‘ನೀರಿನ ಸಂರಕ್ಷಣೆಯ ಅರಿವು ಮುಖ್ಯ’
Team Udayavani, Mar 24, 2018, 11:36 AM IST
ಮೂಡಬಿದಿರೆ: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಆ್ಯಂಟಿ ಪೊಲ್ಯೂಷನ್ ಡ್ರೈವ್ ಮತ್ತು ತೋಡಾರಿನ ಯೆನೆಪೋಯ ತಾಂತ್ರಿಕ ವಿದ್ಯಾಲಯದ ಡಿಪಾರ್ಟ್ಮೆಂಟ್ ಆಫ್ ಬೇಸಿಕ್ ಸೈನ್ಸ್, ಹ್ಯೂಮೇನಿಟಿಸ್ ಆ್ಯಂಡ್ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ ಗುರುವಾರ ‘ವಿಶ್ವ ಜಲ ದಿನಾಚರಣೆ’ ನಡೆಯಿತು.
ಪರಿಸರಕ್ಕಾಗಿ ನೀರು ಎಂಬ ಧ್ಯೇಯ ವಾಕ್ಯದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಾಯಕ ಪರಿಸರ ಅಧಿಕಾರಿ ಡಾ| ಮಹೇಶ್ವರಿ ಸಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ನೀರಿನ ಮಹತ್ವ, ಲಭ್ಯತೆ, ನೀರಿನ ಕೊರತೆ ಮತ್ತು ನೀರಿನ ಮಾಲಿನ್ಯ ಇವುಗಳ ಕುರಿತು ನಾವು ಸಾಕಷ್ಟು ತಿಳಿದುಕೊಳ್ಳಬೇಕಾಗಿದೆ. ಈಗಿನ ಸ್ಥಿತಿಗತಿಗಳನ್ನು ಗಮನಿಸಿದರೆ 2025ರ ವೇಳೆಗೆ ದೇಶದಲ್ಲಿ 10 ಕೋಟಿ ಜನರು ನೀರಿನ ಕೊರತೆಯಿಂದ ಬಳಲುವ ಅಪಾಯವಿದೆ ಎಂದರು.
ಮಹಾನಗರ ಪಾಲಿಕೆಯ ಪರಿಸರ ಅಭಿಯಂತರ ಮಧು ಎಸ್. ಮನೋಹರ ಮಾತನಾಡಿ, ಎಲ್ಲ ಅಗತ್ಯಗಳಿಗೂ ಪರಿಶುದ್ಧ ನೀರನ್ನು ಬಳಸುವ ಬದಲು ತ್ಯಾಜ್ಯ ನೀರಿನ ಸಮರ್ಪಕ ಸಂಸ್ಕರಣೆ ಮಾಡಿ ಬಳಸುವ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ’ ಎಂದರು. ಅರ್ಪಣ್ ಭಂಡಾರಿ ಸ್ವಾಗತಿಸಿದರು. ಸುಜನಾ ಅತಿಥಿಗಳನ್ನು ಪರಿಚಯಿಸಿದರು. ಹಂಝಾ ಅಮೀನ್ ಪ್ರಸ್ತಾವನೆಗೈದರು. ಐಶ್ವರ್ಯ ಜೈನ್ ವಂದಿಸಿದರು. ಹಫೀಸಾ ಹಾರಿಝ್ ನಿರೂಪಿಸಿದರು. ವಿಶ್ವ ಜಲ ದಿನದ ಕುರಿತು ಚಿತ್ರರಚನಾ ಸ್ಪರ್ಧೆ ಆಯೋಜಿಸಲಾಗಿತ್ತು.