ಅಬ್ಬರಿಸಿ, ಬೊಬ್ಬಿರಿಯದೆ ಕಾಡುವ ಟೆರರಿಸ್ಟ್
Team Udayavani, Oct 20, 2018, 11:44 AM IST
“ಜಾತಿಗಿಂತ ಪ್ರೀತಿ ದೊಡ್ಡದು, ಧರ್ಮಕ್ಕಿಂತ ದೇಶ ದೊಡ್ಡದು…’ ಈ ಡೈಲಾಗ್ ಬರುವ ಹೊತ್ತಿಗೆ, ಉಗ್ರವೆಂಬ ಕರಿನೆರಳಿನ ಛಾಯೆ ಮಾಯವಾಗಿರುತ್ತೆ. ಸಣ್ಣದ್ದೊಂದು ಕ್ರೌರ್ಯ ತಣ್ಣಗಾಗಿರುತ್ತೆ. ಅದುವರೆಗಿನ ಕೌತುಕ, ತಲ್ಲಣ ಮತ್ತು ಅನಿವಾರ್ಯತೆಗಳಿಗೆ ಉತ್ತರ ಸಿಕ್ಕಿರುತ್ತೆ. ಸೂಕ್ಷ್ಮಸಂಗತಿಗಳನ್ನು ಪೋಣಿಸಿ, ಏನು, ಹೇಳಬೇಕು, ಹೇಗೆ ತೋರಿಸಬೇಕು ಎಂಬುದನ್ನು ಅರಿತುಕೊಂಡೇ ಇಲ್ಲಿ “ಇಂಟ್ರೆಸ್ಟ್’ ಅಂಶಗಳನ್ನು ಬೆರೆಸುವ ಮೂಲಕ ಎಲ್ಲರೂ ಹಾಗೇ ಇರುವುದಿಲ್ಲ ಎಂಬುದನ್ನು ನಿಜವಾಗಿಸುವಲ್ಲಿ ಪ್ರಯತ್ನಿಸಿದ್ದಾರೆ ನಿರ್ದೇಶಕರು.
ಕಥೆಯಲ್ಲಿ ಸೂಕ್ಷ್ಮತೆ ಇದೆ. ಎಚ್ಚರಿಕೆ ಮತ್ತು ಜಾಣತನದಿಂದ ಪ್ರತಿ ದೃಶ್ಯವನ್ನು ಕುತೂಹಲವಾಗಿ ಕಟ್ಟಿಕೊಡುವ ಮೂಲಕ ಭಯೋತ್ಪಾದನೆ ವಿಷಯವನ್ನು ಸವಾಲೆನ್ನಿಸದೆ, ಸರಳವಾಗಿ ನಿರೂಪಿಸಲಾಗಿದೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಒಂದೇ ಒಂದು ಕಡೆ ಕಮಾಂಡೋಗಳ ಬುಲೆಟ್ ಸದ್ದು ಬಿಟ್ಟರೆ, ಇಲ್ಲಿ ಮುಗಿಲು ಮುಟ್ಟುವ ಆಕ್ರಂದನವಿಲ್ಲ, ರಕ್ತಪಾತವಿಲ್ಲ, ಬಾಂಬ್ಗಳ ಸದ್ದುಗದ್ದಲವಿಲ್ಲ, ನೂರಾರು ಸಾವು-ನೋವುಗಳಿಲ್ಲ.
ಇದ್ಯಾವುದರ ಛಾಯೆ ಇಲ್ಲದೆಯೇ, ನೋಡುಗರಿಗೆ ರುಚಿಸುವಂತಹ ಭಯೋತ್ಪಾದನೆ ಕುರಿತ ರೋಚಕ ಸನ್ನಿವೇಶಗಳ ಕಥೆ ಹೇಳುತ್ತಲೇ ಕುತೂಹಲ ಮೂಡಿಸಿರುವುದು ಸಾರ್ಥಕ ಪ್ರಯತ್ನ. ಇಲ್ಲಿ ಇನ್ನೊಂದು ಸೂಕ್ಷ್ಮದ ಸಂಗತಿಯೆಂದರೆ, ಬಹುತೇಕ ಮುಸ್ಲಿಂ ಕುಟುಂಬದ ಹಿನ್ನೆಲೆಯಲ್ಲೇ ಕಥೆ ಸಾಗುತ್ತದೆ. ಹಾಗಂತ, ಇಲ್ಲಿ ಜಾತಿ, ಧರ್ಮಗಳ ಸಂಘರ್ಷವಿಲ್ಲ. ಕೇವಲ ಜಾತಿ, ಧರ್ಮಗಳ ಹೆಸರಲ್ಲೇ ನಾನಾ ರೀತಿಯ ಅರ್ಥ ಕಲ್ಪಿಸಿಕೊಳ್ಳುವ ಮನಸ್ಥಿತಿಯ ಜನರಿಗೆ “ಟೆರರಿಸ್ಟ್’ ತನ್ನೊಳಗಿರುವ ಆಪ್ತತೆಯನ್ನು ತೋರಿಸುತ್ತದೆ.
ಕಥೆ ಕಟ್ಟುವುದು ದೊಡ್ಡ ವಿಷಯವಲ್ಲ. ಅದನ್ನು ಹೇಗೆ ದೃಶ್ಯರೂಪಕ್ಕೆ ಅಳವಡಿಬೇಕೆಂಬುದು ಸವಾಲಿನ ಕೆಲಸ. ಅದು ಇಲ್ಲಿ ಸಾಂಗೋಪವಾಗಿ ನಡೆದಿದೆ. ಇಲ್ಲೂ ಮಾನವೀಯ ಗುಣವಿದೆ, ಪ್ರೀತಿಯ ಚಿಗುರಿದೆ, ಬಾಂಧವ್ಯದ ಬೆಸುಗೆ ಇದೆ, ಕರ್ತವ್ಯ ನಿಷ್ಠೆ ಇದೆ, ಆತಂಕ, ತಲ್ಲಣ, ಕುತೂಹಲ ಚಿತ್ರಕ್ಕೊಂದು ವೇಗವನ್ನು ಕಟ್ಟಿಕೊಟ್ಟಿದೆ. ಸಣ್ಣ ಸೂಕ್ಷ್ಮತೆಯನ್ನು ಅಷ್ಟೇ ಸರಳವಾಗಿ ಬಿಡಿಸುವುದರ ಜೊತೆಗೆ ಕಗ್ಗಂಟಿನ ಕೆಲ ಪ್ರಶ್ನೆಗಳಿಗೆ ಒಂದೊಂದೇ ಉತ್ತರ ಕೊಡುತ್ತಾ ಹೋಗುತ್ತದೆ. ಅದಷ್ಟೇ ಅಲ್ಲ, ತಾಂತ್ರಿಕವಾಗಿ ಗಮನವನ್ನೂ ಸೆಳೆಯುತ್ತೆ.
ಭಯೋತ್ಪಾದನೆಗೆ ಸಂಬಂಧಿಸಿದ ವಿಷಯವನ್ನು ಯಾವುದೇ ಅಬ್ಬರ, ಅರ್ಭಟಗಳಿಲ್ಲದೆ, ಚೀರಾಟ, ಕೂಗಾಟವಿಲ್ಲದೆ, ನೋಡುಗರ ಅನೇಕ ಗೊಂದಲಗಳನ್ನು ನಿವಾರಿಸುವ ಮೂಲಕ ಟೆರರಿಸ್ಟ್ ಕೊಂಚ ಇಂಟ್ರೆಸ್ಟ್ ಎನಿಸುವುದು ಸುಳ್ಳಲ್ಲ. ಒಂದು ಭಯೋತ್ಪಾದನೆ ವಿಷಯವನ್ನು ಹೀಗೂ ತೋರಿಸಬಹುದಾ ಎಂಬುದಕ್ಕೆ “ದಿ ಟೆರರಿಸ್ಟ್’ ಉದಾಹರಣೆ. ಇಂತಹ ಪ್ರಯೋಗಕ್ಕೆ ಎಷ್ಟರಮಟ್ಟಿಗೆ ಮೆಚ್ಚುಗೆ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಕನ್ನಡದ ಮಟ್ಟಿಗೆ ಒಂದು ಅಂತಾರಾಷ್ಟ್ರೀಯ ಮಟ್ಟದ ವಿಷಯವನ್ನು ಅಷ್ಟೇ ನೈಜತೆ ಎಂಬಂತೆ ಬಿಂಬಿಸಿರುವ ಪ್ರಯತ್ನವಂತೂ ಮೆಚ್ಚುಗೆಯಾಗುತ್ತದೆ.
ಇಲ್ಲಿ ಕಥೆ ಇದೆ, ಚಿತ್ರಕಥೆಯ ಹಿಡಿತವೂ ಇದೆ. ಅದಕ್ಕೆ ಪೂರಕವಾಗಿ ಹೊಸ ಮುಖದ ಪಾತ್ರಗಳೂ ತುಂಬಿವೆ. ಈ ಕಾರಣಕ್ಕೂ “ಟೆರರಿಸ್ಟ್’ ಕೊಂಚ “ಬೆಸ್ಟ್’ ಎನಿಸದೇ ಇರದು. ಹೊಡಿ, ಬಡಿ, ಕುಣಿ ಚಿತ್ರಗಳ ಮಧ್ಯೆ ತಣ್ಣನೆ ಕ್ರೌರ್ಯ ತೋರಿಸುತ್ತಲೇ ಸುಮ್ಮನೆ ನೋಡಿಸಿಕೊಂಡು ಹೋಗುವ ತಾಕತ್ತು ಚಿತ್ರಕ್ಕಿದೆ. ಇನ್ನು, ಹಿನ್ನೆಲೆ ಸಂಗೀತ ಚಿತ್ರದ ವೇಗ ಹೆಚ್ಚಿಸಿದೆ. ಮೊದಲರ್ಧ ಒಂದಷ್ಟು ಪ್ರಶ್ನೆಗಳ ಮೂಲಕ ಸಾಗುತ್ತೆ. ಅಷ್ಟೇ ವೇಗದಲ್ಲಿ ಆ ಪ್ರಶ್ನೆಗಳಿಗೆ ದ್ವಿತಿಯಾರ್ಧದಲ್ಲಿ ಉತ್ತರವೂ ಸಿಗುತ್ತದೆ. ಆ ಪ್ರಶ್ನೆ ಏನು, ಅದಕ್ಕೆ ಉತ್ತರವೇನು? ಎಂಬ ಕುತೂಹಲಕ್ಕಾದರೂ “ಟೆರರಿಸ್ಟ್’ ಭೇಟಿಗೆ ಅಡ್ಡಿಯಿಲ್ಲ.
ರೇಷ್ಮಾ (ರಾಗಿಣಿ) ಅವಳದು ಮಧ್ಯಮವರ್ಗ ಕುಟುಂಬ. ಅಪ್ಪ,ಅಮ್ಮ, ತಮ್ಮ,ತಂಗಿ ಜೊತೆ ಸಂತಸವಾಗಿರುವ ರೇಷ್ಮಾ ಲೈಫಲ್ಲೂ ಪ್ರೀತಿ ಚಿಗುರಿ, ಬಹುಬೇಗ ಕಮರಿ ಹೋಗುತ್ತೆ. ಇದ್ದಕ್ಕಿದ್ದಂತೆ ಜೀವದಂತಿರುವ ತಂಗಿಯನ್ನು ಉಗ್ರರು ಕಿಡ್ನಾಪ್ ಮಾಡಿ, ಆ ಮೂಲಕ ತಮ್ಮ ಭಯೋತ್ಪಾದಕ ಚಟುವಟಕೆ ನಡೆಸಲು ರೇಷ್ಮಾಳನ್ನು ಬೆದರಿಸಿ, ತಮ್ಮ ಕಾರ್ಯ ಸಾಧನೆಗೆ ಮುಂದಾಗುತ್ತಾರೆ. ಉಗ್ರರ ಆ ಕೆಲಸ ನೆರವೇರುತ್ತಾ, ಇಲ್ಲವಾ ಅನ್ನೋದೇ ಕಥೆ.
ಹಿಂದಿನ ರಾಗಿಣಿಯನ್ನು ಇಲ್ಲಿ ಕಾಣುವಂತಿಲ್ಲ. ಅವರಿಲ್ಲಿ ಮುಗ್ಧ ಮುಸ್ಲಿಂ ಹುಡುಗಿಯಾಗಿ ಇಷ್ಟವಾಗುತ್ತಾರೆ. ಅಷ್ಟೇ ಚೆನ್ನಾಗಿ ಪಾತ್ರ ಕಟ್ಟಿಕೊಟ್ಟಿದ್ದಾರೆ. ರವಿಭಟ್ ಹೊರತುಪಡಿಸಿದರೆ, ಇಲ್ಲಿ ಬಹುತೇಕ ರಂಗಭೂಮಿ ಕಲಾವಿದರಿದ್ದಾರೆ. ಅವರೆಲ್ಲರ ಪಾತ್ರಗಳಿಗೆ ಮೋಸವಿಲ್ಲ. ಪ್ರದೀಪ್ ವರ್ಮ ಅವರ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಗಲ್ಲಿ ಗಲ್ಲಿಯಲ್ಲೂ ಕ್ಯಾಮೆರಾ ಕಣ್ಣಿಟ್ಟ ಮುರಳಿ ಕ್ರಿಶ್ ಅವರ ಛಾಯಾಗ್ರಹಣದಲ್ಲಿ ಅಂದವಿದೆ.
ಚಿತ್ರ: ದಿ ಟೆರರಿಸ್ಟ್
ನಿರ್ಮಾಣ: ಅಲಂಕಾರ್ ಸಂತಾನಂ
ನಿರ್ದೇಶನ: ಪಿ.ಸಿ.ಶೇಖರ್
ತಾರಾಗಣ: ರಾಗಿಣಿ, ರವಿಭಟ್, ಪದ್ಮಾ, ಬಾಲಾಜಿ ಮನೋಹರ್, ಶ್ರೀಕಾಂತ್, ಮನು, ಕೀರ್ತಿ ಭಾನು, ಶಶಿಕಾಂತ್ಗಟ್ಟಿ, ರಾಘವೇಂದ್ರ ಪ್ರಸಾದ್, ಕೃಷ್ಣ ಹೆಬ್ಟಾಳೆ, ಗಿರೀಶ್ ಇತರರು.
* ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!
PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್ ಸೇದಿದ ಆಟಗಾರನ ವಿಡಿಯೋ ವೈರಲ್
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು
Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ