ಮಂಗಳೂರು: ಹಿಂದೂ ಕಾರ್ಯಕರ್ತನ ಬರ್ಬರ ಹತ್ಯೆ
Team Udayavani, Jan 4, 2018, 6:00 AM IST
– ಕಾಟಿಪಳ್ಳದಲ್ಲಿ ನಾಲ್ವರ ತಂಡದಿಂದ ಕೃತ್ಯ
– ಆರೋಪಿಗಳ ಬೆನ್ನಟ್ಟಿ ಹಿಡಿದ ಪೊಲೀಸರು
– ಸುರತ್ಕಲ್: ರಾತ್ರಿ ಯುವಕನ ಮೇಲೆ ಹಲ್ಲೆ
ಮಂಗಳೂರು: ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ (28) ಅವರನ್ನು ಬುಧವಾರ ಮಧ್ಯಾಹ್ನ ಸುರತ್ಕಲ್ ಸಮೀಪದ ಕಾಟಿಪಳ್ಳ 2ನೇ ಬ್ಲಾಕ್ನ ಕೈಕಂಬದಲ್ಲಿ ದುಷ್ಕರ್ಮಿಗಳು ಮಾರಕಾಯುಧಗಳಿಂದ ಕಡಿದು ಕೊಲೆ ಮಾಡಿದ್ದಾರೆ.
ಸಿನಿಮೀಯ ಶೈಲಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಘಟನೆ ನಡೆದ ಮೂರೂವರೆ ತಾಸುಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂಲ್ಕಿಯ ನೌಷಾದ್, ರಿಜ್ವಾನ್, ಪಿಂಕಿ ನವಾಜ್ ಮತ್ತು ನಿರ್ಷಾನ್ ಬಂಧಿತರು.
ಕಾಟಿಪಳ್ಳ ಕೈಕಂಬ 2ನೇ ಬ್ಲಾಕ್ನ ಮುಡಾಯಿಕೋಡಿಯ ಮೊಬೈಲ್ ಫೋನ್ ಮಳಿಗೆಯೊಂದರಲ್ಲಿ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡುತ್ತಿದ್ದ ದೀಪಕ್ ರಾವ್ ಅಪರಾಹ್ನ 1.30ರ ವೇಳೆಗೆ ಕರೆನ್ಸಿ ಕಲೆಕ್ಷನ್ ಮಾಡಿ ಮಳಿಗೆಯಿಂದ ಹೊರಟು ಬೈಕ್ನಲ್ಲಿ ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ನಾಲ್ಕು ಮಂದಿ ದುಷ್ಕರ್ಮಿಗಳು ಅಡ್ಡಗಟ್ಟಿ ತಡೆದು ನಿಲ್ಲಿಸಿ ಮಾರಕಾಯುಧಗಳಿಂದ ದಾಳಿ ನಡೆಸಿದರು. ತಲೆ ಮತ್ತು ಕೈಗೆ ತೀವ್ರ ಗಾಯಗೊಂಡ ದೀಪಕ್ ರಾವ್ ನೆಲಕ್ಕೆ ಉರುಳಿದಾಗ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾದರು. ಗಾಯಾಳು ದೀಪಕ್ ರಾವ್ ಅವರನ್ನು ಸ್ಥಳೀಯರು ಕೂಡಲೆ ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಿ ಸಾವನ್ನಪ್ಪಿದರು.
ದೀಪಕ್ ರಾವ್ ಕಾಟಿಪಳ್ಳ ಗಣೇಶ ಕಟ್ಟೆಯ ನಿವಾಸಿಯಾಗಿದ್ದು, ಸುಮಾರು 6 ವರ್ಷಗಳಿಂದ ಮುಡಾಯಿಕೋಡಿಯಲ್ಲಿ ಅಬ್ದುಲ್ ಮಜೀದ್ ನಡೆಸುತ್ತಿರುವ ಮೊಬೈಲ್ ಫೋನ್ ಮಳಿಗೆಯಲ್ಲಿ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡುತ್ತಿದ್ದರು. ರಾಮಚಂದ್ರ- ಪ್ರೇಮಾ ದಂಪತಿಯ ಇಬ್ಬರು ಪುತ್ರರಲ್ಲಿ ದೀಪಕ್ ಹಿರಿಯ ಪುತ್ರನಾಗಿದ್ದು, ಮನೆಗೆ ಆಧಾರ ಸ್ತಂಭವಾಗಿದ್ದರು. ದೀಪಕ್ 3 ವರ್ಷದವರಾಗಿದ್ದಾಗ ತಂದೆ ರಾಮಚಂದ್ರ ನಿಧನ ಹೊಂದಿದ್ದರು. ಅವರ ಸೋದರ ಸತೀಶ್ಗೆ ಶ್ರವಣದೋಷವಿದ್ದು, ಸಣ್ಣ ಪುಟ್ಟ ಕೆಲಸ ಮಾಡಲು ಮಾತ್ರ ಶಕ್ತರಾಗಿದ್ದಾರೆ. ದೀಪಕ್ ಪದವಿ ತನಕ ಓದಿದ್ದು, ಬಳಿಕ ಮೊಬೈಲ್ ಫೋನ್ ಮಳಿಗೆಯಲ್ಲಿ ಕೆಲಸಕ್ಕೆ ಸೇರಿದ್ದರು.
ಪೂರ್ವ ದ್ವೇಷ ಕಾರಣ?: ಕೊಲೆಗೆ ಕಾರಣ ಗೊತ್ತಾಗಿಲ್ಲ. ಪೂರ್ವ ದ್ವೇಷ ಕಾರಣವಿರಬಹುದೆಂದು ಶಂಕಿಸಲಾಗಿದೆ. ತನಿಖೆ ನಡೆಸಿ ನೈಜ ಕಾರಣ ಪತ್ತೆ ಹಚ್ಚಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಯುವಕನಿಗೆ ಹಲ್ಲೆ: ಬುಧವಾರ ರಾತ್ರಿ ಮನೆಗೆ ತೆರಳುತ್ತಿದ್ದ ಯುವಕ ಮಹಮ್ಮದ್ ಮುಬಾಶಿರ್ ಮೇಲೆ ಸುರತ್ಕಲ್ನಲ್ಲಿ ಮಾರಕ ಹಲ್ಲೆ ನಡೆಸಲಾಗಿದೆ.
ಆಯುಕ್ತರಿಗೆ ಮುತ್ತಿಗೆ: ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅವರು ಘಟನೆ ನಡೆದ ಕಾಟಿಪಳ್ಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ದೀಪಕ್ ರಾವ್ ಮೃತ ದೇಹ ಇದ್ದ ಎ.ಜೆ. ಆಸ್ಪತ್ರೆಗೆ ಭೇಟಿ ನೀಡಿದ್ದರು. ಎ.ಜೆ. ಆಸ್ಪತ್ರೆಯ ಶವಾಗಾರದಲ್ಲಿ ಮೃತ ದೇಹವನ್ನು ವೀಕ್ಷಿಸಿದ ಬಳಿಕ ಹೊರ ಬಂದ ಪೊಲೀಸ್ ಆಯುಕ್ತರಿಗೆ ಹಿಂದೂ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು. “ಈ ಹತ್ಯೆಗೆ ಪಿಎಫ್ಐ ಮತ್ತು ಎಸ್ಡಿಪಿಐ ಸಂಘಟನೆಗಳೇ ಕಾರಣ. ಆದ್ದರಿಂದ ಈ ಸಂಘಟನೆಗಳನ್ನು ನಿಷೇಧಿಸಬೇಕು’ ಎಂದು ಒತ್ತಾಯಿಸಿದರು.
3 ಬಾರಿ ಬೆದರಿಕೆ ಬಂದಿತ್ತು: ಇತ್ತೀಚೆಗೆ ಈದ್ ಸಂದರ್ಭ ಕಾಟಪಳ್ಳದಲ್ಲಿ ಬಂಟಿಂಗ್ಸ್ ಹಾಕುವ ವಿಚಾರದಲ್ಲಿ ಗಲಾಟೆ ಸಂಭವಿಸಿದ್ದು, ಈ ಹಿನ್ನೆಲೆಯಲ್ಲಿ ದೀಪಕ್ ರಾವ್ಗೆ 3 ಬಾರಿ ಬೆದರಿಕೆ ಕರೆಗಳು ಬಂದಿದ್ದವು. ಇತ್ತೀಚೆಗೆ ಕೆಲವರು ದೀಪಕ್ ಕೆಲಸ ಮಾಡುತ್ತಿದ್ದ ಮೊಬೈಲ್ ಮಳಿಗೆಯ ಮಾಲಕರ ಬಳಿಗೆ ಬಂದು ದೀಪಕ್ರನ್ನು ಕೆಲಸದಿಂದ ತೆಗೆಯಬೇಕು ಎಂದು ಸೂಚಿಸಿದ್ದರು. “ಒಂದೋ ದೀಪಕ್ರನ್ನು ನೀವು ಡಿಲೀಟ್ ಮಾಡ ಬೇಕು; ಇಲ್ಲದಿದ್ದರೆ ನಾವೇ ಅವರನ್ನು ಡಿಲೀಟ್ ಮಾಡುತ್ತೇವೆ’ ಎಂಬುದಾಗಿ ಬೆದರಿಕೆ ಹಾಕಿ ದ್ದರು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಕಮಿಷನರ್ ಅವರ ಗಮನಕ್ಕೆ ತಂದರು.
ಕಾಟಿಪಳ್ಳದಲ್ಲಿ ಮುಸ್ಲಿಮರು ಬಹು ಸಂಖ್ಯಾತರಾಗಿದ್ದು, ಕಾಟಿ ಪಳ್ಳ, ಸೂರಿಂಜೆ ಪ್ರದೇಶಗಳಲ್ಲಿ ರಾತ್ರಿ ವೇಳೆ ಒಬ್ಬೊಬ್ಬರಾಗಿ ಸಂಚರಿಸುವುದೇ ಕಷ್ಟ. ಅವರು (ಮುಸ್ಲಿಮರು) ರಸ್ತೆಯಲ್ಲಿಯೇ ಕಾರ್ಯಕ್ರಮ ನಡೆಸುತ್ತಾರೆ. ಈ ಸಂದರ್ಭದಲ್ಲಿ ಗಂಟೆಗಟ್ಟಲೆ ರಸ್ತೆ ತಡೆ ಉಂಟಾಗಿ ಯಾರೂ ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ ಎಂದು ಸತ್ಯಜಿತ್ ವಿವರಿಸಿದರು.
ಮನವಿ ಕೊಡಿ: ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು, ಯಾವುದೇ ಸಮಸ್ಯೆಗಳಿದ್ದರೂ ಮನವಿ ಕೊಡಿ. ನಾವು ಖಂಡಿತಾ ಕ್ರಮ ಜರಗಿಸುತ್ತೇವೆ ಎಂದು ತಿಳಿಸಿದರು.
ಆಸ್ಪತ್ರೆ ಆವರಣದಲ್ಲಿ ಸೇರಿದ ಜನಸ್ತೋಮ: ಹತ್ಯೆಯ ಸುದ್ದಿ ತಿಳಿದು ಹಿಂದೂ ನಾಯಕರು ಮತ್ತು ಕಾರ್ಯಕರ್ತರು ಎ.ಜೆ. ಆಸ್ಪತ್ರೆ ಬಳಿ ಅಧಿಕ ಸಂಖ್ಯೆಯಲ್ಲಿ ಸೇರಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು, ಬಿಜೆಪಿ ನಾಯಕ ರಾದ ವೈ. ಭರತ್ ಶೆಟ್ಟಿ, ಜಿತೇಂದ್ರ ಕೊಟ್ಟಾರಿ, ಗಣೇಶ್ ಹೊಸಬೆಟ್ಟು, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, ಬಜರಂಗದಳದ ಸಂಚಾಲಕ ಶರಣ್ ಪಂಪ್ವೆಲ್, ನಿರ್ಮಲ್ ಕುಮಾರ್ ಸುರಾನಾ, ಪ್ರಕಾಶ್ ಪಿ.ಎಸ್.,ಗೊಪಾಲ ಕುತ್ತಾರ್, ಮಾಜಿ ಶಾಸಕರಾದ ಕೃಷ್ಣ ಜೆ. ಪಾಲೆಮಾರ್, ಬಿ. ನಾಗರಾಜ ಶೆಟ್ಟಿ , ರಾಜೇಶ್ ನಾಯಕ್ ಉಳಿಪಾಡಿ, ಮುಂತಾದವರು ಇದ್ದರು.
ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ, ಡಿಸಿಪಿ ಉಮಾ ಪ್ರಶಾಂತ್, ಎಸಿಪಿಗಳಾದ ಉದಯ ನಾಯಕ್, ರಾಜೇಂದ್ರ ಮತ್ತು ಇತರ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದರು.
3 ವರ್ಷಗಳಲ್ಲಿ ನಾಲ್ಕನೇ ಕೊಲೆ
ಕಳೆದ ಮೂರು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹಿಂದೂ ಕಾರ್ಯಕರ್ತರ ನಾಲ್ಕನೇ ಕೊಲೆ ಇದಾಗಿದೆ. ಪ್ರಶಾಂತ್ ಪೂಜಾರಿ, ರಾಜು ಕೋಟ್ಯಾನ್, ಶರತ್ ಮಡಿವಾಳ ಮತ್ತು ಈಗ ದೀಪಕ್ ರಾವ್ ಕೊಲೆಯಾಗಿದೆ. ದೀಪಕ್ ರಾವ್ ಅವರನು ಪಿಎಫ್ಐ ಸಂಘಟನೆಯವರೇ ಕೊಲೆ ಮಾಡಿದ್ದಾರೆ ಎಂದು ಬಜರಂಗದಳ ಸಂಚಾಲಕ ಶರಣ್ ಪಂಪ್ವೆಲ್ ಆರೋಪಿಸಿದರು.
ಸರಕಾರ ಮತ್ತು ಪೊಲೀಸರಸು ತತ್ಕ್ಷಣ ಕಾರ್ಯ ಪ್ರವೃತ್ತರಾಗಿ ಪಿಎಫ್ಐ ಸಂಘಟನೆಯನ್ನು ನಿಷೇಧಿಸ ಬೇಕು ಎಂದು ಆಗ್ರಹಿಸಿದರು.
ಮಂಗಳೂರಿನಲ್ಲಿ ಇಂದು ಪ್ರತಿಬಂಧಕಾಜ್ಞೆ
ಮಂಗಳೂರು: ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ರಾತ್ರಿ 10 ಗಂಟೆ ತನಕ ಕರ್ನಾಟಕ ಪೊಲೀಸ್ ಕಾಯ್ದೆ 35ರನ್ವಯ ಪ್ರತಿಬಂಧಕಾಜ್ಞೆ ವಿಧಿಸಿ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಆದೇಶ ಹೊರಡಿಸಿದ್ದಾರೆ.
ಈ ಸಂದರ್ಭ ಕಮಿಷನರೆಟ್ ವ್ಯಾಪ್ತಿಯಲ್ಲಿ ಮೆರವಣಿಗೆ, ಪ್ರತಿಭಟನೆ, ಜಾಥಾ, ಧರಣಿ, ಮುಷ್ಕರ, ರಸ್ತೆ ತಡೆ, ಮುತ್ತಿಗೆ ಹಾಕುವುದು ಮತ್ತಿತರ ಕಾರ್ಯಕ್ರಮಗಳನ್ನು ನಿರ್ಬಂಧಿಸಲಾಗಿದೆ. ಶಸ್ತ್ರ ಗಳು, ದೊಣ್ಣೆ, ಕತ್ತಿ, ಈಟಿ, ಗದೆ, ಬಂದೂಕು, ಚಾಕು, ಕೋಲು/ ಲಾಠಿಗಳನ್ನು ಹಿಡಿದು ಅಥವಾ ದೈಹಿಕ ಹಿಂಸೆ ಉಂಟು ಮಾಡುವ ಇತರ ಯಾವುದೇ ವಸ್ತುಗಳನ್ನು, ಕ್ಷಾರ ಪದಾರ್ಥ, ಸ್ಫೋಟಕ, ಕಲ್ಲು ಗಳನ್ನು ಎಸೆಯುವುದನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರ ಪ್ರಕಟನೆ ತಿಳಿಸಿದೆ.
ಎಡಿಜಿಪಿ ಕಮಲ್ ಪಂಥ್ ಮಂಗಳೂರಿಗೆ
ಬೆಂಗಳೂರು: ದೀಪಕ್ ಹತ್ಯೆಗೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ಎಡಿಜಿಪಿ ಕಮಲ್ ಪಂಥ್ ಅವರಿಗೆ ಮಂಗಳೂರಿಗೆ ತೆರಳುವಂತೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಸೂಚಿಸಿದ್ದು, ರಾತ್ರಿಯೇ ಮಂಗಳೂರು ತಲುಪಿದ್ದಾರೆ. ಸುರತ್ಕಲ್ ಪರಿಸರಕ್ಕೆ ಅವರು ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿದ್ದಾರೆ. ದೀಪಕ್ ಹತ್ಯೆ ಪ್ರಕರಣದಲ್ಲಿ ವಶಕ್ಕೆ ಪಡೆದಿರುವ ಆರೋಪಿಗಳನ್ನು ತನಿಖೆ ನಡೆಸಿ ಜೈಲಿಗೆ ಕಳುಹಿಸಲು ರಾಮಲಿಂಗಾ ರೆಡ್ಡಿ ಸೂಚಿಸಿದ್ದಾರೆ.