ಬಂಗಾರಪ್ರಿಯರಿಗೆ ಆಘಾತ; ಶೇ. 50ರಷ್ಟು ವ್ಯಾಪಾರ ಕುಸಿತ
Team Udayavani, Jan 22, 2019, 12:30 AM IST
ಮಂಗಳೂರು: ಕಳೆದೊಂದು ತಿಂಗಳಿಂದ ಬಂಗಾರ ಪ್ರಿಯರಿಗೆ ಮೇಲಿಂದ ಮೇಲೆ ಆಘಾತ ಉಂಟಾಗುತ್ತಿದೆ. ಕಾರಣ ದಿನೇದಿನೇ ದಾಖಲೆ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ. ಗ್ರಾಂವೊಂದಕ್ಕೆ 3 ಸಾವಿರ ರೂ. ಗಡಿ ದಾಟಿರುವುದು ಚಿನ್ನಪ್ರಿಯರ ನಿದ್ದೆಗೆಡಿಸಿದ್ದರೆ, ಖರೀದಿಗಾರರಿಲ್ಲದೆ ಶೇ. 50ರಷ್ಟು ವ್ಯಾಪಾರ ಕುಸಿತ ಕಂಡು ವ್ಯಾಪಾರಿಗಳೂ ಕಂಗಾಲಾಗಿದ್ದಾರೆ.
ಜಾಗತಿಕ ಮಟ್ಟದಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗಿರುವುದು ಹಾಗೂ ರೂಪಾಯಿ ಸಹಿತ ವಿವಿಧ ದೇಶಗಳ ಕರೆನ್ಸಿ ಮೌಲ್ಯ ಕುಸಿತ ಚಿನ್ನದ ಬೆಲೆ ಏರಿಕೆಯಾಗಲು ಕಾರಣ. ಅಲ್ಲದೆ ಆಮದು ಮತ್ತು ರಫ್ತಿನಲ್ಲಿ ಅಸಮತೋಲನ ಉಂಟಾಗಿ ರೂಪಾಯಿ ಮೌಲ್ಯ ಕಡಿಮೆ ಯಾಗಿರುವುದೂ ಚಿನ್ನದ ಬೆಲೆಯಲ್ಲಿ ದಾಖಲೆ ಏರಿಕೆಗೆ ಕಾರಣ ಎಂದು ಸ್ವರ್ಣ ವ್ಯಾಪಾರಿಗಳು ಹಾಗೂ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಡಿಸೆಂಬರ್ನಲ್ಲಿ ಗ್ರಾಂಗೆ ಸುಮಾರು 2985 ರೂ. ವರೆಗೆ ಇದ್ದ 22 ಕ್ಯಾರೆಟ್ ಚಿನ್ನದ ಬೆಲೆ, ಜನವರಿ 3ರಂದು 3,005 ರೂ.ಗೆ ತಲುಪಿತ್ತು. ಬಳಿಕ ಕೆಲವೇ ರೂ. ಕುಸಿತ ಕಂಡಿದ್ದ ಬೆಲೆ ಜ. 10ರ ವೇಳೆಗೆ 3,030 ರೂ.ಗಳಾಗಿತ್ತು. ಆನಂತರ ನಿರಂತರವಾಗಿ ಬೆಲೆ ಏರುತ್ತಲೇ ಹೋಗಿದೆ. ಸದ್ಯ 24 ಕ್ಯಾರೆಟ್ ಚಿನ್ನದ ದರ 3,339 ರೂ.ಗಳಾಗಿವೆ ಎಂದು ಜಿಲ್ಲಾ ಸ್ವರ್ಣ ವ್ಯಾಪಾರಿಗಳ ಸಂಘದಿಂದ ಮಾಹಿತಿ ಲಭಿಸಿದೆ.
ಆಮದು ಹೆಚ್ಚಳ ಕಾರಣ?
ಪ್ರಮುಖವಾಗಿ ಭಾರತವು ಸ್ವಿಟ್ಜರ್ಲ್ಯಾಂಡ್, ಕೊಲ್ಲಿ ಹಾಗೂ ದಕ್ಷಿಣಆಫ್ರಿಕಾದಿಂದ ಚಿನ್ನ ಆಮದು ಮಾಡಿಕೊಳ್ಳುತ್ತವೆ. ದೇಶೀಯ ಮಟ್ಟದಲ್ಲಿ ಉತ್ಪಾದನೆ ಕಡಿಮೆಯಾಗಿ ಆಮದು ಮಾಡಿ ಕೊಳ್ಳುವುದು ಹೆಚ್ಚಿರುವುದು ಮತ್ತು ರಫ್ತಿನ ಪ್ರಮಾಣ ಇಳಿಮುಖ ವಾಗುವುದರಿಂದ ಆಮದು-ರಫ್ತಿನ ನಡುವೆ ಅಸಮತೋಲನ ಏರ್ಪಟ್ಟು ರೂಪಾಯಿ ಮೌಲ್ಯ ಕುಸಿತಗೊಳ್ಳುತ್ತದೆ. ಇದು ಮತ್ತು ಚಿನ್ನಕ್ಕೆ ಬೇಡಿಕೆ ಹೆಚ್ಚಿರುವುದೂ ಬಂಗಾರ ದರ ಏರಿಕೆಗೆ ಕಾರಣ ಎನ್ನುತ್ತಾರೆ ಆರ್ಥಿಕ ಸಲಹೆಗಾರ ಸಿಎ ಎಸ್.ಎಸ್. ನಾಯಕ್. ಜಾಗತಿಕ ಮಟ್ಟದಲ್ಲಿ ಆರ್ಥಿಕ ಅನಿಶ್ಚಿತತೆ ಉಂಟಾಗುತ್ತಿರುವುದರಿಂದ ಚಿನ್ನದ ಮೇಲೆ ಹೂಡಿಕೆ ಮಾಡುವುದೇ ಸುರಕ್ಷಿತ ಎಂಬ ಭಾವನೆಯಲ್ಲಿ ಚಿನ್ನ ಖರೀದಿಗೆ ಮುಗಿಬಿದ್ದಿರುವುದೂ ಚಿನ್ನದ ದರ ಹಠಾತ್ ಏರಿಕೆಯಾಗಲು ಕಾರಣವಾಗಿರಬಹುದು ಎಂದು ಅವರು ವಿಶ್ಲೇಷಿಸುತ್ತಾರೆ.
ವಿವಿಧ ದೇಶಗಳ ಕರೆನ್ಸಿ ಮೌಲ್ಯ ಕುಸಿದಿರುವುದು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಕಳೆದ ಎರಡು ತಿಂಗಳಿಂದ ಸುಮಾರು 200 ರೂ.ಗಳಿಗೂ ಹೆಚ್ಚು ಬೆಲೆ ಏರಿಕೆಯಾಗಿದೆ. ಪುಷ್ಯ ಮಾಸದ ಹಿನ್ನೆಲೆಯಲ್ಲಿ ಚಿನ್ನ ಖರೀದಿಸುವವರ ಸಂಖ್ಯೆ ಇಳಿಮುಖ ವಾಗಿರುವುದರಿಂದ ವ್ಯಾಪಾರದ ಮೇಲೆಯೂ ಪರಿಣಾಮ ಬೀರಿದೆ.
– ಪ್ರಶಾಂತ್ ಶೇಟ್, ಕಾರ್ಯದರ್ಶಿ ,ದ.ಕ.ಜಿಲ್ಲಾ ಸ್ವರ್ಣ ವ್ಯಾಪಾರಿಗಳ ಸಂಘ
– ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Mumbai Indians: ಸೂರ್ಯಕುಮಾರ್ ಶೀಘ್ರ ಚೇತರಿಕೆ ಸಾಧ್ಯತೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್