ಮನೆಯಲ್ಲಿ ನೇಣುಬಿಗಿದುಕೊಂಡು ದಂಪತಿ ಆತ್ಮಹತ್ಯೆ
Team Udayavani, Feb 19, 2019, 5:55 AM IST
ಮಂಗಳೂರು: ದಂಪತಿ ತಮ್ಮ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಳ್ಳಾಲದ ಕೋಟೆಕಾರಿನ ಬೀರಿ ಪ್ರದೇಶದಲ್ಲಿ ನಡೆದಿದೆ. ಮಂಜೇಶ್ವರ ಮೂಲದವರಾಗಿರುವ ಮತ್ತು ಕಳೆದ 20 ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿರುವ ದೇವರಾಜ್ (70) ಮತ್ತು ವಸಂತಿ (60) ದಂಪತಿ ಆತ್ಮಹತ್ಯೆಗೆ ಶರಣಾದ ದುರ್ದೈವಿಗಳಾಗಿದ್ದಾರೆ. ದೇವರಾಜ್ ಅವರು ಆಕಾಶವಾಣಿಯಲ್ಲಿ ಚಾಲಕ ವೃತ್ತಿಯಲ್ಲಿದ್ದು ನಿವೃತ್ತರಾಗಿದ್ದರು. ಮೃತ ದಂಪತಿಗೆ ಮಕ್ಕಳಿರಲಿಲ್ಲ, ಈ ವಿಚಾರವಾಗಿ ಬಹಳ ಕಾಲದಿಂದ ಇವರು ಮಾನಸಿಕವಾಗಿ ನೊಂದಿದ್ದರು, ಇದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಇದೀಗ ಶಂಕಿಸಲಾಗುತ್ತಿದೆ.
ಮಂಗಳವಾರ ಬೆಳಿಗ್ಗೆ ಎಂದಿನಂತೆ ಜಯಂತಿ ಅವರ ಸಹೋದರ ಹಾಲು ಕೊಡಲೆಂದು ಮನೆಗೆ ಬಂದ ಸಂದರ್ಭದಲ್ಲಿ ತನ್ನ ತಂಗಿ ಮತ್ತು ಭಾವ ನೇಣಿಗೆ ಶರಣಾಗಿರುವ ವಿಷಯ ಅವರಿಗೆ ಗೊತ್ತಾಗಿದೆ. ಈ ಮೂಲಕ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.