ಮಳೆಗೆ ದ.ಕ. ತತ್ತರ; ತಗ್ಗು ಪ್ರದೇಶ ಜಲಾವೃತ
Team Udayavani, Aug 17, 2018, 8:50 AM IST
ಮಂಗಳೂರು/ನೆಲ್ಯಾಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಹಾಮಳೆ ಗುರುವಾರವೂ ಮುಂದುವರಿದಿದೆ.
ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕಡಲಿನಬ್ಬರವೂ ಜೋರಾಗಿದ್ದು ಸಮುದ್ರ ತೀರದ ನಿವಾಸಿಗಳು ಭೀತಿಗೊಂಡಿದ್ದಾರೆ.
ಉಪ್ಪಿನಂಗಡಿಯಲ್ಲಿ ಕುಮಾರಧಾರಾ ಮತ್ತು ನೇತ್ರಾವತಿ ನದಿಯ ಸಂಗಮ ಮಂಗಳವಾರ ಬಳಿಕ ಮೂರು ದಿನಗಳ ಅವಧಿಯಲ್ಲಿ ಎರಡನೇ ಬಾರಿ ಸಂಗಮಕ್ಕೆ ಸಾಕ್ಷಿಯಾಗಿದೆ. ನದಿಗಳೆರಡು ಉಕ್ಕಿ ಹರಿದ ಪರಿಣಾಮ ಉಪ್ಪಿನಂಗಡಿ ಪೇಟೆಯ ತಗ್ಗು ಪ್ರದೇಶ ಜಲಾವೃತವಾಗಿ,ವ್ಯಾಪಾರಿಗಳಿಗೆ ಸಮಸ್ಯೆ ಉಂಟಾಗಿದೆ.
ಅಲ್ಲಲ್ಲಿ ಗುಡ್ಡ ಕುಸಿತ
ಉದನೆಯಿಂದ ಸಕಲೇಶಪುರದ ಮಾರನಹಳ್ಳಿವರೆಗೂ ಹತ್ತಾರು ಕಡೆಗಳಲ್ಲಿ ಗುಡ್ಡ ಕುಸಿತವಾಗಿ ಸಂಚಾರ ಅಸ್ತವ್ಯಸ್ತ ವಾಗಿದೆ. ಉದನೆಯಲ್ಲಿ ಗುಂಡ್ಯ ಹೊಳೆ ಉಕ್ಕಿ ಹರಿದು ಹೆದ್ದಾರಿ ಜಲಾವೃತವಾಗಿದೆ. ಗುಂಡ್ಯ ಹಾಗೂ ಸಕಲೇಶಪುರದ ನಡುವೆ ಅರೆಬೆಟ್ಟದಲ್ಲಿ ರೈಲು ಹಳಿ ಮೇಲೆ ಭಾರೀ ಗುಡ್ಡ ಕುಸಿದಿದೆ. ಗುಂಡ್ಯ ಶಿರಾಡಿ, ಉದನೆ, ಇಚಿಲಂಪಾಡಿ, ಕುರಿಯಾಳಕೊಪ್ಪ, ಪಡುಬೆಟ್ಟು, ಪಟ್ರಮೆ, ಶಿಶಿಲ, ಶಿಬಾಜೆ, ಸುಳ್ಯ ಭಾಗಗಳಲ್ಲಿ ಹಲವು ಮನೆಗಳು ಹಾಗೂ ಕೃಷಿ ಮುಳುಗಡೆಯ ಭೀತಿ ಎದುರಿಸುತ್ತಿವೆ. ಕುಮಾರಧಾರಾ ನದಿಯಲ್ಲಿ ನೀರು ಹೆಚ್ಚಾಗಿಬಹುತೇಕ ಸೇತುವೆಗಳು ಮುಳುಗಿವೆ. ಸುಬ್ರಹ್ಮಣ್ಯ ದ್ವೀಪದಂ ತಾಗಿದೆ. ನೂರಾರು ಮಂದಿ ಸಂತ್ರಸ್ತರಾಗಿದ್ದು ಅವರಿಗೆ 2 ಗಂಜಿಕೇಂದ್ರ, ದೇಗುಲದಿಂದ ಆಹಾರ ಪೂರೈಸಲಾಗಿದೆ.
ಬೆಳ್ತಂಗಡಿ, ಬಂಟ್ವಾಳ, ಧರ್ಮಸ್ಥಳ, ಗುರುವಾಯನಕೆರೆ, ಮಡಂತ್ಯಾರು, ವೇಣೂರು, ಸುರತ್ಕಲ್, ಕಾಸರಗೋಡು, ಕಲ್ಮಕಾರು, ಕೊಲ್ಲಮೊಗ್ರು, ಹರಿಹರ, ಬಾಳುಗೋಡು, ಐನಕಿದು, ಗುತ್ತಿಗಾರು, ಮಡಪ್ಪಾಡಿ, ದೇವಚಳ್ಳ, ನಾಲ್ಕೂರು, ಕಮಿಲ, ಪಂಜ, ಬಳ್ಪ, ಪುತ್ತೂರು, ಯೇನೆಕಲ್ಲು ಭಾಗಗಳಲ್ಲಿ ಭಾರೀ ಗಾಳಿ ಮಳೆಯಾಗಿದೆ.
ತುಂಬಿ ಹರಿದ ತುಂಬೆ ಅಣೆಕಟ್ಟು
ಬಂಟ್ವಾಳ: ಮಂಗಳೂರಿಗೆ ನೀರುಣಿಸುವ ತುಂಬೆ ಅಣೆಕಟ್ಟಿ ನಲ್ಲಿ ನೀರು ತುಂಬಿ ಹರಿಯುತ್ತಿದ್ದು, ತೀರ ಪ್ರದೇಶದಲ್ಲಿ ಆತಂಕ ನೆಲೆಸಿದೆ. ಜಕ್ರಿಬೆಟ್ಟು, ನಂದಾವರಗಳಲ್ಲಿ ನೆರೆನೀರು ನುಗ್ಗಿದೆ.
ಆ.25ರ ವರೆಗೆ
ಶಿರಾಡಿ ರಸ್ತೆ ಬಂದ್
ರಾಷ್ಟ್ರೀಯ ಹೆದ್ದಾರಿ 75ರ ಮಾರನಹಳ್ಳಿಯಿಂದ ಅಡ್ಡಹೊಳೆ ವರೆಗಿನ ಶಿರಾಡಿಘಾಟ್ ಭಾಗದಲ್ಲಿ ಅಧಿಕ ಪ್ರಮಾಣದ ಮಳೆಯಾ ಗುತ್ತಿದ್ದು, ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವುದರಿಂದ, ರಸ್ತೆ ದುರಸ್ತಿ ಆಗುವವರೆಗೂ ಆ.25ರ ಬೆಳಗ್ಗೆ 6 ಗಂಟೆವರೆಗೆ ಶಿರಾಡಿ ಘಾಟಿ ರಸ್ತೆಯಲ್ಲಿ ಎಲ್ಲ ರೀತಿಯ ವಾಹನ ಸಂಚಾರ ನಿಷೇಧಿಸಿ ಎಂದು ದ.ಕ. ಜಿಲ್ಲಾಧಿಕಾರಿ
ಎಸ್.ಶಶಿಕಾಂತ್ ಸೆಂಥಿಲ್ ಅಧಿಸೂಚನೆ ಹೊರಡಿಸಿದ್ದಾರೆ.
ವೊಲ್ವೋಗೆ ಬದಲಿ ಮಾರ್ಗ
ಶಿರಾಡಿ ಘಾಟಿ ಮತ್ತು ಸಂಪಾಜೆ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಿಂದ ಬೆಂಗಳೂರಿಗೆ ಸಂಚರಿಸುವ ವೊಲ್ವೋ ಬಸ್ಗಳು ಹಗಲಲ್ಲಿ ಕಾರ್ಕಳ, ಕುದುರೆಮುಖ, ಕಳಸ, ಮೂಡಿಗೆರೆ, ಹಾಸನ ಮೂಲಕ ಸಾಗಲಿವೆ ಎಂದು ವಿಭಾಗಾಧಿಕಾರಿ ದೀಪಕ್ ರಾವ್ ಅವರು ತಿಳಿಸಿದ್ದಾರೆ.
ಮಂಗಳೂರು ರಸ್ತೆ 4ನೇ ದಿನ ಬಂದ್
ಮಡಿಕೇರಿ: ಮಡಿಕೇರಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸತತ ನಾಲ್ಕನೇ ದಿನವೂ ಬಂದ್ ಆಗಿದ್ದು, ಮದೆನಾಡು ಬಳಿ ಕುಸಿದ ಮಣ್ಣನ್ನು ತೆರವು ಗೊಳಿಸುತ್ತಿದ್ದಂತೆ ಮತ್ತೆ ಹಲವು ಭಾಗಗಳಲ್ಲಿ ಬರೆ ಕುಸಿಯುತ್ತಿದೆ. ಮಡಿಕೇರಿ ಸಮೀಪ ಕಾಲೂರಿನ ಜನ ದ್ವೀಪವಾಸಿ ಗಳಂತಾಗಿದ್ದಾರೆ.