ಬಲ್ಮಠ: ಪಾಠ ನಡೆಯುತ್ತಿರುವಾಗಲೇ ಶಾಲೆ ಮೇಲೆ ಬಿದ್ದ ಮರ
Team Udayavani, Aug 17, 2018, 10:23 AM IST
ಮಹಾನಗರ: ನಗರದ ಬಲ್ಮಠದಲ್ಲಿರುವ ಸರಕಾರಿ ಮಹಿಳಾ ತರಬೇತಿ ಶಿಕ್ಷಕರ ಸಂಸ್ಥೆಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಬೆಳಗ್ಗೆ ಅಧ್ಯಾಪಕರು ಪಾಠ ಮಾಡುತ್ತಿರುವ ವೇಳೆಯೇ ಕಾಂಪೌಂಡ್ ನಲ್ಲಿದ್ದ ಮರವೊಂದು ಶಾಲೆಯ ಮೇಲ್ಫಾವಣಿ ಮೇಲೆ ಉರುಳಿ ಬಿದ್ದಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ.
ಬೆಳಗ್ಗೆ ಸುಮಾರು 10.30ರ ವೇಳೆಗೆ ನಗರದಲ್ಲಿ ಬೀಸಿದ ಜೋರಾದ ಗಾಳಿ- ಮಳೆಗೆ ಕಾಂಪೌಂಡ್ ಒಳಗೆಯೇ ಇದ್ದ ಮರ ಮುರಿದು ಶಾಲೆಯ ಛಾವಣಿ ಮೇಲೆ ಬಿದ್ದು ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ತರಗತಿ ಒಳಗೆ ಶಿಕ್ಷಕರು ಪಾಠ ಬೋಧಿಸುತ್ತಿದ್ದರೆ, ಸುಮಾರು 28 ಮಂದಿ ವಿದ್ಯಾರ್ಥಿಗಳು ಕೇಳುತ್ತಿದ್ದರು. ಮರ ಬಿದ್ದ ಶಬ್ದಕ್ಕೆ ಅವರು ಗಾಬರಿಗೊಂಡರು.
ಅಪಾಯದಿಂದ ಪಾರು
ಮರ ಬಿದ್ದ ಪರಿಣಾಮವಾಗಿ ಶಾಲೆಯ ಮೇಲ್ಫಾವಣಿಯ ಕೆಲವು ಹೆಂಚುಗಳು ಸಣ್ಣ ಪ್ರಮಾಣದಲ್ಲಿ ಪುಡಿಯಾಗಿವೆ. ಒಂದು ವೇಳೆ ಮರ ಭಾರೀ ರಭಸದಿಂದ ಉರುಳಿ ಬಿದ್ದಿದ್ದರೆ, ಮೇಲ್ಫಾವಣಿ ಕುಸಿದು ಬಿದ್ದು, ತರಗತಿಯಲ್ಲಿ ಕುಳಿತ್ತಿದ್ದ ವಿದ್ಯಾರ್ಥಿಗಳ ಮೇಲೂ ಹೆಂಚಿನ ಚೂರು ಬಂದು ಬೀಳುವ ಅಪಾಯವಿತ್ತು. ಆದರೆ, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ನಿಧಾನವಾಗಿ ಮರ ಬಿದ್ದ ಕಾರಣ ಹೆಂಚಿಗಷ್ಟೇ ಹಾನಿಯಾಗಿದೆ.
ಮರ ಬಿದ್ದ ಕೂಡಲೇ ಯಾವುದೇ ಅನಾಹುತ ಸಂಭವಿಸಬಾರದು ಎಂಬ ಕಾರಣಕ್ಕೆ ಶಿಕ್ಷಕರು 28 ವಿದ್ಯಾರ್ಥಿಗಳನ್ನು ಹತ್ತಿರದ ಹೈಸ್ಕೂಲ್ ಕಟ್ಟಡಕ್ಕೆ ಸ್ಥಳಾಂತರಿಸಿದ್ದಾರೆ. ಅಲ್ಲದೆ, ಮಧ್ಯಾಹ್ನದ ವೇಳೆ ಹೆತ್ತವರ ಜತೆ ಮನೆಗೆ ಕಳುಹಿಸಿದ್ದಾರೆ. ಇದಾದ ಬಳಿಕ ಹತ್ತಿರದ ಪೊಲೀಸ್ ಸ್ಟೇಶನ್ ಮತ್ತು ಮಹಾನಗರ ಪಾಲಿಕೆ ಹೆಲ್ಪ್ಲೈನ್ ನಂಬ ರ್ ಗೆ ಕರೆಮಾಡಿ ವಿಷಯ ತಿಳಿದ್ದಾರೆ. ಪಾಲಿಕೆ ಅಧಿಕಾರಿಗಳು ಯಂತ್ರದ ಮೂಲಕ ಮರ ತೆರವುಗೊಳಿಸಿದರು. ಪರಿ ಣಾಮ ಬಂಟ್ಸ್ ಹಾಸ್ಟೆಲ್ನಿಂದ ಜ್ಯೋತಿ ಸರ್ಕಲ್ ಮೂಲಕ ತೆರಳುವ ವಾಹನಗಳಲ್ಲಿ ಪರ್ಯಾಯವಾಗಿ ಸಂಚಾರ ಬದಲಾವಣೆ ಮಾಡಲಾಗಿತ್ತು.
ಸ್ಥಳಕ್ಕೆ ಮೇಯರ್ ಭೇಟಿ
ಮರ ಬಿದ್ದಂತಹ ಪ್ರದೇಶಕ್ಕೆ ಮೇಯರ್ ಭಾಸ್ಕರ್ ಕೆ., ಪಾಲಿಕೆ ಮುಖ್ಯಸಚೇತಕ ಶಶಿಧರ್ ಹೆಗ್ಡೆ, ಸ್ಥಳೀಯ ಕಾರ್ಪೊರೇಟರ್ ವಿನಯರಾಜ್, ಸಂಚಾರಿ ಪೊಲೀಸ್ ಇಲಾಖೆ ಸಿಬಂದಿ, ಪಾಲಿಕೆ ಎಂಜಿನಿಯರ್ ಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮನವಿ ನೀಡಿದ್ದರೂ ಮರ ತೆರವುಗೊಳಿಸಲಿಲ್ಲ
ಜೋರಾಗಿ ಗಾಳಿ ಬಂದರೆ ಶಾಲೆಯ ಮೇಲ್ಫಾವಣಿ ಮೇಲೆ ಮರ ಬಿದ್ದು ಹಾನಿಯಾಗಬಹುದೆಂಬ ಆತಂಕದಲ್ಲಿ ಶಿಕ್ಷಕ ವರ್ಗದವರು ಇದ್ದರು. ಮುನ್ನೆಚ್ಚರಿಗೆ ಕ್ರಮವಾಗಿ ಮರವನ್ನು ತೆರವುಗೊಳಿಸುವಂತೆ ಶಾಲೆಯ ವತಿಯಿಂದ ಪಾಲಿಕೆಗೆ, ಶಾಸಕರಿಗೆ ಅನೇಕ ಬಾರಿ ಮನವಿ ಮಾಡಲಾಗಿತ್ತು. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಿಸದಿದ್ದ ಕಾರಣ ಈ ಅನಾಹುತ ಸಂಭವಿಸಿದೆ ಎಂದು ಶಿಕ್ಷಕರು ಆರೋಪಿಸಿದ್ದಾರೆ.
ಪರಿಶೀಲನೆ ನಡೆಸಿದ್ದೇನೆ
ಶಾಲೆಯ ಮೇಲೆ ಮರ ಬಿದ್ದ ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇನೆ. ಅಲ್ಲೇ ಪಕ್ಕದಲ್ಲಿ ಮತ್ತೊಂದು ಮರದಿಂದಲೂ ಅಪಾಯವಿರುವುದು ಕಾಣಿಸಿದೆ. ಆ ಮರ ಕಡಿಯಲು ಈಗಾಗಲೇ ಅನುಮತಿ ಸಿಕ್ಕಿದೆ. ಆದಷ್ಟು ಬೇಗ ಅದನ್ನು ತೆರವುಗೊಳಿಸಲಾಗುವುದು.
- ಭಾಸ್ಕರ್ ಕೆ., ಮೇಯರ್
ಸೋರುತಿದೆ ತರಗತಿಗಳು
ಮರ ಬಿದ್ದಂತಹ ರಭಸಕ್ಕೆ ಗೋಡೆ ಸಣ್ಣ ಪ್ರಮಾಣದಲ್ಲಿ ಬಿರುಕು ಬಿಟ್ಟಿದೆ. ಮಳೆ ನೀರು ತರಗತಿಯ ಒಳಗೆ ಬರಲಾರಂಭಿಸಿದೆ. ಇತ್ತೀಚೆಗೆಯಷ್ಟೇ ಶಾಲೆ ಸಿಕ್ಕಿದ ಸ್ವಲ್ಪ ಅನುದಾನದಲ್ಲಿ ತರಗತಿಗಳ ಮೊದಲ ಹಂತದ ಕಾಮಗಾರಿ ಮಾಡಲಾಗಿದೆ. ಇದಾದ ಕೆಲವೇ ಸಮಯದಲ್ಲಿ ಹೆಂಚು ಮತ್ತು ಗೋಡೆಗೆ ಹಾನಿಯಾಗಿದೆ ಎಂದು ಶಾಲೆಯ ಶಿಕ್ಷಕಿಯೊಬ್ಬರು ‘ಸುದಿನ’ಕ್ಕೆ ತಿಳಿಸಿದ್ದಾರೆ.
ಅದೃಷ್ಟವಶಾತ್ ಅನಾಹುತವಾಗಿಲ್ಲ
ಶಾಲೆಯಲ್ಲಿ ಶಿಕ್ಷಕರ ಕೊಠಡಿ ತೆರೆದಿತ್ತು ಎಂದು ಬಾಗಿಲು ಹಾಕಲು ತೆರಳಿದ್ದಾಗ ದೊಡ್ಡ ಶಬ್ದ ಕೇಳಿಸಿತು. ಮರ ಬಿದ್ದದ್ದು
ಕಂಡು ಗಾಬರಿಯಾದೆ. ಕೂಡಲೇ ಪೊಲೀಸ್ ಠಾಣೆ, ಪಾಲಿಕೆಗೆ ಕರೆ ಮಾಡಿ ವಿಚಾರ ತಿಳಿಸಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಲಿಲ್ಲ.
– ಸೀತಮ್ಮ ಜೆ., ಮುಖ್ಯ ಶಿಕ್ಷಕಿ