ಸುಬ್ರಹ್ಮಣ್ಯ ಶ್ರೀಗಳ ಉಪವಾಸ ಅಂತ್ಯ
Team Udayavani, Oct 16, 2018, 10:40 AM IST
ಸುಬ್ರಹ್ಮಣ್ಯ: ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ 60 ತಾಸುಗಳ ಬಳಿಕ ಸೋಮವಾರ ಉಪವಾಸ ಅಂತ್ಯಗೊಳಿಸಿದ್ದಾರೆ.
ಶ್ರೀ ನರಸಿಂಹ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಎಳನೀರು ಸೇವನೆ ಮೂಲಕ ಉಪವಾಸ ಕೊನೆಗೊಳಿಸಿದರು. ಉಡುಪಿಯ ಪೇಜಾವರ ಶ್ರೀಗಳು, ಸುತ್ತೂರು ಶ್ರೀಗಳು, ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಎಚ್.ಡಿ. ರೇವಣ್ಣ ದೂರವಾಣಿ ಕರೆ ಮಾಡಿ ದ್ದಲ್ಲದೇ, ಜಿಲ್ಲಾಡಳಿತ ಕೂಡ ಉಪವಾಸ ಕೈಬಿಡಲು ಕೋರಿತ್ತು. ಮಠದ ಪರಿವಾರವಲ್ಲದೇ, ಅನೇಕ ಮಂದಿ ಭಕ್ತರೂ ನನ್ನೊಂದಿಗೆ ಉಪವಾಸ ಮಾಡುವುದಾಗಿ ಹೇಳಿದ್ದರು. ನವರಾತ್ರಿಯ ಸಂದರ್ಭ ಯಾರಿಗೂ ನನ್ನಿಂದ ತೊಂದರೆಯಾಗಬಾರದು ಎಂದು ಉಪವಾಸ ಅಂತ್ಯಗೊಳಿಸಲು ನಿರ್ಧರಿಸಿದ್ದೇನೆ ಎಂದು ಶ್ರೀಗಳು ಹೇಳಿದರು.
ಪೇಜಾವರ ಶ್ರೀಗಳು ನವರಾತ್ರಿ ಬಳಿಕ ಆಗಮಿಸಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದಾಗಿ ತಿಳಿಸಿದ್ದಾರೆ. ಸರಕಾರ ಹಾಗೂ ಹಲವು ರಾಜಕೀಯ ಮುಖಂಡರಿಂದಲೂ ಪರಿಹಾರ ಸಿಗುವ ಆಶ್ವಾಸನೆ ದೊರಕಿದೆ ಎಂದರು.
ಆಡಳಿತ ಮಂಡಳಿ ವಿರುದ್ಧವಲ್ಲ
ದೇಗುಲದ ಆಡಳಿತ ಮಂಡಳಿಯ ಎಲ್ಲ ಸದಸ್ಯರು ಮಠದ ವಿರುದ್ಧ ಆಪಾದನೆಯಲ್ಲಿ ತೊಡಗಿಲ್ಲ. ಕೆಲವೇ
ಮಂದಿ ಹೊರಗಿನವರ ಜತೆ ಸೇರಿಕೊಂಡಿದ್ದಾರೆ. ಮಠದ ಹೆಸರಿನಲ್ಲಿ ಕೆಲವರು ನೀಡುವ ವೈಯಕ್ತಿಕ ಹೇಳಿಕೆಗಳಿಗೂ ಮಠಕ್ಕೂ ಸಂಬಂಧವಿಲ್ಲ ಎಂದರಲ್ಲದೇ, ಸರ್ಪಸಂಸ್ಕಾರ, ಆಶ್ಲೇಷಾ ಬಲಿ, ನಾಗಪ್ರತಿಷ್ಠೆ ಸೇವೆಗಳನ್ನು ವೆಬ್ಸೈಟ್ ಮೂಲಕ ಹಾಕಿ ದೇವಸ್ಥಾನಕ್ಕೆ ಬರುವ ಭಕ್ತರನ್ನು ಸೆಳೆಯುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ನಮ್ಮ ಅಧಿಕೃತ ವೆಬ್ಸೈಟ್ ಇಲ್ಲ ಹಾಗೂ ಅದಕ್ಕಾಗಿ ಏಜೆಂಟರನ್ನೂ ನೇಮಿಸಿಕೊಂಡಿಲ್ಲ. ಭಕ್ತರು ಸ್ವಯಂಪ್ರೇರಿತರಾಗಿ ಬಂದಲ್ಲಿ ಸೇವೆಗಳನ್ನು ನಡೆಸುತ್ತಿದ್ದೇವೆ ಅಷ್ಟೇ ಎಂದು ಹೇಳಿದರು.
ದೇವಸ್ಥಾನದಿಂದ ಅಧಿಕೃತ ಮಾಹಿತಿ ಇಲ್ಲ
ನೀರು ನೀಡುವ ಕುರಿತು ದೇವಸ್ಥಾನ ದಿಂದ ಅಧಿಕೃತ ಮಾಹಿತಿ ಬಂದಿಲ್ಲ. ನೀರಿನ ಸಮಸ್ಯೆ ಪರಿಹರಿಸಲು ಗ್ರಾಮ ಪಂಚಾಯತ್ ಸಿದ್ಧವಿದ್ದು, ತಹಶೀಲ್ದಾರ್ ಸಹಿತ ಇಲಾಖೆಯ ಅಧಿಕಾರಿಗಳು ಮಠಕ್ಕೆ ಆಗಮಿಸಿ ಭರವಸೆ ನೀಡಿದ್ದಾರೆಂದು ತಿಳಿಸಿದರು. ಯಜ್ಞೆಶ್ ಆಚಾರ್, ರಾಜೇಶ್ ಎನ್.ಎಸ್., ಶಿವಕುಮಾರ್ ಕಾಮತ್, ಗಣೇಶಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
ಪೇಜಾವರ ಸ್ವಾಮೀಜಿ ಹರ್ಷ
ಉಡುಪಿ: ನಮ್ಮೆಲ್ಲರ ಮೇಲಿನ ಅಭಿಮಾನದಿಂದ ಉಪವಾಸ ಅಂತ್ಯಗೊಳಿಸಿದ ಸುಬ್ರಹ್ಮಣ್ಯ ಶ್ರೀಗಳನ್ನು ಅಭಿನಂದಿಸುವುದಾಗಿ ಪೇಜಾವರ ಶ್ರೀಗಳು ತಿಳಿಸಿದ್ದಾರೆ. ದಸರೆಯ ಅನಂತರ ಸಮಸ್ಯೆಯನ್ನು ಬಗೆಹರಿಸುವುದಾಗಿ ಆಶ್ವಾಸನೆ ನೀಡಿ ಶ್ರೀಗಳ ಉಪವಾಸ ಅಂತ್ಯಗೊಳಿಸುವಂತೆ ಮಾಡಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಯವರ ಕ್ರಮವನ್ನೂ ಅವರು ಶ್ಲಾಸಿದ್ದಾರೆ. ಸುಬ್ರಹ್ಮಣ್ಯ ಶ್ರೀಗಳಿಗೆ ಶೀಘ್ರ ನ್ಯಾಯ ಒದಗಿಸಬೇಕು ಎಂದು ಶ್ರೀ ಅದಮಾರು ಮಠಾಧೀಶರು ಆಗ್ರಹಿಸಿದ್ದಾರೆ.