ಶ್ರೀನಿವಾಸ್ ಯೂನಿವರ್ಸಿಟಿ ಪ್ರಥಮ ಘಟಿಕೋತ್ಸವ
Team Udayavani, Feb 16, 2019, 1:10 AM IST
ಸುರತ್ಕಲ್: ಶ್ರೀನಿವಾಸ ಯೂನಿವರ್ಸಿಟಿಯ ಪ್ರಥಮ ಘಟಿಕೋತ್ಸವ ಶುಕ್ರವಾರ ನಡೆದಿದ್ದು, ಈ ಸಂದರ್ಭ ಉಡುಪಿಯ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಿತು.
ಬೆಂಗಳೂರಿನ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ನ ವೈಸ್ ಚಾನ್ಸಲರ್ ಡಾ| ಎಸ್. ಸಚ್ಚಿದಾನಂದ ಹಾಗೂ ಶ್ರೀನಿವಾಸ್ ಯೂನಿವರ್ಸಿಟಿಯ ಚಾನ್ಸಲರ್ ಸಿಎ ಎ. ರಾಘವೇಂದ್ರ ರಾವ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. 1,400 ವಿದ್ಯಾರ್ಥಿಗಳಿಗೆ ಪದವಿ, ಓರ್ವರಿಗೆ ಪಿಎಚ್ಡಿ ಹಾಗೂ ಮೂವರಿಗೆ ಡಿ.ಲಿಟ್ ಪದವಿ ಪ್ರದಾನಿಸಲಾಯಿತು.
ಪ್ರಜ್ಞಾವಂತ ಸಮಾಜ ನಿರ್ಮಾಣ ಅಗತ್ಯ
ಗೌರವ ಡಾಕ್ಟರೇಟ್ ಸ್ವೀಕರಿಸಿದ ಶ್ರೀ ವಿಶ್ವೇಶತೀರ್ಥರು ಮಾತನಾಡಿ, ಮಾನವ ಹೃದಯ ವಿಕಾಸಕ್ಕೆ ವಿದ್ಯೆಯೂ ಅಗತ್ಯ. ಶಿಕ್ಷಣದಿಂದ ಪ್ರಜ್ಞಾ ವಂತ ಸಮಾಜ ನಿರ್ಮಾಣವಾಗಬೇಕು. ಶ್ರೀನಿವಾಸ ಯೂನಿವರ್ಸಿಟಿಯಲ್ಲಿ ಕಲಿತ ವಿದ್ಯಾರ್ಥಿಗಳು ಸಂಸ್ಕಾರವಂತ ರಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಗೌರವ ಡಾಕ್ಟರೇಟನ್ನು ಪ್ರೀತಿಯಿಂದ ಸ್ವೀಕರಿಸಿದ್ದೇನೆ ಎಂದ ಶ್ರೀಗಳು, ಸಂಸ್ಥೆಯು ವಿವಿಧ ಶೈಕ್ಷಣಿಕ ಚಟುವಟಿಕೆಗಳ ಮೂಲಕ ವಿದ್ಯಾನಿವಾಸವಾಗಿ ಬೆಳಗುತ್ತಿದೆ ಎಂದು ಶ್ಲಾಘಿಸಿದರು.
ಡಾ| ಎಸ್. ಸಚ್ಚಿದಾನಂದ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಆಯ್ಕೆಗೆ ವಿಪುಲ ಅವಕಾಶಗಳಿವೆ. ವೃತ್ತಿಪರ ಶಿಕ್ಷಣ ಪಡೆದವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ದೇಶದ ಒಳಿತಿಗಾಗಿ ಈ ವಿದ್ಯೆ ಬಳಕೆಯಾಗಬೇಕು. ದೇಶ ವಿರೋ ಧಿ ಕೃತ್ಯಗಳನ್ನು ವಿದ್ಯಾರ್ಥಿ ಸಮುದಾಯ ಒಕ್ಕೊರಲಿನಿಂದ ಖಂಡಿಸಿ ಒಗ್ಗಟ್ಟು ಪ್ರದರ್ಶಿಸ ಬೇಕು ಎಂದರು.
ಚಾನ್ಸಲರ್ ಸಿಎ ಎ. ರಾಘವೇಂದ್ರ ರಾವ್ ಪದವಿ ಪಡೆದ ವಿದ್ಯಾರ್ಥಿ ಸಮೂಹಕ್ಕೆ ಶುಭ ಕೋರಿದರು. ಸಂಸ್ಥೆಯ ಟ್ರಸ್ಟಿಗಳಾದ ಎ. ವಿಜಯಲಕ್ಷ್ಮೀ ಆರ್. ರಾವ್, ಪ್ರೊ| ಎ. ಮಿತ್ರಾ ಎಸ್. ರಾವ್, ಪದ್ಮಿನಿ ಕುಮಾರ್, ರಿಜಿಸ್ಟ್ರಾರ್ ಡಾ| ಅನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಪ್ರೊ ಚಾನ್ಸಲರ್ ಡಾ| ಎ. ಶ್ರೀನಿವಾಸ ರಾವ್ ಸ್ವಾಗತಿಸಿದರು. ವೈಸ್ ಚಾನ್ಸಲರ್ ಡಾ| ಪಿ.ಎಸ್. ಐತಾಳ ವರದಿ ವಾಚಿಸಿದರು. ಡಾ| ಶ್ರೀನಿವಾಸ ಮಯ್ಯ ಡಿ. ಅವರು ವಂದಿಸಿದರು.