ಶೀಘ್ರ ರಸ್ತೆ ನಿರ್ಮಾಣ ಪೂರ್ಣಗೊಳಿಸಲು ಆಗ್ರಹ
Team Udayavani, Sep 16, 2018, 11:17 AM IST
ಮಹಾನಗರ: ಪಡೀಲ್ ಬಜಾಲ್ ಮುಖ್ಯರಸ್ತೆಯಲ್ಲಿ ಜೆ.ಎಂ. ರೋಡ್ನಿಂದ ಪಕ್ಕಲಡ್ಕದವರೆಗಿನ ಅರ್ಧ ಕಿ.ಮೀ. ಅಂತರದ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ನಡೆಸಲು ಎರಡು ತಿಂಗಳಿಗಿಂತಲೂ ಅಧಿಕ ಸಮಯ ಪಡೆದು ಜನ ಸಾಮಾನ್ಯರ ಓಡಾಟಕ್ಕೆ ಅಡ್ಡಿಯುಂಟು ಮಾಡಿರುವುದನ್ನು ಡಿವೈಎಫ್ಐ ಪಕ್ಕಲಡ್ಕ ಘಟಕ ಖಂಡಿಸಿದೆ.
ಜೆ.ಎಂ. ರೋಡ್ನಿಂದ ಪಕ್ಕಲಡ್ಕದ ವರೆಗಿನ ರಸ್ತೆ ವಿಸ್ತರಣೆ ಪ್ರಕ್ರಿಯೆ ನಡೆದು ಒಂದು ವರುಷ ಕಳೆದಿದೆ. ಈ ರಸ್ತೆಯಲ್ಲಿ ಒಂದು ಭಾಗ ಕಂಕನಾಡಿ ವಾರ್ಡ್ ಗೆ ಇನ್ನೊಂದು ಭಾಗ ಅಳಪೆ ದಕ್ಷಿಣ ವಾರ್ಡ್ ವ್ಯಾಪ್ತಿಗೆ ಒಳಪಟ್ಟಿದೆ. ಈ ರಸ್ತೆಯನ್ನು ನಿರ್ಮಿಸಲು ಎರಡು ಪ್ರತ್ಯೇಕ ಗುತ್ತಿಗೆದಾರರಿಗೆ ವಹಿಸಲಾಗಿದ್ದರೂ ಕಾಮಗಾರಿ ಕೆಲಸ ಮಾತ್ರ ನಿಧಾನಗತಿಯಲ್ಲಿ ಸಾಗುತ್ತಿದೆ. ಇಲ್ಲಿಯ ಜನ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ತೆರಳಲು ಬಸ್ ಹಿಡಿಯಬೇಕಾದರೆ ಸುಮಾರು ದೂರ ನಡೆಯ ಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ರಸ್ತೆ ನಿರ್ಮಾಣದ ಕಾಮಗಾರಿಯನ್ನು ತ್ವರಿತಗೊಳಿಸಿ ಜನರ ಓಡಾಟಕ್ಕೆ ಮುಕ್ತವನ್ನಾಗಿಸಬೇಕೆಂದು ಒತ್ತಾಯಿಸುತ್ತದೆ ಎಂದು ಡಿವೈಎಫ್ಐ ಪಕ್ಕಲಡ್ಕ ಘಟಕದ ಅಧ್ಯಕ್ಷ ರಿತೇಶ್ ಹಾಗೂ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.