ಒಗ್ಗಟ್ಟಿನ ರಣಕಹಳೆ ; ಪರಮೇಶ್ವರ್ ಗೈರು
Team Udayavani, Mar 20, 2019, 12:30 AM IST
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸೀಟು ಹೊಂದಾಣಿಕೆ ಮಾಡಿಕೊಂಡಿರುವ ಕಾಂಗ್ರೆಸ್ -ಜೆಡಿಎಸ್, ಮಾಚ್ 31ಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಐತಿಹಾಸಿಕ ಸಮಾವೇಶದ ಮೂಲಕ ಚುನಾವಣೆ ರಣಕಹಳೆ ಮೊಳಗಿಸಲು ನಿರ್ಧರಿಸಿದೆ. ರಾಜ್ಯದ 28 ಕ್ಷೇತ್ರಗಳಲ್ಲೂ ಜಂಟಿ ಪ್ರಚಾರಕ್ಕೂ ತೀರ್ಮಾನಿಸಿದ್ದು, ಎರಡೂ ಪಕ್ಷಗಳು ತಮ್ಮ ಜಿಲ್ಲಾ
ಘಟಕಗಳು, ಶಾಸಕರು, ಮಾಜಿ ಶಾಸಕರು, ರಾಜ್ಯ ಪದಾಧಿಕಾರಿಗಳಿಗೆ ಏನೇ ಸಣ್ಣಪುಟ್ಟ ವ್ಯತ್ಯಾಸ ಇದ್ದರೂ ರಾಜ್ಯ ಹಾಗೂ ರಾಷ್ಟ್ರೀಯ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಒಟ್ಟಾಗಿ ಬಿಜೆಪಿ ವಿರುದ್ಧ ಹೋರಾಟ ಮಾಡುವಂತೆ ಫರ್ಮಾನು ಹೊರಡಿಸಲಿವೆ. ಪ್ರತಿ ಲೋಕಸಭೆ ಕ್ಷೇತ್ರದಲ್ಲಿ ಸಮನ್ವಯ ಸಾಧಿಸಲು ಕಾಂಗ್ರೆಸ್-ಜೆಡಿಎಸ್ನ ಹಿರಿಯ ನಾಯಕರನ್ನು ವೀಕ್ಷಕರನ್ನಾಗಿ ನೇಮಿಸಲು ತೀರ್ಮಾನಿಸಿದೆ.
ಸೋಮವಾರ ಖಾಸಗಿ ಹೋಟೆಲ್ನಲ್ಲಿ ಚುನಾವಣಾ ಕಾರ್ಯತಂತ್ರ ಕುರಿತು ಸಭೆ ನಡೆಸಿದ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಚಿವ ಡಿ.ಕೆ.ಶಿವಕುಮಾರ್, ರಾಜ್ಯಸಭೆ ಸದಸ್ಯ ಕುಪೇಂದ್ರರೆಡ್ಡಿ, ಮೊದಲ ಹಾಗೂ ಎರಡನೇ ಹಂತದ ಚುನಾವಣೆಯಲ್ಲಿ ಅನುಸರಿಸಬೇಕಾದ ರೂಪು-ರೇಷೆ ಚರ್ಚಿಸಿ ಅಂತಿಮಗೊಳಿಸಿದರು.
ಬಿಜೆಪಿ ಸೋಲಿಸುವುದೇ ಗುರಿ: ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಎರಡೂ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಲು ಸೀಟು ಹಂಚಿಕೆ ಸಹ ಆಗಿದೆ. ಕೋಮುವಾದಿ ಬಿಜೆಪಿ ಸೋಲಿಸುವುದೇ ನಮ್ಮ ಗುರಿ. ಹೀಗಾಗಿ, ಒಟ್ಟಾಗಿ ಚುನಾವಣೆ ಪ್ರಚಾರ ಮಾಡಲಿದ್ದೇವೆ. ರಾಹುಲ್ಗಾಂಧಿ ಹಾಗೂ ದೇವೇಗೌಡರ ನೇತೃತ್ವದಲ್ಲಿ ಮಾರ್ಚ್ 31ರಂದು ಬೆಂಗಳೂರು ನಗರ ಅಥವಾ ಸುತ್ತಮುತ್ತ ಭಾಗದಲ್ಲಿ ಬೃಹತ್ ಸಮಾವೇಶ ನಡೆಸಿ ರಾಜ್ಯಕ್ಕಷ್ಟೇ ಅಲ್ಲದೆ ಇಡೀ ದೇಶಕ್ಕೆ ಸಂದೇಶ ರವಾನೆ ಮಾಡಲಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸುವುದು ಹೊಸ ಒಪ್ಪಂದವಲ್ಲ. ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭದಲ್ಲೇ ಲೋಕಸಭೆಯಲ್ಲೂ ಒಟ್ಟಾಗಿ ಹೋರಾಟದ ತೀರ್ಮಾನ ಮಾಡಿದ್ದೆವು. ಅದರಂತೆ ಸೀಟು ಹೊಂದಾಣಿಕೆ ಯಾಗಿದೆ. 28ಕ್ಕೆ 28ರಲ್ಲೂ ಮೈತ್ರಿಕೂಟವೇ ಗೆಲ್ಲಲಿದೆ ಎಂದು ತಿಳಿಸಿದರು. ನಮ್ಮ ರಾಜಕೀಯ ಎದುರಾಳಿ ಬಿಜೆಪಿ. ನಾನೂ, ದೇವೇಗೌಡರು, ಕುಮಾರ ಸ್ವಾಮಿ, ದಿನೇಶ್ ಗುಂಡೂರಾವ್ ಸಹಿತ ಎಲ್ಲರೂ ಒಟ್ಟಾಗಿ ಪ್ರಚಾರಕ್ಕೆ ಹೋಗುತ್ತೇವೆ ಎಂದು ತಿಳಿಸಿದರು.
ಸಮಸ್ಯೆಯೇನಿಲ್ಲ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆ ನಂತರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಮ್ಮಿಶ್ರ ಸರ್ಕಾರ ಉತ್ತಮ ಆಡಳಿತ ನೀಡುತ್ತಿದ್ದು ಲೋಕಸಭೆ ಚುನಾವಣೆಯಲ್ಲೂ ಒಟ್ಟಾಗಿ ಹೋರಾಟ ಮಾಡಿ ಅತಿ ಹೆಚ್ಚು ಸೀಟು ಗೆಲ್ಲುವ ಮೂಲಕ ಮೈತ್ರಿಕೂಟ ಮತ್ತಷ್ಟು ಗಟ್ಟಿಗೊಳಿಸಲಿದ್ದೇವೆ ಎಂದು ಹೇಳಿದರು. ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ದೇಶದಲ್ಲಿ ಎದುರಾದ 13 ಉಪ ಚುನಾವಣೆ, ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಶಕ್ತಿ ಹೆಚ್ಚಿಸಿಕೊಂಡಿದೆ ಎಂದೂ ತಿಳಿಸಿದರು.
ಪರಮೇಶ್ವರ್ ಗೈರು
ಚುನಾವಣಾ ಕಾರ್ಯತಂತ್ರ ಕುರಿತು ಸೋಮವಾರ ರಾತ್ರಿ ದೇವೇಗೌಡರ ನಿವಾಸದಲ್ಲಿ ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ನಡೆಸಿದ ಸಭೆ ಹಾಗೂ ಮಂಗಳವಾರ ಖಾಸಗಿ ಹೋಟೆಲ್ನಲ್ಲಿ ನಡೆಸಿ ಮಾತುಕತೆಯಲ್ಲೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗೈರುಹಾಜರಾಗಿದ್ದರು, ತುಮಕೂರು ಕ್ಷೇತ್ರ ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದಕ್ಕೆ ಅಸಮಾಧಾನಗೊಂಡಿರುವ ಅವರು ಈ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ ಎಂದು ಹೇಳಲಾಗಿದೆ. ಆದರೆ, ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಪೂರ್ವ ನಿಗದಿತ ಕಾರ್ಯಕ್ರಮ ಇದ್ದ ಕಾರಣ ಅವರು ಬಂದಿಲ್ಲ. ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾವಲುಗಾರರೊಂದಿಗೆ ಆಡಿಯೋ ಸಂವಾದ
ದೇಶದ 25 ಲಕ್ಷ ಚೌಕಿದಾರ (ಕಾವಲುಗಾರ) ರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಆಡಿಯೋ ಸಂವಾದ ನಡೆಸಲಿದ್ದಾರೆ. ಈ ಮೂಲಕ ತಮ್ಮ ಮೈನ್ ಭೀ ಚೌಕಿ ದಾರ್ ಆಂದೋಲನವನ್ನು ಮತ್ತಷ್ಟು ತೀವ್ರಗೊಳಿಸಲಿದ್ದಾರೆ. ಪಕ್ಷದ ಮಾಧ್ಯಮದ ಘಟಕದ ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಅನಿಲ್ ಬಲೂನಿ ಅವರು ಈ ಮಾಹಿತಿ ನೀಡಿದ್ದು, ಮೋದಿ ಅವರು, ಚೌಕಿದಾರರ ಜತೆ “ಹೋಳಿ ರಂಗಿ’ನ ಸಡಗರ ಹಂಚಿಕೊಳ್ಳಲಿದ್ದಾರೆ ಎಂದಿದ್ದಾರೆ. ಇದಷ್ಟೇ ಅಲ್ಲ, ಮಾ. 31ಕ್ಕೆನಾನೂ ಚೌಕಿದಾರ ಆಂದೋಲನದಲ್ಲಿ ಭಾಗವಹಿಸಿದ್ದವರ ಜತೆಯೂ ಮೋದಿ ಸಂವಾದ ನಡೆಸಲಿದ್ದಾರೆ. ಇದಕ್ಕಾಗಿ 500 ಕಡೆಗಳಿಂದ ಜನ ವಿಡಿಯೋ ಸಂವಾದದಲ್ಲಿ ಭಾಗವಹಿಸಲಿದ್ದಾರೆ.
ಅಮಿತ್ ಶಾ ಅವರು ತಮ್ಮ ಕಾರ್ಯಕರ್ತರಿಗೆ ಸಾರ್ವಜನಿಕವಾಗಿ ವರ್ತಿಸುವುದನ್ನು ಕಲಿಸಲಿ.ಗಣ್ಯರು ಬಂದಾಗ ಹೇಗೆ ನಡೆದುಕೊಳ್ಳಬೇಕು ಎಂಬುದು ಬಿಜೆಪಿಯವರಿಗೆ ಗೊತ್ತಿಲ್ಲವೇ?
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ದೇಶವನ್ನು ತುಂಡು ಮಾಡಬೇಕು ಎಂದು ಹೇಳುವ ಗುಂಪಿಗೆ ಆತ್ಮೀಯ ಅಪ್ಪುಗೆ ನೀಡುವ ನೀವು(ರಾಹುಲ್) ಶಾಂತಿಯಿಂದ ಮೋದಿ ಪರ ಘೋಷಣೆ ಹಾಕಿದವರನ್ನು ಬಂಧಿಸಿದ್ದೇಕೆ?
– ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!
PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್ ಸೇದಿದ ಆಟಗಾರನ ವಿಡಿಯೋ ವೈರಲ್
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು
Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ