ಕಾಂಕ್ರೀಟ್ ಕಾಮಗಾರಿಗೆ ನ. 19ಕ್ಕೆ ಚಾಲನೆ: ಶಾಸಕ ವೇದವ್ಯಾಸ
Team Udayavani, Nov 18, 2018, 12:07 PM IST
ಮಹಾನಗರ: ನಗರದ ಕುಲಶೇಖರದಲ್ಲಿರುವ ಕೆಎಂಎಫ್ ಡೇರಿಯಿಂದ ಕಾರ್ಕಳಕ್ಕೆ ಹೋಗುವ ಮುಖ್ಯ ರಸ್ತೆಯ ತನಕದ ರಸ್ತೆಗೆ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ಕಾಮಗಾರಿಗೆ ನ. 19ರಂದು ಚಾಲನೆ ಸಿಗಲಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದ್ದಾರೆ.
ಕಾಂಕ್ರೀಟ್ ಕಾಮಗಾರಿ ನಡೆಯಲಿರುವ ಕುಲಶೇಖರದ ಪ್ರದೇಶಕ್ಕೆ ಭೇಟಿಕೊಟ್ಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದ ಜನರ ಬಹುಕಾಲದ ಬೇಡಿಕೆ ಈಗ ಈಡೇರಲಿದೆ. ನಾನು ಚುನಾವಣಾ ಪ್ರಚಾರಕ್ಕೆ ಈ ಭಾಗಕ್ಕೆ ಬಂದಿದ್ದಾಗ ಜನರು ಈ ಬೇಡಿಕೆ ಇಟ್ಟಿದ್ದರು ಎಂದು ತಿಳಿಸಿದರು. ಒಟ್ಟು 500 ಮೀಟರ್ ಉದ್ದ, ಇಪ್ಪತ್ತನಾಲ್ಕು ಅಡಿ ವಿಸ್ತೀರ್ಣದ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ನಡೆಯಲಿದ್ದು, ಇದಕ್ಕೆ ಒಂದು ಕೋಟಿ ರೂ. ವೆಚ್ಚವಾಗಲಿದೆ. ಬಹಳ ಜನನಿಬಿಡ ರಸ್ತೆಯಾಗಿರುವುದರಿಂದ ಮೊದಲ ಹಂತದಲ್ಲಿ ಹನ್ನೆರಡು ಅಡಿ ವಿಸ್ತೀರ್ಣಕ್ಕೆ ಕಾಮಗಾರಿ ನಡೆಯಲಿದ್ದು, ಅದು ಮುಗಿದ ಬಳಿಕ ಇನ್ನೊಂದು ಹಂತದಲ್ಲಿ ಉಳಿದ ಹನ್ನೆರಡು ಅಡಿ ವಿಸ್ತೀರ್ಣಕ್ಕೆ ಕಾಂಕ್ರೀಟ್ ಹಾಕಲಾಗುವುದು ಎಂದರು.
ಗ್ರಾಮಸ್ಥರು ಮತ್ತು ಕೆಎಂಎಫ್ ಡೇರಿಯ ಅಧಿಕಾರಿಗಳಿಂದ ಸಲಹೆ ಪಡೆದು ಪಿಡಬ್ಲ್ಯುಡಿ ಇಲಾಖೆಯ ಎಂಜಿನಿಯರ್ ಗಳು ಸೂಕ್ತ ರೀತಿಯಲ್ಲಿ ಕಾಮಗಾರಿಯನ್ನು ಶೀಘ್ರದಲ್ಲಿ ಮುಗಿಸಬೇಕು ಎಂದು ಸೂಚನೆ ಕೊಟ್ಟಿರುವುದಾಗಿ ತಿಳಿಸಿದರು. ಶಾಸಕರೊಂದಿಗೆ ಬಿಜೆಪಿ ಮುಖಂಡರಾದ ವಸಂತ ಜೆ. ಪೂಜಾರಿ, ಭಾಸ್ಕರ ಚಂದ್ರ ಶೆಟ್ಟಿ, ರಮೇಶ ಕಂಡೆಟ್ಟು, ಅಜಯ್, ಯೋಗೀಶ್, ಹರಿಣಿ, ರಾಮಚಂದ್ರ ಚೌಟ, ನವೀನ್, ಪ್ರೇಮ್ ಮತ್ತು ಕೆಎಂಎಫ್ ಅಧಿಕಾರಿಗಳು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
ಜನರ ಸಹಕಾರ ಅಗತ್ಯ
ಕಾಮಗಾರಿ ನಡೆಯುವಾಗ ವಾಹನ ಸಂಚಾರಕ್ಕೆ ಒಂದಿಷ್ಟು ದಿನ ಅಡಚಣೆ ಆಗಬಹುದು. ಆದ್ದರಿಂದ ಜನ ಅಭಿವೃದ್ಧಿಯನ್ನು ದೂರದೃಷ್ಟಿಯಲ್ಲಿಟ್ಟು ನಡೆಯಲಿರುವ ಕಾಮಗಾರಿ ಆದ ಕಾರಣ ಸಹಕರಿಸಬೇಕು ಎಂದು ಶಾಸಕರು ಹೇಳಿದರು.