ಮನೆಸಂಖ್ಯೆ ಇಲ್ಲದವರಿಗೆ ನೀರು, ವಿದ್ಯುತ್ ಸೌಲಭ್ಯ ಒದಗಿಸಿ
Team Udayavani, Jul 14, 2018, 12:03 PM IST
ಪೊಳಲಿ : ಮನೆಸಂಖ್ಯೆ ಇಲ್ಲದವರಿಗೆ ನೀರು ಮತ್ತು ವಿದ್ಯುತ್ ಸಂಪರ್ಕ ಸಿಕ್ಕಿಲ್ಲ. ಕೆಲವರು ಇದಕ್ಕಾಗಿ ಅದೆಷ್ಟೋ ಸಮಯದಿಂದ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಮನೆ ನಂಬ್ರ ಸಿಗುವಾಗ ಮನೆಮಂದಿ ನೀರಿಲ್ಲದೆ ಸಾಯಬಹುದು. ಆದ್ದರಿಂದ ಮೊದಲು ನೀರು ಮತ್ತು ವಿದ್ಯುತ್ ಸಂಪರ್ಕಕ್ಕೆ ಅನುಮತಿ ಪಡೆಯಲು ಏನಾದರೊಂದು ಪರಿಹಾರೋಪಾಯ ಹುಡುಕಿ ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಬೇಡಿಕೆ ಸಲ್ಲಿಸಿದ ಕರಿಯಂಗಳ ಗ್ರಾಮ ಪಂಚಾಯತ್ ಸಭಾಗೃಹದಲ್ಲಿ ಬುಧವಾರ ನಡೆದ ಗ್ರಾಮಸಭೆಯಲ್ಲಿ ನಡೆಯಿತು.
ವಿದ್ಯುತ್ ಬಿಲ್ ಸಮಸ್ಯೆ, ಕಸ ವಿಲೇವಾರಿ ಮೊದಲಾದ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಯಿತು. ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ, ಆರೋಗ್ಯ, ಪಶು ಸಂಗೋಪನಾ ಇಲಾಖೆ, ಪೊಲೀಸ್ ಇಲಾಖೆಗಳ ಅಧಿಕಾರಿಗಳು, ಗಾ.ಪಂ. ಅಧ್ಯಕ್ಷೆ ಚಂದ್ರಾವತಿ, ಉಪಾಧ್ಯಕ್ಷ ಚಂದ್ರಶೇಖರ್ ರಾವ್, ಪಿಡಿಒ ಪದ್ಮ ನಾಯಕ್, ಗ್ರಾಮ ಲೆಕ್ಕಿಗ ಪ್ರಶಾಂತ್, ತಾ.ಪಂ. ಸದಸ್ಯ ಯಶವಂತ, ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು. ಕಾರ್ಯ ಕ್ರಮದಲ್ಲಿ ಪಿಡಿಒ ಪದ್ಮ ನಾಯಕ್ ಸ್ವಾಗತಿಸಿದರು.
ಅನುದಾನಕ್ಕೆ ತಕ್ಕಂತೆ ಕಾಮಗಾರಿ
ಗ್ರಾಮಸ್ಥರು ನೀರು, ವಿದ್ಯುತ್, ಮನೆ ದಾಖಲೆಪತ್ರಗಳ ವಿಷಯದಲ್ಲಿ ಗಂಭೀರ ಚರ್ಚೆ ನಡೆಸಿದರು. ಗ್ರಾಮಸ್ಥರ ಸಮಸ್ಯೆ ಬಗ್ಗೆ ಸಂಬಂಧಿತ ಇಲಾಖೆಯೊಂದಿಗೆ ಪತ್ರ ಮುಖೇನ ವ್ಯವಹರಿಸುತ್ತೇವೆ. ಅದಕ್ಕಿಂತ ಮುಂಚೆ ಪಿಡಿಒ ಜತೆ ಚರ್ಚಿಸಿ, ಸಮಸ್ಯೆಗಳ ಪಟ್ಟಿ ಮಾಡಲಾಗುವುದು. ಸರಕಾರದ ಅನುದಾನದಂತೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಅಗತ್ಯ ಕಾಮಗಾರಿಗಳಿಗೆ ಹಣ ವಿನಿಯೋಗಿಸಲಾಗುವುದು. ದೊಡ್ಡ ಮೊತ್ತದ ಅನುದಾನ ಬಂದರೆ ಅದಕ್ಕೆ ತಕ್ಕಂತೆ ಕಾಮಗಾರಿ ನಡೆಯಲಿದೆ ಎಂದು ನೋಡೆಲ್ ಅಧಿಕಾರಿ ಕುಮಾರ್ ಭರವಸೆ ನೀಡಿದರು.