ಬಂಗಾರದ ದಿನಗಳ ದೃಶ್ಯವೈಭವ
Team Udayavani, Dec 22, 2018, 11:25 AM IST
“ನೀನ್ ಏನ್ ಮಾಡ್ತಿಯೋ ಗೊತ್ತಿಲ್ಲ, ನೀನ್ ಸಾಯುವಾಗ ಮಾತ್ರ ಶ್ರೀಮಂತನಾಗಿ ಸಾಯಬೇಕು’ ತಾಯಿ ತನ್ನ ಪುಟ್ಟ ಮಗನಲ್ಲಿ ಮಾತು ತಗೊಂಡು ಪ್ರಾಣ ಬೀಡುತ್ತಾಳೆ. ಅನಾಥನಾದ ಮಗನಿಗೆ ತಾಯಿಯ ಆಸೆ ಈಡೇರಿಸುವ ಛಲ. ಶ್ರೀಮಂತನಾಗಬೇಕಾದರೆ ಏನು ಮಾಡಬೇಕೆಂದು ಆಲೋಚಿಸುತ್ತಾ ಮುಂದೆ ಸಾಗುತ್ತಿದ್ದ ಹುಡುಗನಿಗೆ ಹುಚ್ಚನೊಬ್ಬ ಸಿಕ್ಕಿ, “ಪವರ್ ಬೇಕು, ಪವರ್’ ಎನ್ನುತ್ತಾನೆ. ಹುಡುಗನ ತಲೆಯಲ್ಲಿ ಅದು ಗಟ್ಟಿಯಾಗಿ ಕೂರುತ್ತದೆ.
ಮುಂಬೈ ರೈಲು ಹತ್ತಿ ಹೋದ ಹುಡುಗ, ಕಟ್ ಮಾಡಿದರೆ ರಾಕಿ ಭಾಯ್ ಎಂಬ ಡಾನ್ ಆಗಿ ಮೆರೆಯುತ್ತಿರುತ್ತಾನೆ. “ಕೆಜಿಎಫ್’ ಸಿನಿಮಾ ಆರಂಭವಾಗೋದೇ ತಾಯಿ-ಮಗನ ಸೆಂಟಿಮೆಂಟ್ನಿಂದ. ಹೀಗೆ ಟೇಕಾಫ್ ಆಗುವ ಸಿನಿಮಾ ಮುಂದೆ ಸಾಗುತ್ತಾ ಒಂದು ಔಟ್ ಅಂಡ್ ಔಟ್ ಮಾಸ್ ಎಂಟರ್ಟೈನರ್ ಆಗಿ ರಂಜಿಸುತ್ತದೆ. ಮುಂದೆ ನಿಮಗೆ ಚಿತ್ರದಲ್ಲಿ ಹೆಚ್ಚು ಸೆಂಟಿಮೆಂಟ್ ದೃಶ್ಯಗಳು ಕಾಣಿಸೋದಿಲ್ಲ ಕೂಡ.
ಗೊತ್ತು ಗುರಿ ಇಲ್ಲದ ಒಬ್ಬ ಹುಡುಗ ಮುಂಬೈನಂತಹ ಮಹಾನಗರಿಯಲ್ಲಿ, ಡಾನ್ಗಳ ಮಧ್ಯೆ ಬೆಳೆಯುತ್ತಾ ಕೊನೆಗೆ ಆ ಡಾನ್ಗಳಿಗೇ ಹೇಗೆ ಡಾನ್ ಆಗುತ್ತಾನೆ ಮತ್ತು ಆತನ ಮುಂದಿನ ಪಯಣವನ್ನು ತುಂಬಾ ರೋಚಕವಾಗಿ, ಮಾಸ್ಪ್ರಿಯರು ಕ್ಷಣ ಕ್ಷಣಕ್ಕೂ ಶಿಳ್ಳೆ ಹಾಕುವ ರೀತಿಯಲ್ಲಿ ತೋರಿಸುತ್ತಾ ಹೋಗಿದ್ದಾರೆ ಪ್ರಶಾಂತ್ ನೀಲ್. ಅದಕ್ಕೆ ಪೂರಕವಾಗಿ “ನಾನು 10 ಜನರನ್ನು ಹೊಡೆದು ಡಾನ್ ಆದವನಲ್ಲ, ನಾನು ಹೊಡೆದ 10 ಜನಾನೂ ಡಾನ್ಗಳೇ …’ ಎಂಬ ಸಂಭಾಷಣೆಗಳು ಮಾಸ್ ಅಭಿಮಾನಿಗಳಿಗೆ ಕಿಕ್ ಕೊಡುತ್ತದೆ.
ನಿರ್ದೇಶಕ ಪ್ರಶಾಂತ್ ನೀಲ್, ಕೆಜಿಎಫ್ನ ಚಿನ್ನದ ಗಣಿ ಒಡೆತನದ ಹಿಂದಿನ ಜಿದ್ದಾಜಿದ್ದಿ, ಗಣಿ ಧೂಳಿಗೆ ಬಲಿಯಾಗುತ್ತಿರುವ ಅಮಾಯಕ ಜೀವಗಳ ನರಳಾಟ, ಅದರ ವಿರುದ್ಧ ಹೋರಾಟಕ್ಕಿಳಿಯುವ ಒಬ್ಬ ವ್ಯಕ್ತಿಯ ಸುತ್ತ ಕಥೆ ಹೆಣೆದಿದ್ದಾರೆ. ಆದರೆ, ನಿಮಗೆ “ಕೆಜಿಎಫ್- ಚಾಪ್ಟರ್ -1′ ನೋಡುವಾಗ ಕಥೆಗಿಂತ, ದೃಶ್ಯವೈಭವಕ್ಕೆ ಮಹತ್ವ ಕೊಟ್ಟಂತೆ ಹಾಗೂ ಚಾಪ್ಟರ್-2ಗೆ ದೊಡ್ಡಮಟ್ಟದಲ್ಲಿ ವೇದಿಕೆ ಸಿದ್ಧಪಡಿಸಿದಂತೆ ಕಾಣುತ್ತದೆಯೇ ಹೊರತು, ಗಾಢವಾಗಿ ತಟ್ಟುವ ಕಥೆ ಎದ್ದು ಕಾಣುವುದಿಲ್ಲ.
ರಾಕಿ ಎಂಬ ಖಡಕ್ ಹುಡುಗನ ಇಂಟ್ರೋಡಕ್ಷನ್, ಆತನ ಖದರ್, ಹೊಡೆದಾಟಗಳು ಹೆಚ್ಚು ಹೈಲೈಟ್ ಆಗಿವೆ. ಆದರೆ, ಈ ಅಂಶಗಳನ್ನು ನಿರ್ದೇಶಕ ಪ್ರಶಾಂತ್ ನೀಲ್ ಕಟ್ಟಿಕೊಟ್ಟ ರೀತಿ ಮಾತ್ರ ಇಷ್ಟವಾಗುತ್ತದೆ. ಇಡೀ ಸಿನಿಮಾ 70ರ ದಶಕದಲ್ಲಿ ನಡೆಯುವುದರಿಂದ ಆ ವಾತಾವರಣವನ್ನು ಸೃಷ್ಟಿಸುವಲ್ಲಿ ಮತ್ತು ಅದನ್ನು ಕಣ್ಣಿಗೆ ಹಬ್ಬದಂತೆ ಕಟ್ಟಿಕೊಡುವಲ್ಲಿ ಪ್ರಶಾಂತ್ ನೀಲ್ ಹಾಗೂ ಛಾಯಾಗ್ರಾಹಕ ಭುವನ್ ಗೌಡ ಅವರ ಶ್ರಮ ಎದ್ದು ಕಾಣುತ್ತದೆ. ಆ ನಿಟ್ಟಿನಲ್ಲಿ “ಕೆಜಿಎಫ್’ ಅನ್ನು ತಂತ್ರಜ್ಞರ ಸಿನಿಮಾ ಎಂದು ಕರೆಯಲಡ್ಡಿಯಿಲ್ಲ.
ಮೊದಲೇ ಹೇಳಿದಂತೆ ನಿರ್ದೇಶಕ ಪ್ರಶಾಂತ್ ನೀಲ್ “ಚಾಪ್ಟರ್-2’ನಲ್ಲಿ ಸಿನಿಮಾದ ಕಥೆಯನ್ನು ಬೆಳೆಸುವ ಉದ್ದೇಶ ಹೊಂದಿದಂತಿದೆ. ಹಾಗಾಗಿಯೇ “ಚಾಪ್ಟರ್-1’ನಲ್ಲಿ ಸನ್ನಿವೇಶಗಳಿಗೆ, ಪಾತ್ರ ಪರಿಚಯಗಳಿಗೆ, ನೆಲದ ಇತಿಹಾಸದ ಪೀಠಿಕೆಗೆ ಮಹತ್ವ ಹಾಗೂ ಮುಂದಿನ ಹೋರಾಟಕ್ಕೆ ನಾಂದಿಯಾಡಿದ್ದಾರೆ. ಜೊತೆಗೆ ಕುತೂಹಲವೊಂದನ್ನು ಪ್ರೇಕ್ಷಕರಿಗೆ ಬಿಟ್ಟು “ಕೆಜಿಎಫ್ ಚಾಪ್ಟರ್-1′ ಮುಗಿಯುತ್ತದೆ.
ಒಂದು ಬಿಗ್ ಬಜೆಟ್ನ ಸಿನಿಮಾವನ್ನು ಎಷ್ಟು ಅದ್ಧೂರಿಯಾಗಿ, ತಾಂತ್ರಿಕ ಶ್ರಿಮಂತಿಕೆಯಿಂದ ಕಟ್ಟಿಕೊಡಬಹುದು ಎಂಬುದನ್ನು “ಕೆಜಿಎಫ್ ಚಾಪ್ಟರ್-1’ನಲ್ಲಿ ನೋಡಬಹುದು. ದ್ವಿತೀಯಾರ್ಧದಲ್ಲಿ “ಕೆಜಿಎಫ್’ನ ಚಿತ್ರಣ, ಪರಿಸರವನ್ನು ಕಟ್ಟಿಕೊಟ್ಟ ರೀತಿ, ಅದರ ಹಿಂದಿನ ಶ್ರಮವನ್ನು ಮೆಚ್ಚಲೇಬೇಕು. ಆದರೆ, ಗಣಿಯಲ್ಲಿನ ಕ್ರೌರ್ಯ, ಅಮಾಯಕರ ಮೇಲಿನ ದೌರ್ಜನ್ಯವನ್ನು ನೋಡಿದಾಗ ಪ್ರೇಕ್ಷಕರಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.
ಚಿತ್ರದಲ್ಲಿ ಸಾಕಷ್ಟು ಪಾತ್ರಗಳು, ಹೆಸರುಗಳು ಕೇಳಿಬಂದರೂ ಅವ್ಯಾವು ಮನದಲ್ಲಿ ಉಳಿಯುವುದಿಲ್ಲ. ಸಿನಿಮಾ ನೋಡಿ ಹೊರಬಂದಾಗಲೂ ನಿಮ್ಮ ಕಣ್ಣಮುಂದೆ ಬರುವ ಮುಖ ಯಶ್ ಅವರದ್ದಷ್ಟೇ. ಏಕೆಂದರೆ ಇಡೀ ಸಿನಿಮಾವನ್ನು ಹೊತ್ತುಕೊಂಡು ಮುಂದೆ ಸಾಗಿದವರು ಯಶ್ ಎಂದರೆ ತಪ್ಪಲ್ಲ. ಇಡೀ ಸಿನಿಮಾದಲ್ಲಿ ರಗಡ್ ಆಗಿ, ಸಿಡಿಗುಂಡಿನಂತೆ ಕಾಣಿಸಿಕೊಂಡು ರಂಜಿಸುವ ಯಶ್ ಇಷ್ಟವಾಗುತ್ತಾರೆ.
ಮೊದಲರ್ಧದಲ್ಲಿ ಪಂಚಿಂಗ್ ಡೈಲಾಗ್, ಸ್ಟೈಲ್ ಮೂಲಕ ರಂಜಿಸಿದರೆ, ದ್ವಿತೀಯಾರ್ಧದಲ್ಲಿ ಕಣ್ಣೋಟ ಹಾಗೂ ಆ್ಯಕ್ಷನ್ನಲ್ಲಿ ಇಷ್ಟವಾಗುತ್ತಾರೆ. ನಾಯಕಿ ಶ್ರೀನಿಧಿ ಶೆಟ್ಟಿಗೆ ಇಲ್ಲಿ ಹೆಚ್ಚಿನ ಅವಕಾಶವಿಲ್ಲ. ಮೊದಲ ಚಾಪ್ಟರ್ನಲ್ಲಿ ಕಥೆ ನಾಯಕಿಯ ಪಾತ್ರವನ್ನು ಹೆಚ್ಚು ಬಯಸದ್ದರಿಂದ ನಿರ್ದೇಶಕರು ಅನಾವಶ್ಯಕವಾಗಿ ಅದನ್ನು ಬೆಳೆಸುವ ಗೋಜಿಗೆ ಹೋಗಿಲ್ಲ. ಉಳಿದಂತೆ ರಾಮ್, ವಸಿಷ್ಠ, ಅಯ್ಯಪ್ಪ, ಲಕ್ಷ್ಮಣ್, ಬಿ.ಸುರೇಶ್, ಅಚ್ಯುತ್ ಕುಮಾರ್, ಮಾಳವಿಕಾ ಸೇರಿದಂತೆ ಇತರರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಇಡೀ ಸಿನಿಮಾ ಅನಂತ್ನಾಗ್ ನಿರೂಪಣೆಯಲ್ಲಿ ಸಾಗುತ್ತದೆ.
ಇಡೀ ಚಿತ್ರವನ್ನು ಮತ್ತೂಂದು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಛಾಯಾಗ್ರಾಹಕ ಭುವನ್ ಗೌಡ ಹಾಗೂ ಕಲಾ ನಿರ್ದೇಶಕ ಶಿವಕುಮಾರ್ ಅವರ ಪಾತ್ರ ಮಹತ್ವದ್ದಾಗಿದೆ. ಶಿವಕುಮಾರ್ ಅವರ ಕಲಾ ವಿನ್ಯಾಸದಲ್ಲಿ ಮೂಡಿಬಂದ ಸೆಟ್ ಅನ್ನು ಭುವನ್ ಗೌಡ ಅಷ್ಟೇ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ನೆರಳು-ಬೆಳಕಿನಾಟ, ಕೆಜಿಎಫ್ ಮಣ್ಣಿನ ಖದರ್ … ಎಲ್ಲವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಚಿತ್ರದ ಮತ್ತೂಂದು ಪ್ಲಸ್.
ಚಿತ್ರ: ಕೆಜಿಎಫ್
ನಿರ್ಮಾಣ: ವಿಜಯ್ ಕಿರಗಂದೂರು
ನಿರ್ದೇಶನ: ಪ್ರಶಾಂತ್ ನೀಲ್
ತಾರಾಗಣ: ಯಶ್, ಶ್ರೀನಿಧಿ ಶೆಟ್ಟಿ, ರಾಮ್, ವಸಿಷ್ಠ, ಅಯ್ಯಪ್ಪ, ಲಕ್ಷ್ಮಣ್ ಗೌಡ, ಬಿ.ಸುರೇಶ್, ಅನಂತ್ನಾಗ್, ಅಚ್ಯುತ್ ಕುಮಾರ್, ಮಾಳವಿಕಾ ಇತರರು.
* ರವಿಪ್ರಕಾಶ್ ರೈ