ನಿಮ್ನ ಒತ್ತಡ: ಕರಾವಳಿಯಲ್ಲಿ ಭಾರೀ ಸಿಡಿಲು, ಗಾಳಿ-ಮಳೆ; ಹಲವೆಡೆ ಹಾನಿ
Team Udayavani, Oct 5, 2018, 10:16 AM IST
ಮಂಗಳೂರು: ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಗುಡುಗು ಸಿಡಿಲಿನಿಂದ ಕೂಡಿದ ಭಾರೀ ಗಾಳಿ ಮಳೆಯಾಗಿದೆ.
ಮಂಗಳೂರು ನಗರದಲ್ಲಿ ಸಂಜೆ ವೇಳೆ ಗುಡುಗು ಸಿಡಿಲು ಸಹಿತ ಭಾರೀ ಗಾಳಿ ಮಳೆಗೆ ಜನಜೀವನ ಅಸ್ತವ್ಯಸ್ತ ಗೊಂಡಿತ್ತು. ತಗ್ಗು ಪ್ರದೇಶಗಳು ಜಲಾವೃತ ಗೊಂಡಿದ್ದು, ವಾಹನ ಸವಾರರು ಸಂಕಷ್ಟ ಅನುಭವಿಸಿದರು.
ಬೆಳ್ತಂಗಡಿ, ಗುರುವಾಯನಕೆರೆ, ಧರ್ಮಸ್ಥಳ, ಉಜಿರೆ ಸಹಿತ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನ ಆರಂಭಗೊಂಡ ಮಳೆ ಸಂಜೆಯ ವರೆಗೂ ಮುಂದುವರಿದಿದ್ದು, ಜಿಲ್ಲೆಯ ಹಲವೆಡೆ ಮತ್ತು ಮಂಗಳೂರು ನಗರದಲ್ಲಿ ಮೋಡ ಆವರಿಸಿ ಕತ್ತಲಿನ ವಾತಾವರಣವಿತ್ತು.ಬಂಟ್ವಾಳ-ಮೂಡಬಿದಿರೆ ರಸ್ತೆಯ ಸಂಗಬೆಟ್ಟುವಿನಲ್ಲಿ ಬೃಹತ್ ಆಲದ ಮರವೊಂದು ಬುಧವಾರ ಗಾಳಿ ಮಳೆಗೆ ಬುಡ ಸಹಿತ ಧರೆಗುರುಳಿದೆ.
ಪುತ್ತೂರು, ಉಪ್ಪಿನಂಗಡಿ, ಕಡಬ, ಬಂಟ್ವಾಳ, ವಿಟ್ಲ, ಕನ್ಯಾನ, ಸುರತ್ಕಲ್, ಮಚ್ಚಿನ, ಪೂಂಜಾಲಕಟ್ಟೆ, ವೇಣೂರು, ಮಾಣಿ, ಸುಳ್ಯ, ಸುಬ್ರಹ್ಮಣ್ಯ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾದ ವರದಿಯಾಗಿದೆ.
ಉಳ್ಳಾಲ: ತೆಂಗಿನ ಮರ ಬಿದ್ದು ಕಾರಿಗೆ ಹಾನಿ
ಗುರುವಾರ ಸಂಜೆ ಬಲವಾದ ಗಾಳಿ ಸಹಿತ ಸುರಿದ ಮಳೆಗೆ ತಲಪಾಡಿ ನಾರ್ಲ ಪಡೀಲ್ ಬಳಿ ಹೇಮಾವತಿ ಕೃಷ್ಣ ಪೂಜಾರಿ ಅವರ ಮನೆಗೆ ಸಿಡಿಲು ಬಡಿದಿದೆ. ಈ ವೇಳೆ ಅಡುಗೆ ಕೋಣೆಯಲ್ಲಿ ಗ್ಯಾಸ್ಸ್ಟವ್ ಉರಿಯುತ್ತಿದ್ದು, ಸಿಲಿಂಡರ್ಗೆ ಹಾನಿಯಾಗಿದೆ. ಸ್ಫೋಟ ಆಗದ್ದರಿಂದ ಸಂಭಾವ್ಯ ದೊಡ್ಡ ದುರಂತ ತಪ್ಪಿದೆ. ಇದರೊಂದಿಗೆ ವಿದ್ಯುತ್ ಉಪಕರಣಗಳಿಗೂ ಹಾನಿಯಾಗಿದ್ದು, ಸುಮಾರು 50 ಸಾವಿರಕ್ಕೂ ಹೆಚ್ಚು ನಷ್ಟ ಅಂದಾಜಿಸಲಾಗಿದೆ. ಇನ್ನು, ತಲಪಾಡಿ ನಾರ್ಲದಲ್ಲಿ ಕೀರ್ತಿ ಶೆಟ್ಟಿ ಅವರ ಮನೆ ಬಳಿ ನಿಲ್ಲಿಸಿದ್ದ ಕಾರಿಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ನಾರ್ಲದಲ್ಲಿ ರಸ್ತೆಗೆ ಮರ ಬಿದ್ದಿದೆ. ಈ ವೇಳೆ ಸ್ಥಳೀಯರು, ಸ್ಥಳೀಯ ಬಜರಂಗದಳ ಮತ್ತು ವಿಹಿಂಪದ ಸ್ವಾಮಿ ಕೊರಗಜ್ಜ ಶಾಖೆಯ ಸದಸ್ಯರು ಧಾವಿಸಿ ಮರ ತೆರವುಗೊಳಿಸಲು ಸಹಕರಿಸಿದರು.
ಬಂಟ್ವಾಳ ಮಿನಿ ವಿಧಾನಸೌಧ ಬ್ಯಾಟರಿ ಸ್ಫೋಟ
ಬಂಟ್ವಾಳ: ಗುರುವಾರ ಸಂಜೆ ಸುರಿದ ಭಾರೀ ಮಳೆಯ ಅಬ್ಬರಕ್ಕೆ ನಗರದಲ್ಲಿ ವಾಹನಗಳು ಹೆಡ್ಲೈಟ್ ಉರಿಸಿಕೊಂಡು ಸಂಚರಿಸಬೇಕಾಯಿತು. ಪಾದಚಾರಿಗಳು ನಡೆಯಲು ಸಾಧ್ಯವಿಲ್ಲದಷ್ಟು ಬಿರುಸಾಗಿ ಮಳೆ ಸುರಿಯಿತು. ಬಿ.ಸಿ.ರೋಡ್ನಲ್ಲಿ ಮಳೆ ನೀರು ಹರಿಯಲು ಸಾಧ್ಯ ವಾಗದೆ ಹೆದ್ದಾರಿಯಿಡೀ ತುಂಬಿಕೊಂಡಿತ್ತು. ನಗರ ಪ್ರದೇಶದಲ್ಲಿ ಹಲವಾರು ಅಂಗಡಿಗಳಿಗೆ ನೀರು ನುಗ್ಗಿದೆ. ಸತತ ಗುಡುಗು ಸಿಡಿಲಿನಿಂದ ಭಯದ ವಾತಾವರಣ ಉಂಟಾಗಿದ್ದು, ಅನೇಕರು ತಮ್ಮ ನಿತ್ಯ ಕರ್ತವ್ಯಗಳನ್ನು ಮೊಟಕು ಮಾಡಿ ಮನೆ ಸೇರಿಕೊಂಡಿದ್ದರು.
ಸಿಡಿಲಿನಿಂದ ಬಿ.ಸಿ. ರೋಡ್ ಮಿನಿ ವಿಧಾನ ಸೌಧ ಕೊಠಡಿ ಸಂಖ್ಯೆ 5ರಲ್ಲಿ ಬ್ಯಾಟರಿ ಸ್ಫೋಟಗೊಂಡಿದೆ. ಸ್ಥಳದಲ್ಲಿ ಇದ್ದವರು ಭಾರೀ ಸದ್ದಿಗೆ ಭಯಭೀತರಾದರು. ಆದರೆ ಅನಾಹುತ ಉಂಟಾಗಿಲ್ಲ. ವಿದ್ಯುತ್ ಸಂಪರ್ಕ ಕೈಕೊಟ್ಟಿದ್ದು, ತಡರಾತ್ರಿ ತನಕವೂ ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಯಥಾಸ್ಥಿತಿಗೆ ಬಂದಿಲ್ಲ.
ಮೂಡಬಿದಿರೆ: ವಿದ್ಯುತ್ ಕಂಬಗಳು ಧರಾಶಾಯಿ
ಮೂಡಬಿದಿರೆ: ಗುರುವಾರ ಅಪರಾಹ್ನ 3ರಿಂದ ಗುಡುಗು ಸಿಡಿಲು ಗಾಳಿಯೊಂದಿಗೆ ಆರಂಭವಾದ ಮಳೆ ಸಂಜೆ 6ರ ವರೆಗೂ ಮುಂದುವರಿದಿದ್ದು, ಬಳಿಕ ತೀವ್ರತೆ ತಗ್ಗಿತು. ಮೂಡಬಿದಿರೆ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಸುಮಾರು 8 ವಿದ್ಯುತ್ ಕಂಬಗಳು ಧರೆಗುರುಳಿವೆ. ಬೆಳುವಾಯಿ ಮತ್ತಿತರ ಕಡೆಗಳಲ್ಲಿ ಸಿಡಿಲಾಘಾತಕ್ಕೆ ಕೆಲವು ಟಿಸಿ ಪಾಯಿಂಟ್ಗಳು ಹಾನಿ ಗೀಡಾಗಿವೆ. ಮೂಡಬಿದಿರೆ ಪೇಟೆ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದೆ. ದುರಸ್ತಿಗಾಗಿ ಮಂಗಳೂರಿನಿಂದ ತಂತ್ರಜ್ಞರು ಆಗಮಿಸಿದ್ದಾರೆ.
ಕಾಸರಗೋಡು: ವ್ಯಾಪಕ ಹಾನಿ
ಕಾಸರಗೋಡು: ಜಿಲ್ಲೆಯ ವಿವಿಧೆಡೆ ಗುರುವಾರ ಮಧ್ಯಾಹ್ನ 3 ಗಂಟೆಯಿಂದ ಒಂದು ತಾಸು ಕಾಲ ಬೀಸಿದ ಸುಂಟರಗಾಳಿ, ಸಿಡಿಲು ಸಹಿತ ಮಳೆಯಿಂದಾಗಿ ವ್ಯಾಪಕ ಹಾನಿ ಸಂಭವಿಸಿದೆ. ನಗರದ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಬೃಹತ್ ವ್ಯಾಪಾರ ಮಳಿಗೆಯ ಛಾವಣಿ ಹಾರಿ ಹೋಗಿ ಹತ್ತಿರದ ಕಟ್ಟಡಕ್ಕೆ ಬಡಿದು ಕಟ್ಟಡದ ಮೇಲ್ಭಾಗದಲ್ಲಿ ನಿರ್ಮಿಸಿದ ಮೊಬೈಲ್ ಟವರ್ ಮುರಿದು ಬಿದ್ದಿದೆ. ಹತ್ತಿರದ ಇನ್ನೊಂದು ಕಟ್ಟಡವೂ ಹಾನಿಗೀಡಾಗಿದೆ. ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಮೂರು ಕಾರುಗಳು ಜಖಂಗೊಂಡಿವೆ. ಕೋಟೆ ಕಣಿಯಲ್ಲಿ ಮರ ಉರುಳಿ ಸಾರಿಗೆ ಅಸ್ತವ್ಯಸ್ತಗೊಂಡಿತು. ಅಗ್ನಿಶಾಮಕ ದಳ ಮರ ತೆರವುಗೊಳಿಸಿದೆ. ಅಮೈ ಕಾಲನಿ, ಪಾರೆಕಟ್ಟೆಯಲ್ಲಿ ಹಲವು ಮನೆಗಳಿಗೆ ಹಾನಿ ಸಂಭವಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pilikula: “ಫ್ಯಾನ್-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!
Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ
Moodabidri: ಬೃಹತ್ ಜೈನ ಆರಾಧನಾ ಕೋಶದ ಸಂಪಾದಕ ಎಂ. ಧರ್ಮರಾಜ ಇಂದ್ರ ನಿಧನ
Mangaluru: CCB ಪೊಲೀಸರ ಕಾರ್ಯಾಚರಣೆ… ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ
ಬಸ್ಗಳಿಗೆ ಬಾಗಿಲು ಅಳವಡಿಕೆ ; ಡಿಸಿ ಗಡುವು ಸಮೀಪಿಸಿದರೂ ಬಗೆಹರಿಯದ ಗೊಂದಲ!
MUST WATCH
ಹೊಸ ಸೇರ್ಪಡೆ
Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ