ಲಕ ಲಕ ಹೊಳೆಯಲಿ ‘ಕುಡ್ಲ ಟಾಕೀಸ್’!
Team Udayavani, May 3, 2018, 2:28 PM IST
ಮಲ್ಟಿಪ್ಲೆಕ್ಸ್ ಮಂಗಳೂರಿಗೆ ಬಂದಂತೆ, ಮೊಬೈಲ್ ಜನರ ಕೈಗೆ ಸೇರಿದ ಅನಂತರ ಸಿಂಗಲ್ ಥಿಯೇಟರ್ ಪರಿಕಲ್ಪನೆಗಳು ಜೀವಕಳೆದುಕೊಳ್ಳುತ್ತಿವೆಯೇ ಎಂಬ ಸಹಜ ಆತಂಕ ಸೃಷ್ಟಿಯಾಗಿತ್ತು. ಇದಕ್ಕೆ ಸರಿಯಾಗಿ ಮಂಗಳೂರಿನ ಕೆಲವು ಸಿಂಗಲ್ ಥಿಯೇಟರ್ಗಳು ಕೂಡ ಮರೆಯಾಗುವಂತಾದವು. ಇಂತಹ ಕಾಲದಲ್ಲಿಯೇ ಸಿಂಗಲ್ ಥಿಯೇಟರ್ ಒಂದು ಜಗಮಗಿಸಲು ಆರಂಭವಾಗಿದೆ. ಪರಿಣಾಮವಾಗಿ ಇನ್ನುಳಿದ ಥಿಯೇಟರ್ ಗಳು ಮರುಜೀವ ಪಡೆದುಕೊಳ್ಳಬಹುದೇ ಎಂಬ ಕುತೂಹಲ ಸೃಷ್ಟಿಯಾಗಿದೆ.
ಮಂಗಳೂರಿನ ಸಿಂಗಲ್ ಥಿಯೇಟರ್ ಕಥೆ ತುಂಬ ಶೋಚನೀಯ ಸ್ಥಿತಿಯಲ್ಲಿತ್ತು. ಒಂದೊಂದೇ ಥಿಯೇಟರ್ಗಳು ಮುಚ್ಚುತ್ತ ಇನ್ನು ಮುಂದೆ ‘ಮಲ್ಟಿಪ್ಲೆಕ್ಸೇ ಗತಿ’ ಎನ್ನುವಷ್ಟರ ಮಟ್ಟಿಗೆ ತಲುಪಿತ್ತು. ಪಾಂಡೇಶ್ವರದ ‘ಅಮೃತ್’ ಥಿಯೇಟರ್ ಮರೆಯಾಗಿ ಅಲ್ಲಿ ಬಹುಮಹಡಿ ಕಟ್ಟಡ ಬರುವಂತಾಯಿತು. ಫಳ್ನೀರ್ನ ‘ಪ್ಲಾಟಿನಂ’ ಕೂಡ ಬಾಗಿಲು ಹಾಕಿತು. ಕಾರ್ ಸ್ಟ್ರೀಟ್ನ ‘ನ್ಯೂಚಿತ್ರ’ ಈಗಾಗಲೇ ಕಮರ್ಷಿಯಲ್ ರೂಪ ಪಡೆದುಕೊಳ್ಳುವಂತಾಯಿತು.
ಹೀಗಾಗಿ ಮಂಗಳೂರಿಗೆ ಸಿಂಗಲ್ ಥಿಯೇಟರ್ ಕಾಲ ಮುಗಿದೋಯ್ತು ಅನ್ನುವ ಪರಿಸ್ಥಿತಿ ಉಂಟಾಯಿತು. ಅಷ್ಟರಲ್ಲಾಗುವಾಗಲೇ, ಏಕಾಏಕಿ ‘ಸುಚಿತ್ರ’ ಹಾಗೂ ‘ಪ್ರಭಾತ್’ ಕೂಡ ಚಿತ್ರಪ್ರದರ್ಶನ ಬಂದ್ ಮಾಡಿದವು. ಈ ಎರಡು ಥಿಯೇಟರ್ಗಳು ಕೂಡ ಇನ್ನು ಮುಂದೆ ಸಿನೆಮಾ ಪ್ರದರ್ಶನ ಮಾಡಲ್ಲ ಎಂದು ಜನ ಮಾತನಾಡುವಂತಾಯಿತು. ಆದರೆ ಹೀಗಾಗಲಿಲ್ಲ. ಬದಲಾಗಿ ಹೊಸ ನಿರೀಕ್ಷೆ ಹಾಗೂ ಹೊಸ ಆಶಯವನ್ನು ಈ ಥಿಯೇಟರ್ ತೆರೆದುಕೊಂಡಿತು. ಯಾರೂ ನಿರೀಕ್ಷೆ ಮಾಡದಷ್ಟರ ಮಟ್ಟಿಗೆ ‘ಸುಚಿತ್ರ’ ಲಕ ಲಕ ಹೊಳೆಯುವಂತಾಯಿತು. ಮಲ್ಟಿಪ್ಲೆಕ್ಸ್ ನಲ್ಲಿ ಯಾವ ಸೌಕರ್ಯ ಇದೆಯೋ ಅಂತಹುದೇ ವ್ಯವಸ್ಥೆಯನ್ನು ಸುಚಿತ್ರ ನೀಡುತ್ತಿದೆ. ಈ ಮೂಲಕ ಸಿಂಗಲ್ ಥಿಯೇಟರ್ ಕಾಲ ಈಗಲೂ ಇದೆ ಎಂಬುದನ್ನು ತೋರಿಸಿಕೊಟ್ಟಿದೆ.
ವಿಶೇಷವೆಂದರೆ, ಇನ್ನೇನು ಕೆಲವೇ ದಿನಗಳ ಪ್ರಭಾತ್ ಥಿಯೇಟರ್ ಕೂಡ ನವನವೀನ ಮಾದರಿಯಲ್ಲಿ ಚಿತ್ರಚಿತ್ರವೀಕ್ಷಕರಿಗೆ ತೆರೆಯಲು ಸಿದ್ಧವಾಗುತ್ತಿದೆ. ಕೆ.ಎಸ್. ರಾವ್ ರಸ್ತೆಯಲ್ಲಿ, ಚಿತ್ರ ಮಂದಿರಕ್ಕಾಗಿ ಕಟ್ಟಡ ನಿರ್ಮಿಸಲು ಆರಂಭಿಸಿ ಹಲವು ವರ್ಷಗಳಿಂದ ಪೂರ್ಣಗೊಳ್ಳದೆ ಹಾಗೆ ಇದ್ದಿರುವ ಕಟ್ಟಡ ಪ್ರದೇಶವನ್ನು ಬಿ.ಕೆ. ವಾಸುದೇವ ರಾವ್ ಅವರು ಸ್ವಾಧೀನಪಡಿಸಿಕೊಂಡು 1958ರಲ್ಲಿ ‘ಪ್ರಭಾತ್’ ಎಂಬ ಹೆಸರಿನ ಚಿತ್ರಮಂದಿರ ಸ್ಥಾಪಿಸಿದ್ದರು. ಹಿಂದಿ ಚಿತ್ರನಟ ದೇವಾನಂದರ ‘ಕಾಲಾಪಾನಿ’ ಎಂಬ ಹಿಂದಿ ಚಿತ್ರದ ಪ್ರಥಮ ಪ್ರದರ್ಶನದ ಮೂಲಕ ಈ ಚಿತ್ರ ಮಂದಿರ ಆರಂಭವಾಗಿತ್ತು. ಆಗಿನ ಕಾಲದ ಎರಡಾಣೆಯ ಪ್ರವೇಶ ದರದಲ್ಲಿ ಪ್ರದರ್ಶನವಾಗುತ್ತಿದ್ದ ಈ ಚಿತ್ರಮಂದಿರದಲ್ಲಿ ಹೆಚ್ಚಾಗಿ ಇಂಗ್ಲಿಷ್ ಹಾಗೂ ತಮಿಳು ಭಾಷೆಯ ಸಿನೆಮಾಗಳು ಪ್ರದರ್ಶನವಾಗುತ್ತಿದ್ದವು.
ಕೆಲವು ವರ್ಷಗಳ ಅನಂತರ ಬಿ.ಕೆ. ವಾಸುದೇವ ರಾವ್ ಅವರು ತುಂಬೆ ಸುಬ್ಬರಾವ್, ನೋಡು ರಾಮಕೃಷ್ಣ ಭಟ್ ಕದ್ರಿ, ವಾಸುದೇವ ರಾವ್ ಬೆಂಗಳೂರು ಈ ಮೂವರು ಪಾಲುದಾರಿಕೆಗಾರರನ್ನು ಸೇರಿಸಿಕೊಂಡು ಮುನ್ನಡೆಸಿಕೊಂಡು ಹೋದರು. ಬಳಿಕ ವಾಸುದೇವ ರಾವ್ ಅವರು, ಸುಮಾರು 12 ವರ್ಷಗಳ ಕಾಲ ನಡೆಸಿಕೊಂಡು ಬಂದ ಪ್ರಭಾತ್ ಚಿತ್ರಮಂದಿರದ ಇಡೀ ಆವರಣದ ಪ್ರದೇಶವನ್ನು ಬೆಂಗಳೂರಿನ ಲಕ್ಷ್ಮೀನಾರಾಯಣ ಎಂಟರ್ಪ್ರೈಸಸ್ನ ಸ್ವಾಧೀನಕ್ಕೆ ಒಪ್ಪಿಸಿಕೊಟ್ಟರು. ಪ್ರಭಾತ್ ಚಿತ್ರಮಂದಿರದ ಸ್ಥಳವು ವಿಸ್ತಾರದ ಆವರಣವನ್ನು 1970ರಲ್ಲಿ ಸ್ವಾಧೀನಪಡಿಸಿಕೊಂಡ ಬೆಂಗಳೂರಿನ ಡಿ.ಎನ್. ಗೋಪಾಲಕೃಷ್ಣರು, ಅವರ ಲಕ್ಷ್ಮೀನಾರಾಯಣ ಎಂಟರ್ಪ್ರೈಸಸ್ನ ಸಂಸ್ಥೆಯ ಹೆಸರಿನಲ್ಲಿ “ಪ್ರಭಾತ್’ ಚಿತ್ರಮಂದಿರದ ಆವರಣದಲ್ಲಿ ‘ಸುಚಿತ್ರಾ’ವನ್ನು ನಿರ್ಮಿಸಿದ್ದರು.
ಇದಿಷ್ಟು ಮುಂದೆ ನಳನಳಿಸಲಿರುವ ಪ್ರಭಾತ್ನ ಕಥೆಯಾದರೆ, ಮಂಗಳೂರಿನ ಪ್ರತಿಷ್ಠಿತ ‘ಜ್ಯೋತಿ’ ಥಿಯೇಟರ್ ಕೂಡ ಹೊಸ ರೂಪ ಪಡೆದುಕೊಳ್ಳಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈಗಿನ ಥಿಯೇಟರ್ ಬಂದ್ ಮಾಡಿ ಮಾಲ್ ಒಂದನ್ನು ಇಲ್ಲಿ ಆರಂಭಿಸಿ, ಅದರಲ್ಲಿ ಸುಸಜ್ಜಿತ ಜ್ಯೋತಿ ಥಿಯೇಟರ್ ಆರಂಭಿಸುವ ಗುರಿ ಇದೆ.
ಇನ್ನುಳಿದ ಸೆಂಟ್ರಲ್, ರೂಪವಾಣಿ, ರಾಮಕಾಂತಿ, ಶ್ರೀನಿವಾಸ್ ಕೂಡ ಹೊಸ ಜಮಾನಕ್ಕೆ ಬದಲಾವಣೆಗೊಂಡರೆ, ಇನ್ನಷ್ಟು ಚಿತ್ರಪ್ರೇಮಿಗಳನ್ನು ಆಕರ್ಷಿಸಲು ಸಾಧ್ಯವಾಗಬಹುದು. ಆದರೆ, ಚಿತ್ರಮಂದಿರದ ಮಾಲೀಕರು ಇದಕ್ಕೆ ಯಾವ ರೀತಿಯ ಸ್ಪಂದನೆ ನೀಡಲಿದ್ದಾರೆ ಎಂಬುದಕ್ಕೆ ಸದ್ಯ ಉತ್ತರ ದೊರಕಿಲ್ಲ. ಒಂದು ವೇಳೆ ಬದಲಾದರೆ, ಮಂಗಳೂರು ಸಿಂಗಲ್ ಥಿಯೇಟರ್ ಗಳ ಮೂಲಕ ಹೊಸ ದಾಖಲೆಯನ್ನು ಬರೆದಂತಾಗುತ್ತದೆ.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ