ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ ವೈವಿಧ್ಯಮಯ ಗೂಡುದೀಪ, ಹಣತೆ
Team Udayavani, Nov 5, 2018, 12:00 PM IST
ಮಹಾನಗರ: ದೀಪಗಳ ಹಬ್ಬ ದೀಪಾವಳಿ ಆಚರಣೆಗೆ ಮಾರುಕಟ್ಟೆಯಲ್ಲಿ ಸಿದ್ಧತೆಗಳು ಆರಂಭವಾಗಿವೆ. ಹಣತೆ ಮತ್ತು ಗೂಡು ದೀಪಗಳು ದೀಪಾವಳಿಯ ಪ್ರಮುಖ ಆಕರ್ಷಣೆಯಾಗಿದ್ದು, ವಿವಿಧ ಮಾದರಿಯ ಹಣತೆ ಮತ್ತು ಗೂಡು ದೀಪಗಳ ಸಂಗ್ರಹ ಅಂಗಡಿ ಮಳಿಗೆಗಳಲ್ಲಿ ರಾರಾಜಿಸುತ್ತಿವೆ. ಆವೆ ಮಣ್ಣಿನಿಂದ ತಯಾರಿಸಿದ ಮತ್ತು ಪಿಂಗಾಣಿ ಹಣತೆಗಳು ಎಂಬ ಎರಡು ವಿಧದ ಹಣತೆಗಳು ಲಭ್ಯವಿವೆ. ಮಣ್ಣಿನ ಹಣತೆಗಳು ಸಾಂಪ್ರದಾಯಿಕವಾಗಿದ್ದು, ಪಿಂಗಾಣಿ ಹಣತೆಗಳು ಇತ್ತೀಚಿನ ಆವಿಷ್ಕಾರವಾಗಿದೆ. ಆವೆ ಮಣ್ಣಿನ ಹಣತೆಗಳ ಬೆಲೆ ಕಡಿಮೆ. ಪಿಂಗಾಣಿ ಹಣತೆಗಳು ತುಸು ದುಬಾರಿ.
ಮಂಗಳೂರಿನಲ್ಲಿ ಒಂದು ಕಾಲದಲ್ಲಿ ಕೆಲವೇ ಅಂಗಡಿಗಳಲ್ಲಿ ಹಣತೆಗಳು ಲಭ್ಯವಾಗುತ್ತಿದ್ದವು. ಇತ್ತೀಚಿನ ವರ್ಷಗಳಿಂದ ತಮಿಳುನಾಡಿನಿಂದಲೂ ಹಣತೆ ಗಳು ಸರಬರಾಜು ಆಗುತ್ತಿದ್ದು, ಹಾಗಾಗಿ ರಸ್ತೆ ಬದಿಗಳಲ್ಲಿ ಮತ್ತು ತಳ್ಳು ಗಾಡಿಗಳಲ್ಲಿ ಅವುಗಳ ಮಾರಾಟ ನಡೆಯುತ್ತಿದೆ. ಆವೆ ಮಣ್ಣಿನಿಂದ ತಯಾರಿಸಿದ ಒಂದು ಹಣತೆಗೆ 1 ರೂ. ನಿಂದ 5 ರೂ. ತನಕ ಇದೆ. ಪಿಂಗಾಣಿಯಿಂದ ತಯಾರಿಸಿದ ಹಣತೆಯ ಬೆಲೆ 2.50 ರಿಂದ 15 ರೂ. ತನಕ ಇದೆ. ಹಣತೆಗಳನ್ನು ಅಂದವಾಗಿ ಜೋಡಿಸಿದ ಸೇಟ್ಗಳು ಲಭ್ಯವಿದ್ದು, ಸೆಟ್ ಒಂದರ ಬೆಲೆ 130 ರೂ. ಗಳಿಂದ 200 ರೂ. ತನಕ ಇದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇದು ತನಕ ವ್ಯಾಪಾರ ಕಡಿಮೆ. ಜನರ ಕೈಯಲ್ಲಿ ಹಣ ಕಡಿಮೆಯಾಗಿರುವುದು ಇದಕ್ಕೆ ಕಾರಣ ಆಗಿರಬಹುದೆಂದು ಭಾವಿಸಲಾಗಿದೆ. ಮುಂದಿನ ಒಂದೆರಡು ದಿನಗಳಲ್ಲಿ ವ್ಯವಹಾರ ಕುದುರಬಹುದೆಂಬ ನಿರೀಕ್ಷೆ ಇದೆ ಎನ್ನುತ್ತಾರೆ ಆವೆ ಮಣ್ಣಿನ ಉತ್ಪನಗಳ ಮಾರಾಟಕ್ಕೆ ಸಂಬಂಧಿಸಿದ ಮಂಗಳೂರಿನ ಮೊದಲ ಸಂಸ್ಥೆ, 65 ವರ್ಷಗಳ ಹಿಂದೆ ಸ್ಥಾಪನೆಯಾದ ಪುರಭವನ ಬಳಿ ಇರುವ ಭಾರತ್ ಸಪ್ಲಾಯೀಸ್ನ ಮಾಲಕ ರವೀಂದ್ರ ಪ್ರಭು.
ಪಟಾಕಿಗಳು ದೀಪಾವಳಿಯ ಪ್ರಮುಖ ಆಕರ್ಷಣೆ ಅವಿಭಾಜ್ಯ ಅಂಗವೂ ಆಗಿದೆ. ಪಟಾಕಿಗಳ ಮಾರಾಟಕ್ಕೆ ಅಂಗಡಿಗಳು ಸಿದ್ಧವಾಗಿವೆ. ವಿವಿಧ ಮಾದರಿಯ ಆಕರ್ಷಕ ಗೂಡು ದೀಪಗಳು ಅಂಗಡಿಗಳಲ್ಲಿ ರಾರಾಜಿಸುತ್ತಿವೆ. ಅಂಗಡಿ ಮಳಿಗೆಗಳನ್ನು ಶೃಂಗರಿಸಲು ಬೇಕಾಗಿರುವ ಹೂವುಗಳ ಮಾರುಕಟ್ಟೆಗೆ ಬರಲಾರಂಭಿಸಿವೆ.