‘ತುಳುನಾಡೋಚ್ಚಯ’ ಯಶಸ್ಸಿಗೆ ಸಹಕರಿಸಿ: ರಾಜೀವ್
Team Udayavani, Dec 11, 2017, 12:28 PM IST
ಮಹಾನಗರ: ಪಿಲಿ ಕುಳದಲ್ಲಿ ಡಿ. 23 ಮತ್ತು 24ರಂದು ನಡೆಯುವ ‘ತುಳುನಾಡೋಚ್ಚಯ 2017’ ಕಾರ್ಯಕ್ರಮ ಹಾಗೂ ವಾಮಂಜೂರಿನಿಂದ ಹೊರಡುವ ಜನಮೈತ್ರಿ ದಿಬ್ಬಣದ ಯಶಸ್ಸಿಗಾಗಿ ವಾಮಂಜೂರಿನ ಜನತೆ ಶ್ರಮಿಸಬೇಕು ಎಂದು ರಾಜೀವ್ ಅಂಚನ್ ಅಪ್ಪಣಬೆಟ್ಟು ಹೇಳಿದರು. ವಾಮಂಜೂರು ಪ್ರಾದೇಶಿಕ ಸಮಿತಿಯ ಅಧ್ಯಕ್ಷತೆ ಜವಾಬ್ದಾರಿ ವಹಿಸಿಕೊಂಡು ಅವರು ಮಾತನಾಡಿದರು.
ತುಳುನಾಡೋಚ್ಚಯ ಸಮಿತಿ ಅಧ್ಯಕ್ಷ ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನ್ಮ ಭೂಮಿಯು ಸ್ವರ್ಗಕ್ಕಿಂತಲೂ ಮಿಗಿಲು ಎಂಬ ಶ್ರೀ ರಾಮ ಚಂದ್ರನ ನುಡಿಯಂತೆ, 51 ವರ್ಷಗಳಿಂದ ನಾನು ವಿದೇಶದಲ್ಲಿದ್ದರೂ ನನ್ನ ಜನ್ಮಭೂಮಿ ತುಳುನಾಡಿನ ಮೇಲಿನ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿಲ್ಲ. ಆದ್ದರಿಂದಲೇ ತುಳುನಾಡೋಚ್ಚಯದ ಅಧ್ಯಕ್ಷತೆಯ ಜವಾಬ್ದಾರಿ ವಹಿಸಿಕೊಂಡಿ ದ್ದೇನೆ ಎಂದು ಹೇಳಿದರು.
ಭಾಷಾ ಸೌಹಾರ್ದ ಮೂಡಿಸುವ ಉದ್ದೇಶ
ತುಳುನಾಡಿನಲ್ಲಿ ಜಾತಿ, ಮತ, ಭಾಷಾ ಸೌಹಾರ್ದ ಎಂಬ ನೆಲೆಗಟ್ಟಿನ ಈ ಕಾರ್ಯಕ್ರಮವು ವಾಮಂಜೂರು ಪರಿಸರದಲ್ಲಿ ನಡೆಯುತ್ತಿರುವುದರಿಂದ ಕಾರ್ಯಕ್ರಮದ ಯಶಸ್ಸಿನ ಹೊಣೆ ನಮ್ಮ ಮೇಲಿದೆ ಎಂದು ವಾಮಂಜೂರು ಪ್ರಾದೇಶಿಕ ಸಮಿತಿ ಪ್ರ.ಕಾರ್ಯದರ್ಶಿ ಸತೀಶ್ ಶೆಟ್ಟಿ ಮೂಡುಗುತ್ತು ಹೇಳಿದರು.
ಪ್ರ.ಕಾರ್ಯದರ್ಶಿ ಶಮೀನಾ ಆಳ್ವ ಮೂಲ್ಕಿ, ವಿಶ್ವ ತುಳುವೆರೆ ಆಯನೊ ಕೂಟ ಪ್ರ.ಕಾರ್ಯದರ್ಶಿ ಡಾ| ರಾಜೇಶ್ ಆಳ್ವ, ತು.ರ.ವೇ.ಯ ಸಿರಾಜ್ ಅಡ್ಕರೆ ಮತ್ತಿತರರಿದ್ದರು. ಶರತ್ ಶೆಟ್ಟಿ ಪಡುಪಳ್ಳಿ ಸ್ವಾಗತಿಸಿ, ಭಾಸ್ಕರ ಕುಂಬ್ಳೆ ವಂದಿಸಿದರು.