‘ವೇದ ಉಪನಿಷತ್ಗಳನ್ನು ಜನಸಾಮಾನ್ಯರಿಗೆ ತಿಳಿಸಿ’
Team Udayavani, May 25, 2018, 2:45 PM IST
ಕೆಂಚನಕೆರೆ : ರಾಮಾಯಣ, ಮಹಾಭಾರತ ಹಾಗೂ ವೇದ ಉಪನಿಷತ್ ಪುರಾಣದಲ್ಲಿರುವಂತದ್ದನ್ನು ಜನಸಾಮಾನ್ಯರಿಗೆ ಯಕ್ಷಗಾನದಿಂದ ಮುಟ್ಟಿಸಿ ಜನರನ್ನು ಧರ್ಮ ಮಾರ್ಗದೆಡೆಗೆ ಕೊಂಡು ಹೋಗಲು ಸಾಧ್ಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದರು.
ಮೇ 23 ರಂದು ಕಟೀಲು ರಥಬೀದಿಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಬಯಲಾಟದ ಸಂದರ್ಭ ತಂತ್ರಿಗಳಾದ ವೇ| ಮೂ| ವೇದವ್ಯಾಸ ತಂತ್ರಿ ಅವರಿಗೆ ದಿ| ಸದಾನಂದ ಆಸ್ರಣ್ಣ ಪ್ರಶಸ್ತಿ ನೀಡಿ ದಂಪತಿಗಳನ್ನು ಗೌರವಿಸಿ ಅವರು ಮಾತನಾಡಿದರು. ಕಟೀಲು ದೇವಸ್ಥಾನದ ಮೊಕ್ತೇಸರ ವಾಸುದೇವ ಆಸ್ರಣ್ಣ ಕಲಾವಿದರನ್ನು ಗೌರವಿಸುವ ಜತೆಗೆ ಹಿರಿಯ ಸಾಧಕರನ್ನು ಗುರುತಿಸಿ ಗೌರವಿಸುವ ಸಂಪ್ರದಾಯ ಇತರರಿಗೂ ಪ್ರೇರಣೆಯಾಗಲಿ ಎಂದರು.
ವೃತ್ತ ನಿರೀಕ್ಷಕ ಪರಶಿವ ಮೂರ್ತಿ, ಲೋಕೋಪಯೋಗಿ ಇಲಾಖೆಯ ಅಭಿಯಂತರ ಸುಜನ್ ಚಂದ್ರ, ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಬೋಧಿನಿ ಟ್ರಸ್ಟ್ನ ರಾಘವೇಂದ್ರ ಆಚಾರ್ಯ ಬಜಪೆ, ರುಕ್ಮಿಣಿ ಸದಾನಂದ ಆಸ್ರಣ್ಣ , ಕಮಲಾದೇವಿ ಪ್ರಸಾದ್ ಆಸ್ರಣ್ಣ ಉಪಸ್ಥಿತರಿದ್ದರು. ಶ್ರೀ ಹರಿನಾರಾಯಣದಾಸ ಆಸ್ರಣ್ಣ ಅಭಿನಂದನ ಭಾಷಣಗೈದರು. ನಿವೃತ್ತ ಶಿಕ್ಷಕ ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.