ಮಾತಿನ ಮತ, ಸಂದರ್ಶನ
Team Udayavani, Apr 14, 2018, 1:52 PM IST
ಎಲ್ಲ ಪಕ್ಷಗಳಿಂದಲೂ ತುಳುನಾಡಿಗೆ ಅನ್ಯಾಯ
ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಸೇರ್ಪಡೆ, ನೇತ್ರಾವತಿ ನದಿ ತಿರುವು ವಿರೋಧ, ನಗರ ಸಮಸ್ಯೆ ನಿವಾರಣೆ ಉದ್ದೇಶ ಇಟ್ಟುಕೊಂಡು ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಿದವರು ಯೋಗೀಶ್ ಶೆಟ್ಟಿ ಜೆಪ್ಪು. ಪಕ್ಷೇತರನಾಗಿ ಪರಾಜಿತರಾದರೂ ಹೋರಾಟವನ್ನು ರಾಜಕೀಯೇತರವಾಗಿ ಮುಂದುವರಿಸುತ್ತಿದ್ದಾರೆ. ಕಳೆದ 10 ವರ್ಷಗಳಿಂದ ತುಳುನಾಡ ರಕ್ಷಣಾ ವೇದಿಕೆ ಕಟ್ಟಿಕೊಂಡು ತುಳು ಭಾಷಾ ವರ್ಧನೆ ಹಾಗೂ ತುಳುವರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ.
ಈ ಬಾರಿ ಸ್ಪರ್ಧಾ ಯೋಚನೆ ಇದೆಯಾ?
ಶೇ. 99 ನಾನು ಸ್ಪರ್ಧಿಸುವುದಿಲ್ಲ. ಆದರೂ ಅಭ್ಯರ್ಥಿಗಳ ಪಟ್ಟಿ ಪ್ರಕಟ ಆದ ಅನಂತರ ಯೋಚನೆ ಮಾಡುತ್ತೇನೆ. ನೇತ್ರಾವತಿ ವಿಚಾರ, ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಸೇರ್ಪಡೆ, ಕಾರ್ಖಾನೆಗಳಿಂದ ನದಿಮೂಲ, ಪರಿಸರ ಮಾಲಿನ್ಯ ಸೇರಿ ವಿವಿಧ ವಿಚಾರಗಳಲ್ಲಿ ನಮ್ಮ ತುಳುನಾಡಿಗೆ ಅನ್ಯಾಯ ಆಗಿದೆ. ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಉತ್ತಮ ಎಂಬುದಾಗಿ ನಮ್ಮ ಕಾರ್ಯಕರ್ತರೂ ಹೇಳುತ್ತಿದ್ದಾರೆ. ಮತ ಎಷ್ಟು ಲಭಿಸುತ್ತದೆ ಅನ್ನುವುದು ಮುಖ್ಯವಲ್ಲ.
ತುಳುನಾಡಿನ ಬೇಡಿಕೆ ಈಡೇರಿಕೆಗೆ ರಾಜಕೀಯ ಅನಿವಾರ್ಯವೇ?
ನಿಜ. ತುಳುನಾಡು ರಕ್ಷಣಾ ವೇದಿಕೆ ಸುಮಾರು 50 ಶಾಖೆ ಹೊಂದಿದ್ದು, ಸಂಘಟನಾತ್ಮಕವಾಗಿ ಹೋರಾಡುತ್ತಿದೆ. ರಾಜಕೀಯ ಪಕ್ಷಗಳಿಂದ ಉತ್ತಮ ಅಭ್ಯರ್ಥಿ ನಿಂತರೆ ಮತ್ತು ನಮ್ಮ ಭರವಸೆ ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದರೆ ತೊಂದರೆ ಇಲ್ಲ. ಆದರೆ ಇನ್ನೂ ಕಾಲ ಮಿಂಚಿಲ್ಲ. ಕಣಕ್ಕಿಳಿಯುವ ಬಗ್ಗೆ ಯೋಚಿಸಲಾಗುವುದು. ಈ ನಡುವೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನಿಂದ ಒತ್ತಾಯಗಳು ಬರುತ್ತಿವೆ. ಆದರೆ ನಾನು ಎಲ್ಲ ಪ್ರಸ್ತಾವಗಳನ್ನು ತಿರಸ್ಕರಿಸಿದ್ದೇನೆ.
ಒಂದು ವೇಳೆ ಸ್ಪರ್ಧಿಸಿದಲ್ಲಿ ನಿಮ್ಮ ಮುಖ್ಯ ಆದ್ಯತೆ?
ತುಳು ಭಾಷೆ, ನೆಲ-ಜಲ ದೊಂದಿಗೆ ಸಾರ್ವಜನಿಕ ಸಮಸ್ಯೆ ನಿವಾರಿಸುವುದೇ ನನ್ನ ಉದ್ದೇಶ. ಅನುದಾನಗಳು ಬಂದಲ್ಲಿ ಅವು ಸರಿಯಾಗಿ ಬಳಕೆಯಾಗುತ್ತಿಲ್ಲ. ಅವನ್ನೆಲ್ಲ ಸರಿಯಾದ ನಿಟ್ಟಿನಲ್ಲಿ ವಿನಿಯೋಗ ಮಾಡಿ ಜನರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವುದೇ ನನ್ನ ಆದ್ಯತೆ.
ತುಳು ಭಾಷೆಗೆ ಪಕ್ಷಗಳಿಂದ ಒತ್ತು ಸಿಗುತ್ತಿದೆಯಾ?
ರಾಜಕಾರಣಿಗಳು ತುಳುವಿನಲ್ಲಿ ಭಾಷಣ ಮಾಡುತ್ತಾರೆ. 8ನೇ ಪರಿಚ್ಛೇದಕ್ಕೆ ಸೇರ್ಪಡೆ ವಿಚಾರವಾಗಿ ಮಾತನಾಡುತ್ತಾರೆ. ಆದರೆ ಅನುಷ್ಠಾನ ಮಾತ್ರ ಆಗುತ್ತಿಲ್ಲ. 50 ಸಾವಿರಕ್ಕೂ ಹೆಚ್ಚು ಭಾಷೆಗಳು ಅಧಿಕೃತವಾಗಿವೆ. ತುಳುವಿಗೆ ಏಕೆ ಅಂತಹ ಮಾನ್ಯತೆ ನೀಡುತ್ತಿಲ್ಲ? ಆಶ್ವಾಸನೆ ಮಾತ್ರವಲ್ಲ, ಅನುಷ್ಠಾನದ ಬಗ್ಗೆಯೂ ಒಲವು ತೋರಬೇಕೆಂಬ ನಮ್ಮ ಕಳಕಳಿ.
ಬಾಳೆಕಜೆ