ನಾಲೆಗಳಿಗೆ ನೀರು ಹರಿಸಲು ಆಗ್ರಹ
Team Udayavani, Feb 20, 2019, 7:29 AM IST
ಶ್ರೀರಂಗಪಟ್ಟಣ: ಕಲೆ ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯಅಚ್ಚುಕಟ್ಟು ಪ್ರದೇಶದ ಸಿಡಿಎಸ್, ವಿರಿಜಾ ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಸಂತೋಷ್ ನೇತೃತ್ವದಲ್ಲಿ ರೈತದಳ ಕಾರ್ಯಕರ್ತರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಕಚೇರಿ ಎದುರು ಜಮಾಯಿಸಿದ ರೈತ ಮುಖಂಡರು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಇನ್ನು 48 ಗಂಟೆ ಒಳಗೆ ಕೆಆರ್ಎಸ್ ಅಚ್ಚುಕಟ್ಟು ಪ್ರದೇಶದ ಎಲ್ಲಾ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿದರು.
ಸಂತೋಷ್ ಮಾತನಾಡಿ, ಕೆಆರ್ಎಸ್ ಜಲಾಶಯದ ಪ್ರಮುಖ ನಾಲೆ ವಿಶ್ವೇಶ್ವರಯ್ಯ ನಾಲೆಗೆ ಈಗಾಗಲೇ ನೀರು ಹರಿಸುತ್ತಿದ್ದು, ಜಲಾಶಯದ ಕೆಳ ಭಾಗದ ನಾಲೆಗಳಾದ ಚಿಕ್ಕದೇವರಾಯ ನಾಲೆ, ವಿರಿಜಾ, ರಾಮಸ್ವಾಮಿ, ರಾಜಪರಮೇಶ್ವರಿ, ಬಂಗಾರದೊಡ್ಡಿ, ಮಾದವಮಂತ್ರಿ ನಾಲೆಗಳಿಗೆ ನೀರು ಹರಿಸುತ್ತಿಲ್ಲ. ಈ ಭಾಗದ ರೈತರು ಕಬ್ಬು, ಅಡಿಕೆ, ತೆಂಗು, ಬಾಳೆ ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಸಾವಿರಾರು ಎಕರೆಗಳಲ್ಲಿ ಬೆಳೆದಿದ್ದು ನೀರಿಲ್ಲದೆ ಒಣಗುತ್ತಿವೆ.
ಕೂಡಲೇ ನೀರು ಹರಿಸಬೇಕು ಎಂದು ಒತ್ತಾಯಿಸಿದರು. ರೈತ ಮುಖಂಡ ಡಿ.ಎಂ.ರವಿ ಮಾತನಾಡಿ, ಈ ಹಿಂದೆ ಜಲಾಶಯದಲ್ಲಿ 100 ಅಡಿ ನೀರಿದ್ದಾಗಲೂ ನಾಲೆಗಳ ಮೂಲಕ ನೀರು ಹರಿಸಿ ಬೇಸಿಗೆ ಬೆಳೆಗೆ ನೀರು ಕೊಡಲಾಗಿದೆ. ಕೂಡಲೆ ಎಲ್ಲಾ ನಾಲೆಗಳಿಗೆ ನೀರು ಹರಿಸಿ ಬೇಸಿಗೆ ಬೆಳೆಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಶಿರಸ್ತೇದಾರ್ ಮಹೇಶ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪಟ್ಟಣ್ಣ ಮಾಸ್ಟರ್, ಮರಳಗಾಲ ಯೋಗೇಶ, ಚಿಕ್ಕಪಾಳ್ಯ ಶ್ರೀಧರ, ಕೃಷ್ಣಪ್ಪ, ಕಿರಂಗೂರು ಪಾಪು ಸೇರಿದಂತೆ ಇತರರು ಇದ್ದರು.