ಮಗ ದೇಶ ಕಾಯುವ ಹೆಮ್ಮೆ
Team Udayavani, Feb 23, 2019, 4:47 AM IST
ಇರುವ ಒಬ್ಬನೇ ಮಗ ಯುದ್ಧಭೂಮಿಗೆ ಹೋದರೆ ಹೇಗೆ ಎಂದು ಆ ತಾಯಿ ಚಿಂತಿಸಲಿಲ್ಲ. ತನಗಾಗಿ ಬದುಕು ತೇಯುವ ಅಮ್ಮನನ್ನು ಬಿಟ್ಟುಹೋಗುವುದೆಂತು ಎಂದು ಪುತ್ರ ಹಿಂಜರಿಯಲಿಲ್ಲ. ಮಾತೃ ಭೂಮಿಯನ್ನು ರಕ್ಷಿಸುವ ಕಾಯಕ ಅಮ್ಮ-ಮಗ ಇಬ್ಬರಿಗೂ ಸ್ವಹಿತಕ್ಕಿಂತ ದೊಡ್ಡದೆನಿಸಿತು!
ಮಂಗಳೂರು: ತಮಗೆ ಪ್ರಾಯ ಸಂದಾಗ ಮಕ್ಕಳು ಆಸರೆಯಾಗಬೇಕು, ಮನೆಯನ್ನು ಕಾಯಬೇಕು ಎಂದು ಎಲ್ಲ ಹೆತ್ತವರು ಬಯಸುತ್ತಾರೆ. ಆ ಉದ್ದೇಶವನ್ನು ಇರಿಸಿಕೊಂಡು ಮಕ್ಕಳನ್ನು ಸಾಕಿ ಸಲಹುತ್ತಾರೆ. ಇಲ್ಲೊಬ್ಬರು ತಾಯಿ ಇದ್ದಾರೆ – ಇರುವ ಒಬ್ಬನೇ ಮಗನನ್ನು ಕೂಲಿನಾಲಿ ಮಾಡಿ ಕಷ್ಟಪಟ್ಟು ಬೆಳೆಸಿ ದೇಶವನ್ನೇ ಕಾಯಲು ಕಳುಹಿಸಿಕೊಟ್ಟಿದ್ದಾಳೆ. ಈಗ ಆಕೆಯ ಮುಖದಲ್ಲಿ ಮೊರದಗಲ ನಗು- “ಮಗನೀಗ ನನ್ನನ್ನು ಮಾತ್ರವಲ್ಲ, ದೇಶವನ್ನೇ ಜೋಪಾನ ಮಾಡುತ್ತಾನೆ!’
ಬಂಟ್ವಾಳ ತಾಲೂಕಿನ ಮುಂಡಾಜೆಯ ಶಿವರಾಮ ಮತ್ತು ಹೇಮಾವತಿ ದಂಪತಿಯ ಪುತ್ರ ಡಿಕೇಶ್ ಅವರು ಭಾರತೀಯ ಸೇನೆಯ ಎ.ಎಸ್.ಸಿ. ರೆಜಿಮೆಂಟ್ನಲ್ಲಿ ಸಿಪಾಯಿಯಾಗಿದ್ದಾರೆ. ಪ್ರಸ್ತುತ ಪಂಜಾಬಿನಲ್ಲಿ ಕರ್ತವ್ಯದಲ್ಲಿದ್ದಾರೆ. ಸೇನೆಗೆ ನೇಮಕಗೊಂಡ ಮೊದಲ ಬಾರಿಯೇ ಕಾರ್ಗಿಲ್ ನಲ್ಲಿ ಸೇವೆ ಸಲ್ಲಿಸುವ ಅವಕಾಶ ಪಡೆದ ಭಾಗ್ಯಶಾಲಿ. ಮುಂದಿನ ವರ್ಷ ಐಚ್ಛಿಕ ನಿವೃತ್ತಿ ಪಡೆಯಲಿರುವ ಡಿಕೇಶ್ಗೆ ತಾಯಿ ಭಾರತಿಯ ಋಣ ತೀರಿಸಲು ಅವಕಾಶ ಸಿಕ್ಕಿದೆ ಎಂಬ ಸಾರ್ಥಕ್ಯವಿದೆ.
ಫೀಸು ಹೊಂದಿಸಲು ಕೂಲಿ ಕೆಲಸ
ಬೆಂಜನಪದವು ಸರಕಾರಿ ಕಾಲೇಜಿನಲ್ಲಿ ಪದವಿಪೂರ್ವ ವಿದ್ಯಾಭ್ಯಾಸ ಪಡೆದ ಡಿಕೇಶ್ ಸೇನೆ ಸೇರುವ ಉತ್ಸಾಹದಲ್ಲಿದ್ದರು. ಆದರೆ ಮನೆಯಲ್ಲಿ ಕಡು ಬಡತನ. ತಂದೆ- ತಾಯಿಯ ದಿನ ಗೂಲಿಯಿಂದ ಸಿಗುತ್ತಿದ್ದ ಪಗಾರ ಹೊಟ್ಟೆಗೆ ಹಿಟ್ಟು ಹೊಂದಿಸುವುದರಲ್ಲಿ ಕರಗಿಹೋಗುತ್ತಿತ್ತು. ಡಿಕೇಶ್ ಅವರ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ರಜಾ ದಿನಗಳಲ್ಲಿ ಡಿಕೇಶ್ ತಾನೂ ಕೆಲಸಕ್ಕೆ ಹೋಗುತ್ತಿದ್ದರು. ಪಿಯುಸಿಯವರೆಗೆ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಿದ್ದು ಹಾಗೆಯೇ.
ಪಿಯುಸಿಯಲ್ಲಿರುವಾಗ ಗೆಳೆಯನೊಬ್ಬ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಸೇನಾ ನೇಮಕಾತಿ ರ್ಯಾಲಿ ನಡೆಯುತ್ತಿದೆ ಎಂದು ಹೇಳಿದ. ಡಿಕೇಶ್ ತತ್ಕ್ಷಣ ತಾಯಿಯ ಮನವೊಲಿಸಿ ಅಲ್ಲಿಗೆ ತೆರಳಿ ಭಾಗವಹಿಸಿ ಆಯ್ಕೆಯಾದರು. ಇದ್ದೊಬ್ಬ ಮಗ ಸೇನೆ ಸೇರುವ ಬಗ್ಗೆ ಹೇಗೋ ಏನೋ ಎಂಬ ಹಿಂಜರಿಕೆ ಆಕೆಯಲ್ಲಿದ್ದರೂ ಡಿಕೇಶ್ ಮನಸ್ಸಿನ ದೃಢ ನಿರ್ಧಾರ ಅದನ್ನು ದೂರ ಮಾಡಿತ್ತು.
ಕಾರ್ಗಿಲ್ನಲ್ಲಿ ಮೊದಲ ಸೇವೆ
ಬೆಂಗಳೂರಿನಲ್ಲಿ ತರಬೇತಿ ಪಡೆದ ಬಳಿಕ ಡಿಕೇಶ್ ಅವರು 2004ರ ಜ. 20ರಂದು ಕಾರ್ಗಿಲ್ನಲ್ಲಿ ಕರ್ತವ್ಯಕ್ಕೆ ಸೇರ್ಪಡೆಗೊಂಡರು. ಕಾರ್ಗಿಲ್ ತಲುಪಿದ್ದೇ ತಡ, ಯುದ್ಧದ ನೆನಪು ರೋಮಾಂಚನ ಉಂಟು ಮಾಡಿತ್ತು ಎನ್ನುತ್ತಾರೆ ಡಿಕೇಶ್. ಅಲ್ಲಿನ ಕಡು ಚಳಿಯ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸಿದ ಬಳಿಕ ಜಮ್ಮು-ಕಾಶ್ಮೀರ, ನಾಗಾಲ್ಯಾಂಡ್, ಸಿಕ್ಕಿಂ, ಲಢಾಕ್, ರಾಜಸ್ಥಾನಗಳಲ್ಲಿಯೂ ಸೇವೆ ಸಲ್ಲಿಸಿದ್ದರು. ಜಮ್ಮು-ಕಾಶ್ಮೀರದಲ್ಲಿದ್ದಾಗ ನಡೆದ ಉಗ್ರರ ದಾಳಿ ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲದ ಘಟನೆ. ಅಲ್ಲಿ ಯೋಧನಾಗಿ ಕೆಲಸ ಮಾಡುವುದು ನಿಜಕ್ಕೂ ಸವಾಲು ಎನ್ನುತ್ತಾರೆ ಡಿಕೇಶ್.
ಮುಂದಿನ ವರ್ಷ ಡಿಸೆಂಬರ್ನಲ್ಲಿ ನಿವೃತ್ತಿ
ಡಿಕೇಶ್ ಅವರು ಪಿಯುಸಿ ಬಳಿಕ ಸೇನೆ ಸೇರಿದ್ದು, ಈ ವರೆಗೆ ನಿರಂತರವಾಗಿ ದೇಶದ ವಿವಿಧ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಮುಂದಿನ ವರ್ಷದ ಡಿಸೆಂಬರ್ನಲ್ಲಿ ಡಿಕೇಶ್ ನಿವೃತ್ತಿ ಹೊಂದಲಿದ್ದಾರೆ. ಅಚ್ಚರಿ ಎಂದರೆ ದೇಶ ಸೇವೆಯೇ ಮೊದಲು; ವೈಯಕ್ತಿಕ ಬದುಕು ಆಮೇಲಿನ ವಿಚಾರ ಎಂದು ಹೇಳುವ ಡಿಕೇಶ್ ಈ ವರೆಗೆ ಮದುವೆ ಆಗಿಲ್ಲ. ಕೇಳಿದರೆ, ನಿವೃತ್ತಿಯ ಬಳಿಕ ಆ ಬಗ್ಗೆ ಯೋಚನೆ ಮಾಡಿದರಾಯಿತು ಎಂದು ನಸುನಗುತ್ತಾರೆ.
ದೇಶ ಸೇವೆಗೆ ಮುಂದಾಗಿ
ದೇಶದ ವಿವಿಧ ಮೂಲೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಆದರೆ ಅಲ್ಲಿ ನಮ್ಮ ಜಿಲ್ಲೆಯ ಯೋಧರ ಸಂಖ್ಯೆ ಬಹಳಷ್ಟು ಕಡಿಮೆ ಇದೆ. ಕರಾವಳಿಯ ಯುವಕರು ದೇಶ ಸೇವೆಗೆ ಹೆಚ್ಚು ಒತ್ತು ನೀಡಬೇಕು. ಈ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು.
ಡಿಕೇಶ್, ಯೋಧ
ಮಗನ ಬಗ್ಗೆ ಹೆಮ್ಮೆ ಇದೆ
ಷ್ಟಪಟ್ಟು ವಿದ್ಯಾಭ್ಯಾಸ ಮುಗಿಸಿ ಸೇನೆಗೆ ಸೇರಿದ್ದ. ಮೊದಲು ಭಯ ಇತ್ತು. ಆದರೆ ಈಗ ಮಗನ ಬಗ್ಗೆ ಹೆಮ್ಮೆ ಇದೆ.
-ಹೇಮಾವತಿ, ಡಿಕೇಶ್ ಅವರ ತಾಯಿ.
ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ