪಿ ಚುನಾವಣ ಪೂರ್ವ ಮೈತ್ರಿ ಮಾಡಿಕೊಂಡಿದೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಂ ಮಾಧವ್ ಪ್ರಕಾರ ಒಟ್ಟು 25 ಸ್ಥಾನಗಳ ಪೈಕಿ 22 ರಲ್ಲಿ ಬಿಜೆಪಿ ಮತ್ತು ಇತರ ಮಿತ್ರಪಕ್ಷಗಳು ಗೆಲ್ಲುವ ಗುರಿ ಹಾಕಿಕೊಂಡಿವೆ. ಅಸ್ಸಾಂ ಗಣಪರಿಷತ್, ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್), ಇಂಡೀಜೀನಿಯಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿ ಎಫ್ಟಿ), ನ್ಯಾಷನಲ್ ಪೀಪಲ್ಸ್ ಪಾರ್ಟಿ, ನ್ಯಾಷನಲಿಸ್ಟ್ ಡೆಮೊ ಕ್ರಾಟಿಕ್ ಪ್ರೊಗ್ರೇಸಿವ್ ಪಾರ್ಟಿ ಮತ್ತು ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಜತೆಗೆ ಸ್ಥಾನ ಹೊಂದಾಣಿಕೆ ಮಾತುಕತೆ ನಡೆಸಿದ್ದಾರೆ. ನಾಗಾಲ್ಯಾಂಡ್ ಸಿಎಂ ನೆಪ್ಯೂ ರಿಯೋ, ಅಸ್ಸಾಂ ಸಿಎಂ ಸರ್ವಾನಂದ ಸೊನೊವಾಲ್, ಮೇಘಾ ಲಯ ಸಿಎಂ ಕಾರ್ನಾಡ್ ಸಂಗ್ಮಾ ಜತೆಗೆ ಅವರು ಮಾತುಕತೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್ಐಎ ವಶಕ್ಕೆ
FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್
Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ