ಆರೋಪ ತನಿಖೆಗೆ ಅಧಿಕಾರಿಗಳಿಗೆ ಸೂಚನೆ: ಖಾದರ್
Team Udayavani, Mar 11, 2018, 6:45 AM IST
ಮಂಗಳೂರು: ಬೆಂಗಳೂರು ಜಯನಗರದ ತಿಲಕ್ ನಗರದ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಕುರಿತು ತನಿಖೆ ಮಾಡಿ ಮಾಹಿತಿ ನೀಡುವಂತೆ ಈಗಾಗಲೇ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.
ಅವರು ಶನಿವಾರ ನಗರದಲ್ಲಿ ಪತ್ರಕರ್ತರ ಜತೆ ಮಾತನಾಡಿ, ಬೆಂಗಳೂರಿನ ರವಿಕೃಷ್ಣ ರೆಡ್ಡಿ ಅವ್ಯ ವಹಾರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಜತೆಗೆ ನನಗೆ ಮೆಸೇಜ್ ಕೂಡ ಮಾಡಿದ್ದಾರೆ. ಬಯೋಮೆಟ್ರಿಕ್ ಮೆಷಿನ್ ಹಾಕಿರು ವುದರಿಂದ ನಮಗೆ ಮೋಸ ಮಾಡಲು ಸಾಧ್ಯವಿಲ್ಲ. ಆದರೆ ಕೆಲವೊಬ್ಬರು ನಮಗೆ ವಿನಾಃಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ಕೆಲವು ಅಂಗಡಿಯವರು ನನಗೆ ದೂರು ನೀಡಿದ್ದಾರೆ.
ಪೂರ್ಣ ಸತ್ಯಾಸತ್ಯತೆ ತಿಳಿಯಲು ವರದಿ ನೀಡುವಂತೆ ಸೂಚನೆ ನೀಡಿದ್ದೇನೆ. ರಾಜ್ಯದಲ್ಲಿ 70 ಸಾವಿರಕ್ಕೂ ಅಧಿಕ ನ್ಯಾಯಬೆಲೆ ಅಂಗಡಿಗಳಿದ್ದು, ಎಲ್ಲ ಅಂಗಡಿಗಳ ಕಾರ್ಯವೈಖರಿಯನ್ನು ಒಬ್ಬ ಸಚಿವರಿಂದ ನೋಡಲು ಸಾಧ್ಯವಿಲ್ಲ. ಸ್ಥಳೀಯ ಶಾಸಕರು, ಕಾರ್ಪೊರೇಟರ್ಗಳು ಈ ಕುರಿತು ಗಮನ ಹರಿಸಬೇಕು. ಅವರು ಸಮರ್ಪಕವಾಗಿದ್ದರೆ ನ್ಯಾಯಬೆಲೆ ಅಂಗಡಿಗಳೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.ನನಗೆ ಮಾಹಿತಿ ನೀಡಿದ್ದಕ್ಕಾಗಿ ರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಆದರೆ ಇದರ ಸತ್ಯಾಂಶ ಏನು ಎಂದು ಮುಂದೆ ತಿಳಿಯಲಾಗುವುದು. ಜನಪ್ರತಿನಿಧಿಗಳು ಅಂಗಡಿಗೆ ಹೋಗಿ ಪರಿಶೀಲನೆ ಮಾಡಿದರೆ ಪಡಿತರ ವಿತರಣೆಯ ಕುರಿತು ಪೂರ್ಣ ಮಾಹಿತಿ ಸಿಗುತ್ತದೆ. ಆರೋಪ ಸಾಬೀತಾದರೆ ಅಂಗಡಿ ಪರವಾನಿಗೆ ರದ್ದು ಮಾಡು ತ್ತೇವೆ. ಬೆಂಗಳೂರಿನಲ್ಲಿ 300ಕ್ಕೂ ಅಧಿಕ ದೂರುಗಳು ಬಂದಿದ್ದು, 150 ಅಂಗಡಿ ಗಳ ಲೈಸನ್ಸ್ ರದ್ದಾಗಿದೆ ಎಂದರು.