ಇಂದು ಅಮಿತ್ ಶಾ ಮಂಗಳೂರಿಗೆ
Team Udayavani, Nov 14, 2018, 11:26 AM IST
ಮಂಗಳೂರು: ನಗರದಲ್ಲಿ ನ. 14ರಂದು ನಡೆಯುವ ಆರೆಸ್ಸೆಸ್ನ ದಕ್ಷಿಣ ಭಾರತದ ಬೈಠಕ್ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾಗವಹಿಸಲಿದ್ದಾರೆ.
ಬೆಂಗಳೂರಿನಿಂದ ಬುಧವಾರ ಸಂಜೆ ಹೊರಟು 5 ಗಂಟೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಅಮಿತ್ ಶಾ ಅವರು, ನೇರವಾಗಿ ಮಣ್ಣಗುಡ್ಡದಲ್ಲಿರುವ ಸಂಘನಿಕೇತನಕ್ಕೆ ತೆರಳಿ ಆರೆಸ್ಸೆಸ್ ಬೈಠಕ್ನಲ್ಲಿ ಭಾಗವಹಿಸುವರು. ಬಳಿಕ ಮಂಗಳೂರಿನಲ್ಲಿ ಖಾಸಗಿ ಹೊಟೇಲ್ನಲ್ಲಿ ವಾಸ್ತವ್ಯ ಹೂಡಲಿದ್ದು, ಗುರುವಾರ ಬೆಳಗ್ಗೆ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ತೆರಳುವರು.
ಅಮಿತ್ ಶಾ ಅವರ ಜತೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಸಹಿತ 5 ಮಂದಿ ಪ್ರಮುಖ ನಾಯಕರು ಆಗಮಿಸುವ ಸಾಧ್ಯತೆಗಳಿವೆ. ಅಮಿತ್ ಶಾ ಅವರನ್ನು ಬಿಜೆಪಿ ಸಂಸದರು, ಶಾಸಕರು ಹಾಗೂ ಪಕ್ಷದ ಜಿಲ್ಲಾ ನಾಯಕರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಿದ್ದಾರೆ.
ಆರೆಸ್ಸೆಸ್ ಸಂಘಟನೆ ಕಾರ್ಯಯೋಜನೆಗಳ ಬಗ್ಗೆ ಚರ್ಚೆಗೆ ಪ್ರಮುಖವಾಗಿರುವ ಈ ಬೈಠಕ್ ಈಗ ದೇಶದಲ್ಲಿ ಎರಡು ಕಡೆ ಆಯೋಜನೆಗೊಂಡು ನಡೆಯುತ್ತಿದೆ. ಉತ್ತರ ಭಾರತದ ಬೈಠಕ್ವಾರಾಣಸಿಯಲ್ಲಿ ಹಾಗೂ ದಕ್ಷಿಣ ಭಾರತದ ಬೈಠಕ್ ಮಂಗಳೂರಿನಲ್ಲಿ ನಡೆಯುತ್ತಿದೆ. ಮಂಗಳೂರಿನಲ್ಲಿ ನ. 10ರಿಂದ ದಕ್ಷಿಣ ಭಾರತದ ಬೈಠಕ್
ಆರಂಭಗೊಂಡಿದ್ದು, ನ. 15ರ ವರೆಗೆ ನಡೆಯುತ್ತದೆ. ಇದರಲ್ಲಿ ಆರೆಸ್ಸೆಸ್ ಕಾರ್ಯವಾಹ ಭಯ್ನಾಜಿ (ಸುರೇಶ್ ಜೋಶಿ) ಸಹಿತ ಪ್ರಮುಖ ನಾಯಕರು ಭಾಗವಹಿಸುತ್ತಿದ್ದಾರೆ. ಆರೆಸ್ಸೆಸ್ ರಾಷ್ಟ್ರ ಮಟ್ಟದ ಬೈಠಕ್ನಲ್ಲಿ ಬಿಜೆಪಿ
ರಾಷ್ಟ್ರೀಯಾಧ್ಯಕ್ಷರು ಭಾಗ ವಹಿಸುವುದು ಶಿಷ್ಟಾಚಾರ.
ಮೂರನೇ ಭೇಟಿ
ಅಮಿತ್ ಶಾ ಅವರು ಮಂಗಳೂರಿಗೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಫೆ. 19ರಂದು ಅವರು ದ.ಕ. ಜಿಲ್ಲೆಗೆ ಆಗಮಿಸಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಾತ್ರಿ ವಾಸ್ತವ್ಯ ಹೂಡಿ
ದ್ದರು. ಫೆ. 20 ಹಾಗೂ 21ರಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಪಕ್ಷದ ವ್ಯಾಪಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಬಳಿಕ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮೇ 8ರಂದು ಮಂಗಳೂರು, ಮಂಗಳೂರು ದಕ್ಷಿಣ, ಹಾಗೂ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮಧ್ಯಾಹ್ನದಿಂದ ಸಂಜೆಯವರೆಗೆ ಮೂರು ಕಡೆ ರೋಡ್ಶೋ ನಡೆಸಿದ್ದರು.
ಆರೆಸ್ಸೆಸ್ ಬೈಠಕ್ನಲ್ಲಿ ಬಿಜೆಪಿ ರಾಷ್ಟ್ರೀಯಾಧ್ಯಕ್ಷರು ಭಾಗವಹಿ ಸುವುದು ಕ್ರಮವಾದರೂ ಲೋಕಸಭಾ ಚುನಾವಣೆಯ ನಿಟ್ಟಿನಲ್ಲಿ ಬಿಜೆಪಿಯ ಕಾರ್ಯತಂತ್ರಗಳಿಗೆ ಕೆಲವು ಮಾರ್ಗ ದರ್ಶನಗಳು ಆರೆಸ್ಸೆಸ್ನಿಂದ ಲಭಿಸಲಿದೆ ಎನ್ನಲಾಗಿದೆ.