450 ಅಡಿ ಆಳದವರೆಗೂ ಕೊರೆದರೂ ನೀರಿಲ್ಲ!
Team Udayavani, Mar 1, 2017, 12:48 PM IST
ಉಡುಪಿ: ರಾಜ್ಯದಲ್ಲಿಯೇ ಸಾಕಷ್ಟು ಪ್ರಮಾಣದಲ್ಲಿ ಮಳೆ-ಬೆಳೆಯಾಗುವುದರಿಂದ ಸಮೃದ್ಧ ಜಿಲ್ಲೆಗಳೆಂದು ಕರೆಯಲ್ಪಡುವ ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿಯೂ ಈ ಬಾರಿ ನೀರಿಗಾಗಿ ತತ್ವಾರ ಪಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಈಗ ಬೋರ್ವೆಲ್ಗಳನ್ನು ಕೊರೆಯಲಾಗುತ್ತಿದ್ದು, ಸುಮಾರು 400ರಿಂದ 450 ಅಡಿ ಆಳದ ವರೆಗೆ ಕೊರೆದರೂ ನೀರು ಸಿಗದ ಸ್ಥಿತಿ ಬಂದೊದಗಿದೆ.
ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. 5-10 ವರ್ಷಗಳ ಹಿಂದೆ ಬೋರ್ವೆಲ್ ಕೊರೆದಾಗ ಕೇವಲ 150ರಿಂದ 200 ಅಡಿ ಆಳದಲ್ಲಿ ನೀರು ಲಭ್ಯವಾಗುತ್ತಿದ್ದರೆ, ಈಗ 400 ಅಡಿಗಿಂತ ಹೆಚ್ಚು ಕೊರೆದರಷ್ಟೇ ನೀರಿನ ಸುಳಿವು ಸಿಗುತ್ತಿದೆ. ಕೆಲವು ಕಡೆಗಳಲ್ಲಿ 700 ಅಡಿ ಆಳದ ವರೆಗೂ ಕೊರೆಯಿಸಿದರೂ ನೀರು ಸಿಗದ ಘಟನೆ ಕೂಡ ಸಂಭವಿಸಿದೆ ಎನ್ನುತ್ತಾರೆ ಜಲತಜ್ಞ ರಾಮಯ್ಯ. ಈಗಾಗಲೇ ರಾಜ್ಯ ಸರಕಾರ ಜಿಲ್ಲೆಯನ್ನು ಕೂಡ ಬರಪೀಡಿತ ಜಿಲ್ಲೆಗಳ ಪಟ್ಟಿಗೆ ಸೇರ್ಪಡೆಗೊಳಿಸಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಜಿಲ್ಲಾಡಳಿತದಿಂದ ಒಟ್ಟು 83 ಹೊಸ ಬೋರ್ವೆಲ್ ಕೊರೆಯಲು ಅನುಮತಿ ನೀಡಲಾಗಿದೆ. ಅದರಲ್ಲಿ ಈಗಾಗಲೇ 72 ಬೋರ್ವೆಲ್ ಕೊರೆಯಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಸರಕಾರದ ಅನುದಾನದಿಂದ ಕೊರೆಯಿಸಲಾದ ಒಟ್ಟು 2,356 ಬೋರ್ವೆಲ್ಗಳಿದ್ದು, ಅವುಗಳಲ್ಲಿ 1,540 ಬೋರ್ವೆಲ್ಗಳಿಗೆ ಪಂಪ್ ಅಳವಡಿಸಲಾಗಿದೆ. ಇನ್ನು 1,572 ತೆರೆದ ಬಾವಿಗಳಿವೆ. ಅವುಗಳಲ್ಲಿ 539 ಬಾವಿಗಳಿಗೆ ಪಂಪ್ ಅಳವಡಿಸಲಾಗಿದೆ.
ಎಲ್ಲೆಲ್ಲಿ ಎಷ್ಟಿದೆ ನೀರಿನ ಮಟ್ಟ
ಕಳೆದ ಐದು ವರ್ಷಗಳಲ್ಲಿ ಉಡುಪಿ ತಾಲೂಕಿನ ಒಟ್ಟಾರೆ ಅಂತರ್ಜಲ ಮಟ್ಟ 4.76 ಮೀ. ಇದ್ದರೆ, ಕಾರ್ಕಳ ತಾಲೂಕಿನ ಅಂತರ್ಜಲ ಮಟ್ಟ ಕಳೆದ 5 ವರ್ಷಗಳಲ್ಲಿ 6.30 ಮೀ. ಇದ್ದರೆ, ಕುಂದಾಪುರ ತಾಲೂಕಿನ ಅಂತರ್ಜಲ ಮಟ್ಟ ಒಟ್ಟಾರೆ 4.93 ಮೀ. ಇದೆ. ಈ ಐದು ವರ್ಷಗಳಲ್ಲಿ ಜಿಲ್ಲೆಯ ಒಟ್ಟು ಅಂತರ್ಜಲ ಮಟ್ಟ 5.33 ಮೀ. ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೇ. 25ರಷ್ಟು ಮಳೆ ಕೊರತೆ
ರಾಜ್ಯದಲ್ಲಿ ಒಟ್ಟಾರೆ ಮುಂಗಾರಿನಲ್ಲಿ ಶೇ. 18 ಹಾಗೂ ಹಿಂಗಾರಿನಲ್ಲಿ ಶೇ. 68ರಷ್ಟು ಮಳೆ ಕೊರತೆಯಾದರೆ ಜಿಲ್ಲೆಯಲ್ಲಿ ಮುಂಗಾರು, ಹಿಂಗಾರಿನಲ್ಲಿ ಶೇ. 25.85ರಷ್ಟು ಮಳೆ ಕಡಿಮೆಯಾಗಿದೆ. ಈ ಬಾರಿಯ ಜನವರಿಯಲ್ಲೂ 2.5 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಬಂದ ಮಳೆಯ ಪ್ರಮಾಣ ಕೇವಲ 0.7 ಮಿ.ಮೀ. ಅಷ್ಟೆ.
ಕುಡಿಯುವ ನೀರಿಗೆ ಆದ್ಯತೆ
ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಮೇವು, ಕೃಷಿಗೆ ಅಷ್ಟೇನೂ ಸಮಸ್ಯೆಯಿಲ್ಲ. ಕುಡಿಯುವ ನೀರಿನ ಸಮಸ್ಯೆ ಪ್ರಮುಖವಾಗಿದೆ. ಕಳೆದ ಬಾರಿ ಮೂರು ತಾಲೂಕುಗಳ 45 ಗ್ರಾಮಗಳಿಗೆ ಟ್ಯಾಂಕರ್ಗಳ ಮೂಲಕ ನೀರು ಪೂರೈಕೆ ಮಾಡಲಾಗಿತ್ತು. ಈ ಬಾರಿ ಕಾರ್ಕಳದ 2, ಕುಂದಾಪುರದ 38 ಹಾಗೂ ಉಡುಪಿಯ 27 ಗ್ರಾಮಗಳು ಸೇರಿ ಒಟ್ಟು 67 ಗ್ರಾ.ಪಂ. ಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು ಎಂದು ಜಿಲ್ಲಾ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ತಿಳಿಸಿದ್ದಾರೆ.
ಅಗತ್ಯ ಕ್ರಮ
ಜಿಲ್ಲಾಡಳಿತಕ್ಕೆ ಎನ್ಆರ್ಡಬ್ಲೂéಇಪಿ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಒಟ್ಟು 17 ಕೋ. ರೂ. ಅನುದಾನ ಬಂದಿದ್ದು, ಅದರಲ್ಲಿ ಈಗಾಗಲೇ 8 ಕೋ. ರೂ. ಅನ್ನು ನೀರಾವರಿ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದೆ. ಇನ್ನು ಹೆಚ್ಚುವರಿ 40 ಲ. ರೂ., ಅದಲ್ಲದೆ ಟಾಸ್ಕ್ಫೋರ್ಸ್ ಅನುದಾನ ನೀರಾವರಿ ಯೋಜನೆಗಳಿಗೆ ಉಪ ಯೋಗವಾಗುವಂತೆ ಬಳಸುವ ಕುರಿತು ಈಗಾಗಲೇ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿದ್ದು, ಎಲ್ಲ ಗ್ರಾ. ಪಂ.ಗಳ ಪಿಡಿಒಗಳಿಗೆ ಸುತ್ತೂಲೆ ಕಳುಹಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಬರದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದೇವೆ. ಉದ್ಯೋಗ ಖಾತರಿ ಯೋಜನೆಯನ್ನು 100ರಿಂದ 150 ದಿನಗಳಿಗೆ ಹೆಚ್ಚಿಸಲು ಅವಕಾಶ ಮಾಡಿದ್ದೇವೆ. ಎಲ್ಲೆಲ್ಲ ಕುಡಿಯುವ ನೀರಿಗೆ ಕೊರತೆ ಇದೆಯೋ ಅಲ್ಲಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ವ್ಯವಸ್ಥೆ ಮಾಡುತ್ತೇವೆ.
– ಪ್ರಿಯಾಂಕ ಮೇರಿ ಫ್ರಾನ್ಸಿಸ್,
ಜಿಲ್ಲಾಧಿಕಾರಿ
– ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು
Sand Mining; ಉದ್ಯಾವರ: ಚುನಾವಣ ಚೆಕ್ಪೋಸ್ಟ್ ಬಳಿ ಅಕ್ರಮ ಮರಳು ಸಾಗಾಟ ಪತ್ತೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ