ಬಿಸಿಯೂಟ ನೌಕರರಿಗೆ ರಾಜ್ಯ ಸರಕಾರದ ಹುಸಿ ಭರವಸೆ: ವಸಂತ ಆಚಾರಿ
Team Udayavani, Feb 19, 2018, 2:01 PM IST
ಮಹಾನಗರ: ಬಿಸಿಯೂಟ ನೌಕರರಿಗೆ ವೇತನ ಏರಿಕೆ ಮಾಡದ ರಾಜ್ಯ ಸರಕಾರದ ನೀತಿ ಖಂಡಿನೀಯ ಎಂದು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿ ಹೇಳಿದರು.
ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ನೇತೃತ್ವದಲ್ಲಿ ಇತ್ತೀಚೆಗೆ ಅಹೋರಾತ್ರಿ ಅನಿರ್ದಿಷ್ಟಾವಧಿ ಹೋರಾಟ ನಡೆಯಿತು. ಈ ಹೋರಾಟದ ಸಮಯದಲ್ಲಿ ಸರಕಾರದಿಂದ ಸಭೆ ನಡೆಸ ಲಾಗಿದೆ. ಅಲ್ಲದೆ, ಮುಖ್ಯಮಂತ್ರಿಗಳು ಹಾಗೂ ಇಲಾಖಾ ಪ್ರಧಾನ ಕಾರ್ಯದರ್ಶಿಗಳ ಸಮ್ಮುಖದಲ್ಲಿ 2 ಬಾರಿ ನಿರಂ ತರ 6 ಗಂಟೆಗಳ ಸಭೆ ನಡೆಸಲಾಗಿದೆ. ಬಿಸಿಯೂಟ ನೌಕರರಿಗೆ ಸಂಬಂಧಿಸಿ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು ಎಂಬ ಭರವಸೆಯೊಂದಿಗೆ ಹೋರಾಟ ಹಿಂಪಡೆಯಲಾಗಿತ್ತು. ಆದರೆ ಇದೀಗ ಅವರ ಭರವಸೆ ಹುಸಿಯಾಗಿದೆ ಎಂದರು.
ಸಂಘದ ಅಧ್ಯಕ್ಷೆ ಪದ್ಮಾವತಿ ಶೆಟ್ಟಿಯವರು ಮಾತನಾಡಿ, ಈ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನಿಷ್ಠ 3,000 ರೂ. ಆದರೂ ವೇತನ ನಿಗದಿಪಡಿಸಬೇಕಿತ್ತು ಎಂದರು.
ಪ್ರತಿಭಟನ ಪ್ರದರ್ಶನದ ನೇತೃತ್ವವನ್ನು ಬಿಸಿಯೂಟ ನೌಕರರ ಮುಂದಾಳುಗಳಾದ ರೇಖಲತಾ, ಪ್ರಮೀಳಾ, ಭಾರತಿ, ಅನಿತಾ, ಎಮೇಜಾ ವಹಿಸಿದ್ದರು. ಕಾರ್ಯದರ್ಶಿ ಗಿರಿಜಾ ಸ್ವಾಗತಿಸಿ, ಖಜಾಂಚಿ ಭವ್ಯಾ ವಂದಿಸಿದರು.