ವಿಭಿನ್ನ ಸಾಮರ್ಥ್ಯದ ಮಕ್ಕಳ ಮನದಲ್ಲಿ ಹಬ್ಬದ ಕಳೆ
Team Udayavani, Jan 14, 2019, 5:31 AM IST
ಮಹಾನಗರ: ವಿಭಿನ್ನ ಸಾಮರ್ಥ್ಯದ ಮಕ್ಕಳಲ್ಲಿ ಹಬ್ಬದ ಕಳೆ ಮೂಡಿತ್ತು. ಕೆಲವರು ಕುದುರೆ ಸವಾರಿ ಮಾಡಿ ಖುಷಿಪಟ್ಟರೆ ಮತ್ತು ಕೆಲವರು ಕೀಲುಕುದುರೆ ಆಟ ಆಡಿದರು. ಐಸ್ಕ್ಯಾಂಡಿ ತಿನ್ನುತ್ತಾ, ರುಚಿಯಾದ ತಿಂಡಿ, ಪಾನಕ ಸವಿದರು. ಈ ಸನ್ನಿವೇಶಕ್ಕೆ ಸಾಕ್ಷಿಯಾದದ್ದು ಸೇವಾಭಾರತಿಯ ಅಂಗ ಸಂಸ್ಥೆ ಆಶಾ ಜ್ಯೋತಿ ಸಂಸ್ಥೆಯ ವತಿಯಿಂದ ನಗರದ ಡೊಂಗರಕೇರಿ ಕೆನರಾ ಪ್ರೌಢಶಾಲೆಯಲ್ಲಿ (ಪ್ರಧಾನ) ರವಿವಾರ ನಡೆದ ‘ವಿಶಿಷ್ಟರಿಗಾಗಿ ವಿಶಿಷ್ಟ ಮೇಳ’. ಈ ಮೇಳ ವಿಶಿಷ್ಟ ಮಕ್ಕಳ ಪಾಲಿಗೆ ಎಲ್ಲಿಲ್ಲದ ಖುಷಿ ನೀಡಿತ್ತು.
ಕಾರ್ಯಕ್ರಮದ ಮಕ್ಕಳಿಗೆಗಾಗಿಯೇ ವಿವಿಧ ಸ್ಟಾಲ್ಗಳಿತ್ತು. ಅದರಲ್ಲಿ ತರಹೇವಾರಿ ತಿನಿಸುಗಳನ್ನು ಉಚಿತ ನೀಡಲಾಗುತ್ತಿತ್ತು. ಜ್ಯೂಸ್, ಬಾಳೆಹಣ್ಣು, ಚಕ್ಕುಲಿ, ಉಂಡೆ, ಪೋಡಿ, ಚರುಮುರಿ, ನೆಲಗಡಲೆ, ಐಸ್ಕ್ರೀಮ್, ಕಲ್ಲಂಗಡಿ, ಮಜ್ಜಿಗೆ, ಲಸ್ಸಿ, ಬೇಲ್ಪುರಿ, ಚಾಕಲೇಟ್ ರುಚಿ ಸವಿದರು. ಅಲ್ಲದೆ, ಕಣ್ಣಿಗೆ ಬಟ್ಟೆ ಕಟ್ಟಿ ವಸ್ತು ಗುರುತು ಮಾಡುವುದು, ಮೆಹಂದಿ ಇಡುವುದು, ಇಟ್ಟಿಗೆ ತೂಕ, ಡಬ್ಬಕ್ಕೆ ಗುರಿ ಸೇರಿದಂತೆ ಮತ್ತಿತರ ಆಟ, ಕುದುರೆ ಸವಾರಿ, ಕೀಲುಕುದುರೆ ಆಟ ಆಯೋಜಿಸಲಾಗಿತ್ತು.
ಪುಣ್ಯದ ಕೆಲಸ
ಕಾರ್ಯಕ್ರಮ ಉದ್ಘಾಟಿಸಿದ ಕಾರ್ಪೊ ರೇಶನ್ ಬ್ಯಾಂಕ್ ಮಂಗಳೂರಿನ ಪ್ರಧಾನ ವ್ಯವಸ್ಥಾಪಕ ವಿಜಯ್ ವಾಲಿಯ ಮಾತನಾಡಿ, ದಿವ್ಯಾಂಗರ ಸೇವೆ ಮಾಡುವ ಅವಕಾಶ ಸಿಗುವುದು ಪುಣ್ಯದ ಕೆಲಸ. ಬ್ಯಾಂಕಿಂಗ್ ಕ್ಷೇತ್ರ ಕೂಡ ವಿಕಲಾಂಗರಿಗೆ ಅನೇಕ ಯೋಜನೆಗಳನ್ನು ಪರಿಚಯಿಸುತ್ತಿದೆ ಎಂದರು.
ರೋಟರಿ ಕ್ಲಬ್ ಮಂಗಳೂರು ಕಾರ್ಯದರ್ಶಿ ಆರ್.ಕೆ. ಭಟ್ ಮಾತನಾಡಿ, ವಿಶಿಷ್ಟ ಚೇತನರನ್ನು ಸಮಾನತೆಯಿಂದ ಕಾಣಬೇಕು. ಇಂದಿನ ದಿನಗಳಲ್ಲಿ ತಂತ್ರಜ್ಞಾನ ಬೆಳವಣಿಗೆಯಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಅವಕಾಶಗಳು ದೊರಕುತ್ತಿದೆ ಎಂದು ವಿವರಿಸಿದರು. ಭಿನ್ನ ಸಾಮರ್ಥ್ಯದವರಾಗಿದ್ದು ಸಾಧನೆ ಮಾಡಿದ ಜಗದೀಶ್ ಪೂಜಾರಿ ಮತ್ತು ಭಿನ್ನ ಸಾಮರ್ಥ್ಯದವರಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಡಿ.ಎಸ್. ನಾಗರಾಜ್ಅವರನ್ನು ಸಮ್ಮಾನಿಸಲಾಯಿತು.
ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಕೃಷ್ಣರಾಜ್, ಸೇವಾಭಾರತಿ ಅಧ್ಯಕ್ಷೆ ಸುಮತಿ ಶೆಣೈ, ಖಜಾಂಚಿ ಕೆ. ವಿಶ್ವನಾಥ್ ಪೈ, ಸೇವಾಭಾರತಿ ಕಾರ್ಯದರ್ಶಿ ನಾಗರಾಜ್ ಭಟ್, ಟ್ರಸ್ಟಿ ಮುಕುಂದ್ ಕಾಮತ್, ಆಶಾಜ್ಯೋತಿ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ರಾವ್, ಕಾರ್ಯದರ್ಶಿ ಡಾ| ಮುರಳೀಧರ ನಾಯ್ಕ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಸಾವಿರಕ್ಕೂ ಹೆಚ್ಚಿನ ಮಂದಿ ಭಾಗಿ
ವಿಶಿಷ್ಟರಿಗಾಗಿ ವಿಶಿಷ್ಟ ಮೇಳದಲ್ಲಿ ಕೊಕ್ಕಡ, ಕೊೖಲದ ಎಂಡೋಸಲ್ಫಾನ್ ಪಾಲನಾ ಕೇಂದ್ರದ ವಿಶಿಷ್ಟ ಚೇತನರ ಸಹಿತ ನಗರದ ವಿವಿಧ ವಿಶಿಷ್ಟ ಚೇತನ ಸಂಘ ಸಂಸ್ಥೆಗಳ ಮಕ್ಕಳು, ಹೆತ್ತವರು, ತರಬೇತುದಾರರು, ಸಾರ್ವಜನಿಕರು ಸೇರಿ ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಮಂದಿ ಪಾಲ್ಗೊಂಡಿದ್ದರು. 25 ವರ್ಷಗಳಿಂದ ಮೇಳವನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಮೊದಲ ವರ್ಷ ಸುಮಾರು 25 ಮಂದಿಯಷ್ಟಿದ್ದ ದಿವ್ಯಾಂಗರು, 2018ರಲ್ಲಿ 800 ಮಂದಿ ಭಾಗವಹಿಸಿದ್ದರು.
ಪ್ರತಿಭೆ ಅನಾವರಣ
ವಿಶಿಷ್ಟ ಚೇತನ ಮಕ್ಕಳು ತಿಂಡಿ, ಆಟದ ಜತೆಗೆ ಪ್ರತಿಭಾ ಪ್ರದರ್ಶನ ನೀಡುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದರು. ಅದರಲ್ಲಿಯೂ ನೃತ್ಯ, ಸಂಗೀತ ಸೇರಿದಂತೆ ಮತ್ತಿತರ ಕಲಾಪ್ರದರ್ಶನವನ್ನು ಬೀರುವ ಮೂಲಕ ನಾವೇನೂ ಕಮ್ಮಿ ಇಲ್ಲ ಎಂದು ಸಾಬೀತು ಪಡಿಸಿದರು.
ಖುಷಿಯಾಗುತ್ತಿದೆ
ವಿಶಿಷ್ಟರಿಗಾಗಿ ವಿಶಿಷ್ಟ ಮೇಳದಲ್ಲಿ ಕೆಲವು ವರ್ಷಗಳಿಂದ ಪಾಲ್ಗೊಳ್ಳು ತ್ತಿದ್ದೇವೆ. ಖುಷಿಯಾಗುತ್ತಿದೆ. ಮೇಳದಲ್ಲಿ ಕುದುರೆ ಸವಾರಿ, ಕೀಲುಕುದುರೆ ಆಟ ಆಡಿದ್ದೇನೆ. ಜ್ಯೂಸ್ ಸೇರಿದಂತೆ ಮತ್ತಿತರ ತಿನಿಸು ತಿಂದಿದ್ದೇನೆ.
– ಸ್ಮಿತಾ ಕೋಟ್ಯಾನ್
ಅವಕಾಶ ಕಡಿಮೆ
ಈ ಮೇಳದಲ್ಲಿ ಪಾಲ್ಗೊಂಡು ಮನಸ್ಸಿಗೆ ಖುಷಿ ಸಿಗುತ್ತದೆ. ನಮ್ಮಂತಹ ವಿಶಿಷ್ಟ ಚೇತನರಿಗೆ ಅವಕಾಶಗಳು ತುಂಬಾ ಕಡಿಮೆ. ಸಂಘ – ಸಂಸ್ಥೆಗಳು ಸೇರಿ ಕಾರ್ಯಕ್ರಮ ಆಯೋಜಿಸಿದ್ದು ಸಂತೋಷ ತಂದಿದೆ.
ಮನು ಹಿರೇಮಠ