ಕಲಾ ಪ್ರದರ್ಶನದಲ್ಲಿ ಕಲಾಕೃತಿ ರಂಗು
Team Udayavani, Nov 4, 2018, 11:53 AM IST
ಕೊಡಿಯಾಲಬೈಲ್ : ಕರಾವಳಿಯ ಪಾರಂಪರಿಕ ಮೀನುಗಾರಿಕೆ ಕಸುಬನ್ನು ಕಟ್ಟಿಕೊಡುವ ದೋಣಿಯ ಚಿತ್ರಣ, ಭತ್ತದ ತುಪ್ಪೆಯ ಅನಾವರಣ ಒಂದೆಡೆ. ಅರ್ಧ ತಾಸಿನಲ್ಲೇ ಮಣ್ಣಿನ ಕಲಾಕೃತಿ ರಚಿಸಿ ನಿಬ್ಬೆರಗಾಗಿಸುವ ಕಲಾವಿದರ ತಂಡ ಇನ್ನೊಂದೆಡೆ. ಪುಸ್ತಕ ಪ್ರದರ್ಶನ, ಕ್ಲೇ ಮಾಡೆಲಿಂಗ್..
ಇದು ಮಂಗಳೂರು ಲಿಟ್ ಫೆಸ್ಟ್ ನಡೆಯುತ್ತಿರುವ ಟಿಎಂಎ ಪೈ ಸಭಾಂಗಣದ ಮುಂಭಾಗದಲ್ಲಿ ಶನಿವಾರ ಕಂಡು ಬಂದ ದೃಶ್ಯ. ಮಂಗಳೂರಿನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರ ಮಟ್ಟದ ಮೊದಲ ಸಾಹಿತ್ಯ ಜಾತ್ರೆಯಾದ್ದರಿಂದ ಸಭಾಂಗಣದ ಮುಂಭಾಗದಲ್ಲಿ ತುಳುನಾಡಿನ ಆಹಾರ ಪದ್ಧತಿ, ಪಾರಂಪರಿಕ ಕಲೆಯನ್ನು ಬಿಂಬಿಸುವ ಚಿತ್ರಣಗಳನ್ನು ಪ್ರದರ್ಶಿಸಲಾಗಿತ್ತು. ಇಡೀ ಸಾಹಿತ್ಯ ಜಾತ್ರೆಗೆ ಸೌಂದರ್ಯ ನೀಡುವಲ್ಲಿ ಈ ಪ್ರದರ್ಶನಗಳು ಸಾಕ್ಷಿಯಾಗಿದ್ದವು. ಸಭಾಂಗಣದ ಆವರಣದ ಒಳ ಹೋಗುತ್ತಿದ್ದಂತೆ ಮಹಾಲಸ ಸಂಸ್ಥೆಯ ವಿದ್ಯಾರ್ಥಿಗಳು ರಚಿಸಿದ ಪೈಂಟಿಂಗ್ ಗಳು ಗಮನ ಸೆಳೆಯುತ್ತಿದ್ದವು. ಮಧುಬನಿ, ಖನ್ನಾಳ, ಕಲಂಕಾರಿ ವಿವಿಧ ವಿಶುವಲ್ ಕಲಾಕೃತಿಗಳನ್ನು ವಿದ್ಯಾರ್ಥಿಗಳೇ ರಚಿಸಿ ಪ್ರದರ್ಶನ ಮತ್ತು ಮಾರಾಟಕ್ಕಿಟ್ಟಿದ್ದರು.
ಮಣ್ಣಿನ ಕಲಾಕೃತಿ
ಗೋಕರ್ಣದ ಕಲಾವಿದ ರವಿ ಗುನಗ ಅವರ ಮುಂದಾಳತ್ವದಲ್ಲಿ ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳು ರಚಿಸಿದ ಕ್ಲೇ ಮಾಡೆಲಿಂಗ್, ಜೇಡಿ ಮಣ್ಣಿನ ಕಲಾಕೃತಿಗಳೂ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಪ್ರಾಣಿ ಮತ್ತು ಮನುಷ್ಯನ ಕಲಾಕೃತಿಗಳನ್ನು ಅರ್ಧ ಗಂಟೆಯಲ್ಲೇ ವಿದ್ಯಾರ್ಥಿಗಳು ಪೂರ್ಣಗೊಳಿಸುತ್ತಿದ್ದುದು ಕಲಾವಿದರ ಕೈಚಳಕವನ್ನು ಹೇಳುವಂತಿತ್ತು.
ಕರಾವಳಿ ಕಸುಬು
ಸಭಾಂಗಣದ ಮುಂಭಾಗದ ಆವರಣದಲ್ಲಿ ಕರಾವಳಿಯ ಸಾಂಪ್ರದಾಯಿಕ ಮೀನುಗಾರಿಕೆಯನ್ನು ಬಿಂಬಿಸುವ ದೋಣಿ ಹಾಗೂ ಮೀನುಗಾರ ಬಲೆ ಬೀಸಿ ಮೀನು ಹಿಡಿಯುವಂತೆ ಮಾಡಿದ ಚಿತ್ರ ಆಕರ್ಷಿತವಾಗಿತ್ತು. ಇಲ್ಲಿನ ಮುಖ್ಯ ಕಸುಬಾದ ಗದ್ದೆ ಬೇಸಾಯವನ್ನು ಅನಾವರಣಗೊಳಿಸುವ ಸಲುವಾಗಿ ಭತ್ತದ ತುಪ್ಪೆಯ ಮಾದರಿಯನ್ನು ಪ್ರದರ್ಶನಕ್ಕಿಡಲಾಗಿತ್ತು.
ಪುಸ್ತಕ ಪ್ರದರ್ಶನ
ಕನ್ನಡ, ಇಂಗ್ಲಿಷ್, ಹಿಂದಿ ಸಹಿತ ವಿವಿಧ ಭಾಷೆಗಳಲ್ಲಿ ಬರೆಯಲಾಗಿರುವ ಪುಸ್ತಕಗಳನ್ನು ಪ್ರದರ್ಶನಕ್ಕಿಡಲಾಗಿತ್ತು. 15ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳು ಭಾಗವಹಿಸಿದ್ದವು.
ಅದ್ಭುತ ಕಾರ್ಯಕ್ರಮ
ಮಂಗಳೂರು ಲಿಟ್ ಫೆಸ್ಟ್ ಒಂದು ಅದ್ಭುತ ಕಾರ್ಯಕ್ರಮ. ಇಲ್ಲಿ ಕಲಾ ಪ್ರದರ್ಶನಕ್ಕೆ ಅವಕಾಶ ನೀಡಿದ ಕಾರ್ಯಕ್ರಮ ಆಯೋಜಕರಿಗೆ ಆಭಾರಿಯಾಗಿದ್ದೇನೆ. ನಮ್ಮ ಕಲಾ ಪ್ರದರ್ಶನದೊಂದಿಗೆ ಮಂಗಳೂರು ಭಾಗದ ವಿದ್ಯಾರ್ಥಿಗಳೂ ಕ್ಲೇ ಮಾಡೆಲಿಂಗ್ ಕಲಿಯುವ ಅವಕಾಶ ದೊರೆಯಿತು.
– ರವಿ ಗುನಗ, ಕಲಾವಿದ