ಬುದ್ಧಿ, ಮನಸ್ಸು, ಚಿತ್ತ – ಗಮನ ಕೊಡಬೇಕಾದದ್ದು ಯಾವುದರತ್ತ?
Team Udayavani, Mar 28, 2017, 1:25 AM IST
ಮನುಷ್ಯನನ್ನು ಮೂಲಭೂತವಾಗಿ ನಿಯಂತ್ರಿಸಲು ಇರುವ ಮೂರು ಸಂಗತಿಗಳು ಬುದ್ಧಿ, ಮನಸ್ಸು ಮತ್ತು ಚಿತ್ತ. ಇವು ಮೂರು ನಮ್ಮ ಪ್ರತಿಯೊಬ್ಬರೊಳಗಿನ ನ್ಯಾಯಾಧೀಶರಿದ್ದಂತೆ. ಈ ಮೂರರ ಸಮನ್ವಯದಲ್ಲಿ ನಮ್ಮ ಜೀವನ ಸಾಗಬೇಕು. ಹಾಗಾದಾಗ ಅದಕ್ಕೊಂದು ಅರ್ಥ ಬರುತ್ತದೆ.
ಎಲ್ಲ ಜೀವರಾಶಿಗಳಲ್ಲೂ ಮೂಲಭೂತವಾಗಿರುವ ಸ್ನೇಹಿತರು ಬುದ್ಧಿ, ಮನಸ್ಸು ಮತ್ತು ಚಿತ್ತ. ಅದರಲ್ಲೂ ಸಂಪೂರ್ಣವಾಗಿ ವಿಕಾಸ ಹೊಂದಿರುವ ಜೀವಿ ಎಂದು ಪರಿಗಣಿಸಲ್ಪಟ್ಟಿರುವ ಮನುಷ್ಯನ ಜೀವನದಲ್ಲಿ ಇವುಗಳ ಆಟ ಬಲು ಜೋರು. ಇವು ಮೂರೂ ಒಂದೇ ರೀತಿಯವು ಅನ್ನಿಸಿದರೂ ಇವುಗಳ ನಡುವೆ ಬಲು ತೆಳುವಾಗಿರುವ, ಆದರೆ ಮಹತ್ವದ ವ್ಯತ್ಯಾಸಗಳಿವೆ. ಮನುಷ್ಯನ ಜೀವನವನ್ನೇ ತಮ್ಮ ನಿಯಂತ್ರಣದಲ್ಲಿ ಹಿಡಿದಿರಿಸಿಕೊಂಡು ಆಟ ಆಡಿಸುತ್ತಿರುವವರು ಈ ಮೂವರು. ಆದರೆ ಪ್ರಾಣಿ ಪಕ್ಷಿಗಳಿಗೆ ಇವುಗಳ ಗೊಡವೆಯಿಲ್ಲ. ಯಾಕೆ ಅಂದರೆ, ಅವು ಬುದ್ಧಿ ಮತ್ತು ಚಿತ್ತಕ್ಕಿಂತ ಹೆಚ್ಚಾಗಿ ಕೇವಲ ಮನಸ್ಸಿನ ಮಾರ್ಗದರ್ಶನವನ್ನು ಮಾತ್ರ ಮುಂದಿಟ್ಟುಕೊಂಡು ಬಾಳುವೆ ನಡೆಸುತ್ತವೆ. ಮನುಷ್ಯನಿಧಿಗಾದರೋ ಬುದ್ಧಿಯೂ ವಿಕಾಸವಾಗಿದೆ.
ಬುದ್ಧಿ ಮಾರ್ಗದರ್ಶಕ: ಮನುಷ್ಯನ ಬದುಕಿನಲ್ಲಿ ಬೆಳಗ್ಗಿನಿಂದ ರಾತ್ರಿ ಮಲಗುವ ತನಕ ಒಂದೊಂದು ಹೆಜ್ಜೆಗೂ ನಮಗೆ ಮಾರ್ಗದರ್ಶನ ನೀಡುತ್ತ ಇರುವುದು ಬುದ್ಧಿ. ಅದು ನಮಗೆ ಮಾರ್ಗದರ್ಶಕ ಇದ್ದಂತೆ. ಬುದ್ಧಿಯ ಸೂಚನೆಯನ್ನು ಪ್ರತಿಯೊಂದು ಕಾರ್ಯದಲ್ಲಿಯೂ ಮಾನ್ಯ ಮಾಡುತ್ತೇವೆ. ಬುದ್ಧಿ ನಮ್ಮ ಜತೆಗಿಲ್ಲದಿದ್ದರೆ ನಿತ್ಯ ಜೀವನ ಅಸ್ತವ್ಯಸ್ತವಾಗಬಹುದು. ಹುಟ್ಟುತ್ತಲೇ ಇದ್ದು, ಬೆಳೆದಂತೆ ವಿಕಾಸ ಹೊಂದುವ ಈ ಬುದ್ಧಿ ಶಾಲಾ ಶಿಕ್ಷಣದಿಂದ ಮಾತ್ರ ಹೆಚ್ಚಾಗುತ್ತದೆ ಅಂದರೆ ತಪ್ಪು. ಬುದ್ಧಿ ಬಲಿಯುತ್ತದೆ ನಿಜ. ಆದರೆ, ಸಾಮಾನ್ಯ ಜ್ಞಾನದ ಜತೆಗೆ ಸಂಸ್ಕಾರಜ್ಞಾನವನ್ನೂ ಪಡೆದುಕೊಂಡಾಗ ಮಾತ್ರ ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸುವುದಕ್ಕೆ ಸಾಧ್ಯ.
ಇಂದು ಬರೀ ಬುದ್ಧಿವಂತಿಕೆಗೆ ಮಾತ್ರ ಪ್ರಾಮುಖ್ಯ ಕೊಟ್ಟು ಮನಃಸಾಕ್ಷಿಯನ್ನು ಕಡೆಗಣಿಸಿದ್ದರಿಂದ ಹಲವಾರು ಮಂದಿ ಏನೇನೋ ಮಾಡಿ ಸೆರೆವಾಸದಲ್ಲಿದ್ದಾರೆ. ತಮ್ಮದೇ ಬುದ್ಧಿಯ ಮಾತು ಕೇಳಿ ಮಾಡಿದ ಆ ತಪ್ಪುಗಳಿಂದ ಹೊರಬರಲು ಮತ್ತೆ ಅದೇ ಬುದ್ಧಿಯನ್ನು ಉಪಯೋಗಿಸುತ್ತಿದ್ದಾರೆ! ನಮ್ಮೊಳಗಿರುವ, ನಮ್ಮದೇ ಆಗಿರುವ ಬುದ್ಧಿಯನ್ನು ತೃಪ್ತಿಪಡಿಸುವುದು ಅಷ್ಟು ಸುಲಭವಲ್ಲ. ನಮ್ಮ ಮನಸ್ಸು ಬಹಳ ಚಂಚಲ ಪ್ರವೃತ್ತಿ ಉಳ್ಳಂಥದು. ಅದರ ದಿಕ್ಕು ತಪ್ಪಿಸಲು ಬುದ್ಧಿ ತುಂಬಾ ಕುತಂತ್ರ ಮಾಡುತ್ತದೆ. ಎಲ್ಲವೂ ತನಗೇ ಬೇಕು ಎಂಬ ದುರಾಶೆಯನ್ನು ಹುಟ್ಟಿಸಿ, ಅದನ್ನು ಪಡೆದುಕೊಳ್ಳಲು ಯಾವ ಮಾರ್ಗವನ್ನಾದರೂ ತುಳಿ ಎಂದು ಹೇಳಿಕೊಡುವುದು ನಮ್ಮ ಬುದ್ಧಿಯೇ. ಪಡೆದುಕೊಳ್ಳುವ ದಾರಿ ಕೆಟ್ಟದಾಗಿರಬಹುದು ಅಥವಾ ಒಳ್ಳೆಯದಾಗಿರಬಹುದು; ಆದರೆ ಬುದ್ಧಿಗೆ ಅದರ ಬಗ್ಗೆ ಯೋಚನೆಯಿಲ್ಲ. ಬಯಸಿದ್ದನ್ನು ಪಡೆಯುವುದಕ್ಕೆ ಮಾತ್ರ ಅದರ ಆದ್ಯತೆ. ಎಲ್ಲದಕ್ಕೂ ಕಾರಣ ಬುದ್ಧಿಯೇ. ಆದರೆ ಸರಿಯಾದ ಸಂಸ್ಕಾರ ಇರುವ ಬುದ್ಧಿ ಮಾತ್ರ ತಪ್ಪು ಮಾಡುವುದಕ್ಕೆ ಮುನ್ನ ಎರಡು ಸಲ ಯೋಚನೆ ಮಾಡುತ್ತದೆ.
ಮುಗ್ಧವಾದುದು ಮನಸ್ಸು: ಮನಸ್ಸು ತುಂಬಾ ಮುಗ್ಧ. ಅದು ಎಲ್ಲರನ್ನೂ ಪ್ರೀತಿಸುತ್ತದೆ. ಮನಸ್ಸು ಬಹಳ ನಿಷ್ಕಲ್ಮಶವಾದದ್ದು. ಅದರಲ್ಲಿ ಕೊಳೆ ಸೇರಿಕೊಳ್ಳುವುದಿಲ್ಲ. ಕೊಳೆಯಿದ್ದರೂ ಅದು ತಾವರೆ ಎಲೆಯ ಮೇಲಿನ ನೀರಿನ ಬಿಂದುವಿನಂತೆ ಕೊಳೆಯನ್ನು ಸೋಕಿಸಿಕೊಳ್ಳುವುದಿಲ್ಲ. ಅದು ಯಾವಾಗಲೂ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತದೆ. ಮನಸ್ಸು ಮಾನವೀಯತೆಯನ್ನು ಪ್ರತಿಬಿಂಬಿಸುತ್ತದೆ. ಮನಸ್ಸಾಕ್ಷಿಯಿಂದ ಮಾಡುವ ಎಲ್ಲ ಕೆಲಸಗಳು ಮನುಷ್ಯನ ಜೀವನಕ್ಕೆ ಸಾರ್ಥಕತೆಯನ್ನು ನೀಡಿವೆ. ಏಕೆಂದರೆ ಅಂತಹ ಎಲ್ಲ ಕೆಲಸಗಳು ಸತ್ಯಕ್ಕೆ ಹತ್ತಿರವಾಗಿರುತ್ತವೆ. ಬುದ್ಧಿ ಮಾಡುವ ತಪ್ಪು ಕೆಲಸದ ಬಗ್ಗೆ ತಿಳಿದಿರುವುದು ಮನಸ್ಸಿಗೆ ಮಾತ್ರ.
ಯಾವುದು ಸರಿ, ಯಾವುದು ತಪ್ಪು ಎಂಬ ವಿವೇಚನೆಯನ್ನು ಉಂಟು ಮಾಡಿ, ಮನುಷ್ಯನ ಆಳದಲ್ಲಿ ಹುದುಗಿರುವ ಪಾಪ ಪ್ರಜ್ಞೆಯನ್ನು ಹೊರತರುವುದೇ ಮನಸ್ಸು. ಬುದ್ಧಿ ತನ್ನ ಅಹಂನ ಕಾರಣವಾಗಿ ಹೊರಗಿನ ಪ್ರಪಂಚದ ಎದುರು ತನ್ನ ತಪ್ಪುಗಳನ್ನು ಮುಚ್ಚಿಡಲು ಪ್ರಯತ್ನ ಪಡುತ್ತದೆ. ಆದರೆ ಮನಸ್ಸು ಅದನ್ನು ಯಾವತ್ತೂ ಒಪ್ಪಿಕೊಳ್ಳುವುದಿಲ್ಲ. ಅದು ಶುದ್ಧವಾದ ಬದುಕನ್ನು ಅರಸುತ್ತದೆ. ಹಾಗಾಗಿಯೇ ಬುದ್ಧಿವಂತಿಕೆಯಿಂದ ಮಾಡುವ ಪ್ರೀತಿ ನಿಜವಾದ ಪ್ರೀತಿ ಅನ್ನಿಸಿಕೊಳ್ಳುವುದಿಲ್ಲ. ಮನಸ್ಸಿನಿಂದ ಪ್ರೀತಿಸಿದಾಗ ಮಾತ್ರ ಅದು ನಿಜವಾದ ಪ್ರೀತಿಯಾಗಿರುತ್ತದೆ. ಎಷ್ಟೋ ಸಂಬಂಧಗಳನ್ನು ಹಾಳು ಮಾಡುವುದು ಬುದ್ಧಿ, ಮನಸ್ಸಲ್ಲ. ಕ್ಷಮಾಗುಣವನ್ನು ಹೊಂದಿರುವುದು ಮನಸ್ಸು ಮಾತ್ರ.
ಚಂಚಲ ಚಿತ್ತ: ಬಾಯಿ ಬುದ್ಧಿಯನ್ನು ಉಪಯೋಗಿಸಿಕೊಂಡು ಏನನ್ನೋ ಮಾತನಾಡುತ್ತಾ ಇರುತ್ತದೆ. ಮನಸ್ಸು ಇನ್ನೇನನ್ನೋ ಬಯಸುತ್ತಿರುತ್ತದೆ. ಚಿತ್ತ ಕಣ್ಣಿನಿಂದ ಮತ್ತೇನನ್ನೋ ಹುಡುಕುತ್ತಿರುತ್ತದೆ. ಚಿತ್ತ ಬಯಸುವುದನ್ನೆಲ್ಲ ಬುದ್ಧಿ ಒಪ್ಪಿಕೊಂಡರೂ, ಮನಸ್ಸು ಒಪ್ಪಲಾರದು. ಅನೇಕ ಸಲ ಅಪರೂಪದ ಆಕರ್ಷಕ ವ್ಯಕ್ತಿಯನ್ನು ಕಂಡಾಗ, ಮನಸ್ಸು ಅದನ್ನು ಒಪ್ಪಿಕೊಂಡು ನಮ್ಮೊಳಗೆ ಒಂದು ಖುಷಿಯನ್ನು ಸೃಷ್ಟಿಸುತ್ತದೆ. ಆದರೆ ಬುದ್ಧಿ ಆ ವ್ಯಕ್ತಿಯ ಬಗ್ಗೆ ವಿಶ್ಲೇಷಣೆ ಮಾಡಲು ಶುರು ಮಾಡುತ್ತದೆ. ಮನಸ್ಸು ಖುಷಿಪಟ್ಟರೂ ಅದನ್ನು ಬಹಿರಂಗದಲ್ಲಿ ವ್ಯಕ್ತಪಡಿಸಬೇಕೇ ಬೇಡವೇ ಎಂಬ ನಿರ್ಧಾರ ತೆಗೆದುಕೊಳ್ಳುವಲ್ಲಿ ಬುದ್ಧಿ ಪಾತ್ರ ವಹಿಸುತ್ತದೆ. ಪ್ರೀತಿ ಶುರುವಾಗುವುದೇ ಚಿತ್ತದಿಂದ. ನಮ್ಮ ಕಣ್ಣಿಗೆ ಹಿಡಿಸಿದ್ದು ನಮಗೆ ಹತ್ತಿರವಾಗಬೇಕು ಅನ್ನಿಸಿದಾಗ ಅಥವಾ ಯಾವುದೋ ಒಂದು ಮುಖ ನಮ್ಮನ್ನು ಕಾಡಲು ಶುರು ಮಾಡಿದಾಗ, ಚಿತ್ತವು ಬುದ್ಧಿಯನ್ನು ಪ್ರಶ್ನಿಸುತ್ತದೆ, ಕೊನೆಗೆ ಮನಸ್ಸನ್ನು ಇಣುಕಿ ನೋಡಿದಾಗ ನಮಗಾಗುತ್ತಿರುವುದು ಪ್ರೀತಿಯ ಅನುಭವ ಎಂಬುದು ಅರಿವಾಗುತ್ತದೆ. ಮನುಷ್ಯನ ಬುದ್ಧಿ ಚಂಚಲವಾದರೂ ಅದಕ್ಕಿಂತ ಹೆಚ್ಚು ಚಂಚಲ ಗುಣವುಳ್ಳಂಥದ್ದು ನಮ್ಮ ಚಿತ್ತ. ಆದರೆ ಮನಸ್ಸಿಗೆ ಈ ಚಾಂಚಲ್ಯವಿಲ್ಲ, ಅದಕ್ಕೆ ನಿಶ್ಚಲತೆಯಿದೆ. ಚಿತ್ತ ತನ್ನ ಕಣ್ಣಿಗೆ ಸುಂದರವಾಗಿ ಕಂಡಿದ್ದೆಲ್ಲವೂ ಬೇಕು ಎಂದು ಬುದ್ಧಿಗೆ ಸೂಚನೆ ಕೊಡುತ್ತದೆ. ಬುದ್ಧಿ ಅವುಗಳನ್ನು ಪಡೆದುಕೊಳ್ಳಲು ಆತುರದಿಂದ ಮುಂದುವರೆದರೂ ಮನಸ್ಸು ತನಗೆ ಹೇಳಿಸಿದ್ದಲ್ಲದ್ದನ್ನು ತಿರಸ್ಕರಿಸುತ್ತದೆ.
ಸಮನ್ವಯ-ಸಾರ್ಥಕ್ಯ: ಬುದ್ಧಿ, ಮನಸ್ಸು, ಚಿತ್ತ – ಇವು ನಮ್ಮ ಕಣ್ಣಿಗೆ ಕಾಣಿಸುವುದಿಲ್ಲವಾದರೂ ಇವುಗಳಿಂದ ಸೃಷ್ಟಿಯಾಗಿರುವ ಲೌಕಿಕ ಜಗತ್ತನ್ನು ಪ್ರತಿನಿತ್ಯ ನಾವು ಗಮನಿಸುತ್ತಿದ್ದೇವೆ. ತಮಗೆ ಬೇಕಾದನ್ನೆಲ್ಲ ಕಾರ್ಯಗತಗೊಳಿಸುವ ಸಾಮರ್ಥ್ಯ ಈ ಮೂರು ಮೂಲಭೂತ ಸಂಗತಿಗಳಿಗೆ ಮಾತ್ರ ಇರುವುದು. ಈ ಮೂರರ ಪ್ರೇರೇಪಣೆಯಿಲ್ಲದೆ ಜೀವನ ಪೂರ್ಣವಾಗಲು ಸಾಧ್ಯವೇ ಇಲ್ಲ. ಈ ಮೂರೂ ನಮ್ಮೂಳಗೆ ಇರುವ ನ್ಯಾಯಮೂರ್ತಿಗಳು. ಆದರೆ ಈ ಮೂರರಲ್ಲಿ ಯಾವುದೇ ಒಂದರ ಪ್ರೇರಣೆಗಳಿಗೆ ಅನುಗುಣವಾಗಿ ನಡೆದುಕೊಳ್ಳುವುದು ಅಪಾಯಕಾರಿ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ಈ ಮೂರರ ಸಹಮತವನ್ನೂ ಪಡೆದು ಮುಂದುವರಿಯುವುದು ಏಳಿಗೆಗೆ ಸಹಕಾರಿ. ಇವರಲ್ಲಿ ಒಬ್ಬರ ಮಾತು ಮೀರಿ ನಡೆದುಕೊಂಡರೂ ಪಶ್ಚಾತ್ತಾಪ ಪಡಬೇಕಾದ್ದು ಅನಿವಾರ್ಯ. ಹಾಗೆ ತನ್ನೊಳಗೆ ಇರುವ ಈ ಮೂರನ್ನು ಗೌರವಿಸುವವನಿಗೆ ಆತ್ಮಗೌರವ ಅಥವಾ ಸೆಲ್ಫ್ ರೆಸ್ಪೆಕ್ಟ್ ಇರುತ್ತದೆ, ಹೇಡಿತನವಲ್ಲ. ಪ್ರತಿಯೊಬ್ಬರಿಗೂ ಬುದ್ಧಿ, ಮನಸ್ಸು, ಚಿತ್ತವನ್ನು ದೇವರು ಸರಿಸಮಾನವಾಗಿಯೇ ಹಂಚಿರುತ್ತಾನೆ. ಆದರೆ ಅವುಗಳನ್ನು ಎಷ್ಟರಮಟ್ಟಿಗೆ ನಾವು ಪರಿಣಾಮಕಾರಿಯಾಗಿ ಬಳಸಿಕೊಂಡು, ಅವುಗಳ ಗೌರವವನ್ನು ಹೆಚ್ಚಿಸುತ್ತೇವೆಯೋ ಅದು ನಮಗಾಗಿ ನಾವು ಈ ಜೀವನದಲ್ಲಿ ಮಾಡಿಕೊಳ್ಳುವ ಸಂಪಾದನೆ. ಬುದ್ಧಿ, ಮನಸ್ಸು, ಚಿತ್ತ – ಇವುಗಳಿಗೆ ಆಧ್ಯಾತ್ಮವನ್ನು ಪರಿಚಯಿಸಿ, ಚಾಂಚಲ್ಯಕ್ಕೆ ಕಡಿವಾಣ ಹಾಕಿ, ಸಾತ್ವಿಕವಾಗಿ ಚಿಂತಿಸುವ ಯೋಗ್ಯತೆಯನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ನಾವು ಈ ಧರ್ಮಭೂಮಿಯಲ್ಲಿ ಜೀವಿಸಲು ಯೋಗ್ಯರಾಗುತ್ತೇವೆ.
– ರೂಪಾ ಅಯ್ಯರ್ ; [email protected]
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
ದಳಪತಿ ಅಭಿಮಾನಿಗಳ ಟ್ರೋಲ್ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?