‘ಮಾಹಿತಿಯುಳ್ಳ ಚಿತ್ರಗಳಿಂದ ಧನಾತ್ಮಕ ಬದಲಾವಣೆ’
Team Udayavani, Sep 6, 2018, 10:55 AM IST
ಮಹಾನಗರ: ಶಾಲಾ ಕಾಲೇಜುಗಳಲ್ಲಿ ಶೈಕ್ಷಣಿಕ ಮಾಹಿತಿಯುಳ್ಳ ಹಾಗೂ ಸಮಾಜಕ್ಕೆ ಸಂದೇಶ ನೀಡುವ ಚಲನಚಿತ್ರಗಳ ಪ್ರದರ್ಶನ ಆಯೋಜನೆಯಿಂದ ವಿದ್ಯಾರ್ಥಿಗಳಲ್ಲಿ ಧನಾತ್ಮಕ ಬದಲಾವಣೆ ಆಗಲು ಸಾಧ್ಯ ಎಂದು ಚಿತ್ರ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲಬೈಲ್ ಅವರು ಹೇಳಿದರು. ಸಂತ ಅಲೋಶಿಯಸ್ ಕಾಲೇಜಿನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ‘ನಾವು ಒಂದು’ ಎಂಬ ಶೀರ್ಷಿಕೆಯಡಿಯಲ್ಲಿ ಕಾಲೇಜಿನ ಸಭಾಭವನದಲ್ಲಿ ಎರಡು ದಿನ ಆಯೋಜಿಸಲಾಗಿರುವ ಚಲನಚಿತ್ರೋತ್ಸವವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬೇರೆ ಬೇರೆ ಭಾಷೆಯ ಸಿನೆಮಾಗಳನ್ನು ಒಂದೇ ವೇದಿಕೆಯಲ್ಲಿ ನೋಡುವ ಅವಕಾಶ ನಿಜಕ್ಕೂ ವಿದ್ಯಾರ್ಥಿಗಳ ಪಾಲಿಗೆ ಅತ್ಯಮೂಲ್ಯ ಕ್ಷಣ. ಈ ಮೂಲಕ ಎಲ್ಲ ಭಾಷೆಗಳಲ್ಲೂ ಹಿಡಿತ ಸಾಧಿಸುವ ಗುಣ ಬೆಳೆಸಿಕೊಳ್ಳಬಹುದು ಎಂದರು.
ಚಿತ್ರೋತ್ಸವದಿಂದ ಹೊಸತನ
ತುಳು ಸಿನೆಮಾ ರಂಗದ ಖ್ಯಾತ ನಟ ಅರ್ಜುನ್ ಕಾಪಿಕಾಡ್ ಮಾತನಾಡಿ, ಚಲನಚಿತ್ರೋತ್ಸವದ ಮೂಲಕ ವಿದ್ಯಾರ್ಥಿಗಳಲ್ಲಿ ಹೊಸತನವನ್ನು ಮೂಡಿಸುತ್ತಿರುವುದು ಶ್ಲಾಘನೀಯ ಎಂದರು. ಕಾಲೇಜಿನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥರಾದ ಡಾ| ಮೆಲ್ವಿನ್ ಪಿಂಟೋ ಮಾತನಾಡಿ, ಪತ್ರಕರ್ತೆ ಗೌರಿ ಲಂಕೇಶ್ ನಿಧನರಾಗಿ ಒಂದು ವರ್ಷ ಆಗುತ್ತಿರುವ ಸಂದರ್ಭದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ‘ನಾವು ಒಂದು’ ಎಂಬ ಶೀರ್ಷಿಕೆಯಡಿಯಲ್ಲಿ ಚಲನಚಿತ್ರೋತ್ಸವ ಆಯೋಜಿಸಿದೆ. ಸೆ. 6ರಂದು ರಾಷ್ಟ್ರೀಯ ಪ್ರಶಸ್ತಿ ವಿಜೇತ ಕನ್ನಡ ನಿರ್ದೇಶಕ ಬಿ. ಸುರೇಶ ಅವರು ಈ ಚಿತ್ರೋತ್ಸವದಲ್ಲಿ ಭಾಗವಹಿಸಲಿದ್ದಾರೆ. ದಕ್ಷಿಣ ಕನ್ನಡದ ಉದಯೋನ್ಮುಖ ಚಿತ್ರನಟಿ ಸಿದ್ಧಿ ಮಹಾಜನ್ ಕಟ್ಟೆ ಕೂಡ ಪಾಲ್ಗೊಳ್ಳಲಿದ್ದಾರೆ. ಸುಮಾರು 15 ದೇಶ ಹಾಗೂ ವಿದೇಶದ ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದರು.