‘ಸ್ಪಷ್ಟ ಗುರಿಯೊಂದಿಗೆ ಕ್ರೀಡಾ ಬದುಕು ರೂಪಿಸಿ’
Team Udayavani, Sep 20, 2018, 11:51 AM IST
ಮಹಾನಗರ : ಪಠ್ಯದೊಂದಿಗೆ ವಿದ್ಯಾರ್ಥಿಗಳು ಕ್ರೀಡಾಸಕ್ತಿಯನ್ನೂ ಬೆಳೆಸಿಕೊಳ್ಳಬೇಕು. ಕ್ರೀಡೆಯಲ್ಲಿ ಉತ್ತುಂಗಕ್ಕೇರ ಬೇಕಾದರೆ ಕಠಿನ ಪರಿಶ್ರಮದೊಂದಿಗೆ ಸ್ಪಷ್ಟ ಗುರಿ ಮುಖ್ಯವಾಗಿರುತ್ತದೆ ಎಂದು ಕ್ರೀಡಾಪಟು ಎಂ. ಆರ್. ಪೂವಮ್ಮ ಅಭಿಪ್ರಾಯಪಟ್ಟರು. ಕೆನರಾ ಹೈಸ್ಕೂಲ್ ಅಸೋಸಿಯೇಶನ್ ವತಿಯಿಂದ ಉರ್ವ ಕೆನರಾ ಪ್ರೌಢಶಾಲೆಯಲ್ಲಿ ಏರ್ಪಡಿಸಿದ ಸಮ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಉಪಾಧ್ಯಕ್ಷ ಅಣ್ಣಪ್ಪ ಪೈ ಮಾತನಾಡಿ, ಪೂವಮ್ಮ ಅವರು ದೇಶದ ಆಸ್ತಿ. ಅವರ ಕ್ರೀಡಾ ಭವಿಷ್ಯ ಇನ್ನಷ್ಟು ಪ್ರಜ್ವಲಿಸಲಿ ಎಂದರು.
ಅಸೋಸಿಯೇಶನ್ ಅಧ್ಯಕ್ಷ ಎಸ್. ಎಸ್. ಕಾಮತ್, ಶಾಲಾ ಸಂಚಾಲಕ ಪಂಚಮಾಲ್ ಗೋಪಾಲಕೃಷ್ಣ ಶೆಣೈ, ಆಡಳಿತ ಮಂಡಳಿ ಸದಸ್ಯರಾದ ಕೊಚ್ಚಿಕಾರ್ ಸುಧಾಕರ್ ಪೈ, ಸುರೇಶ್ಕಾಮತ್, ಗಣೇಶ್ ಕಾಮತ್, ಶ್ರೀಕಾಂತ್ ಪೈ, ಪ್ರೌಢ ಶಾಲೆ ಮುಖ್ಯೋಪಾಧ್ಯಾಯಿನಿ ಅರುಣಾ ಕುಮಾರಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಲಲನಾ ಶೆಣೈ, ಪೂವಮ್ಮ ಹೆತ್ತವರಾದ ರಾಜು, ಜಾಜಿ ಉಪಸ್ಥಿತರಿದ್ದರು. ಈ ವೇಳೆ ಪೂವಮ್ಮ ಅವರ ಬಾಲ್ಯ ದಿಂದ ಈಗಿನವರೆಗಿನ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತುಸಂಸ್ಥೆಯ ವತಿಯಿಂದ 1 ಲಕ್ಷ ರೂ.ಗಳ ಚೆಕ್ನ್ನು ಪೂವಮ್ಮ ಅವರಿಗೆ ಹಸ್ತಾಂತರಿಸಲಾಯಿತು.
ಅಸೋಸಿಯೇಶನ್ ಗೌರವ ಕಾರ್ಯದರ್ಶಿ ರಂಗನಾಥ್ ಭಟ್ ಸ್ವಾಗತಿಸಿದರು. ಬಸ್ತಿ ಪುರುಷೋತ್ತಮ ಶೆಣೈ ವಂದಿಸಿದರು. ಶಿಕ್ಷಕ ರವೀಂದ್ರನಾಥ ಶೆಟ್ಟಿ ನಿರೂಪಿಸಿದರು. ಮಂಗಳಾ ಕ್ರೀಡಾಂಗಣದಿಂದ ಕೆನರಾ ಪ್ರೌಢಶಾಲೆಯ ತನಕ ಮೆರವಣಿಗೆಯಲ್ಲಿ ಸಾಧಕಿ ಪೂವಮ್ಮ ಅವರನ್ನು ಕರೆ ತರಲಾಯಿತು.
ಶ್ರಮದಿಂದ ಸಾಧನೆ
ಚಿಕ್ಕಂದಿನಿಂದಲೇ ನನ್ನ ಗುರಿ ಕ್ರೀಡೆಯಲ್ಲಿ ಸಾಧಿಸುವುದು ಎಂದು ಹೇಳುತ್ತಿದ್ದೆ. ಎಳವೆಯಿಂದಲೇ ಮೈಗೂಡಿಸಿಕೊಂಡಿದ್ದ ಕ್ರೀಡಾಸಕ್ತಿ ಮತ್ತು ಶ್ರಮ ಪ್ರಸ್ತುತ ತನಗೆ ಸಹಕಾರಿಯಾಯಿತು. ಹೆತ್ತವರ ನಿರಂತರ ಪ್ರೋತ್ಸಾಹದಿಂದಾಗಿ ಅಂತಾರಾಷ್ಟ್ರೀಯ ಮಟ್ಟಕ್ಕೇರುವುದು ಸಾಧ್ಯವಾಯಿತು ಎಂದು ಪೂವಮ್ಮ ಹೇಳಿದರು.