ತಲಪಾಡಿ: ಮೀನಿನ ಲಾರಿಯಲ್ಲಿ ಮರಳು ಸಾಗಾಟ
Team Udayavani, Mar 25, 2018, 6:00 AM IST
ಉಳ್ಳಾಲ: ಹಸಿ ಮೀನು ಸಾಗಿಸುವ ಲಾರಿಯೊಳಗೆ ಪ್ಲಾಸ್ಟಿಕ್ ಟ್ರೇ ಬಳಸಿ, ಅದರಲ್ಲಿ ಮರಳು ತುಂಬಿಸಿ ಸಾಗಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ಉಳ್ಳಾಲ ಪೊಲೀಸರು ಕಂಟೈನರ್ ಲಾರಿ, ಟಿಪ್ಪರ್ ಮತ್ತು ನಾಲ್ಕು ಯುನಿಟ್ ಹೊಗೆ ಸಹಿತ ಒಟ್ಟು 15ಲ. ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ಗಡಿಭಾಗ ತಲಪಾಡಿ ಹೊಗೆಹಿತ್ಲು ಬಳಿ ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಾಟ ನಡೆಸುವ ಉದ್ದೇಶದಿಂದ ಟಿಪ್ಪರ್ ಲಾರಿ ಮೂಲಕ ಉಳ್ಳಾಲ ವ್ಯಾಪ್ತಿಯ ವಿವಿಧ ನದಿ ತೀರದ ದಡದಿಂದ ಮರಳು ತಂದು, ತಲಪಾಡಿ ಸಮೀಪ ದಾಸ್ತಾನಿರಿಸುತ್ತಿದ್ದರು. ಅಲ್ಲಿಂದ ಮೀನು ಸಾಗಾಟದ ವಾಹನದಲ್ಲಿ ಕೇರಳಕ್ಕೆ ಸಾಗಿಸುತ್ತಿದ್ದರು.
ಕಮಿಷನರ್ ಟಿ. ಆರ್.ಸುರೇಶ್ ನಿರ್ದೇಶನ, ಡಿಸಿಪಿ ಹನುಮಂತ ರಾಯ, ಉಮಾ ಪ್ರಶಾಂತ್ ಅವರ ಮಾರ್ಗದರ್ಶನ, ಎಸಿಪಿ ಕೆ. ರಾಮರಾವ್ ನಿರ್ದೇಶನದಲ್ಲಿ ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ಕೆ.ಆರ್. ಮತ್ತು ಎಎಸ್ಐ ಮಂಜಪ್ಪ, ಸಿಬಂದಿ ಲಿಂಗರಾಜ್, ರಂಜಿತ್, ಪ್ರಶಾಂತ್, ಪೂರ್ವಾಚಾರ್ ನೇತೃತ್ವದ ತಂಡ ದಾಳಿ ನಡೆಸಿ ವಶಪಡಿಸಿಕೊಂಡಿದೆ.