ಮೂರ್ಖರನ್ನಾಗಿಸಲು ಸಾಧ್ಯವಿಲ್ಲ
Team Udayavani, Mar 21, 2019, 12:30 AM IST
ಮಿರ್ಜಾಪುರ/ವಾರಾಣಸಿ: ಜನರನ್ನು ಯಾವತ್ತೂ ಮೂರ್ಖರ ನ್ನಾಗಿಸಬಹುದು ಎಂದು ಪ್ರಧಾನಿ ಎ ನರೇಂದ್ರ ಮೋದಿ ತಿಳಿದಿದ್ದರೆ ಅದು ತಪ್ಪು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಹೇಳಿದ್ದಾರೆ.
ದೇಶದ ಜನರಿಗೆ ಏನಾಗುತ್ತಿದೆ ಎಂಬುದರ ಬಗ್ಗೆ ಅರಿವು ಇದೆ ಎಂದು ಅವರು ಹೇಳಿದ್ದಾರೆ. ಉತ್ತರ ಪ್ರದೇಶದ ಮಿರ್ಜಾಪುರ ಮತ್ತು ವಾರಾಣಸಿಯಲ್ಲಿ ಮೂರು ದಿನಗಳ ಗಂಗಾಯಾತ್ರೆ ವೇಳೆ ಮಾತನಾಡಿದ ಅವರು,ಪ್ರಧಾನಿ ನರೇಂದ್ರ ಮೋದಿ ಬ್ಲಾಗ್ನಲ್ಲಿ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
“ಐದು ವರ್ಷಗಳ ಅವಧಿಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಎಲ್ಲಾ ಸಾಂಸ್ಥಿಕ ಸಂಸ್ಥೆಗಳ ಮೇಲೆ ದಾಳಿ ನಡೆಸಿದೆ ಎಂದು ಅವರು ಆರೋಪಿಸಿದ್ದಾರೆ.
ಹೆದರುವುದಿಲ್ಲ: ನಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ಹೆದರುವುದೇ ಇಲ್ಲ ಎಂದು ಹೇಳಿದ ಪ್ರಿಯಾಂಕಾ ವಾದ್ರಾ, ನಮ್ಮನ್ನು ಹೆಚ್ಚಿನ ಪ್ರಮಾಣದಲ್ಲಿ ಕಿರುಕುಳ ನೀಡಿದಷ್ಟು ಬಲವಾಗುತ್ತೇವೆ ಮತ್ತು ಹೋರಾಟ ನಡೆಸುತ್ತೇವೆ. ಅದರ ವಿರುದ್ಧ ನಾವು ಹೋರಾಟ ನಡೆಸುತ್ತೇವೆ ಎಂದಿದ್ದಾರೆ.
ಮೋದಿ ವಿಫಲ: ವಾರಾಣಸಿ ಕ್ಷೇತ್ರದ ಸಂಸದರಾಗಿ ಅಲ್ಲಿನ ಒಂದೇ ಒಂದು ಬೇಡಿಕೆಯನ್ನು ಈಡೇರಿಸುವಲ್ಲಿ ನರೇಂದ್ರ ಮೋದಿ ವಿಫಲರಾಗಿದ್ದಾರೆ ಎಂದಿರುವ ಅವರು, ತಮ್ಮ ಆರೋಪಗಳಿಗೆ ಪೂರಕವಾಗಿ 2014ರಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ನೀಡಿದ್ದ ಆಶ್ವಾಸನೆಗಳ ಪಟ್ಟಿಯನ್ನು ಪ್ರದರ್ಶಿಸಿದರು.
“ವಾರಾಣಸಿ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ 8 ವಾಗ್ಧಾನಗಳನ್ನು ನೀಡಿದ್ದರು. ಅವುಗಳ ಪೈಕಿ ಒಂದಾದರೂ ಪೂರ್ತಿಗೊಂಡಿದೆಯೇ ಎಂದು ಪ್ರಶ್ನಿಸಿದರು. ಪ್ರಧಾನಿ ಕೇವಲ ಪ್ರಚಾರಕ್ಕಾಗಿ ರಾಜಕೀಯ ನಡೆಸುತ್ತಿದ್ದಾರೆ ಎಂದು ಟೀಕಿಸಿದರು. ಆನಂತರ, ಪವಿತ್ರ ಕ್ಷೇತ್ರ ಅಸ್ಸಿಘಾಟ್ಗೂ ಭೇಟಿ ನೀಡಿದ ಪ್ರಿಯಾಂಕಾ, ಸ್ಥಳೀಯರ ಜತೆಗೆ ಮಾತುಕತೆ ನಡೆಸಿದರು. ಕಾಶಿ ವಿಶ್ವನಾಥ ದೇಗುಲದಲ್ಲಿ ವಿಶೇಷ ಪೂಜೆಯನ್ನೂ ಸಲ್ಲಿಸಿದ್ದಾರೆ. ಪ್ರಧಾನಿ ಕ್ಷೇತ್ರಕ್ಕೆ ಭೇಟಿ ನೀಡುವ ಮೂಲಕ ಮೂರು ದಿನಗಳ 100 ಕಿಮೀ “ಬೋಟ್ ಪೆ ಚರ್ಚಾ’ ಕಾರ್ಯಕ್ರಮ ಮುಕ್ತಾಯವಾಗಿದೆ.
ಶಾಸ್ತ್ರಿ ಪೂರ್ವಜರ ನಿವಾಸಕ್ಕೆ ಭೇಟಿ
ಮಾಜಿ ಪ್ರಧಾನಿ ದಿ| ಲಾಲ್ಬಹದ್ದೂರ್ ಶಾಸ್ತ್ರಿಯವರ ಪೂರ್ವಜರ ನಿವಾಸಕ್ಕೆ ಪ್ರಿಯಾಂಕಾ ವಾದ್ರಾ ಭೇಟಿ ನೀಡಿದ್ದಾರೆ. ವಾರಾ ಣಸಿಯ ರಾಮನಗರ ಎಂಬಲ್ಲಿ ಅವರ ಮನೆ ಇದೆ. ಅಲ್ಲಿಗೆ ಭೇಟಿ ನೀಡುವ ಮುನ್ನ ಶಾಸ್ತ್ರಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ್ದಾರೆ. ಪ್ರಿಯಾಂಕಾ ಭೇಟಿಯ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.
ನರೇಂದ್ರ ಮೋದಿಯವರಿಗೆ ಸಂಘ ಪರಿವಾರದ ಆಶೀರ್ವಾದ ಇಲ್ಲದೇ ಇರುತ್ತಿದ್ದರೆ ಪ್ರಧಾನಮಂತ್ರಿಯಾಗುತ್ತಿರಲಿಲ್ಲ. ವಿಶ್ವದಲ್ಲಿ ಸಂಘ ಪರಿವಾರವೇ ಅತ್ಯಂತ ದೊಡ್ಡ ಪರಿವಾರ. ಅವರು ವಂಶಪಾರಂಪರ್ಯ ಆಡಳಿತದ ಬಗ್ಗೆ ಮಾತಾಡುವುದನ್ನು ತಮ್ಮ ಸಾಧನೆ ಗಮನಿಸಲಿ.
– ಕಪಿಲ್ ಸಿಬಲ್, ಕಾಂಗ್ರೆಸ್ ನಾಯಕ
ನಿಮ್ಮ ಪುತ್ರ ಚೌಕಿದಾರನಾಗಬೇಕಾಗಿದ್ದರೆ ನರೇಂದ್ರ ಮೋದಿಗೆ ಮತ ಹಾಕಿ. ಉತ್ತಮ ಶಿಕ್ಷಣ ಬೇಕಾಗಿದ್ದರೆ ಆಮ್ ಆದ್ಮಿ ಪಕ್ಷಕ್ಕೆ ಮತಹಾಕಿ
– ಅರವಿಂದ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ
ತರೂರ್ ಕುಮ್ಮನಂ?
ಬಿಜೆಪಿ ನಾಯಕ ಕುಮ್ಮನಮ್ ರಾಜಶೇಖರನ್ ತಿರುವನಂತಪುರ ಕ್ಷೇತ್ರದಿಂದ ಕಣಕ್ಕೆ ಇಳಿಯು ವುದು ಬಹುತೇಕ ಖಚಿತ. ಇದರ ಜತೆಗೆ ಕೇರಳದಲ್ಲಿನ ಭಾರತ ಧರ್ಮ ಜನ ಸೇನಾ (ಬಿಡಿಜೆಎಸ್)ಪಕ್ಷದ ಜತೆಗೆ ಬಿಜೆಪಿ ಸ್ಥಾನ ಹೊಂದಾಣಿಕೆ ಘೋಷಣೆ ಮಾಡಿದೆ. ಅದರ ಪ್ರಕಾರ ಬಿಜೆಪಿ 14 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಬಿಡಿಜೆಎಸ್ 5 ಸ್ಥಾನ, ಪಿ.ಸಿ.ಥಾಮಸ್ ನೇತೃತ್ವದ ಕೇರಳ ಕಾಂಗ್ರೆಸ್ 1 ಸ್ಥಾನದಲ್ಲಿ ಸ್ಪರ್ಧಿಸಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್ ತಿಳಿಸಿದ್ದಾರೆ.