ವಿದ್ಯುತ್ ತಂತಿ ಮೇಲೆ ಬಿದ್ದ ತೆಂಗಿನ ಮರ: ಆತಂಕ ಸೃಷ್ಟಿ
Team Udayavani, Aug 18, 2018, 12:04 PM IST
ಮಹಾನಗರ: ನಗರದಲ್ಲಿ ಶುಕ್ರವಾರ ಸಂಜೆ ಬೀಸಿದ ಗಾಳಿಗೆ ನವಭಾರತ್ ವೃತ್ತ ಬಳಿ ರಸ್ತೆಯ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿಯ ಮೇಲೆ ತೆಂಗಿ ಮರ ಬಿದ್ದು, ಕೆಲವು ಕಾಲ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿತ್ತು. ಶುಕ್ರವಾರ ಮಧ್ಯಾಹ್ನ ವೇಳೆಗೆ ನವಭಾರತ್ ವೃತ್ತ ಬಳಿಯ ಓಷಿಯನ್ ಪರ್ಲ್ ಹೊಟೇಲ್ ಎದುರು ಭಾಗದಲ್ಲಿರುವ ತೆಂಗಿನ ಮರವೊಂದು ಹಠಾತ್ ಬಿದ್ದಿತ್ತು. ಬಿದ್ದ ರಭಸಕ್ಕೆ ತೆಂಗಿನ ಮರದ ಒಂದು ಭಾಗ ವಿದ್ಯುತ್ ತಂತಿಯಲ್ಲಿ ಸಿಲುಕಿತ್ತು.
ಆ ಸಮಯದಲ್ಲಿ ತಂತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದುದರಿಂದ ತಂತಿ ತುಂಡಾಗಿ ರಸ್ತೆಗೆ ಬೀಳುತ್ತಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಅದೇ ವೇಳೆಗೆ ಈ ರಸ್ತೆಯಲ್ಲಿ ವಾಹನಗಳು ಕೂಡ ಸಂಚರಿಸುತ್ತಿದ್ದವು. ತೆಂಗಿನ ಮರದ ಅರ್ಧ ಭಾಗ ರಸ್ತೆಗೆ ಉರುಳಿದ್ದು, ಮರದಲ್ಲಿದ್ದ ತೆಂಗಿನ ಕಾಯಿ ಕೂಡ ರಸ್ತೆಗೆ ಬಿದ್ದಿವೆ. ಈ ಸಮಯದಲ್ಲಿ ರಸ್ತೆಯಲ್ಲಿ ಯಾವುದೇ ವಾಹನ ಸಂಚರಿಸದೇ ಇದ್ದುದರಿಂದ ಅಪಾಯ ಸಂಭವಿಸಲಿಲ್ಲ.
ಮಳೆ ಇಳಿಮುಖ
ನಗರದಲ್ಲಿ ಮಳೆ ಪ್ರಮಾಣ ಇಳಿಮುಖವಾಗಿದೆ. ಕಳೆದೆರಡು ದಿನಗಳಿಗೆ ಹೋಲಿಕೆ ಮಾಡಿದರೆ ನಗರದಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದೆ. ಮಧ್ಯಾಹ್ನ ಮತ್ತು ಸಂಜೆ ವೇಳೆ ಬಿಸಿಲಿನಿಂದ ಕೂಡಿದ ವಾತಾವರಣವಿತ್ತು. ಬೆಳಗ್ಗಿನ ಸಮಯ ಸಾಧಾರಣ ಮಳೆಯಾಗಿದ್ದು, ಗಾಳಿ ಜೋರಾಗಿತ್ತು.