ಆಳ್ವಾಸ್ ಚಿತ್ರಸಿರಿ -2018 ರಾಜ್ಯಮಟ್ಟದ ಚಿತ್ರಕಲಾ ಶಿಬಿರಕ್ಕೆ ಚಾಲನೆ
Team Udayavani, Nov 11, 2018, 10:08 AM IST
ಮೂಡಬಿದಿರೆ: ನಮ್ಮ ಮನಸ್ಸನ್ನು ಅರಳಿಸುವ ಶಕ್ತಿ ಕಲೆಗಿದೆ. ಶಿಕ್ಷಣದ ಬುನಾದಿಯಾಗಿ ಚಿತ್ರಕಲೆಯನ್ನು ಪ್ರೋತ್ಸಾಹಿಸಿ ಅದಕ್ಕೆ ಗೌರವ ತಂದು ಕೊಡುವ ಕೆಲಸ ಆಳ್ವಾಸ್ ಸಂಸ್ಥೆಯಿಂದಾಗುತ್ತಿದೆ ಎಂದು ಉದ್ಯಮಿ ಬಿ.ಆರ್. ಸೋಮಯಾಜಿ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಆಳ್ವಾಸ್ ದೃಶ್ಯಕಲಾ ವಿಭಾಗದ ಆಶ್ರಯದಲ್ಲಿ ಶನಿವಾರ ಪುತ್ತಿಗೆಯ ಆಳ್ವಾಸ್ ಪ್ರೌಢಶಾಲಾ ಆವರಣದಲ್ಲಿ ಪ್ರಾರಂಭವಾದ “ಆಳ್ವಾಸ್ ಚಿತ್ರಸಿರಿ-2018′ ರಾಜ್ಯಮಟ್ಟದ ಚಿತ್ರಕಲಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು ಕಲಾವಿದರಿಗೆ ಬಣ್ಣದ ಪರಿಕರಗಳನ್ನು ವಿತರಿಸಿ ಮಾತನಾಡಿದರು.
ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ| ಕುರಿಯನ್, ಶಿಬಿರದ ಸಲಹಾ ಸಮಿತಿಯ ಸದಸ್ಯರುಗಳಾದ ಕೋಟಿ ಪ್ರಸಾದ್ ಆಳ್ವ, ಪುರುಷೋತ್ತಮ ಅಡ್ವೆ, ಹಿರಿಯ ಚಿತ್ರಕಲಾವಿದ ಗಣೇಶ್ ಸೋಮಯಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕ ಡಾ| ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು. ಶಿಬಿರ ನ.13ರ ವರೆಗೆ ನಡೆಯಲಿದೆ.
ಆಳ್ವಾಸ್ ವಿದ್ಯಾರ್ಥಿಸಿರಿ ಪ್ರಶಸ್ತಿ 2018 ಪ್ರಕಟ
ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ವಿದ್ಯಾರ್ಥಿ ಸಾಹಿತ್ಯ ಸಂಸ್ಕೃತಿ ಸಮ್ಮೇಳನ “ಆಳ್ವಾಸ್ ವಿದ್ಯಾರ್ಥಿಸಿರಿ 2018’ರ ಆಳ್ವಾಸ್ ವಿದ್ಯಾರ್ಥಿಸಿರಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ಹಿರಿಯ ಮಕ್ಕಳ ಸಾಹಿತಿ, ಕಲಬುರ್ಗಿಯ ಎ.ಕೆ. ರಾಮೇಶ್ವರ ಅವರಿಗೆ “ಆಳ್ವಾಸ್ ವಿದ್ಯಾರ್ಥಿಸಿರಿ ಗೌರವ ಪ್ರಶಸ್ತಿ’ ನೀಡಲಾಗುವುದು. ಮಕ್ಕಳ ರಂಗಭೂಮಿಗೆ ಸೇವೆ ಸಲ್ಲಿಸಿದ ವಿಟ್ಲದ ಸಮಸಾಂಪ್ರತಿ ತಂಡದ ನಿರ್ದೇಶಕ, ಮಕ್ಕಳ ರಂಗವಿನ್ಯಾಸಕಾರ ಮೂರ್ತಿ ದೇರಾಜೆ,ಮಕ್ಕಳ ವ್ಯಕ್ತಿತ್ವ ಸಂವರ್ಧನೆಗೆ ದುಡಿಯುತ್ತಿರುವ ಮಂಗಳೂರಿನ ಶಕ್ತಿನಗರದ ಸಾನಿಧ್ಯ ವಿಶೇಷ ಮಕ್ಕಳ ವಸತಿ ಶಾಲೆ ಹಾಗೂ ಬಾಲಪ್ರತಿಭೆ ಸದ್ಗುಣ ಐತಾಳ ಅವರನ್ನು ಆಳ್ವಾಸ್ ವಿದ್ಯಾರ್ಥಿಸಿರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.