ಸಮಗ್ರ ವರದಿ ಬಳಿಕ ಪೂರ್ಣ ಕಾರ್ಯಾಚರಣೆ : ಶಶಿಕಾಂತ್ ಸೆಂಥಿಲ್
Team Udayavani, Jun 8, 2018, 2:55 AM IST
ಮಂಗಳೂರಿನ ರಾಜಕಾಲುವೆಗಳು ಹಾಗೂ ಚರಂಡಿಗಳ ಅಸಮರ್ಪಕ ವ್ಯವಸ್ಥೆಯಿಂದಾಗಿ ಇತ್ತೀಚೆಗೆ ಮಹಾಮಳೆ ಸುರಿದಾಗ ಸಮಸ್ಯೆ ಸೃಷ್ಟಿಯಾಗಿತ್ತು. ಈ ಬಗ್ಗೆ ಆಡಳಿತ ವ್ಯವಸ್ಥೆಯ ಕಣ್ಣು ತೆರೆಸುವ ಉದ್ದೇಶದಿಂದ ಹಾಗೂ ಮುಂದೆ ನಗರಕ್ಕೆ ಈ ಸಮಸ್ಯೆ ಬಾರದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ರಾಜಕಾಲುವೆ/ ದೊಡ್ಡ ತೋಡುಗಳ ಪರಿಸ್ಥಿತಿ ಬಗ್ಗೆ ನೈಜದರ್ಶನವನ್ನು ‘ನಾವು ಎಡವಿದ್ದು ಎಲ್ಲಿ?’ ಎಂಬ ವಿಷಯ ಆಧಾರಿತವಾಗಿ ರಿಯಾಲಿಟಿ ಚೆಕ್ ಮಾಡಿ ‘ಉದಯವಾಣಿ ಸುದಿನ’ ಪ್ರಸ್ತುತಪಡಿಸಿತ್ತು. ಪರಿಣಾಮವಾಗಿ ಅಲ್ಲಿರುವ ಅಡೆತಡೆಗಳನ್ನು ಸರಿಪಡಿಸಲಾಗುತ್ತಿದೆ. ಜತೆಗೆ ರಾಜಕಾಲುವೆ ಒತ್ತುವರಿ ಆಗಿರುವುದನ್ನು ಪತ್ತೆಹಚ್ಚಲು ಜಿಲ್ಲಾಡಳಿತವೇ ಸಮಿತಿ ರಚಿಸಿದ್ದು, ಇತ್ತೀಚೆಗೆ ಈ ಸಮಿತಿಯು ಮಧ್ಯಂತರ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿತ್ತು. ಈ ಎಲ್ಲ ವಿಚಾರಗಳ ಬಗ್ಗೆ, ಮುಂದೆ ಕೈಗೊಳ್ಳುವ ಕ್ರಮಗಳ ಬಗ್ಗೆ ರಿಯಾಲಿಟಿ ಚೆಕ್ ನ ಈ ಕೊನೆಯ ಕಂತಿನಲ್ಲಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ‘ಸುದಿನ’ ಜತೆಗೆ ಮಾತನಾಡಿದ್ದಾರೆ.
ರಾಜಕಾಲುವೆ ಒತ್ತುವರಿ ಸಂಬಂಧಿತವಾಗಿ ಜಿಲ್ಲಾಡಳಿತ ನೇಮಿಸಿದ ಸಮಿತಿಯು ನೀಡಿದ ಮಧ್ಯಂತರ ವರದಿಯಲ್ಲೇನಿದೆ?
– ನಗರದಲ್ಲಿ ರಾಜಕಾಲುವೆ ಒತ್ತುವರಿ ಪರಿಶೀಲನೆಗೆ ನೇಮಿಸಿರುವ ಸಮಿತಿ ಮಂಗಳವಾರ ಮಧ್ಯಂತರ ವರದಿ ಸಲ್ಲಿಸಿದೆ. ಸಮಗ್ರ ವರದಿಯನ್ನು ನೀಡಲು 15 ದಿನ ಗಳ ಹೆಚ್ಚುವರಿ ಕಾಲಾವಕಾಶವನ್ನು ಸಮಿತಿ ಕೋರಿದೆ. ಹೀಗಾಗಿ ಸಮಗ್ರ ವರದಿ ಬಂದ ಬಳಿಕ ಪರಿಶೀಲಿಸಿ ಒತ್ತುವರಿ ಇದ್ದಲ್ಲಿ ಅದನ್ನು ತೆರವುಗೊಳಿಸಲಾಗುವುದು.
ಒತ್ತುವರಿ ಆಗಿರುವುದು ಮೇಲ್ನೋಟಕ್ಕೆ ಹೌದು ಎಂದು ಕಂಡ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಯುತ್ತಿದೆಯೇ?
– ರಾಜಕಾಲುವೆ ಒತ್ತುವರಿಯಾಗಿದೆ ಎಂದು ಗಮನಕ್ಕೆ ಬಂದಿರುವ ಪ್ರದೇಶಗಳಲ್ಲಿ ಪಾಲಿಕೆಯ ಅಧಿಕಾರಿಗಳು ಈಗಾಗಲೇ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಸಮಗ್ರ ವರದಿ ಬಂದ ಬಳಿಕ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲಾಗುವುದು.
ಒತ್ತುವರಿ ಆಗಿದ್ದು ಹೌದು, ಅಂದಾದರೆ ಜಿಲ್ಲಾಡಳಿತ ಮುಂದೆ ಯಾವ ಕ್ರಮಗಳನ್ನು ಕೈಗೊಳ್ಳಲಿದೆ?
– ರಾಜಕಾಲುವೆ ಒತ್ತುವರಿ ಆಗಿದ್ದರೆ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಇದಕ್ಕೆ ಪೂರಕವಾಗಿ ಉಪಗ್ರಹ ಚಿತ್ರಗಳನ್ನು ಬಳಸಿ ರಾಜಕಾಲುವೆಗಳು ಒತ್ತುವರಿ ಆಗಿರುವುದನ್ನು ಪರಿಶೀಲನೆ ನಡೆಸಲಾಗುವುದು. 10 ವರ್ಷಗಳ ಹಿಂದೆ ರಾಜಕಾಲುವೆ ಸ್ಥಿತಿಗತಿ ಮತ್ತು ಪ್ರಸ್ತುತದ ಸ್ಥಿತಿಯ ಉಪಗ್ರಹ ಇಮೇಜ್ ಗಳಿಂದ ಪರಿಶೀಲನೆ ನಡೆಸಲಾಗುವುದು. ಇದರ ಆಧಾರದಲ್ಲೂ ತೆರವು ನಡೆಸಲಾಗುವುದು.
ಇತ್ತೀಚಿನ ಮಳೆಗೆ ಮಂಗಳೂರು ನೆರೆಯ ಸ್ಥಿತಿಗೆ ತಲುಪಿತ್ತು. ಮುಂದೆ ಈ ಪರಿಸ್ಥಿತಿ ಆಗದಂತೆ ಏನು ಕ್ರಮ ಕೈಗೊಳ್ಳಲಾಗಿದೆ?
– ಕೆಲವು ಪ್ರದೇಶಗಳಲ್ಲಿ ಮಳೆ ನೀರು ಹರಿದು ಹೋಗುವ ತೋಡುಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ಸಮಸ್ಯೆ ಆಗಿತ್ತು. ಜತೆಗೆ, ಈ ಬಾರಿ 400 ಮಿ.ಮೀ. ನಷ್ಟು ದಾಖಲೆಯ ಮಳೆಯಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಮಳೆಗಾಲಕ್ಕೆ ಸಂಬಂಧಪಟ್ಟಂತೆ ನಮ್ಮ ಯೋಜನೆಗಳನ್ನು ಹೊಂದಿಸಿಕೊಳ್ಳಬೇಕಾಗಿದೆ. ನೆರೆ ಪರಿಸ್ಥಿತಿ ಸೃಷ್ಟಿಯಾಗಲು ಕಾರಣಗಳೇನು ಎಂಬುದನ್ನು ಪತ್ತೆ ಮಾಡಲು ಕ್ರಮ ವಹಿಸಲಾಗುವುದು.
ಮುಂದಿನ ಮಳೆಗಾಲಕ್ಕೆ ನಗರದಲ್ಲಿ ಯಾವ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ?
– ನಗರದ ಎಲ್ಲಾ ರಾಜಕಾಲುವೆಗಳ ಹೂಳೆತ್ತುವ ಬಗ್ಗೆ ಪಾಲಿಕೆಗೆ ಸೂಚನೆ ನೀಡಲಾಗಿದೆ. ಈಗಾಗಲೇ ಕೆಲವೆಡೆ ಸ್ವಚ್ಛತಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಒತ್ತುವರಿ ತೆರವು ಮಾಡಲಾಗುತ್ತಿದೆ. ಮೆಸ್ಕಾಂ, ಅಗ್ನಿಶಾಮಕದಳ ಸೇರಿದಂತೆ ಎಲ್ಲ ವಿಭಾಗಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗ ಬಾರದಂತೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು