ಗೆಲುವು ಪ್ರಶಾಂತ್, ಶರತ್, ದೀಪಕ್ ಮಡಿಲಿಗೆ ಅರ್ಪಣೆ: ಸಂಸದ ನಳಿನ್
Team Udayavani, May 16, 2018, 7:00 AM IST
ಮಂಗಳೂರು: ದ.ಕ.ಜಿಲ್ಲೆಯ ಜನತೆ ಬಿಜೆಪಿ ಪರ ಆಶೀರ್ವಾದ ಮಾಡಿದ್ದು, ಕರಾವಳಿಯು ಬಿಜೆಪಿಯ ಭದ್ರಕೋಟೆ ಎಂಬುದು ಮತ್ತೂಮ್ಮೆ ಸಾಬೀತಾಗಿದೆ. ಬಿಜೆಪಿಯ ಈ ಗೆಲುವನ್ನು ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ ಹಾಗೂ ದೀಪಕ್ ರಾವ್ಗೆ ಅರ್ಪಿಸುವುದಾಗಿ ದ.ಕ. ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳ ಮೋದಿ ಅವರ ಜನಪರ ಆಡಳಿತವನ್ನು ಮೆಚ್ಚಿ, ಸ್ಮಾರ್ಟ್ಸಿಟಿ, ಅಮೃತ್, ಸಾಗರ್ಮಾಲಾ, ಭಾರತ್ಮಾಲಾ ಮೊದಲಾದ ಹೊಸ ಹೊಸ ಯೋಜನೆಗಳಿಂದ ಪ್ರಭಾವಿತರಾಗಿ ಜನತೆ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ ಎಂದರು.
ಕಳೆದ 5 ವರ್ಷಗಳಲ್ಲಿ ರಾಜ್ಯ ಸರಕಾರದ ದುರಾಡಳಿತ, ಭ್ರಷ್ಟಾಚಾರ, ಕೋಮುಭಾವನೆ ಕೆರಳಿಸುವ ಹೇಳಿಕೆ
ಗಳು, ಗೂಂಡಾಗಿರಿಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಜನತೆ ಬಿಜೆಪಿಗೆ ಮತ ಹಾಕಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಗೆದ್ದಿರುವ ಬಿಜೆಪಿಯ ಏಳು ಮಂದಿ ಶಾಸಕರು ಜನರ ವಿಶ್ವಾಸ, ನಂಬಿಕೆಯ ಆಧಾರದಲ್ಲಿ ಕೆಲಸ ನಿರ್ವಹಿಸಲಿದ್ದಾರೆ.
ಬಿಜೆಪಿಯ ಗೆಲುವಿಗಾಗಿ ಪಕ್ಷದ ಕಾರ್ಯಕರ್ತರು ಕಳೆದ 2 ವರ್ಷ ಗಳಲ್ಲಿ ಹಗಲಿರುಳು ಶ್ರಮಿಸಿದ್ದಾರೆ. ಜತೆಗೆ ಬಿಜೆಪಿಯ ರಾಷ್ಟ್ರೀಯ ಮುಂದಾಳುಗಳಾದ ಓಂ ಪ್ರಕಾಶ್ ಮಾಥೂರ್, ಮಹೇಂದ್ರ ಸಿಂಗ್, ಕೇಂದ್ರ ಸಚಿವ ಧರ್ಮೆàಂದ್ರ ಪ್ರಧಾನ್, ಮುಂಬಯಿ ಸಂಸದ ಗೋಪಾಲ ಶೆಟ್ಟಿ ಅವರು ಜಿಲ್ಲೆಯಲ್ಲಿ ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಚುನಾವಣಾ ತಂಡವೂ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದರು.
ಜಿಲ್ಲೆಯಲ್ಲಿ 7 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ನಮಗಿತ್ತು. ಜತೆಗೆ ಮಂಗಳೂರು ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿ ಉತ್ತಮ ಸ್ಪರ್ಧೆ ನೀಡಿದ್ದಾರೆ. ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜನರು ಅಭೂತಪೂರ್ವ ಬೆಂಬಲ ನೀಡಿದ್ದರು. ಗುಜರಾತ್ ಮಾದರಿಯ ಪೇಜ್ ಪ್ರಮುಖ್ ಕಲ್ಪನೆ ಕೂಡ ಯಶಸ್ವಿಯಾಗಿದ್ದು, ಬೂತ್ ಮಟ್ಟದಲ್ಲಿ ನಾಯಕರನ್ನು ಬೆಳೆಸಿದೆ ಎಂದು ನಳಿನ್ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕಾ| ಗಣೇಶ್ ಕಾರ್ಣಿಕ್, ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪ್ರಭಾಕರ ಬಂಗೇರ, ಪಕ್ಷದ ಪ್ರಮುಖರಾದ ಜೀತೇಂದ್ರ ಕೊಟ್ಟಾರಿ, ಕ್ಯಾ| ಬೃಜೇಶ್ ಚೌಟ, ರವಿಶಂಕರ್ ಮಿಜಾರ್ ಉಪಸ್ಥಿತರಿದ್ದರು.