ಗೋ ಕಳ್ಳತನ: ವಾಮಂಜೂರಿನಲ್ಲಿ ಬೃಹತ್ ಪ್ರತಿಭಟನೆ
Team Udayavani, Jul 27, 2018, 9:46 AM IST
ವಾಮಂಜೂರು: ದನ ಕಳೆದುಕೊಂಡ ರೈತರಿಗೆ ಕನಿಷ್ಠ 10 ಸಾವಿರ ರೂ. ಪರಿಹಾರ ಕೊಡಬೇಕು. ಇಲ್ಲವಾದಲ್ಲಿ ಜಿಲ್ಲಾಡಳಿತದ ಮುಂದೆ ಆಮರಣಾಂತ ಉಪವಾಸ ಕೈಗೊಳ್ಳಲಾಗುವುದು ಎಂದು ಭಜರಂಗದಳದ ಮುಖಂಡ ಮುರಳಿಕೃಷ್ಣ ಹಸಂತಡ್ಕ ಎಚ್ಚರಿಸಿದ್ದಾರೆ. ಗೋಕಳ್ಳತನ, ಅಕ್ರಮ ಗೋಸಾಗಾಟ ಹಾಗೂ ಗೋಹತ್ಯೆಯ ವಿರುದ್ಧ ವಿಶ್ವಹಿಂದೂ ಪರಿಷತ್, ಬಜರಂಗ ದಳ, ಮಾತೃಶಕ್ತಿ ದುರ್ಗಾವಾಹಿನಿ ವತಿಯಿಂದ ಗುರುವಾರ ಸಂಜೆ ಇಲ್ಲಿ ನಡೆದ ಬೃಹತ್ ಪ್ರತಿಭಟನೆ, ರ್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಳ್ಳರಿಂದ ಗೋವುಗಳನ್ನು ರಕ್ಷಿಸಲು ಹೋದವರ ಮೇಲೆ ನೈತಿಕ ಪೊಲೀಸ್ಗಿರಿ ಪ್ರಕರಣ ದಾಖಲಿಸುತ್ತಾರೆಯೇ ಹೊರತು ಕಳ್ಳರ ಮೇಲೆ ಪ್ರಕರಣ ದಾಖಲಾಗುವುದಿಲ್ಲ. ಗೋ ಕಳೆದುಕೊಂಡ ರೈತರಿಗೂ ಪರಿಹಾರ ಸಿಗುವುದಿಲ್ಲ ಎಂದರು.
ಹಿಂದೂಗಳೆಲ್ಲ ಬೆಂಬಲಿಸಿ
ಗೋ ಕಳ್ಳ ಸತ್ತಾಗ ಪರಿಹಾರ ನೀಡುವ ಸರಕಾರ ರೈತರ ಜೀವನಾಧಾರವನ್ನೇ ಕಳೆದುಕೊಂಡಾಗ ಯಾಕೆ ಪರಿಹಾರ ಕೊಡುತ್ತಿಲ್ಲ? ದನಗಳನ್ನು ಕದ್ದು ಕಸಾಯಿಖಾನೆಗೆ ಸಾಗಿಸುವವರ ಮೇಲೆ ಯಾಕೆ ಪ್ರಕರಣ ದಾಖಲಿಸುತ್ತಿಲ್ಲ? ಎಂದು ಪ್ರಶ್ನಿಸಿದರು. ಗೋರಕ್ಷಣೆ ಮಾಡುವವರಿಗೆ ಹಿಂದೂಗಳೆಲ್ಲರೂ ನೈತಿಕ ಬೆಂಬಲ ಕೊಡಬೇಕು ಎಂದು ವಿನಂತಿಸಿದರು. ದುರ್ಗಾವಾಹಿನಿಯ ವಿದ್ಯಾಮಲ್ಲಿ ಮಾತಾಡಿ, ಗೋರಕ್ಷಾ ದಳಕ್ಕೆ ಮಹಿಳೆಯರದ್ದೂ ಒಂದು ತಂಡ ಕಟ್ಟಬೇಕು. ಮಹಿಳೆಯರು ಎದ್ದು ನಿಂತರೆ ಅವರಿಗೆ ಕಾನೂನಿನ ಬೆಂಬಲವೂ ಇರುವುದರಿಂದ ಗೋರಕ್ಷಣೆಗೆ ಮಹಿಳೆಯರೂ ಮುಂದಾಗುವಂತೆ ಕರೆನೀಡಿದರು.
ಗೋರಕ್ಷಣೆಗೆ ವಿಶೇಷ ಪೊಲೀಸ್ ತಂಡ, ಚೆಕ್ಪೋಸ್ಟ್ ನಿರ್ಮಾಣ, ಗೋವು ಕಳೆದುಕೊಂಡವರಿಗೆ ಪರಿಹಾರ, ಅನಧಿಕೃತ ಕಸಾಯಿ ಖಾನೆ ಮುಚ್ಚುವುದು ಹಾಗು ತಾಲೂಕಿಗೊಂದರಂತೆ ಗೋಶಾಲೆ ಸ್ಥಾಪಿಸುವುದು, ಇರುವ ಗೋಶಾಲೆಗಳಿಗೆ ಅನುದಾನ ಒದಗಿಸುವಂತೆ ಬಜರಂಗ ದಳದ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಪ್ರಶ್ನಿಸಿದ್ದಾರೆ. ಪ್ರತಿಭಟನೆಯ ಮುನ್ನ ಮೂಡುಶೆಡ್ಡೆ ಭಜನ ಮಂದಿರದಿಂದ ವಾಮಂಜೂರು ಜಂಕ್ಷನ್ ವರೆಗೆ ಬೃಹತ್ ಮೆರವಣಿಗೆ ನಡೆಯಿತು. ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಸಂಘಟನೆಗಳ ಮುಖಂಡರಾದ ಗೋಪಾಲ್ ಕುತ್ತಾರ್, ಪ್ರವೀಣ್ ಕುತ್ತಾರ್, ವಿಷ್ಣು ಕಾಮತ್ ಉಪಸ್ಥಿತರಿದ್ದರು. ಪ್ರದೀಪ್ ಸರಿಪಳ್ಳ ನಿರೂಪಿಸಿ, ಕೃಷ್ಣ ಕಜೆಪದವು ವಂದಿಸಿದರು.
ಒಂದೇ ಮನೆಯಿಂದ 17 ಹಸುಗಳ ಕಳವು
ವಿಹಿಂಪ ಮುಖಂಡ ಜಗದೀಶ ಶೇಣವ ಮಾತನಾಡಿ, ಮೂಡುಶೆಡ್ಡೆಯಲ್ಲಿ ಒಂದು ತಿಂಗಳ ಅಂತರದಲ್ಲಿ 24 ಗೋ ಕಳವು ನಡೆದಿದೆ. ಉಳ್ಳಾಲದ ಒಂದೇ ಮನೆಯಿಂದ 10 ವರ್ಷಗಳಲ್ಲಿ 17 ಗೋ ಕಳವು ನಡೆದಿದೆ. ಪಚ್ಚನಾಡಿಯ ಕ್ರೈಸ್ತ ಸಮುದಾಯದವರ ಮನೆಯಿಂದ 15 ಹಾಗೂ ಕಣ್ಣೂರಿನ ಮುಸ್ಲಿಂ ಒಬ್ಬರ ಮನೆಯಿಂದ ದನ ಹಾಗೂ ಕರು ಕಳವಾಗಿದೆ. ಆದ್ದರಿಂದ ದೇಶದಲ್ಲಿ ಗೋಹತ್ಯಾ ನಿಷೇಧ ಕಾಯಿದೆ ಜಾರಿಗೊಳ್ಳಬೇಕು ಎಂದರು. ಬಜರಂಗ ದಳದ ಮತ್ತೂಬ್ಬ ಮುಖಂಡರಾದ ಸುನಿಲ್ ಕೆ.ಆರ್. ಗೋರಕ್ಷಣೆಗಾಗಿ ಎಲ್ಲರೂ ಸಿದ್ಧರಾಗಬೇಕು ಎಂದರು.