ಜಲ ಪ್ರವಾಸೋದ್ಯಮಕ್ಕೆ ಹೊಸ ಸಾಧ್ಯತೆ ತೆರೆದ ನದಿ ಉತ್ಸವ
Team Udayavani, Jan 15, 2019, 6:35 AM IST
ಮಹಾನಗರ: ನಗರದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಎರಡು ದಿನಗಳ ನದಿ ಉತ್ಸವ (ರಿವರ್ ಫೆಸ್ಟ್) ಪ್ರವಾಸೋದ್ಯಮದ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ನೆರೆಯ ಕೇರಳ, ಗೋವಾ ರಾಜ್ಯಗಳಂತೆ ಮಂಗಳೂರು ಹಾಗೂ ಸುತ್ತಮುತ್ತಲಿನ ನದಿ, ಹಿನ್ನೀರು ತಾಣಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸಲು ಜಿಲ್ಲಾಡಳಿತಕ್ಕೆ ಉತ್ಸಾಹ ತುಂಬಿದೆ.
ಈ ಉತ್ಸವ ಮಂಗಳೂರಿನ ಪ್ರವಾಸೋದ್ಯಮಕ್ಕೆ ಹೊಸ ಮುನ್ನುಡಿ ಬರೆದಿದೆ. ಈಗ ಇನ್ನಷ್ಟು ವ್ಯಾಪಕಗೊಳಿಸುವ ಕೆಲಸವಾಗಬೇಕಿದೆ ಎಂಬುದು ಪ್ರವಾಸಿಗರ ಅಭಿಪ್ರಾಯ. ನೇತ್ರಾವತಿ ನದಿಯಲ್ಲಿ ಅಡ್ಯಾರ್ನಿಂದ ಅಳಿವೆ ಬಾಗಿಲುವರೆಗಿನ ಮತ್ತು ಫಲ್ಗುಣಿ ನದಿ ಹರಿಯುತ್ತಿರುವ ಗುರುಪುರದಿಂದ ತಣ್ಣೀರು ಬಾವಿವರೆಗಿನ ಪ್ರದೇಶದ ಹಲವೆಡೆ ನದಿಯ ಇಕ್ಕೆಲಗಳಲ್ಲಿರುವ ಹಿನ್ನೀರಿನ ಸುಂದರ ತಾಣಗಳಿದ್ದು, ಬೋಟ್ಹೌಸ್ ಇತ್ಯಾದಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಲು ಅವಕಾಶ ತೆರೆದಂತಾಗಿದೆ. ಕುದ್ರುಗಳೆಂದು ಕರೆಯಲ್ಪಡುವ ಕಿರು ದ್ವೀಪಗಳನ್ನೂ ಅಭಿವೃದ್ಧಿಪಡಿಸಬಹುದಾಗಿದೆ. ಕೇಂದ್ರ ಸರಕಾರದ ಪರಿಷ್ಕೃತ ಸಿಆರ್ಝಡ್ ನಿಯಮ ಸಾಗರ ಪ್ರವಾಸೋದ್ಯಮಕ್ಕೆ ಪೂರಕವಾಗಿ ಕೆಲ ರಿಯಾಯಿತಿ ನೀಡಿರುವುದರಿಂದ ಬಂಗ್ರಕುಳೂರಿನಲ್ಲಿ ನದಿಗೆ ತಾಗಿಕೊಂಡ 23 ಎಕ್ರೆ ಸರಕಾರಿ ಭೂಮಿಯನ್ನು ಅತ್ಯುತ್ತಮ ಜಲ ಪ್ರವಾಸಿ ತಾಣವಾಗಿಸಬಹುದು.
ಪ್ರಕ್ರಿಯೆಗಳಿಗೆ ವೇಗ ಅಗತ್ಯ
ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಫಲ್ಗುಣಿ, ನೇತ್ರಾವತಿ ನದಿ ಪಾತ್ರದಲ್ಲಿ ಇಪ್ಪತ್ತು ಅಂತಾರಾಷ್ಟ್ರೀಯ ಮಾದರಿ ಜೆಟ್ಟಿ ನಿರ್ಮಿಸಲು ಜಿಲ್ಲಾಡಳಿತ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ತಲಾ 1.5 ಕೋ.ರೂ. ವೆಚ್ಚದಲ್ಲಿ ಜೆಟ್ಟಿಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಗುರಿಯಿದೆ. ಈ ಹಿನ್ನೆಲೆಯಲ್ಲೇ ನದಿ ಉತ್ಸವ ಪರಿಚಯಿಸಲಾಗಿದೆ ಎಂಬುದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ರ ಅಭಿಪ್ರಾಯ. ಪ್ರಸ್ತಾವನೆಗೆ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಅವರು ಸ್ಪಂದಿಸುವ ಭರವಸೆ ನೀಡಿದ್ದಾರೆ ಎನ್ನುತ್ತಾರೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್. ಇಡೀ ಪ್ರಕ್ರಿಯೆಗೆ ವೇಗ ಕೊಡಬೇಕಾದ ಅಗತ್ಯವಿದೆ ಎಂಬುದು ಪ್ರವಾಸಿಗರ ಅಭಿಮತ.
ಆರ್ಥಿಕತೆಗೆ ಉತ್ತೇಜನ
ಹಿನ್ನೀರು ಪ್ರವಾಸೋದ್ಯಮ ಸ್ಥಳೀಯ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡಲಿದೆ. ಈ ಉತ್ಸವದಲ್ಲೇ ಬೋಟುಗಳ ಸಂಚಾರದಿಂದ ದಿನವೊಂದಕ್ಕೆ ಸುಮಾರು ಒಂದೂವರೆ ಲಕ್ಷ ರೂ. ವರೆಗೆ ಆದಾಯ ಸಂಗ್ರಹವಾಗಿದೆ. ಜೆಟ್ಸೆಕಿ, ಸ್ಪೀಡ್ಬೋಟುಗಳಿಗೆ , ಫೆರಿಗಳಿಗೆ ದೊರೆತ ಜನಸ್ಪಂದನೆ ಇಲ್ಲಿ ಇದಕ್ಕೂ ಅವಕಾಶಗಳಿವೆ ಎಂಬುದನ್ನು ತೋರಿಸಿಕೊಟ್ಟಿದೆ. ಆಹಾರ ಮಳಿಗೆಗಳು, ಕರಕುಶಲ ವಸ್ತುಗಳ ಮಳಿಗೆಗಳಲ್ಲೂ ವ್ಯಾಪಾರ ಚೆನ್ನಾಗಿತ್ತು. ಇಲ್ಲಿ ಮಳಿಗೆ ಹಾಕಿದವರು ಬಹುತೇಕ ಮಂದಿ ಸ್ಥಳೀಯರು. ಅದರಲ್ಲೂ ಮಹಿಳೆಯರು ಹಾಗೂ ಸಣ್ಣ ವ್ಯಾಪಾರದವರಿಗೆ ಉಚಿತವಾಗಿ ನೀಡಲಾಗಿತ್ತು.
ಕೇವಲ 25 ದಿನಗಳ ತಯಾರಿ
ಉತ್ಸವಕ್ಕೆ ನಡೆದದ್ದು ಕೇವಲ 25 ದಿನಗಳ ತಯಾರಿ. ಜತೆಗೆ ಎಲ್ಲವನ್ನೂ ನಿರ್ವಹಿಸಿದ್ದು ವಿವಿಧ ಇಲಾಖೆಗಳು. ಯಾವುದೇ ಖಾಸಗಿ ಏಜೆನ್ಸಿಗೆ ಗುತ್ತಿಗೆ ನೀಡಿರಲಿಲ್ಲ. ವಿವಿಧ ಕ್ಷೇತ್ರಗಳಲ್ಲಿನ ಆರು ಜನರ ಕೋರ್ ಕಮಿಟಿಯ ಸಲಹೆಯಂತೆ ದೀಪಾಲಂಕಾರದಿಂದ ಹಿಡಿದು ಎಲ್ಲವನ್ನೂ ನಡೆಸಲಾಯಿತು.
ಜಿಲ್ಲಾಧಿಕಾರಿ ಕಮಿಟಿ ಅಧ್ಯಕ್ಷರಾಗಿದ್ದರು. ಯತೀಶ್ ಬೈಕಂಪಾಡಿ, ವಿವೇಕ್ ಆಳ್ವ , ನಂದ ಕಿಶೋರ್, ಗೌರವ್ ಹೆಗ್ಡೆ , ಚಿತ್ರ ಕಲಾವಿದ ಪುರುಷೋತ್ತಮ ಅಡ್ವೆ , ಅಪರ ಜಿಲ್ಲಾಧಿಕಾರಿ ಕುಮಾರ್, ಡಿಸಿಪಿ ಉಮಾಪ್ರಶಾಂತ್, ಪ್ರವಾಸೋದ್ಯಮ ಇಲಾಖೆಯ ಉದಯ ಶೆಟ್ಟಿ ಸದಸ್ಯರಾಗಿದ್ದರು.
ಫಲ್ಗುಣಿ ನದಿಯಲ್ಲಿ ಬೋಟ್ಗಳಿಗೆ ಜೆಟ್ಟಿಗಳಿರಲಿಲ್ಲ. ಮೂರು ಕಡೆ ತಾತ್ಕಾಲಿಕ ಜೆಟ್ಟಿಯನ್ನು ನಿರ್ಮಿಸಬೇಕಿತ್ತು. ಸುಮಾರು ಎರಡೂವರೆ ಕಿ.ಮೀ. ನದಿ ದಂಡೆಯನ್ನು ಸ್ವಚ್ಛಗೊಳಿಸಬೇಕಿತ್ತು. ಸೀಮಿತ ಅವಧಿಯೊಳಗೆ ಇಲಾಖೆಗಳ ಸಂಘಟನೆಯಿಂದ ಎಲ್ಲ ಸವಾಲುಗಳನ್ನೂ ನಿಭಾಯಿಸಲಾಗಿದೆ.
ಗಮನ ಸೆಳೆಯುವಲ್ಲಿ ಯಶಸ್ವಿ
ಉತ್ಸವಕ್ಕೆ ಸಿಕ್ಕ ಜನಸ್ಪಂದನೆ ಜಲಪ್ರವಾಸೋದ್ಯಮಕ್ಕಿರುವ ವಿಫುಲ ಅವಕಾಶಗಳನ್ನು ತೆರೆದಿಟ್ಟಿದೆ. ಇದನ್ನು ಅಭಿವೃದ್ಧಪಡಿಸಲು ಶಾಶ್ವತ ಮತ್ತು ಸುಸಜ್ಜಿತ ಜೆಟ್ಟಿಗಳ ನಿರ್ಮಾಣ ಸಂಬಂಧ ಪ್ರಸ್ತಾವನೆಗಳ ನ್ನು ಸರಕಾರಕ್ಕೆ ಸಲ್ಲಿಸಿದೆ.
– ಶಶಿಕಾಂತ್, ದ.ಕನ್ನಡ ಜಿಲ್ಲಾಧಿಕಾರಿ
20 ಸಾವಿರಕ್ಕೂ ಅಧಿಕ ಮಂದಿ ಭೇಟಿ
ಮಂಗಳೂರು ರಿವರ್ ಫೆಸ್ಟ್ ಜಿಲ್ಲಾಧಿಕಾರಿ ಶಶಿಕಾಂತ್ ಅವರ ಕನಸಿನ ಕೂಸು. ತಮ್ಮ ಕನಸನ್ನು ನನಸಾಗಿಸುವಲ್ಲಿ ಯು.ಟಿ. ಖಾದರ್ ಬೆಂಬಲ ಪಡೆದಿದ್ದರು. ಅದರಂತೆ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರ ಇಲಾಖೆಯಿಂದ 25 ಲಕ್ಷ ರೂ. ಅನುದಾನ ಲಭಿಸಿತ್ತು. ಬೋಟ್ ಗಳಲ್ಲೇ ಸುಮಾರು 15 ಸಾವಿರಕ್ಕೂ ಹೆಚ್ಚು ಮಂದಿ ಸಂಚರಿಸಿದ್ದಾರೆಂದು ಅಂದಾಜಿಸಲಾಗಿದೆ. ಸೀಮಿತ ಹಣದಲ್ಲೇ ಅರ್ಥಪೂರ್ಣವಾದ ಉತ್ಸವ ನಡೆಸಲಾಗಿದೆ ಎಂಬುದು ಸಾರ್ವಜನಿಕ ವಲಯದ ಅಭಿಪ್ರಾಯ.
ಹೊಸ ಆರಂಭ
ಈ ಉತ್ಸವ ಮಂಗಳೂರಿನ ನದಿಗಳಲ್ಲಿ ಹಿನ್ನೀರು ಪ್ರವಾಸೋದ್ಯಮಕ್ಕೆ ಹೊಸ ಆರಂಭ ನೀಡಿದೆ. ಫಲ್ಗುಣಿ, ನೇತ್ರಾವತಿ ನದಿಗಳು ಜಲ ಪ್ರವಾಸೋದ್ಯಕ್ಕೆ ಅಭಿವೃದ್ಧಿಗೆ ಅತ್ಯಂತ ಸೂಕ್ತ ತಾಣ. ಇದಕ್ಕೆ ಪೂರಕವಾಗಿ ಸುಸಜ್ಜಿತ ಜೆಟ್ಟಿಗಳು ನಿರ್ಮಾಣವಾಗಬೇಕಾಗಿದೆ.
ಯತೀಶ್ ಬೈಕಂಪಾಡಿ,
ನದಿ ಉತ್ಸವ ಕೋರ್ ಕಮಿಟಿ ಸದಸ್ಯ
ನಿರೀಕ್ಷೆಗೂ ಮೀರಿದ ಯಶಸ್ಸು
ಮಂಗಳೂರು ಸುಂದರ ಹಿನ್ನೀರು ತಾಣಗಳು, ಬೀಚ್ಗಳನ್ನು ಹೊಂದಿವೆ. ಇದು ಬ್ರಾಂಡ್ ಮಂಗಳೂರಿನ ಪ್ರಮುಖ ಅಂಶಗಳಾಗಬೇಕಿದೆ. ನದಿ ಉತ್ಸವ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ.
– ವಿವೇಕ್ ಆಳ್ವ,
ನದಿ ಉತ್ಸವ ಕೋರ್ ಕಮಿಟಿ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು